Advertisement

104 ಆರೋಗ್ಯ ಸಹಾಯವಾಣಿ ಕೇಂದ್ರಕ್ಕೆ ಬೀಗ

05:24 PM Feb 18, 2022 | Team Udayavani |

ಹುಬ್ಬಳ್ಳಿ: ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದ ಜನರಿಗೆ ಆರೋಗ್ಯ ಮಾಹಿತಿ, ಕೋವಿಡ್‌ ಸಂದರ್ಭದಲ್ಲಿ ಉಪಯುಕ್ತ ಸೇವೆ ನೀಡಿದ 104 ಆರೋಗ್ಯ ಸಹಾಯವಾಣಿ ಕೇಂದ್ರಕ್ಕೆ ಬೀಗ ಜಡಿದಿದ್ದು, ಯೋಜನೆ ಮೂಲಕ ಜೀವನ ಕಂಡುಕೊಂಡಿದ್ದ ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಗುತ್ತಿಗೆ ಪಡೆದಿದ್ದ ಸಂಸ್ಥೆ ಯಾವುದೇ ಆರ್ಥಿಕ ಸೌಲಭ್ಯಗಳ ಬಾಕಿ ಇರುವುದಿಲ್ಲ ಎನ್ನುವ ಪತ್ರಕ್ಕೆ ಸಹಿ ಹಾಕುವಂತೆ ಸಿಬ್ಬಂದಿಗೆ ಒತ್ತಡ ಹೇರಲಾರಂಭಿಸಿದೆ.

Advertisement

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬೆರಳ ತುದಿಯಲ್ಲಿ ಆರೋಗ್ಯ ಮಾಹಿತಿ ದೊರೆಯಬೇಕೆನ್ನುವ ಕಾರಣಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ
ಅವರು 104 ಆರೋಗ್ಯ ಸಹಾಯವಾಣಿಗೆ ಚಾಲನೆ ನೀಡಿದ್ದರು. ಹುಬ್ಬಳ್ಳಿಯ ಐಟಿ ಪಾರ್ಕ್‌ನಲ್ಲಿ 2013 ಹಾಗೂ 2018ರಲ್ಲಿ ಬೆಂಗಳೂರಿನಲ್ಲಿ ಸುಸಜ್ಜಿತ ಕಚೇರಿ ಆರಂಭಿಸಲಾಗಿತ್ತು. ಕಳೆದ ಒಂಬತ್ತು ವರ್ಷಗಳಲ್ಲಿ ಒಂದು ದಿನವೂ ಸ್ಥಗಿತಗೊಳ್ಳದೆ ರಾಜ್ಯದ ಜನರಿಗೆ ಆರೋಗ್ಯ, ಸರಕಾರಿ ಆಸ್ಪತ್ರೆ, ಚಿಕಿತ್ಸೆ, ತಜ್ಞರಿಂದ ಸಲಹೆ ಹೀಗೆ ಮಾಹಿತಿ ನೀಡುತ್ತಿದ್ದ ನಗರದ ಕೇಂದ್ರ ಬಾಗಿಲು ಮುಚ್ಚಲಾಗಿದೆ. ನಿತ್ಯ 17-20 ಸಾವಿರ ಕರೆಗಳನ್ನು ಸ್ವೀಕರಿಸುತ್ತಿದ್ದ ಸಿಬ್ಬಂದಿ ಕೋವಿಡ್‌ ಸಂದರ್ಭದಲ್ಲಿ ಇತರೆ ಆರೋಗ್ಯ ಸಹಾಯವಾಣಿ ಸಂಖ್ಯೆಗಳ ಮೂಲಕ 40 ಸಾವಿರಕ್ಕೂ ಹೆಚ್ಚು ಕರೆ ಸ್ವೀಕರಿಸಿ ಅಗತ್ಯ ಮಾಹಿತಿ ನೀಡಲಾಗಿತ್ತು.

ಬಿಎಸ್‌ಎನ್‌ಎಲ್‌ ಬಾಕಿ ನೆಪ:
ಆರಂಭದಿಂದಲೂ ಈ ಯೋಜನೆಯನ್ನು ಮುನ್ನಡೆಸುತ್ತಿದ್ದ ಪಿರಾಮಲ್‌ ಸ್ವಾಸ್ಥ್ಯ ಮ್ಯಾನೇಜ್‌ಮೆಂಟ್‌ ರೀಸರ್ಚ್‌ ಆ್ಯಂಡ್‌ ಇನ್‌ಸ್ಟಿಟ್ಯೂಟ್‌ ಹಾಗೂ ಸರಕಾರದ ನಡುವಿನ ತಿಕ್ಕಾಟದ ಪರಿಣಾಮವಾಗಿ ಯೋಜನೆಗೆ ತಿಲಾಂಜಲಿ ಇಡುವ ಕಸರತ್ತು ನಡೆದಿವೆ. ತಿಂಗಳಿಗೆ ಹತ್ತಾರು ಕೋಟಿ ರೂ. ವೆಚ್ಚವಾಗುತ್ತಿದ್ದ ಯೋಜನೆಗೆ ಎರಡು ತಿಂಗಳ ಸಮಾರು 40 ಲಕ್ಷ ರೂ. ಬಿಎಸ್‌ ಎನ್‌ಎಲ್‌ ಬಾಕಿ ನೆಪವಾಯಿತು. ಇದನ್ನೇ ನೆಪವಾಗಿಟ್ಟುಕೊಂಡು ನವೆಂಬರ್‌ ಕೊನೆಯ ವಾರದಲ್ಲಿ ಕಾರ್ಯ ಸ್ಥಗಿತಗೊಳಿಸಲಾಯಿತು.ಹೀಗಾಗಿ ಸಿಬ್ಬಂದಿ ಕೇಂದ್ರಕ್ಕೆ ಬಂದು ಹಾಗೇ ಎದ್ದು ಹೋಗುವಂತಾಯಿತು.

ಕೋವಿಡ್‌ ಮೂರನೇ ಅಲೆ ತಾರಕ್ಕೇರಿದ ಸಂದರ್ಭದಲ್ಲಿ ಇದರ ಸೇವೆ ಇಲ್ಲದಂತಾಗಿತ್ತು. ಇದರ ನಡುವೆ ಸಿಬ್ಬಂದಿ ವೇತನ ಹಾಗೂ ಇತರೆ ಬೇಡಿಕೆಗಳಿಗೆ ಆಗ್ರಹಿಸಿ ನಡೆಸಿದ ಹೋರಾಟ ಎಳ್ಳು ನೀರು ಬಿಡಲು ಕಾರಣವಾಯಿತು.

ಸಿಬ್ಬಂದಿಯಲ್ಲಿ ಆತಂಕ:
ಹುಬ್ಬಳ್ಳಿ ಹಾಗೂ ಬೆಂಗಳೂರು ಕೇಂದ್ರಗಳಲ್ಲಿ ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿ ಮೂರು ಪಾಳೆಯಲ್ಲಿ ನಿರಂತರ ಸೇವೆ ನೀಡುತ್ತಿದ್ದರು. ಇದೀಗ ಹುಬ್ಬಳ್ಳಿಯ ಕೇಂದ್ರದ ಬಾಗಿಲು ಮುಚ್ಚಲಾಗಿದೆ. ಇದರಿಂದ ಇಲ್ಲಿ ಕೆಲಸ ಮಾಡುತ್ತಿದ್ದ 200ಕ್ಕೂ ಹೆಚ್ಚು ಸಿಬ್ಬಂದಿ ಬೀದಿಗೆ ಬೀಳುವ ಆತಂಕ ಎದುರಿಸುತ್ತಿದ್ದಾರೆ. ಈ ಯೋಜನೆ ಮೂಲಕವೇ ಬದುಕು ರೂಪಿಸಿಕೊಂಡಿದ್ದ ಅದೆಷ್ಟೋ ಕುಟುಂಬಗಳು ಮುಂದಿನ ಜೀವನ ಹೇಗೆ ನೋವು ಕಾಡಲಾರಂಭಿಸಿದೆ. ನಿರ್ವಹಣೆ
ಕುರಿತಾದ ಮೂಡಿದ ಗೊಂದಲದ ನಂತರ ಸರಕಾರ ಈ ಯೋಜನೆ ನಡೆಸಲು ಟೆಂಡರ್‌ ಕರೆದಿದೆ. ಆದರೆ ಸಂಕಷ್ಟದ ಸಮಯದಲ್ಲಿ ಯೋಜನೆ ಕುರಿತು ತಲೆ ಕೆಡಿಸಿಕೊಳ್ಳದ ಸರಕಾರ ಇದನ್ನು ಮುಂದುವರಿಸುತ್ತಾ ಎನ್ನುವ ಅನುಮಾನಗಳಿದ್ದು, ಈ ಕುರಿತು ಸಿಬ್ಬಂದಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಬಾಗಿಲು ತಟ್ಟಿದ್ದು, ಮುಂದೆ ಯಾವುದೇ ಕಂಪನಿಗೆ ನೀಡಿದರೂ ಇರುವವರನ್ನೇ ಮುಂದು ವರಿಸಬೇಕೆಂದು ಜನಪ್ರತಿನಿಧಿಗಳ ಮುಂದೆ ಅಲವತ್ತು ಕೊಂಡಿದ್ದಾರೆ.

Advertisement

ಒಡಂಬಡಿಕೆ ಪ್ರಕಾರ ಸರಕಾರ ಹಣ ಬಿಡುಗಡೆ ಮಾಡಿಲ್ಲ ಎನ್ನುವುದು ಗುತ್ತಿಗೆ ಪಡೆದ ಸಂಸ್ಥೆಯ ಆರೋಪವಾಗಿದ್ದು, 2013ರಲ್ಲಿ ಮಾಡಿಕೊಂಡ ಒಡಂಬಡಿಕೆಯನ್ನು ಮುಕ್ತಾಯಗೊಳಿಸುತ್ತಿದ್ದು, ಹೀಗಾಗಿ ಸಂಸ್ಥೆಗೆ ಬರಬೇಕಾದ ಬಾಕಿ 23.67 ಕೋಟಿ ರೂ. ಒಡಂಬಡಿಕೆಯಂತೆ ಸರಕಾರ ನಡೆದುಕೊಳ್ಳದ ಕಾರಣ ಒಪ್ಪಂದದ ಪ್ರಕಾರ ಮೂರು ತಿಂಗಳ ಹಣ ಹೆಚ್ಚುವರಿಯಾಗಿ 11.03 ಕೋಟಿ ರೂ. ಸೇರಿ ಒಟ್ಟು 34.70 ಕೋಟಿ ರೂ. ನೀಡಬೇಕು ಎಂದು ಕುರಿತು ಆರೋಗ್ಯ
ಇಲಾಖೆಗೆ ನೋಟಿಸ್‌ ನೀಡಿದೆ. ಆದರೆ ಸಕಾಲಕ್ಕೆ ಹಣ ಬಿಡುಗಡೆ ಮಾಡಿದರೂ ನಿರ್ವಹಣೆ ಮಾಡಲು ವಿಫಲವಾಗಿದೆ ಎನ್ನುವುದು ಆರೋಗ್ಯ ಇಲಾಖೆ
ಅಧಿಕಾರಿಗಳ ಅಭಿಪ್ರಾಯವಾಗಿದೆ.

ಕಂಪನಿಗೆ ಬಂದು ಆರೇಳು ತಿಂಗಳಾಗಿದ್ದರಿಂದ ಹೆಚ್ಚಿನ ಮಾಹಿತಿಯಿಲ್ಲ. ಯೋಜನೆ ಮುಕ್ತಾಯ ಅಂತ ಮಾತ್ರ ಗೊತ್ತಾಗಿದೆ. ಸಹಿ ಹಾಕುವಂತೆ ಯಾವುದೇ ಸಿಬ್ಬಂದಿಗೆ ಒತ್ತಡ ಹಾಕಿಲ್ಲ. ಇಷ್ಟೊಂದು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಮುಂದೇನು ಎನ್ನುವ ಭಯ, ಆತಂಕದಲ್ಲಿ ಸಿಬ್ಬಂದಿಯಿದ್ದಾರೆ. ಮುಂದೆ ಯಾವುದೇ ಕಂಪನಿ ಬಂದರೂ ಇದೇ ಸಿಬ್ಬಂದಿಯನ್ನು ಮುಂದುವರಿಸಿ ಎಂದು ಹೇಳುತ್ತೇವೆ.
ಶಶಿಕಲಾ ಬಳ್ಳಾರಿ, ಎಚ್‌ಆರ್‌ ವಿಭಾಗ, ಹುಬ್ಬಳ್ಳಿ ಕೇಂದ್ರ

ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಳಿಸಿಕೊಂಡು ಯಾವುದೇ ಬಾಕಿಯಿಲ್ಲ ಎನ್ನುವ ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹೇರಲಾಗುತ್ತಿದೆ. ಇದೊಂದು ಕಾನೂನು ಬಾಹಿರ ನಡೆಯಾಗಿದೆ. ಉಪಧನ ಸೇರಿದಂತೆ ಕೆಲ ಬಾಕಿ ನೀಡಬೇಕಾಗಿದೆ. 34 ಕೋಟಿ ರೂ. ನೀಡಬೇಕೆಂದು ಆರೋಗ್ಯ ಇಲಾಖೆಗೆ ನೊಟೀಸ್‌ ನೀಡಿದ್ದು, ಒಂದು ವೇಳೆ ಸರಕಾರ ಈ ಹಣ ನೀಡಿದರೆ ಸಿಬ್ಬಂದಿಗೆ ಸೇರುವುದಿಲ್ಲ.
ಹೆಸರೇಳಿಚ್ಚಿಸದ ಸಿಬ್ಬಂದಿ

ನಿಯಮ ಬಾಹಿರವಾಗಿ ಸಹಿಗೆಒತ್ತಾಯ!
ಫೆ.22ಕ್ಕೆ ಒಡಂಬಡಿಕೆ ಮುಕ್ತವಾಗುವ ಹಿನ್ನೆಲೆಯಲ್ಲಿ ಸಂಸ್ಥೆ ಸೇವಾನುಭವ ಪ್ರಮಾಣ ಪತ್ರ ನೀಡುವ ನೆಪದಲ್ಲಿ ಯಾರಿಗೂ ಯಾವುದೇ ಬಾಕಿ ಉಳಿದಿಲ್ಲ ಎನ್ನುವ ಪತ್ರಕ್ಕೆ ಸಹಿ ಹಾಕಿಸಲು ಎಚ್‌ಆರ್‌ ವಿಭಾಗದ ಮೂಲಕ ಒತ್ತಡ ಹೇರುತ್ತಿದೆ. 5 ವರ್ಷದ ಗ್ರಾಚ್ಯುಟಿ, ವೇತನ ಹೆಚ್ಚಳ ಬಾಕಿ ಉಳಿಸಿಕೊಂಡಿದೆ. ಹೀಗಿರುವಾಗ ಯಾವುದೇ ಬಾಕಿ ಇಲ್ಲ ಎನ್ನುವ ಪ್ರಮಾಣ ಪತ್ರಕ್ಕೆ ಸಹಿ ಪಡೆಯುವ ಹುನ್ನಾರಕ್ಕೆ ಸಿಬ್ಬಂದಿ ಸಿಡಿದೆದ್ದಿದ್ದಾರೆ. ಈಗಾಗಲೇ ಕಂಪನಿಯು ಆರೋಗ್ಯ ಇಲಾಖೆಗೆ ನೋಟಿಸ್‌ ನೀಡಿದ್ದು, ಮುಂದಾದರೂ 34 ಕೋಟಿ ರೂ. ನಮ್ಮ ಹೆಸರಲ್ಲಿ ಪಡೆಯುತ್ತದೆ ಎನ್ನುವುದು ಸಿಬ್ಬಂದಿ ಅಭಿಪ್ರಾಯವಾಗಿದೆ.

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next