Advertisement

ಬೀದರ್‌ನ 11 ಮಂದಿಗೆ ಕೋವಿಡ್-19 ಸೋಂಕು ದೃಢ

09:15 AM Apr 04, 2020 | Sriram |

ಬೆಂಗಳೂರು/ಹೊಸದಿಲ್ಲಿ: ಕೋವಿಡ್-19 ಪ್ರಸರಣ ವಿಚಾರದಲ್ಲಿ ನಿಯಂತ್ರಣ ಸಾಧಿಸಿದ್ದೇವೆ ಎಂದು ಸಮಾಧಾನ  ಪಟ್ಟುಕೊಳ್ಳುವ ಹೊತ್ತಿಗೆ ಎದುರಾಗಿರುವ ದಿಲ್ಲಿಯ ನಿಜಾಮುದ್ದೀನ್‌ ಧಾರ್ಮಿಕ ಸಮಾವೇಶ ಪ್ರಕರಣ ದೇಶವನ್ನು ಕಂಗೆಡಿಸಿದೆ.

Advertisement

ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ ದೇಶಾದ್ಯಂತ 400ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಲು ಸಮಾವೇಶ ಕಾರಣವಾಗಿದೆ. ಈ ಮಧ್ಯೆ ರಾಜ್ಯದ ಬೀದರ್‌ನಲ್ಲಿ ಗುರುವಾರ 11 ಪ್ರಕರ ಣಗಳು ದೃಢಪಟ್ಟಿದ್ದು, ಇವೆಲ್ಲವೂ ಈ ಧಾರ್ಮಿಕ ಸಮಾವೇಶಕ್ಕೆ ಸಂಬಂಧಿಸಿದ್ದಾಗಿವೆ.
ದಿಲ್ಲಿಯಲ್ಲಿ ನಡೆದ ತಬ್ಲಿಘಿ ಜಮಾತ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿದ್ದ ಬೀದರ್‌ ಜಿಲ್ಲೆಯ 11 ಜನರಲ್ಲಿ ಕೋವಿಡ್-19 ದೃಢಪಟ್ಟಿದೆ. ಒಟ್ಟು 27 ಮಂದಿಯ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಇವರಲ್ಲಿ 26 ಜನರು ದಿಲ್ಲಿಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರೆ, ಕಪಲಾಪುರ ಗ್ರಾಮದ ಮತ್ತೂಬ್ಬರು ವಿದೇಶದಿಂದ ಮರಳಿದವರು.

ಏಕಕಾಲಕ್ಕೆ ಇಷ್ಟು ಪ್ರಕರಣಗಳು ಕಂಡುಬಂದಿರುವುದರಿಂದ ಬೀದರ್‌ ಜಿಲ್ಲೆಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

ದೇಶದಲ್ಲಿ 400 ಮಂದಿಗೆ ಸೋಂಕು
ಎರಡು ದಿನಗಳಿಂದ ಸೋಂಕುಪೀಡಿತರ ಸಂಖ್ಯೆಯಲ್ಲಿ ಬಹಳಷ್ಟು ಏರಿಕೆಯಾಗಿದ್ದು, ಇದಕ್ಕೆ ದಿಲ್ಲಿಯ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು ಕಾರಣ ಎಂಬುದು ಈಗಾಗಲೇ ಬಹಿರಂಗ ವಾಗಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ ದೇಶದಲ್ಲಿ ಕಾಣಿಸಿಕೊಂಡಿರುವ ಒಟ್ಟಾರೆ 2,372 ಪ್ರಕರಣಗಳಲ್ಲಿ 400 ಈ ಸಮಾವೇಶದಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳಿಗೆ ಸಂಬಂಧಿಸಿದ್ದು. ಗುರು ವಾರ ಸಂಜೆ ವೇಳೆಗೆ ತಮಿಳುನಾಡು ಮತ್ತು ದಿಲ್ಲಿಗಳಲ್ಲಿ ತಲಾ 74 ಮತ್ತು 55 ಪ್ರಕರಣಗಳು ದೃಢವಾಗಿವೆ. ಇವರೂ ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗಿಯಾಗಿದ್ದವರೇ. ಹೀಗಾಗಿ ಒಟ್ಟಾ ರೆಯಾಗಿ ಈ ಸಮಾವೇಶದಿಂದ 500ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರ ಬಹುದು ಎಂದು ಅಂದಾಜಿಸಲಾಗಿದೆ.

ಕಳೆದ 24 ತಾಸುಗಳಲ್ಲಿ 328 ಹೊಸ ಪ್ರಕರಣಗಳು ಪತ್ತೆ ಯಾಗಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. ಸಮಾವೇಶದಲ್ಲಿ ಭಾಗಿಯಾಗಿದ್ದ 9,000 ಮಂದಿಯನ್ನು ಪತ್ತೆ ಮಾಡಿ ನಿಗಾ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

ಅಮೆರಿಕ, ಸ್ಪೇನ್‌ಗಳಲ್ಲಿ ಭೀತಿ
ಸೋಂಕುಪೀಡಿತರ ಸಂಖ್ಯೆಯಲ್ಲಿ ಅಮೆರಿಕ ಉಳಿದೆಲ್ಲ ದೇಶಗಳನ್ನು ಮೀರಿ ಸಾಗುತ್ತಿದೆ. ಈಗಾಗಲೇ ಇಲ್ಲಿ 216,722 ಪ್ರಕರಣಗಳು ದೃಢಪಟ್ಟಿವೆ. ಸಾವಿನ ಸಂಖ್ಯೆಯೂ 5 ಸಾವಿರ ಮೀರಿದೆ. ಅತ್ತ ಸ್ಪೇನ್‌ ಕೂಡ ಒಂದು ಲಕ್ಷ ಸೋಂಕುಪೀಡಿತರನ್ನು ಹೊಂದಿದ್ದು, ಸಾವಿನ ಸಂಖ್ಯೆಯಲ್ಲಿ 10 ಸಾವಿರ ದಾಟಿದೆ. ಇದಷ್ಟೇ ಅಲ್ಲ, ಜಗತ್ತಿನಾದ್ಯಂತ ಒಟ್ಟು ಸೋಂಕುಪೀಡಿತರ ಸಂಖ್ಯೆ 10 ಲಕ್ಷದ ಸಮೀಪಕ್ಕೆ ಬಂದಿದೆ. ಸಾವಿನ ಸಂಖ್ಯೆ 50 ಸಾವಿರದತ್ತ ಮುನ್ನಡೆದಿದೆ.

2 ಲಕ್ಷ ಮಂದಿ ಚೇತರಿಕೆ
ಕೋವಿಡ್-19 ಹಬ್ಬುತ್ತಿರುವ ಮಧ್ಯೆಯೇ ಒಂದು ಶುಭ ಸುದ್ದಿಯೂ ಇದೆ. ಜಗತ್ತಿನಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಚೀನದ 76 ಸಾವಿರ, ಸ್ಪೇನ್‌ನ 26 ಸಾವಿರ, ಜರ್ಮನಿಯ 19 ಸಾವಿರ, ಇರಾನ್‌ನ 16 ಸಾವಿರ, ಇಟಲಿಯ 16 ಸಾವಿರ, ದ.ಕೊರಿಯಾದ 5,800, ಅಮೆರಿಕದ 8 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಅಮೆರಿಕ ಮತ್ತು ಇಂಗ್ಲೆಂಡ್‌ಗಳಲ್ಲಿ ಸೋಂಕು ಹಬ್ಬುತ್ತಿರುವ ವೇಗಕ್ಕೂ ಚೇತರಿಕೆಗೂ ಅಜಗಜಾಂತರವಿದೆ. ಇಂಗ್ಲೆಂಡ್‌ನ‌ಲ್ಲಿ 29 ಸಾವಿರ ಸೋಂಕುಪೀಡಿತರಿದ್ದರೆ ಕೇವಲ 135 ಮಂದಿ ಚೇತರಿಸಿಕೊಂಡಿದ್ದಾರೆ. ಆದರೆ ಭಾರತದಲ್ಲಿ 2 ಸಾವಿರ ಪ್ರಕರಣಗಳಿಗೆ ಎದುರಾಗಿ 150ಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.

ಕೋವಿಡ್-19 ದಿಂದ  ವೃದ್ಧ ಸಾವು?
ನಿಜಾಮುದ್ದೀನ್‌ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸಾಗಿದ್ದ ಬೀದರ್‌ನ ವೃದ್ಧರೊ ಬ್ಬರು ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಇವರ ಸಾವಿಗೆ ಕೋವಿಡ್-19 ಕಾರಣವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ದಿಲ್ಲಿಯಿಂದ ಮಾ. 17ರಂದು ವಾಪಸಾಗಿದ್ದ 69ರ ಹರೆಯದ ಈ ವ್ಯಕ್ತಿಯಲ್ಲಿ ತೀವ್ರ ಸ್ವರೂಪದ ಕೋವಿಡ್-19 ಲಕ್ಷಣಗಳು ಕಂಡುಬಂದಿದ್ದರಿಂದ ಅವರನ್ನು ಬ್ರಿಮ್ಸ್‌ ಆಸ್ಪತ್ರೆಯ ಐಸೋಲೇಶನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ರಕ್ತ ಮತ್ತು ಗಂಟಲು ಮಾದರಿಯ ಎರಡು ಪರೀಕ್ಷೆ ವರದಿಯಲ್ಲೂ ನೆಗೆಟಿವ್‌ ಬಂದಿತ್ತು. ಬುಧವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದು, ಮಧ್ಯರಾತ್ರಿಯೇ ಆರೋಗ್ಯ ಸಿಬಂದಿ ಮತ್ತು ಪೊಲೀಸರ ಸಮ್ಮುಖದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಅಂತ್ಯಕ್ರಿಯೆ ನಡೆಸಲಾಗಿದೆ.

ಕ್ರಿಮಿನಲ್‌ ಅಪರಾಧ
ಲಾಕ್‌ಡೌನ್‌ ಅನ್ನು ಮೀರುವುದು ಗಂಭೀರ ಅಪರಾಧ ಎಂದು ಪರಿಗಣಿಸುವಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಗೃಹ ಇಲಾಖೆ ಆದೇಶ ನೀಡಿದೆ. ಈ ಸಂಬಂಧ ರಾಜ್ಯಗಳಿಗೆ ಪತ್ರ ಮೂಲಕ ಎಚ್ಚರಿಕೆ ನೀಡಲಾಗಿದೆ.

124ಕ್ಕೆ ಏರಿದ ಸೋಂಕು ಸಂಖ್ಯೆ
ರಾಜ್ಯದಲ್ಲಿ ಗುರುವಾರ 14 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕುಪೀಡಿತರ ಸಂಖ್ಯೆ 124ಕ್ಕೆ ಏರಿದೆ. ಗುರುವಾರ ದೃಢಪಟ್ಟಿರುವವರಲ್ಲಿ ದಿಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದ ಬೀದರ್‌ 10 ಮಂದಿ ಪುರುಷರು ಮತ್ತು ಅವರಿಂದ ಸೋಂಕು ತಗುಲಿಸಿಕೊಂಡ ಕಲಬುರಗಿಯ ಮಹಿಳೆ ಸೇರಿದ್ದಾರೆ. ಉಳಿದಂತೆ ನಂಜನಗೂಡು ಔಷಧ ತಯಾರಿ ಕಂಪೆನಿ ಸಿಬಂದಿಯ ಮೂವರು ಸಂಬಂಧಿಕರಲ್ಲಿ ಸೋಂಕು ದೃಢಪಟ್ಟಿದೆ.

1,000 ಮಂದಿ ಪತ್ತೆ
ದಿಲ್ಲಿ ಸಮಾವೇಶದಲ್ಲಿ ಭಾಗವಹಿಸಿದ್ದ ಶಂಕೆಯಿರುವ ರಾಜ್ಯದ 1,500 ಮಂದಿಯ ಪೈಕಿ 1,000 ಮಂದಿಯನ್ನು ಪತ್ತೆಹಚ್ಚಿ ತಪಾಸಣೆಗೆ ಒಳಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ 200 ಮಂದಿಯಲ್ಲಿ ಸೋಂಕು ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ. ಈ ಪೈಕಿ 11 ಮಂದಿಗೆ ಸೋಂಕು ದೃಢಪಟ್ಟಿದೆ.

ವೈದ್ಯರು, ಸಹಾಯಕರ ಮೇಲೆ ಹಲ್ಲೆ
ಕೋವಿಡ್-19 ತಡೆಗೆ ಕೆಲಸ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಪರಿಚಾರಕರ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ವರದಿಯಾಗಿವೆ. ಬೆಂಗಳೂರಿನ ಸಾದಿಕ್‌ ಪಾಳ್ಯದ ಸಾದಿಕ್‌ ಲೇಔಟ್‌ ನಲ್ಲಿ ಕೋವಿಡ್-19 ಸಮೀಕ್ಷೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಲಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿಯೂ ಇಂಥದ್ದೇ ಘಟನೆ ನಡೆ ದಿದೆ. ಕೋವಿಡ್-19 ಶಂಕಿತರ ಸ್ಕ್ರೀನಿಂಗ್‌ಗೆ ಬಂದಿದ್ದ ವೈದ್ಯರ ತಂಡದ ಮೇಲೆ ಸ್ಥಳೀಯರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಮಹಿಳಾ ವೈದ್ಯರು ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ 7 ಮಂದಿಯನ್ನು ಬಂಧಿಸಲಾಗಿದೆ. ಆಂಧ್ರ ಪ್ರದೇಶದ ಹೈದರಾಬಾದ್‌ನಲ್ಲೂ, ಮೃತ ವ್ಯಕ್ತಿಯೊಬ್ಬನ ಕುಟುಂಬಸ್ಥರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.

400 ದಾಟಿದ ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಸೋಂಕುಪೀಡಿತರ ಸಂಖ್ಯೆ 416ಕ್ಕೆ ಏರಿದೆ.ಕಳೆದ 24 ತಾಸುಗಳಲ್ಲಿ ಇಲ್ಲಿ ಒಟ್ಟು 81 ಹೊಸ ಪ್ರಕರಣಗಳು ದೃಢಪಟ್ಟಿವೆ. ಮುಂಬಯಿ ನಗರವೊಂದರಲ್ಲೇ 57 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೇರಳದಲ್ಲಿಯೂ ಪ್ರಕರಣಗಳು ಸಂಖ್ಯೆ ಹೆಚ್ಚಳ ಕಂಡಿದ್ದು, 286ಕ್ಕೆ ಏರಿದೆ. ಗುರು ವಾರ ಹೊಸದಾಗಿ 21 ಪ್ರಕರಣಗಳು ದೃಢಪಟ್ಟಿವೆ. ಕಾಸರಗೋಡಿನಲ್ಲಿ 8, ಇಡುಕ್ಕಿಯಲ್ಲಿ 5, ಕೊಲ್ಲಂನಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.

ದಿಲ್ಲಿಯಲ್ಲಿ 108 ಪ್ರಕರಣ
ಇದು ದಿಲ್ಲಿಯ ಒಟ್ಟಾರೆ ಸಂಖ್ಯೆಯಲ್ಲ. ಕೇವಲ ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗಿ ಯಾಗಿದ್ದವರು ಮಾತ್ರ. ಈ ಸಂಬಂಧ ಸ್ವತಃ ಸಿಎಂ ಅರವಿಂದ ಕೇಜ್ರಿವಾಲ್‌ ಮಾಹಿತಿ ನೀಡಿದ್ದು, ಗುರುವಾರ ಹೊಸದಾಗಿ 55 ಪ್ರಕರಣ ಪತ್ತೆಯಾಗಿದೆ ಎಂದಿದ್ದಾರೆ. ಈ ಮೂಲಕ ಸಮಾವೇಶದ ನಂಟಿರುವ  ಸಂಖ್ಯೆ 108ಕ್ಕೆ ಏರಿದೆ. ದಿಲ್ಲಿಯ ಒಟ್ಟಾರೆ ಸೋಂಕು ಪೀಡಿತರ ಸಂಖ್ಯೆ ಸದ್ಯ 219.

ರಾಜ್ಯದಲ್ಲೂ ಪರೀಕ್ಷೆಗಳು ರದ್ದು
ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಉತ್ತೀರ್ಣಗೊಳಿಸಲು ಸರಕಾರ ನಿರ್ಧರಿಸಿದೆ. 9ನೇ ತರಗತಿ ವಿದ್ಯಾರ್ಥಿಗಳನ್ನು ಫಾರ್ಮೇಟೀವ್‌, ಸಮ್ಮೇಟೀವ್‌ ಪರೀಕ್ಷೆ ಆಧಾರದ ಮೇಲೆ ಪಾಸ್‌ ಮಾಡಲಾಗುತ್ತದೆ. ಇವುಗಳಲ್ಲಿ ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ರಜಾ ಅವಧಿಯಲ್ಲಿ ಶಾಲೆಗಳು ಸೂಕ್ತ ಮಾರ್ಗದರ್ಶನ ನೀಡಿ, ಮುಂದಿನ ಶೈಕ್ಷಣಿಕ ವರ್ಷದ ಆರಂಭ ದಲ್ಲಿ ಪರೀಕ್ಷೆ ನಡೆಸಿ ಉತ್ತೀರ್ಣಗೊಳಿಸಲು ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next