Advertisement

ಬೋರ್‌ವೆಲ್‌ ವ್ಯಾಮೋಹ; ಮಲೆನಾಡು ಬಾಣಲೆಯಿಂದ ಬೆಂಕಿಗೆ

11:35 AM Apr 04, 2019 | Naveen |

ಸಾಗರ: ಕಳೆದ ನಾಲ್ಕು ವರ್ಷಗಳಿಂದ ಮಲೆನಾಡಿನಲ್ಲಿ ಬರ ಸ್ಥಿತಿ ಇದ್ದು ಎಲ್ಲೆಡೆ ಅಂತರ್ಜಲದ ತೀವ್ರ ಕೊರತೆ ಉಂಟಾಗಿತ್ತು. ಎಷ್ಟೋ ಕಡೆ ಕೊಳವೆ ಬಾವಿಗಳನ್ನು ತೆರೆದು ವಿಫಲವಾಗಿ ಅದು ಅಂತರ್ಜಲ ಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು. 2017ರಲ್ಲಿ ತಾಲೂಕಿನ ಅನೇಕ ಕಡೆಗಳಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ಮಿತಿ ಮೀರಿದ ಬೋರ್‌ ವೆಲ್‌ ವ್ಯಾಮೋಹದಿಂದ ಅಲ್ಪಸ್ವಲ್ಪ ಅಂತರ್ಜಲವೂ ಬತ್ತಿ ಹೋಗಿದ್ದು ಇದೀಗ ಅನೇಕ ಕಡೆ ಟ್ಯಾಂಕರ್‌ ಮೂಲಕ ನೀರು ಪೂರೈಸುವ ಸ್ಥಿತಿ ಎದುರಾಗಿದೆ.

Advertisement

2016-17ರಲ್ಲಿ ಬರಗಾಲ ಅನುಭವಿಸಿದ್ದ, ಬರಪೀಡಿತವೆಂದು ಘೋಷಿಸಲ್ಪಟ್ಟಿದ್ದ ಅಚ್ಚ ಮಲೆನಾಡಿನ ಪ್ರದೇಶ ಸಾಗರ ತಾಲೂಕಿನಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಬರುವ ದಿನಗಳಲ್ಲಿ ಹದಗೆಡುವ ಎಲ್ಲ ಸಾಧ್ಯತೆಗಳು ಕಂಡುಬರುತ್ತಿವೆ. ಒಂದೆಡೆ ಶಾಶ್ವತ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದಿಂದ ಗ್ರಾಮಗಳಲ್ಲಿ ಬೋರ್‌ವೆಲ್‌ಗ‌ಳ ಸಂಖ್ಯೆ ಹೆಚ್ಚುತ್ತಿದೆ. ಮತ್ತೊಂದು ಕಡೆ ಬೋರ್‌ವೆಲ್‌ ಕೊರೆಯಲು ಇರುವ ನಿಷೇಧ ಕಡ್ಡಾಯವಾಗಿ ಜಾರಿಗೊಳ್ಳದ ಹಿನ್ನೆಲೆಯಲ್ಲಿ ಎಗ್ಗಿಲ್ಲದೆ ತೆಗೆಯುತ್ತಿರುವ ಖಾಸಗಿ ಬೋರ್‌ವೆಲ್‌ಗ‌ಳು ಸಾಗರದ ಮಲೆನಾಡು ಚಿತ್ರಣವನ್ನು ಬದಲಿಸುವ ಎಲ್ಲ ಸಾಧ್ಯತೆಗಳಿವೆ. ಗುರುವಾರದಿಂದ ತಾಲೂಕಿನ ಹೆಗ್ಗೋಡು ಹಾಗೂ ಎಡಜಿಗಳೇಮನೆ ಗ್ರಾಪಂ ವ್ಯಾಪ್ತಿಯಲ್ಲಿನ ಕೆಲ ಗ್ರಾಮಗಳಿಗೆ ಕುಡಿಯುವ ನೀರಿನ ಟ್ಯಾಂಕರ್‌
ವ್ಯವಸ್ಥೆ ಕಾರ್ಯಾಚರಣೆಗಿಳಿಯಲಿದೆ.

ಬರಗಾಲದ ಸಂದರ್ಭದಲ್ಲಿ ನಗರದಲ್ಲಿ ಶರಾವತಿ ಹಿನ್ನೀರಿನಿಂದ ಪೈಪ್‌ಲೈನ್‌ ಮೂಲಕ ನೀರು ಹರಿಸುವ ಯೋಜನೆ ಜಾರಿಯಾದ್ದರಿಂದ ನಗರವಾಸಿಗಳು ಹೆಚ್ಚಿನ ಸಂಕಷ್ಟ ಅನುಭವಿಸಲಿಲ್ಲ. ಆದರೆ ಕೆರೆ, ಬಾವಿಗಳು ಬತ್ತಿ ಗ್ರಾಮೀಣ ಭಾಗದ ಜಲಜೀವನ ಅಸ್ತವ್ಯಸ್ತಗೊಂಡಿತ್ತು. 2015-16ರಲ್ಲಿ ಧುತ್ತೆಂದು ಎದುರಾದ ನೀರಿನ ಅಭಾವಕ್ಕೆ ಟ್ಯಾಂಕರ್‌ ಮೊದಲಾದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ನಡೆಯುವ ಹಣದ ಗೋಲ್‌ಮಾಲ್‌ಗ‌ಳನ್ನೂ ಗಮನಿಸಿದ ಜಿಲ್ಲಾಡಳಿತ ಮರು ವರ್ಷದಿಂದ ಸಿಆರ್‌ಎಫ್‌ ಹಾಗೂ ಇತರ ಅನುದಾನಗಳನ್ನು ಶಾಶ್ವತ ಪರಿಹಾರ ಯೋಜನೆಗಳಲ್ಲಿ ಮಾತ್ರ ತೊಡಗಿಸಲು ಅನುಮತಿ ಕೊಟ್ಟಿದ್ದು ಇನ್ನೊಂದು ಪರೋಕ್ಷ ಅನಾಹುತಕ್ಕೆ ಕಾರಣವಾಗಿದೆ.

ಬೋರ್‌, ಬೋರ್‌…ಎಲ್ನೋಡಿ ಬೋರ್‌!: ಕಳೆದ ವರ್ಷ ಗ್ರಾಪಂಗಳ ಸಂಪನ್ಮೂಲದ ಶೇ. 40ರಷ್ಟು ಹಣವನ್ನು ಕುಡಿಯುವ ನೀರಿನ ಯೋಜನೆಗಳಿಗೆ ಬಳಸಲಾಗಿದೆ. ಈ ಮೊತ್ತದಿಂದ ಪರಮಾವಧಿಯಾಗಿ ಬೋರ್‌ವೆಲ್‌ಗ‌ಳನ್ನು ತೋಡಲು ಬಳಸಲಾಗಿದೆ. ಆವಿನಹಳ್ಳಿ ಗ್ರಾಪಂನಲ್ಲಿ 35 ಬೋರ್‌ವೆಲ್‌ಗ‌ಳನ್ನು ತೆಗೆಯಲಾಗಿದೆ. ಕಲ್ಮನೆ ಗ್ರಾಪಂನಲ್ಲಿ 25 ಬೋರ್‌ ಹೊಡೆಸಲಾಗಿದೆ. ಇವುಗಳಲ್ಲಿ ಏಳೆಂಟರಲ್ಲಿ ಮಾತ್ರ ನೀರು ಬಿದ್ದಿದೆ. ಸಿಆರ್‌ಎಫ್‌ ಅಡಿಯಲ್ಲಿ ಪೈಪ್‌ ಲೈನ್‌, ವಿದ್ಯುತ್‌ ಸಂಪರ್ಕ, ಪಂಪ್‌ಸೆಟ್‌ ಖರೀದಿ ಮಾಡಲಾಗಿದೆ. ಬೋರ್‌ವೆಲ್‌ಗ‌ಳಲ್ಲಿ ಶೇ. 20ರಷ್ಟು ಮಾತ್ರ ಯಶಸ್ಸು ಸಿಕ್ಕಿದ್ದರೂ ತಾಲೂಕಿನ 35 ಗ್ರಾಪಂ ವ್ಯಾಪ್ತಿಯ ನೀರಿನ ದಾಹ ಈಡೇರಿಸಲು ಸಾಧ್ಯವಾಗಿದೆ. ವಿಫಲ ಬೋರ್‌ಗಳ ಸಂಖ್ಯೆ ಹೆಚ್ಚಿದಂತೆ ಅಧಿ ಕಾರಸ್ಥರ ದಾಹವೂ ಇಂಗಿದೆ ಎಂಬ ಮಾತೂ ಅಲ್ಲಲ್ಲಿ ಕೇಳಿಬಂದಿದೆ!

ಗ್ರಾಮೀಣ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಹಾಲೇಶಪ್ಪ ಅವರ ಮಾಹಿತಿ ಪ್ರಕಾರ, ಈ ವರ್ಷ ತೆಗೆಯಲಾದ 96 ಬೋರ್‌ ವೆಲ್‌ಗ‌ಳಲ್ಲಿ 34 ವಿಫಲವಾಗಿದ್ದು, 62ರಲ್ಲಿ ನೀರು ಕಂಡಿದೆ. ಕಳೆದ ವರ್ಷದ 110 ಕೆಲಸಗಳಲ್ಲಿ 19 ಕಾಮಗಾರಿಗಳು ಇನ್ನೂ ಆರಂಭವೇ ಆಗಿಲ್ಲ.

Advertisement

ಶಾಸಕರ ಅನುದಾನದಲ್ಲಿನ 18 ಕಾಮಗಾರಿಗಳಲ್ಲಿ
10 ಕೆಲಸ ಮಾತ್ರ ನಡೆದಿದ್ದು, ಅದರ ಪೈಕಿ 9 ಬೋರ್‌ವೆಲ್‌ಗ‌ಳಲ್ಲಿ ಎರಡು ವಿಫಲಗೊಂಡಿವೆ. ನೀರಿನ ಲಭ್ಯತೆ, ಉಳಿದ ಕಾಮಗಾರಿಗಳು ಸಂಪನ್ನಗೊಂಡಿದ್ದರೂ 27 ಕಾಮಗಾರಿಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗದ ಕಾರಣ ನೀರು ಒದಗಿಸಲಾಗಿಲ್ಲ.

ಶಾಶ್ವತ ನೀರಿಗೆ ಅವಕಾಶವಿದೆ!: ತಾಲೂಕಿನ ಲಿಂಗನಮಕ್ಕಿ ಆಣೆಕಟ್ಟೆಯ ನೀರು ಬಹುದೊಡ್ಡ ಆಕರ್ಷಣೆ. ಇಲ್ಲಿಂದ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಮಾಡುವವರು ತಾಲೂಕಿನ ಜನರ ದಾಹ ಇಂಗಿಸಲು ಬಳಸಬಹುದಲ್ಲವೇ ಎಂಬ ಕೂಗು ಕೇಳಿಬಂದಿದೆ. ಆ ಹಿನ್ನೆಲೆಯಲ್ಲಿ ನಗರಕ್ಕೆ ಸುಮಾರು 60 ಕೋಟಿ ವೆಚ್ಚದಲ್ಲಿ ಕುಡಿಯುವ ನೀರನ್ನು ತಂದುಕೊಡಲಾಗಿದ್ದರೂ ಪೈಪ್‌ಲೈನ್‌ ಮಾರ್ಗದ ಅಕ್ಕಪಕ್ಕದ 28 ಗ್ರಾಮಗಳಿಗೆ ನೀರು ಒದಗಿಸುವ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. 22.42 ಕೋಟಿ ರೂ. ವೆಚ್ಚದ ಯೋಜನೆಯಲ್ಲಿ ಈಗಷ್ಟೇ ಡಿಪಿಆರ್‌ ಯೋಜನೆ ಸಮಾಪ್ತಿಯಾಗಿದ್ದು, ನೀರು ಸರಬರಾಜಿನ ವಾಸ್ತವ ಯೋಜನೆ ಇನ್ನಷ್ಟೇ ಚಾಲ್ತಿಗೆ ಬರಬೇಕಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಶಾಶ್ವತ ಪರಿಹಾರವೊಂದು ಕೈಗೂಡಿದಂತಾಗುತ್ತದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ವಯ ಶರಾವತಿ ನದಿಯ ನೀರನ್ನು ಹೆಗ್ಗೋಡು, ಭೀಮನಕೋಣೆ, ಕಲ್ಮನೆ, ಪುರಪ್ಪೇಮನೆಯಿಂದ ರಿಪ್ಪನ್‌ಪೇಟೆಯವರೆಗೆ ಒಟ್ಟು 13 ಗ್ರಾಪಂಗಳಿಗೆ ಹರಿಸುವ ಯೋಜನೆ ಸರ್ಕಾರದ ಮಟ್ಟದಲ್ಲಿ ಇತ್ಯರ್ಥಕ್ಕೆ ಬಾಕಿಯಿದೆ. ಇದೇ ವೇಳೆ ಅಂಬ್ಲಿಗೊಳ ಜಲಾಶಯದಿಂದ ಆವಿನಹಳ್ಳಿ ಹೋಬಳಿಗೆ ನೀರು ಒದಗಿಸುವ 68 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿದೆ. ಕಸಬಾ ಹೋಬಳಿ ನಗರಕ್ಕೆ ಅಂಟಿಕೊಂಡಿರುವುದರಿಂದ ಶರಾವತಿ ಯೋಜನೆಯನ್ನು ಈ ಭಾಗಕ್ಕೂ ಮುಂದುವರಿಸಬಹುದು ಅಥವಾ ನಗರದ ಬಸವನ ಹೊಳೆ ಡ್ಯಾಂನ ನೀರನ್ನು ಇದಕ್ಕೆ ಬಳಸಬಹುದು ಎಂಬ ವಾದವಿದೆ. ಕರೂರು, ಭಾರಂಗಿ ಹೋಬಳಿಗಳಿಗೂ ಲಿಂಗನಮಕ್ಕಿ ಜಲಾಶಯದ ನೀರನ್ನು ಬಳಸಬಹುದು. ಈಗಾಗಲೇ ಸಿಆರ್‌ ಎಫ್‌ನ ಹಣದಿಂದ ಶೇ. 80ರಷ್ಟು ಪೈಪ್‌ ಲೈನ್‌ ಕೆಲಸ ಮುಗಿದಿರುವುದು ಯೋಜನೆಗಳ ಅನುಷ್ಠಾನವನ್ನು ಸುಲಭಗೊಳಿಸುತ್ತದೆ ಎಂದು ತಾಪಂ ಅಧ್ಯಕ್ಷ ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮರೆತ ಕೆರೆ ಹೂಳು!: 2018ರಲ್ಲಿ ಉತ್ತಮ ಮಳೆ ಆದ ಹಿನ್ನೆಲೆಯಲ್ಲಿ 2017ರಲ್ಲಿ ಜನ ಸಮುದಾಯದಲ್ಲಿ ಉಂಟಾಗಿದ್ದ ಕೆರೆ ಸಂರಕ್ಷಣೆಯ ಗುರಿಯನ್ನು ಮೊಂಡಾಗಿಸಿತು. ಸರ್ಕಾರದ ಕೆರೆ ಸಂಜೀವಿನಿ ಯೋಜನೆಯಡಿ ಲಭಿಸಿದ ತಲಾ ಐದು ಲಕ್ಷ ಅಥವಾ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಣಕಾಸು ಲೆಕ್ಕದ ಪುಸ್ತಕದಲ್ಲಿ ಹೂಳು ತೆಗೆದಿದ್ದೇ ಹೆಚ್ಚು. ಆದರೆ ಎರಡು ವರ್ಷಗಳ ಕೆಳಗೆ ಗ್ರಾಮಾಂತರ ಭಾಗದಲ್ಲಿ ಶುರುವಾಗಿದ್ದ ಕೆರೆ ಹೂಳು ತೆಗೆಯುವ ಖಾಸಗಿ ಪ್ರಯತ್ನಗಳು 18ರಲ್ಲಿ ಮುಂದುವರಿಯಲಿಲ್ಲ. ಹೆಗ್ಗೋಡು ಭಾಗದ ದ್ಯಾವಾಸ ನದಿ ಸಂರಕ್ಷಣೆಯ ಯೋಜನೆ, ಸಾಗರದ ಜೀವಜಲ ಕಾರ್ಯಪಡೆಗಳು ನಿರೀಕ್ಷಿಸದ ಪ್ರಭಾವ ಬೀರಲಿಲ್ಲ. ಮಳೆಯೂ ಸಾಕಷ್ಟು ಪ್ರಮಾಣದಲ್ಲಿ ಸುರಿದಿದ್ದರಿಂದ ಜನ ಸಮಸ್ಯೆಯನ್ನು ಮರೆತರು. ನೀಚಡಿ ತರಹದ ಕೆಲವು ಕರೆ ಮಾತ್ರ ಸಫಲತೆ ಕಂಡುಬಂದಿತ್ತು.

ಕೆರೆ ಸಂಜೀವಿನಿಯಲ್ಲಿ ಕೆಳದಿ ಕೆರೆ ಹೂಳು ತೆಗೆಯುವ ಕಾಮಗಾರಿ, ಎನ್‌ಆರ್‌ಇಜಿಯಲ್ಲಿ ಗೀಜಗಾರು, ಮಾವಿನಸರ, ಗೋಟಗಾರು ಮೊದಲಾದ ಕಡೆಗಳಲ್ಲಿ ಹಣ ಮಂಜೂರು ಮಾಡಿಸಿಕೊಳ್ಳಲು ಮಾತ್ರ ಕೆಲಸ ನಡೆದಿತ್ತು.

18ರಲ್ಲಿ ತಣ್ಣಗಾಗಿದ್ದ ತಾಲೂಕು ಜೀವಜಲ ಕಾರ್ಯಪಡೆ ಪ್ರಸ್ತುತ ಕಾರ್ಯಶೀಲವಾಗಿದ್ದು ಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಕೆಲಸ ಸಾಗಿದೆ. ನೀಚಡಿಯಲ್ಲಿಯೂ ಕೆರೆ ಹೂಳು ಕಾಮಗಾರಿ ಮುಂದುವರೆದಿದೆ. ಸುಳ್ಮನೆ, ಹೆಗ್ಗೋಡು ಮಾವಿನಸರ, ಗೋಳಿಕೊಪ್ಪ, ಹೊನ್ನೇಸರ ಮೊದಲಾದೆಡೆ ಖಾಸಗಿಯಾಗಿ ನಡೆದಿದ್ದ ಹೂಳು ಕಾಮಗಾರಿಗಳ ಮುಂದಿನ ಪ್ರಗತಿಗಳ ಬಗ್ಗೆ ಮಾಹಿತಿ ಇಲ್ಲ. ಮತ್ತೊಮ್ಮೆ ಗ್ರಾಮೀಣ ಭಾಗದಲ್ಲಿ ಅಡಕೆ ತೋಟಗಳು ಒಣಗುತ್ತಿರುವ ದೃಶ್ಯ ಕಾಣಲಾರಂಭಿಸಿದೆ. ಚುನಾವಣೆಯ ಬಿಸಿಯ ಜೊತೆ ಬಿಸಿಲಿನ ಬೇಗೆಯೂ ಸೇರಿರುವ ಮುಂದಿನ ಎರಡು ತಿಂಗಳು ಜನರಿಗೆ ಅಗ್ನಿಪರೀಕ್ಷೆಯ ದಿನಗಳಾಗುವ ಸಾಧ್ಯತೆಯಿದೆ.

ಬೋರ್‌ವೆಲ್‌ ಬೂಮರ್‍ಯಾಂಗ್‌ ಆದೀತೆ?
ಸಮೃದ್ಧವಾಗಿ ಮಳೆಯಾಗುವ ಮಲೆನಾಡು ಪ್ರದೇಶಗಳಲ್ಲಿ ಒಂದಾಗಿರುವ ಸಾಗರ ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಒಂದು ವಿಚಿತ್ರ ಪರಿಸ್ಥಿತಿ ಕಂಡುಬರುತ್ತಿದೆ. ಮಳೆ ನೀರು ಹಿಡಿದಿಡದ, ಕಾಡಿನ ಹಂಗಿಲ್ಲದ ವಾಹನ ಭರಾಟೆಯ ಸಾಗರ ನಗರದ ಜನತೆ ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎನ್ನುವ ವಾತಾವರಣದಲ್ಲಿದ್ದರೆ ಕಾಡಿನ ನಡುವಿನ ಗ್ರಾಮಾಂತರ ಭಾಗಗಳಲ್ಲಿಯೂ ಕುಡಿಯುವ ನೀರು ಇಲ್ಲದೆ ಹಾಹಾಕಾರಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಜನ ಬೋರ್‌ವೆಲ್‌ ಒಂದೇ ಪರಿಹಾರ ಎಂದು ಭಾವಿಸುತ್ತಿರುವ ಹಿನ್ನೆಲೆಯಲ್ಲಿ ತೆರೆದ ಬಾವಿ ನಿರ್ಮಾಣ ಕಡಿಮೆಯಾಗಿ ಜನ ಬೋರ್‌ವೆಲ್‌ಗ‌ಳಿಗೆ ಮೊರೆ ಹೋಗುತ್ತಿದ್ದಾರೆ. ಈಗ 400 ಅಡಿ ದಾಟಿದರೂ ನೀರು ಸಿಗದ ಬೋರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷ ವರದಹಳ್ಳಿಯಲ್ಲಿ ಅಕ್ಕಪಕ್ಕದಲ್ಲಿ ತೆಗೆದ ಎರಡು ಬೋರ್‌ವೆಲ್‌ ಗಳಲ್ಲಿ ನೀರು ಚೆಲ್ಲಿ ಹರಿದಿತ್ತು. ಅದರ ಯಶಸ್ಸಿನಿಂದ ಆಜುಬಾಜಲ್ಲಿ ಇನ್ನೂ ಎರಡು ಬೋರ್‌ವೆಲ್‌ ನಿರ್ಮಾಣವಾಗಿದೆ. ಒಂದೊಮ್ಮೆ ಬೋರ್‌ವೆಲ್‌ಗ‌ಳು ಕೈ ಕೊಟ್ಟರೆ ಜನರ ಮುಂದಿನ ಆಯ್ಕೆ ಏನು ಎಂದು ಪರಿಸರವಾದಿಗಳು ಪ್ರಶ್ನಿಸುತ್ತಾರೆ. ಬೋರ್‌ವೆಲ್‌ಗ‌ಳು ಕೆರೆ ಬಾವಿಯ ನೀರನ್ನು ಬತ್ತಿಸುತ್ತವೆ. ಅದೊಂದು ಸಾಮಾಜಿಕ ಅನಿಷ್ಟ. ಬಗರ್‌ಹುಕುಂ ಸಕ್ರಮ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಬೋರ್‌ವೆಲ್‌ ನೀರು ವರವಾಗುತ್ತಿದೆ. ಇದಕ್ಕೊಂದು ನಿಯಂತ್ರಣ ಬೇಕು. ಬೋರ್‌ ತೆಗೆಯುವ ಯಂತ್ರ ಮಾಲೀಕರು ನೋಂದಾಯಿಸಿಕೊಳ್ಳಬೇಕು. ಜಿಲ್ಲಾಧಿಕಾರಿಗಳ ಕಣ್ಗಾವಲಿನಲ್ಲಿ ಬೋರ್‌ಗಳನ್ನು ಹೊಡೆಯುವಂತಾದರೆ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಎರಡು ಮೂರು ಪತ್ರ ಬರೆದರೂ ಉತ್ತರ ಸಿಕ್ಕಿಲ್ಲ. ಇದೇ ರೀತಿ ಮುಂದುವರಿದರೆ ನೀರಿನ ಇಂಗು ಸಾಮರ್ಥ್ಯ ಕಡಿಮೆಯಿರುವ ಮಲೆನಾಡು ಹೆಚ್ಚು ಕಾಲ ಬದುಕಲಾರದು ಎಂದು ಪರಿಸರವಾದಿ ಅಖೀಲೇಶ್‌ ಚಿಪ್ಳಿ ಆತಂಕ ವ್ಯಕ್ತಪಡಿಸುತ್ತಾರೆ.

ಯಾವುದೇ ದಿನಗಳಲ್ಲಿ ಬರಬಹುದಾದ ಕುಡಿಯುವ ನೀರಿನ ಅಭಾವ ಪರಿಸ್ಥಿತಿಯನ್ನು ಎದುರಿಸಲು ತಾಲೂಕು ಆಡಳಿತ ಸಂಪೂರ್ಣ ಸನ್ನದ್ಧವಾಗಿದೆ. ಈಗಾಗಲೇ ನೀರಿನ ಕೊರತೆ ಸಾಧ್ಯತೆಯ ಅಂದಾಜು ಪಟ್ಟಿ ನಮ್ಮೊಂದಿಗಿದೆ. ಅನಿವಾರ್ಯ ಸಂದರ್ಭದಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲು ಕೂಡ ನಾವು ತಯಾರಿದ್ದೇವೆ.
ಬಿ.ಎಚ್‌. ಮಲ್ಲಿಕಾರ್ಜುನ ಹಕ್ರೆ,
ತಾಪಂ ಅಧ್ಯಕ್ಷ್ಯ

„ಮಾವೆಂಸ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next