Advertisement

ನ್ಯಾಯಾಧೀಶರು, ಅಪರ ಜಿಲ್ಲಾಧಿಕಾರಿಯವರನ್ನು ನೀಡಿದ ಮುನಿಯಾಲು ಸರಕಾರಿ ಹಿ.ಪ್ರಾ. ಶಾಲೆ

09:51 AM Nov 11, 2019 | Team Udayavani |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1915 ಶಾಲೆ ಸ್ಥಾಪನೆ
ದಾಖಲೆ ಪ್ರಮಾಣದಲ್ಲಿ ಇಂದಿಗೂ ವಿದ್ಯಾರ್ಥಿಗಳು

ಅಜೆಕಾರು: ದೇಶದ ಕಾರ್ಯಾಂಗ, ನ್ಯಾಯಾಂಗಕ್ಕೆ ಸೇವೆ ಸಲ್ಲಿಸಲು ಅಧಿಕಾರಿಗಳನ್ನು ನೀಡಿದ ಸರಕಾರಿ ಹಿ. ಪ್ರಾ. ಶಾಲೆ ಮುನಿಯಾಲು 104 ವರ್ಷಗಳನ್ನು ಕಳೆದು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಮುನಿಯಾಲು ಪರಿಸರದ ಆಸುಪಾಸಿನಲ್ಲಿ ಶಾಲೆಗಳಿಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡ ಸ್ಥಳಿಯರು ಮುನಿಯಾಲು ಸಮೀಪದ ವರಂಗದಲ್ಲಿ 1915ರಲ್ಲಿ ಮುಳಿಹುಲ್ಲಿನ ಕಟ್ಟಡದಲ್ಲಿ ಪ್ರಾಥಮಿಕ ಶಾಲೆಯನ್ನು ಅರಂಭಿಸಿದರು. ಅನಂತರ 1921ರಲ್ಲಿ ಮುನಿಯಾಲಿಗೆ ಸ್ಥಳಾಂತರಗೊಂಡಿತು.

ನಾಲ್ಕೂರು ರಾಮಚಂದ್ರ ಪೈ ಹಾಗೂ ಕಬ್ಬಿನಾಲೆ ಕುಚ್ಚಾರು ನರಸಿಂಹ ಹೆಬ್ಟಾರ್‌ ಶಾಲೆಗೆ ಜಾಗವನ್ನು ದಾನವಾಗಿ ನೀಡಿದ್ದರು. ಶಾಲೆ ಆರಂಭವಾದ ದಿನಗಳಲ್ಲಿ ಮುಟ್ಲುಪಾಡಿ, ಮುನಿಯಾಲು, ವರಂಗ, ಕಾಡುಹೊಳೆ, ಪಡುಕುಡೂರು, ಎಳ್ಳಾರೆ, ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು. ಈಗ ಈ ವ್ಯಾಪ್ತಿಯಲ್ಲಿ ಇತರ 7
ಶಾಲೆಗಳು ಆರಂಭಗೊಂಡಿದ್ದರೂ ಸಹ ದಾಖಲೆ ಪ್ರಮಾಣದಲ್ಲಿ ಇಂದಿಗೂ ಶಾಲೆಯಲ್ಲಿ ವಿದ್ಯಾರ್ಥಿಗಳಿದ್ದಾರೆ.

ಸಾಧಕ ಹಳೆ ವಿದ್ಯಾರ್ಥಿಗಳು
ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿದ್ದು ಶಾಲೆಯ ಹೆಸರನ್ನು ಅಜರಾಮರಗೊಳಿಸಿದ್ದಾರೆ. ಇಲ್ಲಿನ ಹಳೆ ವಿದ್ಯಾರ್ಥಿಗಳಾದ ಎಳ್ಳಾರೆ ಸದಾಶಿವ ಪ್ರಭು ಅವರು ಉಡುಪಿ ಜಿಲ್ಲೆ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಚ್ಚಿದಾನಂದ ನಾಯಕ್‌ ಕಾಡುಹೊಳೆಯವರು ಭಾರತೀಯ ಸೇನೆಯಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃಷ್ಣಮೂರ್ತಿಯವರು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿದ್ದಾರೆ. ಡಾ| ವಿಜಯ ಭಾನು ಶೆಟ್ಟಿ ಮಣಿಪಾಲದಲ್ಲಿ ಮುನಿಯಾಲು ಆಯುರ್ವೇದಿಕ್‌ ಸಂಸ್ಥೆ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಹಲವಾರು ಮಂದಿ ಡಾಕ್ಟರ್, ಇಂಜಿನಿಯರ್, ನೂರಾರು ಮಂದಿ ಶಿಕ್ಷಕರಾಗಿ, ಹಲವಾರು ಮಂದಿ ಬ್ಯಾಂಕ್‌ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹಳಷ್ಟು ಮಂದಿ ಖ್ಯಾತ ಉದ್ಯಮಿಗಳು, ಗುತ್ತಿಗೆದಾರರಾಗಿದ್ದಾರೆ.

Advertisement

2017ರಲ್ಲಿ ಶತಮಾನೋತ್ಸವ ಆಚರಣೆ
ಶಾಲೆಯು 2017ನೇ ಸಾಲಿನಲ್ಲಿ ಶತಮಾನೋತ್ಸವ ವನ್ನು ಹಳೆ ವಿದ್ಯಾರ್ಥಿ ಎಂ. ದಿನೇಶ್‌ ಪೈ ಅವರ ಅಧ್ಯಕ್ಷತೆಯಲ್ಲಿ ಆಚರಿಸಿದ್ದು ಈ ಸಂದರ್ಭ ದಾನಿಗಳ ಸಹಕಾರದಿಂದ ರಂಗಮಂದಿರ, ಸ್ವಾಗತ ಕಮಾನು, ಧ್ವಜಸ್ತಂಭ ಹಾಗೂ ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಿಕೊಳ್ಳಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಶಾಲೆ ಒಳಗೊಂಡಿದ್ದು ವಾಚನಾಲಯ, ಕ್ರೀಡಾ ಉಪಕರಣಗಳು ಇವೆ. ಭಾರತ ಸೇವಾದಳ, ಗೈಡ್ಸ್‌, ಯೋಗಾಭ್ಯಾಸ, ಇಂಗ್ಲಿಷ್‌ ನ್ಪೋಕನ್‌ ತರಗತಿಗಳನ್ನು ನಡೆಸಲಾಗುತ್ತಿದೆ.

ಪ್ರಸ್ತುತ 389 ವಿದ್ಯಾರ್ಥಿಗಳು
ಆರಂಭದ ವರ್ಷಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕರಾಗಿ ಬೊಗ್ಗು ಶೆಟ್ಟಿ ಅಂಡಾರು ಸೇವೆ ಸಲ್ಲಿಸಿದ್ದರು. ಪ್ರಸ್ತುತ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಆಗಿ ಪರಿವರ್ತನೆಗೊಂಡಿದ್ದು ಶಾಲೆ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಒಳಗೊಂಡಿದೆ. ಪ್ರಸ್ತುತ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 290 ವಿದ್ಯಾರ್ಥಿಗಳಿದ್ದು ಎಲ್‌ಕೆಜಿ, ಯುಕೆಜಿಯಲ್ಲಿ  99 ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದು ಶಾಲೆಯಲ್ಲಿ ಒಟ್ಟು 389 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸುಭಾಷಿಣಿ ಕಾರ್ಯನಿರ್ವಹಿಸುತ್ತಿದ್ದು ಸಹಶಿಕ್ಷಕರು 7, ಅತಿಥಿ ಶಿಕ್ಷಕರು 2, ಎಲ್‌ಕೆಜಿ, ಯುಕೆಜಿಗೆ 3 ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯು ಸುಮಾರು 2 ಎಕ್ರೆ ಜಾಗವನ್ನು ಒಳಗೊಂಡಿದೆ.

ಮುನಿಯಾಲು ಸರಕಾರಿ ಹಿ.ಪ್ರಾ. ಶಾಲೆಯು ಗ್ರಾಮಸ್ಥರ, ದಾನಿಗಳ ಸಹಕಾರದೊಂದಿಗೆ ಶತಮಾನ ಕಂಡು ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರಂತರ ಶ್ರಮಿಸಲಾಗುತ್ತಿದೆ. -ಸುಭಾಷಿಣಿ ಹೆಗ್ಡೆ, , ಪ್ರಭಾರ ಮುಖ್ಯ ಶಿಕ್ಷಕಿ, ಸ.ಹಿ.ಪ್ರಾ. ಶಾಲೆ ಮುನಿಯಾಲು

ಶಾಲೆ ಹಾಗೂ ದೇವಸ್ಥಾನ ಗ್ರಾಮದ ಕಣ್ಣುಗಳಿದ್ದಂತೆ. ಶಿಕ್ಷಣ ಸಂಸ್ಥೆಗಳಿಗೆ ಎಷ್ಟೇ ದಾನ ನೀಡಿದರೂ ಕಡಿಮೆಯೇ. ಮುನಿಯಾಲು ಪರಿಸರದಲ್ಲಿ ಶಿಕ್ಷಣ ವಂಚಿತರಾಗುತ್ತಿರುವ ಮಕ್ಕಳನ್ನು ಮನಗಂಡು ಹಿರಿಯರು ಶಾಲೆ ಆರಂಭಿಸಿದ್ದರು. ಗುಣಮಟ್ಟದ ಶಿಕ್ಷಣದಿಂದಾಗಿ ಶಾಲೆಯು ಇಂದಿಗೂ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ.
-ಎಂ. ಶ್ರೀಧರ ಪೈ, ನಿವೃತ್ತ ಬ್ಯಾಂಕ್‌ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next