Advertisement

ಸಾರ್ವಜನಿಕ ಅನುಕೂಲಕ್ಕಾಗಿ ಕಾಯಂ ಜನತಾ ನ್ಯಾಯಾಲಯ

03:54 PM Apr 04, 2019 | Naveen |

ಬಳ್ಳಾರಿ: ವಿವಾದಾಸ್ಪದ ಪಕ್ಷಗಳ ತೃಪ್ತಿಯೊಂದಿಗೆ ಸಾರ್ವಜನಿಕ ಉಪಯುಕ್ತತೆಗಳ ವಿವಾದಗಳನ್ನು ನಿರ್ಧರಿಸುವಲ್ಲಿ ಕಾಯಂ ಜನತಾ ನ್ಯಾಯಾಲಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವಕುಮಾರ್‌ ಹಂಚಾಟೆ ತಿಳಿಸಿದರು.

Advertisement

ನಗರದ ಜಿಲ್ಲಾ ಕೋರ್ಟ್‌ ಆವರಣದಲ್ಲಿ ವೀಡಿಯೋ ಕಾನ್ಫೆರೆನ್ಸ್‌ ಮೂಲಕ ಮಾತನಾಡಿದ ಅವರು, ರಾಜ್ಯದಲ್ಲಿ 6 ಜಿಲ್ಲಾ ಕೇಂದ್ರದಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ ಮಾಡಲಾಗಿದೆ. ಈ ನ್ಯಾಯಾಲಯದಲ್ಲಿ 9 ಕಾನೂನಿನ ಸೇವೆಗಳಾದ ವಿಮೆ, ಬ್ಯಾಂಕಿಂಗ್‌ ಹಾಗೂ ಹಣಕಾಸು ಸಂಸ್ಥೆಗಳ ಸೇವೆ, ಪ್ರಯಾಣಿಕರನ್ನು ಅಥವಾ ಸರಕುಗಳನ್ನು ವಾಯು ಮಾರ್ಗ, ರಸ್ತೆ ಅಥವಾ ಜಲಮಾರ್ಗ ಮೂಲಕ ಸಾಗಿಸುವ ಸಾಗಣಿಕೆಯ ಸೇವೆ, ಅಂಚೆ, ಟೆಲಿಗ್ರಾಫ್‌ ಅಥವಾ ದೂರವಾಣಿ ಸೇವೆ, ಸಾರ್ವಜನಿಕರಿಗೆ ವಿದ್ಯುತ್‌, ನೀರಿನ ಸರಬರಾಜು ಮಾಡುವ ಯಾವುದೇ ಸಂಸ್ಥೆ, ಸಾರ್ವಜನಿಕ ಸಂರಕ್ಷಣೆ ಅಥವಾ ನೈರ್ಮಲ್ಯ ವ್ಯವಸ್ಥೆ, ವಸತಿ ಮತ್ತು ರಿಯಲ್‌ ಎಸ್ಟೇಟ್‌ ಸೇವೆ, ಶಿಕ್ಷಣ ಸೇವೆ ಹಾಗೂ ಇತರೆ ಸೇವೆಗಳನ್ನು ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜನತಾ ನ್ಯಾಯಾಲಯ ಮುಖ್ಯ ಅಂಶಗಳು: ಕಾಯಂ ಜನತಾ ನ್ಯಾಯಾಲವು ಜಿಲ್ಲಾ ನ್ಯಾಯಾಧೀಶರಾಗಿರುವ ಅಥವಾ ಜಿಲ್ಲಾ ನ್ಯಾಯಾಧೀಶರಿಗಿಂತ ಹೆಚ್ಚಿನ ಶ್ರೇಣಿಯ ನ್ಯಾಯಿಕ ಅಧಿಕಾರಿಯಾಗಿರುವ ವ್ಯಕ್ತಿಯೊಬ್ಬರನ್ನು ಅದರ ಅಧ್ಯಕ್ಷರನ್ನಾಗಿ ಮತ್ತು ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಿಸಿದಂತೆ ಸಾಕ್ಷಷ್ಟು ಅನುಭವ ಇರುವ ಇಬ್ಬರು ವ್ಯಕ್ತಿಗಳು ಸದಸ್ಯರಾಗಿರುತ್ತಾರೆ. ವಿವಾದ ಹೊಂದಿರುವ ಯಾವುದೇ ಪಕ್ಷಕಾರನು ಸಾರ್ವಜನಿಕ ಉಪಯುಕ್ತತಾ ಸೇವೆಗಳ ಕುರಿತಂತೆ ಆ ವಿವಾದವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವುದಕ್ಕೆ ಮೊದಲು ವಿವಾದದ ಇತ್ಯರ್ಥಕ್ಕಾಗಿ ಕಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಯಾವುದೇ ಕಾನೂನಿನಡಿ ರಾಜಿ ಮಾಡಿಕೊಳ್ಳುವ ಅವಕಾಶವಿರದ ಅಪರಾಧಕ್ಕೆ ಸಂಬಂಧಿಸಿದ ವಿಷಯವನ್ನು ಇತ್ಯರ್ಥಗೊಳಿಸಲು ಕಾಯಂ ಜನತಾ ನ್ಯಾಯಾಲಯಕ್ಕೆ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದರು.

ಕಾಯಂ ಜನತಾ ನ್ಯಾಯಾಲಯ ಹೊರಡಿಸುವ ಐತೀರ್ಪು: ಕಾಯಂ ಜನತಾ ನ್ಯಾಯಾಲಯವು ಹೊರಡಿಸುವ ಪ್ರತಿಯೊಂದು ಐತೀರ್ಪುನ್ನೂ ಸಿವಿಲ್‌ ನ್ಯಾಯಾಲಯದ ಡಿಕ್ರಿಯೆಂದೇ ಪರಿಭಾವಿಸಲಾಗುವುದು. ಈ ಅಧಿನಿಯಮದಡಿ ಪ್ರಕರಣದ ಗುಣಾವಗುಣಗಳ ಮೇರೆಗೆ ಅಥವಾ ಇತ್ಯರ್ಥದ ಒಪ್ಪಂದದಿಂದ ಹೊರಡಿಸಲಾದ ಕಾಯಂ ಜನತಾ ನ್ಯಾಯಾಲಯದ ಪ್ರತಿಯೊಂದು ಐತೀರ್ಪು ಅಂತಿಮವಾದುದಾಗಿದ್ದು ಸಂಬಂಧಿಸಿದ ಪಕ್ಷಕಾರರು ಮತ್ತು ಅವರ ಮೂಲಕ ಕ್ಲೇಮ್‌ ಮಾಡುವ ಪ್ರತಿಯೊಬ್ಬರಿಗೂ ಬಂಧನಕಾರಿಯಾಗುತ್ತದೆ. ಕಾಯಂ ಜನತಾ ನ್ಯಾಯಾಲಯ ಐತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದರು.

ಕಾಯಂ ಜನತಾ ನ್ಯಾಯಾಲಯ ಜಾಗೃತಿ ಮೂಡಿಸಿ: ಕಾಯಂ ಜನತಾ ನ್ಯಾಯಾಲಯವು ಪ್ರತಿ ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು. ಈ ಜಾಗೃತಿ ಜಾಥಾದಲ್ಲಿ ಚರ್ಚೆ, ಪ್ರಬಂಧ ಮತ್ತು ಭಾಷಣ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

Advertisement

ಮುಂದಿನ ದಿನಗಳಲ್ಲಿ ಕಾಯಂ ಜನತಾ ನ್ಯಾಯಾಲಯದ ಕುರಿತು ಜಿಲ್ಲಾ, ತಾಲೂಕು, ಹೋಬಳಿ ಹಾಗೂ ಗ್ರಾಮಗಳಲ್ಲಿ ಸಾಕ್ಷರತಾ ಬಸ್‌ ಸಂಚಾರದ ಮೂಲಕ ಅರಿವು ಮೂಡಿಸಬೇಕು. ಪ್ರಕರಣಗಳ ಸಂಕ್ಷಿಪ್ತವಾಗಿ ಸಾರ್ವಜನಿಕರಿಗೆ ವಿವರಿಸುವ ಪ್ರಯತ್ನವನ್ನು ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕೋರ್ಟ್‌ ವ್ಯವಸ್ಥಾಪಕ ವೀರೇಶ್‌ ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next