ಮುಳಬಾಗಿಲು: ದೇವಾಲಯಗಳ ನಾಡೆಂದೇ ಹೆಸರಾದ ಮುಳಬಾಗಿಲು ನಗರದಲ್ಲಿ ಉದ್ಯಾನವನಗಳೇ ಇಲ್ಲದಿರುವುದರಿಂದ ನಗರಸಭೆಯಿಂದ 1.30 ಕೋಟಿ ರೂ.ವೆಚ್ಚದಲ್ಲಿ 13 ವರ್ಷಗಳಿಂದಲೂ ನಿರ್ಮಾಣವಾಗುತ್ತಿರುವ ಉದ್ಯಾನವನ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಮುಳಬಾಗಿಲಿನಲ್ಲಿ ಪುರಾಣ ಪ್ರಸಿದ್ಧ ಶ್ರೀಆಂಜನೇಯಸ್ವಾಮಿ, ಸೋಮೇಶ್ವರ ಸ್ವಾಮಿ, ನರಸಿಂಹತೀರ್ಥದ ಶ್ರೀಪಾದರಾಜಮಠ, ವಿರೂಪಾಕ್ಷಿ ದೇವಾಲಯ, ಕುರುಡುಮಲೆ ವಿನಾಯಕ, ಆವಣಿ ಶ್ರೀರಾಮಲಿಂಗೇಶ್ವರ ದೇವಾಲಯ ಒಳಗೊಂಡಂತೆ ನೂರಾರು ದೇವಾಲಯಗಳ ನಾಡಾಗಿದೆ. ಇಲ್ಲಿರುವ ದೇಗುಲಗಳ ದರ್ಶನಕ್ಕೆ ಪ್ರತಿನಿತ್ಯ ನಗರಕ್ಕೆ ಒಳ ಮತ್ತು ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ಕುರಿತು ಹಲವು ವರ್ಷಗಳ ಹಿಂದೆ ನಗರಸಭೆಯ ಎಸ್ಎಫ್ಸಿ ಯೋಜನೆಯಡಿ ನಗರದ ಸೋಮೇಶ್ವರಪಾಳ್ಯ ಕೆರೆ ಅಂಚಿನಲ್ಲಿ ಉದ್ಯಾನವನ ಸ್ಥಾಪಿಸಲು ನಿರ್ಧರಿಸಿದ್ದ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಉದ್ಯಾನವನ ಅಭಿವೃದ್ಧಿಗೆ ಮಂಜೂರಾತಿ ನೀಡಿದ್ದರು.
1.30 ಕೋಟಿ ರೂ.ವೆಚ್ಚ: ಅದರಂತೆ 2007-08ನೇ ಸಾಲಿನಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ಕಾಮಗಾರಿ ಆರಂಭಿಸಲು 134.83 ರೂ.ಗಳ ಆರ್ಥಿಕ ಬೇಡಿಕೆ
ಸಲ್ಲಿಸಿತ್ತು. ಮೊದಲ ಹಂತವಾಗಿ 1 ಕೋಟಿ ರೂ., ಬಿಡುಗಡೆ ನಂತರ ಸೋಮೇಶ್ವರಸ್ವಾಮಿ ಕೆರೆ ಸುಮಾರು 4 ಎಕರೆ ಪ್ರದೇಶದಲ್ಲಿ ಸುಮಾರು 8-10 ಅಡಿಗಳ ಎತ್ತರದಷ್ಟು ಹೂಳನ್ನು ಸಮತಟ್ಟಾಗಿ ಹಾಕಿ 2 ಆರ್ಸಿಸಿ ಚರಂಡಿ, 1 ಆರ್ಸಿಸಿ ಮೋರಿ, 2 ಆರ್ಸಿಸಿ ಕೊಳವೆ ಮೋರಿ, ರಿವೀಟ್ಮೆಂಟ್ ಹಾಗೂ ಶೌಚಾಲಯ ಕೊಠಡಿ ಸೇರಿದಂತೆ ಪ್ರಥಮ ಹಂತವಾಗಿ 98.50 ಲಕ್ಷದೊಂದಿಗೆ 2-3ನೇ ಹಂತ ಸೇರಿದಂತೆ ಸುಮಾರು 1.30ಕೋಟಿ ರೂ ಆರ್ಥಿಕ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ಉದ್ಯಾನವನದಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿತ್ತು. ಮುಂದುವರೆದ ಕಾಮಗಾರಿಯಾಗಿ ಕಳೆದ ವರ್ಷ ನಿರ್ಮಿತಿ ಕೇಂದ್ರವು ಸದರಿ ಉದ್ಯಾನವನದ ಎರಡೂ ಕಡೆಗಳಲ್ಲಿ ಹಾಕಲಾಗಿದ್ದ ಶಿಥಿಲಗೊಂಡಿದ್ದ ಮುಳ್ಳು
ಕಂಬಿ ಬೇಲಿ ತೆರವುಗೊಳಿಸಿ 2-3 ಅಡಿಗಳ ಗೋಡೆ ನಿರ್ಮಿಸಿ ಅದರ ಮೇಲೆ ಹೊಸ ತಂತಿ ಹಾಕಿ ಅರ್ಧ ಬೇಲಿ ಮಾತ್ರ ನಿರ್ಮಿಸಲಾಗಿದೆ.
ಎರಡೂ ಕಡೆ ವಾಕಿಂಗ್ ಪಥವನ್ನು ನಿರ್ಮಿಸಿದೆ. ಉಳಿದಂತೆ ತಾಲೂಕಿನ ವಲಯಾರಣ್ಯ ಇಲಾಖೆಯಿಂದ ಅಧಿಕಾರಿಗಳು ನೂರಾರು ಗಿಡಗಳನ್ನು ಉದ್ಯಾನವನದಲ್ಲಿ ನಾಟಿ ಮಾಡಿ ಪೋಷಣೆ ಮಾಡಿದ್ದರಿಂದ ಸುಮಾರು 50 ಗಿಡಗಳು ಬೆಳೆದು ಮರಗಳಾಗಿವೆ. ಅದನ್ನು ಹೊರತು ಪಡಿಸಿ ಯೋಜನಾ ವರದಿಯಲ್ಲಿರುವಂತೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಕುಳಿತು ಕೊಳ್ಳಲು ಹಾಕಲಾಗಿದ್ದ ಸಿಮೆಂಟ್ ಚೇರ್ಗಳೇ ಒಂದೆರಡಿವೆ. ಉಳಿದವನ್ನು ಪೋಕರಿಗಳು ಒಡೆದು ಹಾಕಿದ್ದಾರೆ.
Related Articles
ಕಳೆದ ವರ್ಷ ನಗರಸಭೆ ವಿಶ್ವ ಪರಿಸರ ದಿನದಂದು ಕಾಟಾಚಾರಕ್ಕೆ ಮತ್ತಷ್ಟು ಸಸಿಗಳನ್ನು ನಾಟಿ ಮಾಡಿ ಬಿಲ್ ಮಾಡಿ ಕೈ ತೊಳೆದುಕೊಂಡಿತ್ತು. ಆದರೆ ನಿರ್ವಹಣೆಯಿಲ್ಲದೆ ಒಂದು ಗಿಡವೂ ಬೆಳೆದಿಲ್ಲ. ಉಳಿದಂತೆ ಕಾಮಗಾರಿ ಪೂರ್ಣಗೊಳಿಸಿ ಉದ್ಯಾನವನವನ್ನು ನಗರಸಭೆಗೆ ಹಸ್ತಾಂತರ ಮಾಡಬೇಕಾಗಿತ್ತು. ಆದರೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ
ಎಂ.ನಾಗರಾಜಯ್ಯ