Advertisement

ಸವಿತಾ ಸಮಾಜ ಅಭಿವೃದ್ಧಿಗೆ 100 ಕೋಟಿ ರೂ.

10:41 AM Feb 02, 2020 | Suhan S |

ಬೆಂಗಳೂರು: ಸವಿತಾ ಸಮುದಾಯದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜತೆ ಚರ್ಚಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಭರವಸೆ ನೀಡಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ, ವೃತ್ತಿ ತರಬೇತಿ, ವಿದ್ಯಾರ್ಥಿ ನಿಲಯ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಕುರಿತಂತೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುತ್ತೇನೆ ಎಂದರು.

ಜಯಂತಿಗಳು ಜಾತಿ ಆಧಾರಿತವಾಗುತ್ತಿದ್ದು, ಜಯಂತಿಗಳ ಸ್ವರೂಪ ಬದಲಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳು, ವಿವಿಧ ಸಮಾಜದ ಸ್ವಾಮೀಜಿಗಳು, ಮುಖಂಡರ ಅಭಿಪ್ರಾಯ ಪಡೆಯಲಾಗುವುದು ಎಂದರು. ಜಯಂತಿಗಳ ಆಚರಣೆ ಒಳ್ಳೆಯದು. ಆದರೆ, ಜಯಂತಿಗಳಲ್ಲಿರುವ ಜಾತೀಯತೆಯನ್ನು ಬಿಡಬೇಕು. ಜಾತಿಗಳ ಆಧಾರದ ಮೇಲೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲ. ನಮ್ಮ ಅಂಗಾಂಗಗಳ ಕೆಲಸ ಭಿನ್ನವಾದರೂ ಶರೀರ ಒಂದೇ. ಅದೇ ರೀತಿ ಎಲ್ಲ ಸಮುದಾಯಗಳ ವೃತ್ತಿ ಭಿನ್ನವಾದರೂ ಸಮಾಜದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಹೊಂದಿರಬೇಕು ಎಂದು ತಿಳಿಸಿದರು.

ಕೊಂಚೂರು ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸವಿತಾ ಸಮಾಜದವರನ್ನು ನೋಡಿದರೆ ದೋಷ ಎಂಬ ಭಾವನೆ ಸಮಾಜದಲ್ಲಿ ಜೀವಂತವಾಗಿದೆ. ಇಂದಿಗೂ ಸಮಾಜದವರನ್ನು ಕೀಳಾಗಿ ಕಾಣುತ್ತಿದ್ದಾರೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮುದಾಯ ಹಿಂದುಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಸಿ. ವೇಣುಗೋಪಾಲ್‌ ಮಾತನಾಡಿ, ಸರ್ಕಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ 2 ಕೋಟಿ ರೂ. ನೀಡಿರುವುದು ಸಂತಸದ ಸಂಗತಿ. ಆದರೆ, ನಿಗಮಕ್ಕೆ ಜಾಗ ನೀಡಿಲ್ಲ. ಶೀಘ್ರ ಜಾಗ ಸೇರಿದಂತೆ ಸಮುದಾಯದ ನಾಯಕರೊಬ್ಬರನ್ನು ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

Advertisement

ಇದೇ ವೇಳೆ ಜಿ. ಮಂಜುನಾಥ್‌ ಮತ್ತು ತಂಡದವರಿಂದ ನಾದಸ್ವರ ಕಾರ್ಯಕ್ರಮ ನಡೆಯಿತು. ಪ್ರೊ. ವೆಂಕಟಾಚಲಪತಿ ಅವರು ಬರೆದ ಕೇಶಶಿಲ್ಪಿಗಳು ಪುಸ್ತಕವನ್ನು ಸಚಿವ ಸಿ.ಟಿ.ರವಿ ಬಿಡುಗಡೆಗೊಳಿಸಿದರು. ಸಮಾರಂಭಕ್ಕೂ ಮೊದಲು ಪುರಭವನದಿಂದರವೀಂದ್ರ ಕಲಾಕ್ಷೇತ್ರದವರೆಗೆ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಉದಯ್‌ ಬಿ. ಗರುಡಾಚಾರ್‌, ಸವಿತಾ ಸಮಾಜದ ಅಧ್ಯಕ್ಷ ಸಂಪತ್‌ ಕುಮಾರ್‌, ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಪರಶುರಾಮ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next