Advertisement

ಚಿತ್ರೋತ್ಸವದಲ್ಲಿ ನೀವು ನೋಡಲೇಬೇಕಾದ 10 ಸಿನಿಮಾಗಳು

03:33 PM Feb 04, 2017 | Team Udayavani |

ನಮ್ಮ ದೈನಂದಿನ ಬದುಕಿನ ಜಂಜಾಟಗಳಿಂದ ಒಂದಷ್ಟು ಕಾಲ ದೂರ ಕರೆದೊಯ್ದು ಹೊಸ ಪ್ರಪಂಚವನ್ನು, ಹೊಸ ಹೊಸ ಜನರ ಆಚಾರ ವಿಚಾರಗಳನ್ನು ಅವರ ಬದುಕಿನ ಕತೆಯನ್ನು ಪರಿಚಯಿಸುವವು ಸಿನಿಮಾಗಳು. ಮನರಂಜನೆಗೂ ಅವು ಬೇಕು, ಬದುಕಿನ ವಿವಿಧ ಮಗ್ಗುಲುಗಳನ್ನು ಕಂಡುಕೊಳ್ಳುವುದೂ ಸಿನಿಮಾಗಳಿಂದ ಸಾಧ್ಯ. ದೇಶ ವಿದೇಶಗಳ ಅತ್ಯುತ್ತಮ ಸಿನಿಮಾಗಳನ್ನು ದೊಡ್ಡ ಪರದೆಯಲ್ಲಿ ನೋಡಬೇಕೆಂದರೆ ಅದು ಸಿನಿಮೋತ್ಸವಗಳಲ್ಲಿ ಮಾತ್ರವೆ ಸಾಧ್ಯ. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಫೆಬ್ರವರಿ 2ರಂದು ಪ್ರಾರಂಭವಾಗಿದ್ದು, ಫೆಬ್ರವರಿ 9ರವರೆಗೆ ನಡೆಯಲಿದೆ. ಏಕ ಕಾಲಕ್ಕೆ ಅನೇಕ ಕಡೆಗಳಲ್ಲಿ ಸ್ಕ್ರೀನಿಂಗ್‌ ಏರ್ಪಡಿಸಿರುವುದರಿಂದ ತಮಗೆ ನೋಡಬೇಕೆನಿಸಿದ ಯಾವುದೇ ಸಿನಿಮಾಗಳನ್ನು ಆಸಕ್ತರು ಆಯಾ ಕಡೆ ವೀಕ್ಷಿಸಬಹುದು. ವೀಕ್ಷಕರು ನಿರ್ದಿಷ್ಟ ಶುಲ್ಕ ತೆತ್ತು ಪಾಸು ಮಾಡಿಸಿಕೊಂಡಿರಬೇಕು. ತುಂಬಾ ಸಿನಿಮಾಗಳು ಪ್ರದರ್ಶನ ಕಾಣುತ್ತಿರುವುದರಿಂದ ಗೊಂದಲ ನಿವಾರಿಸುವ ಸಲುವಾಗಿ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ 10 ಅತ್ಯುತ್ತಮ ಸಿನಿಮಾಗಳನ್ನು, ಆರಿಸಿ ಪುಟ್ಟದೊಂದು ಟಿಪ್ಪಣಿಯೊಂದಿಗೆ ನಿಮ್ಮ ಮುಂದಿಡುತ್ತಿದ್ದೇವೆ. ಆಯ್ಕೆ ನಿಮ್ಮದೇ.

Advertisement

1. ದಿ ಸೇಲ್ಸ್‌ಮನ್‌(ಇರಾನ್‌)
 “ಎ ಸೆಪರೇಷನ್‌’ ಎಂಬ ಚಿತ್ರದಿಂದ ಅಂತಾರಾಷ್ಟ್ರೀಯ ಸಿನಿಮಾಸಕ್ತರ ಗಮನ ಸೆಳದಿದ್ದ ಇರಾನಿ ನಿರ್ದೇಶಕ ಅಸYರ್‌ ಫ‌ರ್ಹಾದಿ “ದಿ ಸೇಲ್ಸ್‌ಮನ್‌’ ಚಿತ್ರದ ನಿರ್ದೇಶಕರು. ಮಾನವ ಸಂಬಂಧಗಳ ಸೂಕ್ಷ್ಮ ತಾಕಲಾಟಗಳನ್ನು ತನ್ನ ಚಿತ್ರಗಳಲ್ಲಿ ಬಿಂಬಿಸುವ ಈ ನಿರ್ದೇಶಕನ ಜಾಣ್ಮೆಯನ್ನೂ ಸೇಲ್ಸ್‌ಮನ್‌ ಚಿತ್ರದಲ್ಲೂ ಕಾಣಬಹುದಾಗಿದೆ. ಇರಾನಿನಲ್ಲಿ ಯುವ ದಂಪತಿಗಳಿಬ್ಬರು ಅನಿವಾರ್ಯ ಕಾರಣಗಳಿಗಾಗಿ ಮನೆ ತ್ಯಜಿಸಬೇಕಾಗುತ್ತದೆ. ಹೊಸ ಮನೆಯೊಂದನ್ನು ಹುಡುಕಿಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಹೊಸ ಸವಾಲುಗಳನ್ನು ಅವರಿಬ್ಬರೂ ಎದುರಿಸಬೇಕಾಗುತ್ತದೆ. 
 
2. ಐ ಡೇನಿಯಲ್‌ ಬ್ಲೇಕ್‌(ಇಂಗ್ಲೆಂಡ್‌)
ಡೇನಿಯಲ್‌ 59 ವರ್ಷದ ಮುದುಕ. ಅವನೊಬ್ಬ ಬಡಗಿ. ಅವನಿಗೆ ಜೀವನದಲ್ಲಿ ಈಗಾಗಲೇ ಇರುವ ಕಷ್ಟಗಳು ಸಾಲದೆಂಬಂತೆ ಹೊಸ ಸಮಸ್ಯೆಯೊಂದು ಉದ್ಭವಿಸಿದೆ. ಆತನಿಗೆ ಹೃದಯದ ತೊಂದರೆಯಿದೆ. ಒಂದು ಬಾರಿ ತೀವ್ರ ಹೃದಯಾಘಾತವಾಗಿ ಚಿಕಿತ್ಸೆ ನೀಡಿದ ನಂತರ ಚೇತರಿಸಿಕೊಂಡಿದ್ದಾನೆ. ಆದರೂ ಆ ಚಿಕಿತ್ಸೆಯಿಂದ ಆತ ಪೂರ್ತಿ ಗುಣಮುಖನಾಗಿಲ್ಲ ಎನ್ನುವುದು ಆತನ ವೈದ್ಯರ ಅಭಿಪ್ರಾಯ. ಸರಕಾರದಿಂದ ಕೆಲ ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ಆತನ ಅರ್ಜಿ ತಿರಸ್ಕೃತವಾಗುತ್ತದೆ. ಈ ಮಧ್ಯೆ ಅವನ ಹಾಗೆಯೇ ಸವಲತ್ತುಗಳಿಂದ ವಂಚಿತಳಾದ ನಿರ್ಗತಿಕ ಮಹಿಳೆ ಮತ್ತವಳ ಪುಟ್ಟ ಮಕ್ಕಳ ಪರಿಚಯವಾಗುತ್ತದೆ. 

3.ಕ್ಲಾéಶ್‌(ಈಜಿಪ್ಟ್)
ಚಿತ್ರ ಪೂರ್ತಿ ನಡೆಯುವುದು ಪೊಲೀಸ್‌ ವ್ಯಾನ್‌ ಒಳಗಡೆ. ನಗರದಲ್ಲಿ ದಂಗೆ ಎದ್ದಿದೆ. ಸರಕಾರ ಮತ್ತು ಸೇನೆಯ ನಡುವಿನ ತಿಕ್ಕಾಟಕ್ಕೆ ನಾಗರಿಕರು ಬಲಿಯಾಗಿದ್ದಾರೆ. ಈಗ ಪರ ಮತ್ತು ವಿರೋಧಿ ಗುಂಪಿನ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ನಡುವೆ ಪೊಲೀಸ್‌ ವ್ಯಾನ್‌ ಒಂದು ನಗರದ ಮಧ್ಯೆ ಪ್ರಯಾಣಿಸುತ್ತಿದೆ. ಪೊಲೀಸರು ದೊಂಬಿ ನಡೆಸುತ್ತಿರುವವರನ್ನು ವ್ಯಾನ್‌ ಒಳಕ್ಕೆ ದಬ್ಬುತ್ತಿದ್ದಾರೆ. ಈಗ ಅಲ್ಲಿ ಸೇರಿಕೊಂಡಿರುವವರಲ್ಲಿ ಎರಡೂ ಗುಂಪಿನವರಿದ್ದಾರೆ.

4. ನವಾರಾ(ಈಜಿಪ್ಟ್)
ನವಾರಾ ಮಧ್ಯವಯಸ್ಕ ಮಹಿಳೆ. ಬಂಗಲೆಯೊಂದರಲ್ಲಿ ಮೇಲ್ವಿಚಾರಕಿಯಾಗಿ ಕೆಲಸ. ಸುತ್ತಮುತ್ತಲೆಲ್ಲ ರಾಜಕೀಯ ಪ್ರೇರಿತ ಗಲಾಟೆಗಳಾದಾಗ ಒಂದು ಪಕ್ಷದವರೊಂದಿಗೆ ಶಾಮೀಲಾಗಿದ್ದ ಬಂಗಲೆಯ ಮಾಲೀಕರು ಮನೆ ಬಿಟ್ಟು ತಲೆಮರೆಸಿಕೊಳ್ಳಬೇಕಾಗಿಬರುತ್ತದೆ. ಅವರು ಹೋಗುವಾಗ ನವಾರಾಗೆ ಮನೆ ಉಸ್ತುವಾರಿಯ ಜವಾಬ್ದಾರಿ ವಹಿಸುತ್ತಾರೆ. ಈಗ ನವಾರಾ ಅಷ್ಟು ದೊಡ್ಡ ಬಂಗಲೆಯಲ್ಲಿ ಒಬ್ಬಳೇ ಇರಬೇಕು. ಅವಳು ತನ್ನ ಪ್ರಿಯಕರನನ್ನು ಆಹ್ವಾನಿಸುತ್ತಾಳೆ. ಹೊಸ ಸಮಸ್ಯೆ ಎದುರಾಗುತ್ತದೆ.

5.  ಇಟ್ಸ್‌ ಓನ್ಲಿà ದಿ ಎಂಡ್‌ ಆಫ್ ದಿ ವರ್ಲ್ಡ್(ಫ್ರಾನ್ಸ್‌)
ಲೂಯಿ ಒಬ್ಬ ಬರಹಗಾರ. ಮನೆ ಬಿಟ್ಟು ಯಾವುದೋ ಕಾಲವಾಗಿದೆ. ಇಷ್ಟು ವರ್ಷವಾದರೂ ಮನೆ ನೆನಪು ಒಮ್ಮೆಯೂ ಕಾಡಿದ್ದಿಲ್ಲ. ಆದರೆ ಈಗ ಅವನು ಮನೆಗೆ ಹಿಂದಿರುಗುತ್ತಿದ್ದಾನೆ. ತಾನು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವುದನ್ನು ಹೇಳಿಕೊಳ್ಳಬೇಕಾಗಿದೆ ಅವರ ಬಳಿ. ಅವನಿಗೆ ಹೆಚ್ಚು ಸಮಯ ಉಳಿದಿಲ್ಲ. ಅದಕ್ಕೆ ಮುಂಚೆ ತನ್ನ ಮನಸ್ಸಿನ ತಾಕಲಾಟಗಳನ್ನು ಪರಿಹರಿಸಿಕೊಳ್ಳಬೇಕಾಗಿದೆ ಲೂಯಿಗೆ.

Advertisement

6. ಆಫ್ಟರ್‌ ದಿ ಸ್ಟಾರ್ಮ್(ಜಪಾನ್‌)
ಈ ಸಿನಿಮಾದ ಅಂತಃಸತ್ವ ಇರುವುದು- “ಯಾವತ್ತೂ ನಮಗೆ ಬೇಕಾದ ಬದುಕು ನಮಗೆ ಸಿಗುವುದಿಲ್ಲ, ಅಥವಾ ನಾವಂದುಕೊಂಡಂತೆ ಎಲ್ಲವೂ ಜರುಗುವುದಿಲ್ಲ’ ಎಂಬ ಒಂದೇ ಒಂದು ವಾಕ್ಯದಲ್ಲಿ. ಪ್ರಶಸ್ತಿ ವಿಜೇತ ಬರಹಗಾರ ಈಗ ಜೀವನೊಪಾಯಕ್ಕೆ ಖಾಸಗಿ ಪತ್ತೇದಾರನಾಗಿ ಬದಲಾಗಿದ್ದಾನೆ. ಅದರಿಂದ ಬಂದ ಅಲ್ಪಸ್ವಲ್ಪ ದುಡ್ಡನ್ನೂ ಜೂಜಲ್ಲಿ ಕಳೆಯುತ್ತಿದ್ದಾನೆ. ಕುಟುಂಬದೊಂದಿಗೆ ಇದ್ದರೂ ಅವನು ಅವರ ಕಷ್ಟಸುಖಗಳಿಗೆ ಅಗುವವನಲ್ಲ. ಆದರೆ ತಂದೆ ತೀರಿಕೊಂಡಾಗ ಪರಿಸ್ಥಿತಿಗಳು ಬದಲಾಗುತ್ತವೆ.

7. ಚಿಲ್ಡ್ರನ್‌ ಆಫ್ ದಿ ಮೌಂಟೇನ್‌(ಆಫ್ರಿಕಾ)
ತರುಣಿಯೊಬ್ಬಳು ಅಂಗವಿಕಲ ಮಗುವಿಗೆ ಜನ್ಮ ನೀಡಿದ್ದಾಳೆ. ಆ ಮಗುವಿನಿಂದಾಗಿ ಅವಳು ಸೇರಿರುವ ಬುಡಕಟ್ಟು ಜನಾಂಗದಲ್ಲಿ ತಿರಸ್ಕೃತಳು. ಅವಳನ್ನು ಮಾಟಗಾತಿ, ಕೆಟ್ಟ ಶಕುನದಂತೆ ನೋಡುತ್ತಾರೆ. ಅಲ್ಲಿ ಜನರ ಮೂಢ ನಂಬಿಕೆಗೆ ಬಲಿಯಾಗಿರುವ ಆ ತಾಯಿ ಈಗ ತನ್ನ ಮಗುವನ್ನು ಕರೆದುಕೊಂಡು ಇಬ್ಬರೂ ಗುಣಮುಖರಾಗಲು ಪವಾಡದ ನಿರೀಕ್ಷೆಯಲ್ಲಿ ಪ್ರಯಾಣ ಬೆಳೆಸಬೇಕಾಗಿದೆ.

8. ಟ್ರಮಾಂಟೇನ್‌(ಲೆಬನಾನ್‌)
ಕುರುಡ ಸಂಗೀತಗಾರನೊಬ್ಬ ತನ್ನ ಹುಟ್ಟಿನ ರಹಸ್ಯವನ್ನು ಅರಸುತ್ತಾ ಲೆಬನಾನಿನ ಹಳ್ಳಿಗಳಿಗೆ ಭೇಟಿ ನೀಡುವ ಕತೆ ಈ ಚಿತ್ರದ್ದು. ಆ ಕುರುಡ ಸಂಗೀತಗಾರನ ಮೂಲಕ ದೇಶದ ಇತಿಹಾಸ ಮತ್ತು ಪ್ರಸ್ತುತ ಸ್ಥಿತಿಗತಿಯ ಅವಲೋಕನವನ್ನು ಮಾಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.  

9. ನೆರೂಡ(ಚಿಲಿ)
ಪ್ರಸಿದ್ಧ ಕವಿ ಮತ್ತು ಕಮ್ಯುನಿಸ್ಟ್‌ ಸಿದ್ಧಾಂತಿ ನೆರೂಡ ದೇಶದ ಅಧ್ಯಕ್ಷನ ವಿರುದ್ಧ ಮಾತನಾಡಿ ಆಡಳಿತಗಾರರ ವಿರೋಧ ಕಟ್ಟಿಕೊಳ್ಳುತ್ತಾನೆ. ಆತನ ಬಂಧನಕ್ಕೆ ನೋಟೀಸು ಜಾರಿ ಮಾಡಿದಾಗ ನೆರೂಡ ತಲೆ ತಪ್ಪಿಸಿಕೊಳ್ಳುತ್ತಾನೆ.  ಆತನನ್ನು ಹಿಡಿಯಲು ಮುಖ್ಯ ಪೊಲೀಸ್‌ ಅಧಿಕಾರಿಯನ್ನು ಸರಕಾರ ನಿಯೋಜಿಸುತ್ತದೆ. ಅಧಿಕಾರಿಯ ಧ್ಯೇಯೋದ್ದೇಶ ನೆರೂಡನನ್ನು ಹಿಡಿಯುವುದು.

10. ಎ ಮ್ಯಾನ್‌ ಕಾಲ್ಡ್‌ ಓವ್‌(ಸ್ವೀಡನ್‌)
ಓವ್‌, ದಶಕಗಳ ಕಾಲ ಮಾಡುತ್ತಿದ್ದ ಕೆಲಸದಿಂದ ಇತ್ತೀಚಿಗಷ್ಟೆ ನಿವೃತ್ತಿ ಹೊಂದಿರುವ ಮನುಷ್ಯ. ತನ್ನ ವಯಸ್ಸಿನ ಬಹುತೇಕರಂತೆ ಆತನೂ ಸಿಡುಕ. ಒಬ್ಬಂಟಿಯಾಗಿ ವಾಸಿಸುತ್ತಿರುವುದರಿಂದ ಮನೆಯ ಎಲ್ಲಾ ಕೆಲಸಗಳನ್ನು ಅವನೊಬ್ಬನೇ ಮಾಡಿಕೊಳ್ಳಬೇಕು. ತನ್ನ ಸಿಟ್ಟನ್ನೆಲ್ಲಾ ಆತ ಕಾರಿಕೊಳ್ಳುವುದು ತನ್ನ ನೆರೆಹೊರೆಯವರ ಮೇಲೆ. ಓವ್‌ನಂತಹ ಮನುಷ್ಯರು ನಮ್ಮ ಸುತ್ತಮುತ್ತಲೂ ಇರುವುದರಿಂದ ಸಿನಿಮಾ ನಮ್ಮೆಲ್ಲರ ಬದುಕಿಗೂ ಹತ್ತಿರ.

Advertisement

Udayavani is now on Telegram. Click here to join our channel and stay updated with the latest news.

Next