Advertisement

ಉಡುಪಿ: 109 ಮಂದಿಗೆ ಸೋಂಕು: 2,000 ಗಡಿ ದಾಟಿದ ಸೋಂಕಿತರ ಸಂಖ್ಯೆ; 43 ಮಂದಿ ಬಿಡುಗಡೆ

03:41 AM Jul 19, 2020 | Hari Prasad |

ಉಡುಪಿ: ಜಿಲ್ಲೆಯಲ್ಲಿ ಶನಿವಾರ 109 ಜನರಿಗೆ ಪಾಸಿಟಿವ್‌ ಮತ್ತು 292 ಜನರಿಗೆ ನೆಗೆಟಿವ್‌ ವರದಿಯಾಗಿದೆ.

Advertisement

ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಒಟ್ಟು ಸೋಂಕಿತರ ಸಂಖ್ಯೆ 2,000ದ ಗಡಿ ದಾಟಿದೆ.

ಉಡುಪಿ ತಾಲೂಕಿನ 58, ಕುಂದಾಪುರ ತಾಲೂಕಿನ 40, ಕಾರ್ಕಳ ತಾಲೂಕಿನ 11 ಮಂದಿಗೆ ಸೋಂಕು ತಗಲಿದೆ.

ಪುರುಷರು 63, ಮಹಿಳೆಯರು 39, ಐವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಂಗಳೂರು, ದುಬಾೖ, ದಾವಣಗೆರೆಯಿಂದ ಬಂದವರು ತಲಾ ಒಬ್ಬರು, ಬೆಂಗಳೂರಿನಿಂದ ಇಬ್ಬರು ಬಂದವರಿದ್ದಾರೆ. ಜ್ವರ ಬಾಧೆಯವರು 34, ಉಸಿರಾಟದ ಸಮಸ್ಯೆಯವರು (ಸಾರಿ) ಐದು ಮಂದಿ ಇದ್ದರೆ, ಪ್ರಾಥಮಿಕ ಸಂಪರ್ಕದವರು 65 ಮಂದಿ ಇದ್ದಾರೆ. ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡವರು ಒಟ್ಟು 43 ಮಂದಿ ಇದ್ದಾರೆ. ಶನಿವಾರ 524 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 537 ವರದಿಗಳು ಬರಬೇಕಾಗಿವೆ. 492 ಸಕ್ರಿಯ ಪ್ರಕರಣಗಳಿವೆ.

ಎಂಜಿನಿಯರಿಂಗ್‌ ಪದವೀಧರೆ ಸಾವು
ಕ್ಯಾನ್ಸರ್‌ಗೆ ತುತ್ತಾಗಿದ್ದ ಎಂಜಿನಿಯರಿಂಗ್‌ ಪದವೀಧರೆಯೊಬ್ಬರು ಕೋವಿಡ್ 19 ಸೋಂಕಿನಿಂದ ಶನಿವಾರ ಮೃತಪಟ್ಟಿದ್ದಾರೆ. ಉದ್ಯಾವರ ಕೇದಾರ್‌ನ 20ರ ಹರೆಯದ ಯುವತಿ ಕೆಲವು ತಿಂಗಳುಗಳಿಂದ ಕ್ಯಾನ್ಸರ್‌ ರೋಗಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೇ ಶನಿವಾರ ಮೃತಪಟ್ಟಿದ್ದಾರೆ. ಈ ವೇಳೆ ನಡೆಸಲಾದ ಪರೀಕ್ಷೆಯಲ್ಲಿ ಯುವತಿಗೆ ಕೋವಿಡ್ 19 ದೃಢಪಟ್ಟಿದೆ.

Advertisement

ಕೋಟ: ಆರು ಮಂದಿಗೆ ಪಾಸಿಟಿವ್‌
ಕೋಟ ಹೋಬಳಿಯ ವಿವಿಧ ಕಡೆ ಆರು ಮಂದಿಗೆ ಕೋವಿಡ್ 19 ಸೋಂಕಿರುವುದು ಶನಿವಾರ ದೃಢಪಟ್ಟಿದೆ. ಇಲ್ಲಿನ ಶಿರಿಯಾರ ಗ್ರಾಮದ ಕಾಜ್ರಳ್ಳಿಯ ಬಾಲಕ ಹಾಗೂ ಸ್ಥಳೀಯ ನಿವಾಸಿ ಯುವಕ ಮತ್ತು ಬಾರಕೂರು ಸಮೀಪದ ನಡೂರಿನ ಗರ್ಭಿಣಿ ಮಹಿಳೆ, ಹೇರಾಡಿ ಮತ್ತು ಅಚ್ಲಾಡಿಯಲ್ಲಿ ಬೆಂಗಳೂರಿನಿಂದ ಆಗಮಿಸಿದ ವ್ಯಕ್ತಿ, ಸಾಲಿಗ್ರಾಮ ಚಿತ್ರಪಾಡಿ ಅಂಬಾಗಿಲುಕೆರೆ ರಸ್ತೆಯ ಯುವಕ ಸಹಿತ 6 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಸೋಂಕಿತರು ವಾಸವಿದ್ದ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಪಡುಬಿದ್ರಿ: ವೈದ್ಯರ ಸಹಿತ 5 ಪಾಸಿಟಿವ್‌
ಇಲ್ಲಿನ ಕಾರ್ಕಳ ರಸ್ತೆಯ 65ರ ಹರೆಯದ ಖಾಸಗಿ ವೈದ್ಯರೊಬ್ಬರ ಸಹಿತ ಐದು ಮಂದಿಗೆ ಕೋವಿಡ್ 19 ಸೋಂಕು ತಗಲಿದೆ. ವೈದ್ಯರ 60 ವರ್ಷದ ಪತ್ನಿಗೂ ಸೋಂಕು ದೃಢಪಟ್ಟಿದೆ.ಅವರಿಬ್ಬರು ಉಡುಪಿ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಚಿಕಿತ್ಸಾಲಯ ಮತ್ತು ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ನಡ್ಪಾಲು – ಕನ್ನಂಗಾರಿನ 19 ವರ್ಷದ ಯುವಕನಿಗೆ ಶನಿವಾರ ಸೋಂಕು ಕಾಣಿಸಿಕೊಂಡಿದೆ. ಅವರ ಮನೆಯಲ್ಲಿ ಈ ಹಿಂದೆ ಮಹಿಳೆಯೊಬ್ಬರಿಗೆ ಸೋಂಕು ಕಾಣಿಸಿಕೊಂಡಿತ್ತು. ಪ್ರಾಥಮಿಕ ಸಂಪರ್ಕದಿಂದ ಬಾಧೆಗೊಳಗಾಗಿರುವ ಯುವಕನನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಜಮಾಡಿ ಕೋಡಿ ರಸ್ತೆಯಲ್ಲಿ ಸೋಂಕು ಪೀಡಿತರಾಗಿದ್ದ ಯುವಕರೊಬ್ಬರ ತಂದೆ (52) ಮತ್ತು ತಾಯಿಗೂ (40) ಶನಿವಾರ ಸೋಂಕು ದೃಢಪಟ್ಟಿದ್ದು ಅವರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿರ್ವ: ಒಂದೇ ಮನೆಯ ಐವರಿಗೆ ಸೋಂಕು
ಮಹಾರಾಷ್ಟ್ರದಿಂದ ಬಂದು ಕಾರ್ಕಳದಲ್ಲಿ ಕ್ವಾರಂಟೈನ್‌ ಮುಗಿಸಿ ಬಂದಿದ್ದ ಶಿರ್ವ ಮಕ್ಕೇರಿಬೈಲಿನ ಒಂದೇ ಕುಟುಂಬದ 5 ಮಂದಿಗೆ ಶನಿವಾರ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ಆಗಿದ್ದಾರೆ. ಸೋಂಕಿತರನ್ನು ಕಾರ್ಕಳದ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮನೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಕುಂದಾಪುರ: ಎಎಸ್‌ಐ ಸಹಿತ 25 ಮಂದಿಗೆ ಪಾಸಿಟಿವ್‌
ಬೈಂದೂರು ಹಾಗೂ ಕುಂದಾಪುರದಲ್ಲಿ ಶನಿವಾರ ಒಟ್ಟು 25 ಮಂದಿಗೆ ಕೋವಿಡ್ 19 ಪಾಸಿಟಿವ್‌ ಬಂದಿರುವುದು ದೃಢವಾಗಿದೆ. ಇಲ್ಲಿನ ನಗರ ಪೊಲೀಸ್‌ ಠಾಣೆಯ ಎಎಸ್‌ಐ ಒಬ್ಬರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಒಂದು ದಿನದ ಮಟ್ಟಿಗೆ ಪ್ರವಾಸಿ ಮಂದಿರಕ್ಕೆ ಸ್ಥಳಾಂತರಿಸಲಾಗಿದ್ದು, ಸ್ಯಾನಿಟೈಸ್‌ ಮಾಡಲಾಗಿದೆ.

ಕುಂದಾಪುರ ತಾಲೂಕಿನ ಕಾಳಾವರ, ಕಂಡ್ಲೂರಿನ ಇಬ್ಬರು, ವಂಡ್ಸೆ, ಬೇಳೂರು, ಕೋಟೇಶ್ವರದಲ್ಲಿ ತಲಾ ಒಬ್ಬರಿಗೆ, ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಐವರು, ಉಪ್ಪುಂದ, ಯಡ್ತರೆಯ ತಲಾ ಮೂವರು, ಕೆರ್ಗಾಲು, ಶಿರೂರಿನ ತಲಾ 2, ಕಾಲ್ತೋಡು, ನಾಡ, ನಾವುಂದದ ತಲಾ ಒಬ್ಬರಿಗೆ ಪಾಸಿಟಿವ್‌ ಬಂದಿದೆ.

ಹೈವೇ ಗಸ್ತು ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್‌ಐ ಅವರ ಕರ್ತವ್ಯ ಪಾಳಿ ಜು. 10ಕ್ಕೆ ಮುಗಿದಿತ್ತು. ಇವರು ಕರ್ತವ್ಯ ನಿರ್ವಹಿಸುತ್ತಿದ್ದ ವಾಹನದಲ್ಲಿ ಇನ್ನೊಂದು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಮತ್ತು ಮತ್ತೋರ್ವ ಎಎಸ್‌ಐ ಅವರಿಗೆ ಸೋಂಕು ದೃಢವಾಗಿದ್ದ ಹಿನ್ನೆಲೆಯಲ್ಲಿ ಇವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.

ತೆಕ್ಕಟ್ಟೆ: ಐವರಿಗೆ ಸೋಂಕು
ತೆಕ್ಕಟ್ಟೆ ವ್ಯಾಪ್ತಿಯಲ್ಲಿ ಐವರಿಗೆ ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ಕಾಪು: ನಾಲ್ವರು ಪೊಲೀಸರಿಗೆ ಸೋಂಕು
ಕಾಪು ಪೊಲೀಸ್‌ ಠಾಣೆಯ ನಾಲ್ಕು ಮಂದಿ ಪೊಲೀಸರಲ್ಲಿ ಶುಕ್ರವಾರ ಕೋವಿಡ್ 19 ಪಾಸಿಟಿವ್‌ ದೃಢಪಟ್ಟಿದೆ. ಠಾಣೆಯ ಎಎಸ್‌ಐಗೆ ಕೋವಿಡ್ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಠಾಣೆಯ 35 ಪೊಲೀಸರಿಗೆ ಟೆಸ್ಟ್‌ ನಡೆಸಲಾಗಿತ್ತು. ಇದರಲ್ಲಿ ಶುಕ್ರವಾರ ನಾಲ್ಕು ಮಂದಿಗೆ ಪಾಸಿಟಿವ್‌ ಬಂದಿದ್ದು, ಉಳಿದ 31 ಮಂದಿಯ ವರದಿ ನೆಗಟಿವ್‌ ಬಂದಿದೆ.

ಕೋವಿಡ್ 19 ರೋಗ ಲಕ್ಷಣದ ಹಿನ್ನೆಲೆಯಲ್ಲಿ ಈ ಹಿಂದೆ ಎಎಸ್‌ಐ ಸಹಿತ ಐದು ಮಂದಿಯ ಸ್ಯಾಂಪಲ್‌ ತೆಗೆಯಲಾಗಿದ್ದು, ಆ ಐದು ಮಂದಿಯಲ್ಲೂ ಪಾಸಿಟಿವ್‌ ಪತ್ತೆಯಾಗಿತ್ತು. ಇದೀಗ ಮತ್ತೆ ನಾಲ್ಕು ಪೊಲೀಸರಲ್ಲಿ ಪಾಸಿಟಿವ್‌ ಬಂದಿದ್ದು ಠಾಣೆಯ ಒಂಬತ್ತು ಪೊಲೀಸರಲ್ಲಿ ಪಾಸಿಟಿವ್‌ ದೃಢಪಟ್ಟಂತಾಗಿದೆ.

ಕುರ್ಕಾಲು ಮತ್ತೂಂದು ಪ್ರಕರಣ
ಕುರ್ಕಾಲು ಗ್ರಾಮದ ಪಾಜಕದಲ್ಲಿ ಹೌಸಿಂಗ್‌ ಕಾಲನಿಯೊಂದರಲ್ಲಿ ವಾಸವಿದ್ದ ಯುವಕನಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಉಡುಪಿಗೆ ಕೆಲಸಕ್ಕೆ ಹೋಗುತ್ತಿದ್ದ 26 ವರ್ಷದ ಯುವನಿಕ ಜ್ವರ ಬಂದಿದ್ದ ಹಿನ್ನೆಲೆಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಯ ಮೂಲಕ ಕೋವಿಡ್‌ ಟೆಸ್ಟ್‌ ನಡೆಸಿದಾಗ ಪಾಸಿಟಿವ್‌ ಬಂದಿತ್ತು.

ಹೊಸಂಗಡಿ: ಓರ್ವರಿಗೆ ಸೋಂಕು
ಸಿದ್ದಾಪುರ: ಬೆಂಗಳೂರಿನಿಂದ ಹೊಸಂಗಡಿ ಗ್ರಾಮದ ಮಂಡಗದ್ದೆಗೆ ಬಂದ 40 ವರ್ಷದ ವ್ಯಕ್ತಿಗೆ ಶನಿವಾರ ಪಾಸಿಟಿವ್‌ ಬಂದಿದೆ. ಅವರನ್ನು ಅವರನ್ನು ಕುಂದಾಪುರ ಕೊವೀಡ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಸಚ್ಚೇರಿಪೇಟೆ: ಸಿಬಂದಿಗೆ ಸೋಂಕು
ಸಚ್ಚೇರಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಿ ಗ್ರೂಪ್‌ ಸಿಬಂದಿಗೆ ಸೋಂಕು ದೃಢಪಟ್ಟಿದ್ದು  ಕೇಂದ್ರವನ್ನು ಸೀಲ್‌ಡೌನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next