Advertisement

“ಆಸ್ತಿ ತೆರಿಗೆ ಹೆಚ್ಚಳಕ್ಕೆ ಈ ಸಮಯ ಸೂಕ್ತವಲ್ಲ’

11:44 PM Mar 05, 2021 | Team Udayavani |

ಕಾರ್ಕಳ: ಪುರಸಭೆಯಲ್ಲಿ ತೆರಿಗೆ ಹೆಚ್ಚಳಕ್ಕೆ ಅವಕಾಶ ನೀಡುವ ಪೌರಸಭೆಗಳ (ಎರಡನೇ ತಿದ್ದುಪಡಿ) ವಿಧೇಯ-2021ಕ್ಕೆ ಕಾರ್ಕಳ ಪುರಸಭೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಆಸ್ತಿ ತೆರಿಗೆ ತಿದ್ದುಪಡಿಗೆ ಸಂಬಂಧಿಸಿ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ವಿಶೇಷ ಸಾಮಾನ್ಯ ಸಭೆ ನಡೆಯಿತು. ಪುರಸಭೆ ಅಧ್ಯಕ್ಷೆ ಸುಮಾಕೇಶವ್‌ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಪಲ್ಲವಿ, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಉಪಸ್ಥಿತರಿದ್ದರು.

ಕಂದಾಯ ಅಧಿಕಾರಿ ಸಂತೋಷ್‌ ಅವರು ಆಸ್ತಿ ತಿದ್ದುಪಡಿ ತೆರಿಗೆ-2021 ವಿಧೇಯಕದಲ್ಲಿನ ಅಂಶಗಳನ್ನು ಪರದೆ ಮೂಲಕ ತೋರಿಸಿ, ತಿದ್ದುಪಡಿಯ ಉದ್ದೇಶ ಮತ್ತು ಅಂಶಗಳ ಕುರಿತು ಸಭೆಗೆ ವಿವರಿಸಿದರು.

ವಾಣಿಜ್ಯ ಕಟ್ಟಡಗಳ ಮೂಲಬೆಲೆಯ ಶೇ.0.5ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ.3ಕ್ಕಿಂತ ಹೆಚ್ಚಾಗದಂತೆ ತೆರಿಗೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ವಾಸದ ಕಟ್ಟಡ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಮೂಲಬೆಲೆಯ ಶೇ.0.3ಕ್ಕಿಂತ ಕಡಿಮೆ ಇಲ್ಲದಂತೆ ಮತ್ತು ಶೇ.1ಕ್ಕಿಂತ ಹೆಚ್ಚಿಲ್ಲದಂತೆ ತೆರಿಗೆ ವಿಧಿಸಲು, ಸಾವಿರ ಚದರ ಮೀ. ಗಿಂತ ಹೆಚ್ಚು ಅಳತೆ ಇಲ್ಲದ ಖಾಲಿ ಭೂಮಿಗೆ ಮೂಲಬೆಲೆಯ ಶೇ.0.1ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ.0.5ಕ್ಕಿಂತ ಹೆಚ್ಚಿಲ್ಲದಂತೆ ತೆರಿಗೆ ವಿಧಿಸಲು ವಿಧೆಯಕದಲ್ಲಿ ನಿಗದಿಪಡಿಲಾಗಿದೆ ಎಂದರು. 1 ಸಾವಿರ ಚದರಕ್ಕಿಂತ ಹೆಚ್ಚಿನ ಭೂಮಿಗೆ ವಿಧಿಸಲಾಗುವ ತೆರಿಗೆ ಇತ್ಯಾದಿಗಳ ಕುರಿತು ಅಂಕಿಅಂಶ ಸಮೇತ ಮಾಹಿತಿ ನೀಡಿದರು.

ವಿಪಕ್ಷ ಸದಸ್ಯ ಅಷ್ಪಕ್‌ ಅಹಮ್ಮದ್‌ ಮಾತನಾಡಿ, ಆಸ್ತಿ ತೆರಿಗೆ ಹೆಚ್ಚಳಕ್ಕೆ ಇದು ಸೂಕ್ತ ಸಮಯವಲ್ಲ. ಖಾಲಿ ಜಾಗಕ್ಕೂ ತೆರಿಗೆ ವಿಧಿಸುವ ನಿಯಮದಿಂದ ಅಂತಹ ಜಾಗಕ್ಕೆ ತೆರಿಗೆ ಕಟ್ಟ ಬೇಕಾಗುತ್ತದೆ. ಮೇಲ್ನೋಟಕ್ಕೆ ತೆರಿಗೆ ಹೆಚ್ಚಳದಲ್ಲಿ ದೊಡ್ಡ ವ್ಯತ್ಯಾಸ ಕಂಡು ಬರುತ್ತಿಲ್ಲವಾದರೂ ಈಗಿನ ವಾತಾವರಣ ತೆರಿಗೆ ಹೆಚ್ಚಳಕ್ಕೆ ಸೂಕ್ತ ಸಮಯವಲ್ಲ ಎಂದರು.

Advertisement

ಪುರಸಭೆಯಲ್ಲಿ ದಂಡದಲ್ಲಿ ರಿಯಾ ಯಿತಿ ನೀಡಬೇಕು. ಕಸ, ಕಟ್ಟಡ ಇತ್ಯಾದಿಗಳಿಗೆ ತೆರಿಗೆ ಜತೆ ಬಡ್ಡಿ, ದಂಡವೂ ಹಾಕಲಾಗುತ್ತಿದೆ. ಅದಕ್ಕೂ ರಿಯಾಯಿತಿ ನೀಡಬೇಕು, ಎಲ್ಲದಕ್ಕೂ ಬಡ್ಡಿ ಎಂದರೆ ಹೇಗೆ? ಎಂದು ರೆಹಮತ್‌ ಎನ್‌. ಶೇಖ್‌ ಪ್ರಶ್ನಿಸಿದರು. ಎಪ್ರಿಲ್‌-ಮೇ ತಿಂಗಳಲ್ಲಿ ತೆರಿಗೆ ಕಟ್ಟಿದರೆ ಬಡ್ಡಿ ಬೀಳುವುದಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದರು.

ಲೆಕ್ಕಚಾರ ಮಾಡಿ ಹೇಳಿ
ಈಗಿನ ತಿದ್ದುಪಡಿಯಂತೆ ತೆರಿಗೆ ವಿಧಿಸುವ‌ ಸಂದರ್ಭ ಆಗುವ ವ್ಯತ್ಯಾಸಗಳ ಬಗ್ಗೆ ಲೆಕ್ಕಚಾರ ಆಧಾರದಲ್ಲಿ ಸಭೆಗೆ ಮಾಹಿತಿ ನೀಡಿದರೆ ಅನುಕೂಲ ಎಂದು ಆಡಳಿತ ಪಕ್ಷದ ಸದಾಶಿವ ದೇವಾಡಿಗ ಹೇಳಿದರು. ಕಂದಾಯ ಅಧಿಕಾರಿ ಲೆಕ್ಕಚಾರದ ಮಾಹಿತಿ ನೀಡಿದರು.

ಇಲ್ಲಿ ಸಿಗದಿದ್ದರೂ ಅಲ್ಲಿ ಸಿಗುತ್ತದೆ
ತೆರಿಗೆ ಹೆಚ್ಚಳ ತಿದ್ದುಪಡಿ ವಿಧೇ ಯಕಕ್ಕೆ ಅನುಮೋದನೆ ನೀಡಿ ಕಳುಹಿಸಲು ಶುಕ್ರವಾರ ಕಡೆಯ ದಿನವಾಗಿದೆ. ವಿಶೇಷ ಸಭೆಯಲ್ಲಿ ಒಪ್ಪಿಗೆ ಪಡೆದು ಅನಂತರದಲ್ಲಿ ಸರಕಾರಕ್ಕೆ ಸಲ್ಲಿಕೆಯಾಗುತ್ತದೆ. ಕೌನ್ಸಿಲರ್‌ಗಳು ಜನರಿಗೆ ಆಸ್ತಿ ತೆರಿಗೆಯಲ್ಲಿನ ಅಂಶಗಳನ್ನು ಮನದಟ್ಟು ಮಾಡುವ ಕುರಿತು ಸುತ್ತೋಲೆಯಲ್ಲಿರುವ ಅಂಶಗಳಲ್ಲಿ ಸೇರಿದೆ ಎಂದು ಮುಖ್ಯಾಧಿಕಾರಿ ಹೇಳಿದಾಗ, ಕೌನ್ಸಿಲರ್‌ಗಳು ಒಪ್ಪಿಗೆ ನೀಡದೆ ಅಸಮ್ಮತಿ ವ್ಯಕ್ತಪಡಿಸಿ, ನಿರ್ಣಾಯ ಕೈಗೊಂಡು ಕಳಿಸಿದಲ್ಲಿ ಸರಕಾರ ಕೈ ಬಿಡುತ್ತದಾ? ಎಂದು ಅಶ#ಕ್‌ ಅಹಮ್ಮದ್‌ ಪ್ರಶ್ನಿಸಿದಾಗ ಇಲ್ಲಿ ಒಪ್ಪಿಗೆ ಸಿಗದಿದ್ದರೆ, ಜಿಲ್ಲಾಧಿಕಾರಿಗಳು ಒಪ್ಪಿಯೊಂದಿಗೆ ಸರಕಾರಕ್ಕೆ ಕಳಿಸಲಾಗುತ್ತದೆ ಎಂದರು. ಕೌನ್ಸಿಲರ್‌ಗಳ ಒಪ್ಪಿಗೆ ಪಡೆಯದೆ ಅನುಮೋದನೆಗೊಂಡರೆ ಆಡಳಿತ ಸಮಿತಿಯ ಆವಶ್ಯಕತೆಯೇನು? ಜನರಿಗೆ ನ್ಯಾಯ ಹೇಗೆ ಎನ್ನುವ ಪ್ರಶ್ನೆ ಎದ್ದಿತು.

ಒಪ್ಪಿಗೆ ಸೂಚಿಸದೆ ಕಳಿಸಿದಲ್ಲಿ 15 ನೇ ಹಣಕಾಸು ಇನ್ನಿತರ ಅನುದಾನಗಳು ಸರಕಾರದಿಂದ ತಡೆ ಹಿಡಿಯಲ್ಪಡುತ್ತದೆ ಎಂದು ಮುಖ್ಯಾಧಿಕಾರಿ ಹೇಳಿದರು. ಹೆಚ್ಚಿನ ಚರ್ಚೆಗಳಿಲ್ಲದೆ, ಸಭೆ ಸರ್ವಾನುಮತದ ನಿರ್ಣಯದೊಂದಿಗೆ ಮುಕ್ತಾಯಗೊಂಡಿತು. ಆಡಳಿತ, ವಿಪಕ್ಷ ಸದಸ್ಯರು ಉಪಸ್ಥಿತರಿದ್ದರು.

ಹೊಟ್ಟೆಗೆ ಹಿಟ್ಟಿಲ್ಲ ಇನ್ನು ತೆರಿಗೆ ಹೆಚ್ಚಿಸಿದರೆ?
ವಿಪಕ್ಷ ಸದಸ್ಯೆ ಪ್ರತಿಮಾ ರಾಣೆ ಮಾತನಾಡಿ, ಕೊರೊನಾದಿಂದ ಜನ ಸಂಕಷ್ಟದಲ್ಲಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲ. ಈಗ ತೆರಿಗೆ ಜಾಸ್ತಿ ಹಾಕಿದರೆ ಜನರ ಪಾಡೇನು. ಸರಕಾರ ಹೇಳಿದನ್ನೆಲ್ಲ ಕೇಳಲು ಆಗುವುದಿಲ್ಲ. ಜನಸಾಮಾನ್ಯರಿಗೆ ನಾವು ಉತ್ತರಿಸವುದು ಹೇಗೆ ಎಂದು ಪ್ರಶ್ನಿಸಿದರು. ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಉತ್ತರಿಸಿ ಕಟ್ಟಡ ತೆರಿಗೆಯಲ್ಲಿ ಅಡಚಣೆ ಬರುವುದಿಲ್ಲ. ಚಾಲ್ತಿ ತೆರಿಗೆಗಿಂತ ದೊಡ್ಡ ವ್ಯತ್ಯಾಸವೂ ಆಗುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next