Advertisement

“ಲೋಕಲ್‌ ಟೆಸ್ಟ್‌’ಅಬಾಧಿತ

06:00 AM Aug 10, 2018 | |

ಬೆಂಗಳೂರು: “ಲೋಕಲ್‌ ಟೆಸ್ಟ್‌’ ಅಭಾದಿತ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಎದುರಾಗಿದ್ದ ಕಾನೂನು ಅಡ್ಡಿ ದೂರವಾಗಿದೆ.

Advertisement

ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದ ಕಲಬುರಗಿ ಹೈಕೋರ್ಟ್‌ ಏಕಸದಸ್ಯಪೀಠದ ತೀರ್ಪನ್ನು ವಿಭಾಗೀಯಪೀಠ ಗುರುವಾರ ರದ್ದುಗೊಳಿಸಿದ್ದರಿಂದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಉಂಟಾಗಿದ್ದ ಕಾನೂನು ತೊಡಕು ನಿವಾರಣೆಯಾಗಿದೆ.

ಈ ಮಧ್ಯೆ ತುಮಕೂರು, ಮೈಸೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳ ವಾರ್ಡ್‌ವಾರು ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಹೀಗಾಗಿ ಈ ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಇದ್ದ ಕಾನೂನು ಅಡಚಣೆ ಸಹ ಈಗ ಇಲ್ಲವಾಗಿದೆ.

ಅದರಂತೆ, 105 ಸ್ಥಳೀಯ ಸಂಸ್ಥೆಗಳಿಗೆ ನಿಗದಿಯಂತೆ ಆ.29ರಂದು ಮತದಾನ ನಡೆದರೆ, ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಆ.31ರಂದು ಮತದಾನ ನಡೆಯಲಿದೆ. ಮತ ಎಣಿಕೆ ಕಾರ್ಯ ಸೆ.3ಕ್ಕೆ ನಡೆಯಲಿದೆ. ಈ ಹಿಂದೆ 105 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಸೆ.1ಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಮೂರು ಮಹಾನಗರ ಪಾಲಿಕೆಗಳಿಗೆ ಗುರುವಾರ (ಆ.9) ವೇಳಾಪಟ್ಟಿ ಪ್ರಕಟಿಸಿದ್ದರಿಂದ ಎಲ್ಲ 108 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಏಕಕಾಲಕ್ಕೆ ನಡೆಸಲು ಉದ್ದೇಶಿಸಿರುವ ಚುನಾವಣಾ ಆಯೋಗ ಮತ ಎಣಿಕೆ ದಿನಾಂಕವನ್ನು ಬದಲಿಸಿದೆ.

ಸೆಪ್ಟಂಬರ್‌-2018ರಲ್ಲಿ ಅವಧಿ ಮುಕ್ತಾಯವಾಗಲಿರುವ ಮೂರು ಮಹಾನಗರ ಪಾಲಿಕೆಗಳು, 29 ನಗರಸಭೆಗಳು, 53 ಪುರಸಭೆಗಳು ಮತ್ತು 23 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 108 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಬೇಕಿದೆ. ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಆ.2ರಂದು ವೇಳಾಪಟ್ಟಿ ಪ್ರಕಟಿಸಿತ್ತು. ಆದರೆ, ವೇಳಾಪಟ್ಟಿ ಪ್ರಕಟಗೊಳ್ಳುವ ಮೊದಲೇ ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಕೆಯಾಗಿತ್ತು. ಹಾಗಾಗಿ, ಮೂರು ಮಹಾನಗರ ಪಾಲಿಕೆಗಳನ್ನು ಹೊರತುಪಡಿಸಿ, ಉಳಿದ 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಘೋಷಿಸಲಾಗಿತ್ತು.

Advertisement

ಈ ಮಧ್ಯೆ, ನಮ್ಮ ಅವಧಿ 2019ರ ಮಾರ್ಚ್‌ಗೆ ಕೊನೆಗೊಳ್ಳುವುದಿದ್ದರೂ, ಆರು ತಿಂಗಳ ಮುಂಚೆ ಚುನಾವಣೆ ಘೋಷಿಸಲಾಗಿದೆ ಎಂದು ಕಲಬುರಗಿ ಜಿಲ್ಲೆಯ ಅಫ‌jಲಪುರ ಪುರಸಭೆಯ ಸದಸ್ಯರು ಹೈಕೋರ್ಟ್‌ನ ಕಲಬುರಗಿ ಪೀಠದಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಇದನ್ನು ಮಾನ್ಯ ಮಾಡಿದ್ದ ಏಕಸದಸ್ಯಪೀಠ ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಬುಧವಾರ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿತ್ತು. ಗುರುವಾರ ವಿಚಾರಣೆ ನಡೆಸಿದ ವಿಭಾಗೀಯಪೀಠ, ಏಕಸದಸ್ಯ ಪೀಠದ ತೀರ್ಪನ್ನು ರದ್ದಗೊಳಿಸಿ, ನಿಗದಿಯಂತೆ ಚುನಾವಣೆ ನಡೆಸಲು ಆದೇಶಿಸಿತು.

ಇದೇ ವೇಳೆ ವೇಳಾಪಟ್ಟಿ ಪ್ರಕಟವಾಗುವ ಮೊದಲೇ ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳ ವಾರ್ಡ್‌ವಾರು ಮೀಸಲಾತಿ ಹಾಗೂ ಕ್ಷೇತ್ರ ಪುನರ್‌ವಿಂಗಡನೆ ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಚುನಾವಣಾ ಆಯೋಗ ಈ ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ದಿನಾಂಕ ಪ್ರಕಟಿಸರಿಲಿಲ್ಲ. ಆದರೆ, ಅರ್ಜಿಗಳನ್ನು ವಜಾಗೊಳಿಸಿ, ಚುನಾವಣೆ ನಡೆಸುವಂತೆ ಹೈಕೋರ್ಟ್‌ ಗುರುವಾರ ಆದೇಶ ನೀಡಿರುವುದರಿಂದ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಈ ರೀತಿ ಸೆಪ್ಟಂಬರ್‌ಗೆ ಅವಧಿ ಕೊನೆಗೊಳ್ಳಲಿರುವ ಎಲ್ಲ 108 ನಗರ ಸ್ಥಳೀಯ ಸಂಸ್ಥೆಗಳಿಗೆ ಏಕ ಕಾಲಕ್ಕೆ ಚುನಾವಣೆ ನಡೆಯಲಿದ್ದು, 2ಪ್ರತ್ಯೇಕ ದಿನಗಳಲ್ಲಿ ಮತದಾನ ನಡೆಯಲಿದೆ.

ಇಂದು ಅಧಿಸೂಚನೆ
29 ನಗರಸಭೆಗಳು, 53 ಪುರಸಭೆಗಳು ಮತ್ತು 23 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 105 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯಾ ಜಿಲ್ಲಾಧಿಕಾರಿಗಳು ಶುಕ್ರವಾರ (ಆ.10) ಅಧಿಸೂಚನೆ ಹೊರಡಿಲಿದ್ದು, “ಲೋಕಲ್‌ ಟೆಸ್ಟ್‌’ಗೆ ಅಧೀಕೃತ ಚಾಲನೆ ಸಿಗಲಿದೆ. ಈ 105 ಸ್ಥಳೀಯ ಸಂಸ್ಥೆಗಳಲ್ಲಿ ಆ.29ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಶುಕ್ರವಾರದಿಂದಲೇ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಆ.17 ಕೊನೆ ದಿನಾಂಕವಾಗಿದೆ. ಆ.18ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್‌ ಪಡೆದುಕೊಳ್ಳಲು ಆ.20 ಕೊನೆ ದಿನವಾಗಿದೆ. ಚುನಾವಣೆ ನಡೆಯಲಿರುವ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ.

ಮೂರು ನಗರಪಾಲಿಕೆಗಳಿಗೆ ಆ.31 ರಂದು ಮತದಾನ
ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ರಾಜ್ಯ ಚುನಾವಣಾ ಆಯೋಗ ಆ.9 (ಗುರುವಾರ) ವೇಳಾಪಟ್ಟಿ ಪ್ರಕಟಿಸಿದ್ದು, ಈ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಸೆ.3ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ಆಯೋಗದ ವೇಳಾಪಟ್ಟಿಯಂತೆ ಮೂರು ಮಹಾನಗರ ಪಾಲಿಕೆಗಳಿಗೆ ಆಗಸ್ಟ್‌ 31ರಂದು ಬೆಳಿಗ್ಗೆ 7ರಿಂದ ಸಂಜೆ ಗಂಟೆ ತನಕ ಮತದಾನ ನಡೆಯಲಿದೆ. ಈ ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಆಯಾ ಜಿಲ್ಲಾಧಿಕಾರಿಗಳು ಸೆ.13ರಂದು ಅಧಿಸೂಚನೆ ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಆ.20 ಕೊನೆ ದಿನ. ಆ.21ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆಯಲು ಆ.23 ಕೊನೆ ದಿನವಾಗಿದೆ. ಮರು ಮತದಾನದ ಅವಶ್ಯಕತೆ ಬಿದ್ದಲ್ಲಿ ಸೆ.2ಕ್ಕೆ ನಡೆಯಲಿದೆ. ಸೆ.3ರಂದು ಬೆಳಿಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ.

13 ಲಕ್ಷ ಮತದಾರರು: ಮೂರು ಮಹಾನಗರ ಪಾಲಿಕೆಗಳಲ್ಲಿ 135 ವಾರ್ಡ್‌ಗಳಲ್ಲಿ ಚುನಾವಣೆ ನಡೆಯಲಿದ್ದು, 1,284 ಮತಗಟ್ಟೆಗಳಿವೆ. 6,66,136 ಪುರುಷರು, 6,66,864 ಮಹಿಳೆಯರು, 153 ಇತರೆ ಸೇರಿ ಒಟ್ಟು 13.33 ಲಕ್ಷ ಮತದಾರರಿದ್ದಾರೆ. ಇದರಲ್ಲಿ ಮೈಸೂರು ಮಹಾನಗರ ಪಾಲಿಕೆಯಲ್ಲಿ 7.99 ಲಕ್ಷ, ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ 2.74 ಲಕ್ಷ ಮತ್ತು ತುಮಕೂರು ಮಹಾನಗರ ಪಾಲಿಕೆಯಲ್ಲಿ 2.59 ಲಕ್ಷ ಮತದಾರರಿದ್ದಾರೆ. ಈ ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ಇವಿಎಂ ಬಳಸಲಾಗುತ್ತಿದ್ದು, 1,534 ಬ್ಯಾಲೆಟ್‌ ಯೂನಿಟ್‌ ಹಾಗೂ 1,534 ಕಂಟ್ರೋಲ್‌ ಯೂನಿಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮೂವರು ಐಎಎಸ್‌ ಅಧಿಕಾರಿಗಳನ್ನು ವಿಶೇಷ ವೀಕ್ಷಕರು, 4 ಕೆಎಎಸ್‌ ಅಧಿಕಾರಿಗಳನ್ನು ಸಾಮಾನ್ಯ ವೀಕ್ಷಕರು 7 ಮಂದಿ ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದೆ. ಅಭ್ಯರ್ಥಿಗಳ ಗರಿಷ್ಠ ಚುನಾವಣಾ ವೆಚ್ಚ ತಲಾ 3 ಲಕ್ಷ ರೂ. ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next