Advertisement

“ಜೂಮ್‌’ 100 ದಿನ ಓಡಿದ್ದು ಸುಳ್ಳಾ?: ಪ್ರಶಾಂತ್‌ ರಾಜ್‌

05:11 PM Sep 22, 2017 | |

ಪ್ರಶಾಂತ್‌ ರಾಜ್‌ ನಿರ್ದೇಶನದ “ದಳಪತಿ’ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಪ್ರೇಮ್‌ ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಂಡಿರುವ ಸಿನಿಮಾವಿದು. ಈ ಸಿನಿಮಾವನ್ನು ಪ್ರಶಾಂತ್‌ ರಾಜ್‌ಗೆ “ಕಮರ್ಷಿಯಲ್‌ ಡೈರೆಕ್ಟರ್‌’ ಎಂಬ ಟ್ಯಾಗ್‌ ಕೊಡುವ ವಿಶ್ವಾಸವಿದೆ. ಈ ಖುಷಿಯ ನಡುವೆಯೇ ಪ್ರಶಾಂತ್‌ ರಾಜ್‌ ಒಂದ ಹಳೆಯ ಬೇಸರ‌ವನ್ನು ತೋಡಿಕೊಂಡರು. ಅದು ಅವರ ನಿರ್ದೇಶನದ “ಜೂಮ್‌’ ಸಿನಿಮಾಕ್ಕೆ ಸಂಬಂಧಪಟ್ಟದ್ದು.

Advertisement

ಗಣೇಶ್‌ ನಾಯಕರಾಗಿರುವ “ಜೂಮ್‌’ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿ ಯಶಸ್ಸು ಕಂಡಿದ್ದು ನಿಮಗೆ ಗೊತ್ತೆ ಇದೆ. ಸಿನಿಮಾ ಏನೋ ಯಶಸ್ಸು ಕಂಡಿದೆ. ಆದರೆ, ಆ ಸಿನಿಮಾಕ್ಕೆ ಯಾವ ವಿಭಾಗದಲ್ಲೂ ಒಂದು ಪ್ರಶಸ್ತಿಯೂ ಬಂದಿಲ್ಲ ಅನ್ನೋದು ಪ್ರಶಾಂತ್‌ರಾಜ್‌ ಬೇಸರ. “ಜೂಮ್‌’ 50 ದಿನ ಓಡಬಹುದೆಂದು ನಾವು 50 ದಿನದ ಕಾರ್ಯಕ್ರಮ ಕೂಡಾ ಮಾಡಿದೆವು. ಆದರೆ ಚಿತ್ರವನ್ನು ಜನ ಇಷ್ಟಪಟ್ಟ ಕಾರಣ ಅದು 100 ದಿನ ದಾಟಿತು.

ಜನ ಅಷ್ಟೊಂದು ಇಷ್ಟಪಟ್ಟ ಸಿನಿಮಾಕ್ಕೆ ಕಳೆದ ವರ್ಷ ಸರ್ಕಾರ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಶಸ್ತಿಗಳಲ್ಲಿ ಯಾವ ಪ್ರಶಸ್ತಿಯೂ ಬಂದಿಲ್ಲ. ಪ್ರಶಸ್ತಿ ಬರೋದು ಬಿಡಿ, ನಾಮನಿರ್ದೇಶನ ಪಟ್ಟಿಯಲ್ಲೂ ನಮ್ಮ ಸಿನಿಮಾ ಯಾವ ವಿಭಾಗದಲ್ಲೂ ಆಯ್ಕೆಯಾಗಿರಲಿಲ್ಲ. ನನಗೆ ಆಶ್ಚರ್ಯವಾಯಿತು, ಹಾಗಾದರೆ ಚಿತ್ರ 100 ದಿನ ಓಡಿದ್ದು ಸುಳ್ಳಾ. ಜನ ಇಷ್ಟಪಟ್ಟು ನೋಡಿದ್ರಾ ಅಥವಾ ಸುಮ್ಮನೆ ನಾವೇ ಓಡಿಸಿದೆವಾ ಎಂಬಂತಹ ಸಂದೇಹ ಬಂತು.

ಕೊನೆಯ ಪಕ್ಷ, ನಾಮಿನಿ ಲಿಸ್ಟ್‌ಗೂ ಆಯ್ಕೆಯಾಗದಿರುವಂಥದ್ದು “ಜೂಮ್‌’ನಲ್ಲಿ ಏನಿತ್ತು, ಹಾಗಾದರೆ ಪ್ರಶಸ್ತಿಯ ಮಾನದಂಡ ಏನು ಎಂಬ ಬಗ್ಗೆ ಬೇಸರವಾಯಿತು’ ಎನ್ನುವುದು ಪ್ರಶಾಂತ್‌ ಮಾತು. ರಾಜ್ಯ ಪ್ರಶಸ್ತಿಯಿಂದ ಹಿಡಿದು ಸೈಮಾ, ಐಫಾ ಸೇರಿದಂತೆ ಏನೇನೆಲ್ಲಾ ಪ್ರಶಸ್ತಿಗಳಿವೆ ಅವೆಲ್ಲದಕ್ಕೂ ಪ್ರಶಾಂತ್‌ರಾಜ್‌ “ಜೂಮ್‌’ನ ಕಳಿಸಿದ್ದರಂತೆ. “ಜೂಮ್‌’ನ ಈ ಬೇಸರವನ್ನು ಪ್ರಶಾಂತ್‌ ರಾಜ್‌ “ದಳಪತಿ’ ಆಡಿಯೋ ರಿಲೀಸ್‌ನಲ್ಲಿ ಹೊರಹಾಕಿದರು. ಇದು ಅವರ ನಿರ್ದೇಶನದ 5ನೇ ಸಿನಿಮಾ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next