Advertisement

ಸಮಾಜ ಸೇವೆಗೆ “ಜಿಂದಾ’ಲ್‌ ಬಾದ್‌ !

09:36 AM Sep 11, 2019 | mahesh |

ಜಿಂದಾಲ್‌ ಒಂದಷ್ಟು ಮಂದಿ ನೌಕರರಿದ್ದಾರೆ. ಅವರದೆಲ್ಲಾ ತಾಯಿ ಕರಳು. ಅದಕ್ಕೆ ತಮ್ಮದೇ ಆದ ಒಂದು ಸಂಘ ಕಟ್ಟಿಕೊಂಡು, ಅಶಕ್ತರು, ನಿಶಕ್ತರನ್ನೆಲ್ಲಾ ಹುಡುಕಿ ಸಮಾಜ ಸೇವೆ ಮಾಡುತ್ತಿರುವುದು.

Advertisement

ಬಳ್ಳಾರಿಯ ತೋರಣಗಲ್ಲಿನ ಜಿಂದಾಲ್‌ ಸ್ಟೀಲ್‌ ಕಾರ್ಖಾನೆಯಲ್ಲಿ ಒಂದಷ್ಟು ಜನ ನೌಕರರು ಇದ್ದಾರೆ. ಅವರ ಇಷ್ಟದ ಕೆಲಸ ಅಂದರೆ ಸಮಾಜ ಸೇವೆ. ಅನಾಥರು, ನಿರ್ಗತಿಕರು, ಬಡ ವಿದ್ಯಾರ್ಥಿಗಳು, ರೋಗಿಗಳು… ಹೀಗೆ ಎಲ್ಲಾ ವರ್ಗದ ಜನರಿಗಾಗಿ ಸದಾ ತುಡಿಯುವ ಸಮಾನ ಮನಸ್ಕರರ ತಂಡ ಇದು. ಇದಕ್ಕೆ “ಯುವ ಸೇವಾ’ ಅಂತ ಹೆಸರಿಟ್ಟುಕೊಂಡಿದ್ದಾರೆ. ಸ್ವಾಮಿ ವಿವೇಕಾನಂದರ ಮಾತುಗಳೇ ಇವರಿಗೆ ಸ್ಫೂರ್ತಿಯಂತೆ. ಯುವ ಸೇವಾ ತಂಡದಲ್ಲಿರುವ ಪ್ರತಿಯೊಬ್ಬರು ಬಡತನವನ್ನು ಅನುಭವಿಸಿ ಬಂದವರೇ.

” ಸಮಾಜದಲ್ಲಿ ತುಳಿತಕ್ಕೆ, ನಿರ್ಲಕ್ಷಕ್ಕೆ ಒಳಗಾದವರನ್ನು ಮೇಲೆತ್ತುವ ಆಲೋಚನೆ ಬಂತು. ತಕ್ಷಣ ಕಾರ್ಯಪ್ರವೃತ್ತಗೊಂಡೆವು. ಸಹೋದ್ಯೋಗಿಗಳು, ಸ್ನೇಹಿತರಿಂದ ಒಳ್ಳೆಯ ಪ್ರತಿಕ್ರಿಯೆ ಬಂತು. ಅದರ ಫ‌ಲ ಈ ತಂಡ..’ ಎನ್ನುತ್ತಾರೆ ರಾಜು, ಪ್ರಶಾಂತ ಬಿ, ಪ್ರಕಾಶರಾವ್‌. ಹೀಗೆ 2013 ರಲ್ಲಿ ಒಬ್ಬ ಸದಸ್ಯರಿಂದ ಆರಂಭವಾದ “ಯುವ ಸೇವಾ ತಂಡ’ ದ‌ಲ್ಲಿ ಈಗ ಒಟ್ಟು 75 ಯುವಕರಿದ್ದಾರೆ!. ಬಳ್ಳಾರಿ, ಮೈಸೂರು, ಶಿವಮೊಗ್ಗ ಅಷ್ಟೇಕೆ ಒರಿಸ್ಸಾ ಸೇರಿದಂತೆ ಹೊರ ರಾಜ್ಯದಲ್ಲೂ ಸದಸ್ಯರಿದ್ದು, ದಿನೆದಿನೇ ತಂಡದ ಸಂಖ್ಯಾಬಲ ಏರುತ್ತಲೇ ಇದೆ!.

ಇವರೆಲ್ಲ ಒಂದು ಶಪತ ಮಾಡಿದ್ದಾರೆ. ಅದೇನೆಂದರೆ, ಸಮಾಜ ಸೇವೆಗಾಗಿ ತಮ್ಮ ವಿಲಾಸ ಜೀವನಕ್ಕೆ ತೆರೆ ಎಳೆದು, ತನು-ಮನ-ಧನ ಮೀಸಲಿಡುವುದು ಅಂತ. “ಎಲ್ಲರೂ ಅಸಮಾನತೆ, ಬಡತನ, ದಾರಿದ್ರ್ಯ.. ಇತ್ಯಾದಿಗಳ ನಿರ್ಮೂಲನೆ ಬಗ್ಗೆ ಭಾಷಣ ಬಿಗಿಯುತ್ತಾ ಹೋದರೆ, ಆ ನಿಟ್ಟಿನಲ್ಲಿ ನೈಜವಾಗಿ ಕೆಲಸ ಮಾಡುವರ್ಯಾರು? ಮಾತಿಗಿಂತ ಕೃತಿ ಲೇಸು ಅಲ್ವಾ.’ ಎನ್ನುತ್ತಾರೆ ಸೂರಿಬಾಬು.

ತಂಡವನ್ನು ಮತ್ತೇ ನಾಲ್ಕು ಟೀಂ ಆಗಿ ವಿಭಾಗಿಸಿದ್ದಾರೆ. ಪ್ರತಿ ಭಾನುವಾರ ಒಂದೊಂದು ಟೀಂ ಸೇವೆಗೆ ಇಳಿಯುತ್ತದೆ. ಆ ಮೊದಲು ಈ ವಾರ ಏನು ಮಾಡುವುದು? ಎಲ್ಲಿ ಸೇವೆಯ ಅವಶ್ಯಕತೆ ಇದೆ? ಎನ್ನುವ ಬಗ್ಗೆ ಸದಸ್ಯರಲ್ಲಿ ಚರ್ಚೆ ನಡೆಯುತ್ತದೆ. ಸೇವೆಗೆ ಇಂತದ್ದೇ ನಿರ್ಧಿಷ್ಟ ಏರಿಯಾ ಇಲ್ಲ. ಸದಸ್ಯರಿಗೆ ತಮ್ಮ ಸುತ್ತಮುತ್ತಲಿನಲ್ಲಿಯೇ ಸೇವೆಯ ಅವಶ್ಯಕತೆ ಇದೆ ಎಂದನಿಸಿದರೆ ಗ್ರೂಪ್‌ನಲ್ಲಿ ವಿಷಯ ಮತ್ತು ಅದಕ್ಕೆ ಬೇಕಾದ ಅಂದಾಜು ಮೊತ್ತದ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಎಲ್ಲರೂ ತಮ್ಮ ಕೈಲಾದಷ್ಟು ಹಣ ಕೊಡುತ್ತಾರೆ. ಒಂದು ವೇಳೆ ಅಲ್ಪಸ್ವಲ್ಪ ಹಣ ಉಳಿದರೆ ಮುಂದಿನ ಸಲ ಬಳಸುತ್ತಾರೆ. ಕಡಿಮೆಯಾದರೆ ಕೈಯಿಂದ ಹಾಕುತ್ತಾರೆ.

Advertisement

ವಾಟ್ಯಾ$Õಪ್‌ , ಫೇಸ್‌ಬುಕ್‌, ಇ-ಮೇಲ್‌ ಮೂಲಕ ಸದಸ್ಯರನ್ನು ಸಂಪರ್ಕಿಸುತ್ತಾರೆ. ಅಲ್ಲಿ ಕೂಡ ಚರ್ಚೆ ನಡೆದು ಕೊನೆಗೆ ಕಾರ್ಯಕ್ರಮ ಫೈನಲ್‌ ಆಗುತ್ತೆ. ಇಲ್ಲಿ ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಇರುತ್ತದೆ. ಆಗಿಂದಾಗ್ಗೆ ಆದ ವೆಚ್ಚದ ಬಗ್ಗೆ ತಂಡದ ಸದಸ್ಯರಿಗೆ ತಿಳಿಸಲಾಗುತ್ತದೆ. ಒಟ್ಟಿನಲ್ಲಿ ಸೇವೆ ಸಂಪೂರ್ಣ ಪಾರದರ್ಶಕ.

ಬಳ್ಳಾರಿಯ ಸಂಗನಕಲ್ಲು ರಸ್ತೆಯಲ್ಲಿರುವ ವೃದ್ಧಾಶ್ರಮ, ಅನಾಥಶ್ರಮ, ಸುಧಾ ಕ್ರಾಸ್‌ ಬಳಿಯ ಬುದ್ಧಿಮಾಂಧ್ಯ ಮಕ್ಕಳ ಆಶ್ರಮ, ಅನಾಥರು, ಬಡ ಶಾಲಾ ಮಕ್ಕಳು, ಹೊಸಪೇಟೆಯ ಕಾರುಣ್ಯ ಅನಾಥಶ್ರಮ.. ಹೀಗೆ ಇವರ ಸೇವೆ ನಾನಾ ಕಡೆ ನಡೆಯುತ್ತಲೇ ಇರುತ್ತದೆ. ಆಶ್ರಮಗಳ ಶೌಚಾಲಯದಿಂದ ಡಿದು ಬಟ್ಟೆ ಬರೆ, ಬೆಡ್‌ಶೀಟ್‌ ಶುಚಿ ಮಾಡುತ್ತಾರೆ!. ” ಇದರಲ್ಲಿ ಯಾವುದೇ ಮುಜುಗರ, ಸಂಕೋಚ, ಅಸಹ್ಯ ಆಗಲ್ಲ. ಎಲ್ಲರೂ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತೇವೆ. ಸೇವೆ ಅಂದರೆ ಇದೇ ತಾನೆ..’ ಎನ್ನುತ್ತಾರೆ ತಂಡದ ಸತೇಂದ್ರ ಕುಮಾರ್‌.

ಆಶ್ರಮಗಳಿಗೆ ಬೆಡ್‌ಶೀಟ್‌, ಕಾಟ್‌ಗಳು, ಹೊಸ ಉಡುಪು, ಹಣ್ಣು ಹಂಪಲುಗಳನ್ನು ತಂಡ ವಿತರಿಸುತ್ತದೆ. ಚಳಿಗಾಲದಲ್ಲಿ ರಸ್ತೆಬದಿಯಲ್ಲಿ ಮಲಗಿರುವ ಭಿಕ್ಷುಕರಿಗೆ ಬೆಚ್ಚನೆಯ ಉಡುಪು ವಿತರಿಸುತ್ತಾರೆ. ನಗರದ ಕೊಳಗೇರಿಗಳು, ಹಳ್ಳಿಗಳಿಗೆ ತೆರಳಿ ಸ್ವತ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುತ್ತಾರೆ. ಇತ್ತೀಚೆಗೆ ಉತ್ತರ ಕರ್ನಾಟದ ನೆರೆಗೆ ನಲುಗಿದವರಿಗೆ ಬಟ್ಟೆ ಬರೆ, ಬೆಡ್‌ಶೀಟ್‌ ಕಳುಹಿಸಿದ್ದಾರೆ.

ಯುವ ಸೇವೆಯ ಸದಸ್ಯರು ಸೇವೆ ಮಾಡಿ, ದಿನವಿಡೀ ಶಾಲಾ ಮಕ್ಕಳೊಂದಿಗೆ ಕಳೆದು, ಅವರೊಟ್ಟಿಗೆ ಆಟವಾಡುತ್ತಾರೆ. ನಕ್ಕು ನಲಿಯುತ್ತಾರೆ. ಇದರಿಂದ ಅವರಲ್ಲಿಯ ಅನಾಥಪ್ರಜ್ಞೆ, ಒಂಟಿತನ ದೂರವಾಗುತ್ತದೆ ಅನ್ನೋದು ಮೂಲ ಉದ್ದೇಶ. ” ರಿಮೋಟ್‌ ವಿಲೇಜ್‌ಗಳನ್ನು ಮೊದಲು ಗುರುತಿಸುತ್ತೇವೆ. ಅಲ್ಲಿ ಓದುವ ಮಕ್ಕಳ ಸ್ಥಿತಿಗತಿ ಅವಲೋಕಿಸುತ್ತೇವೆ. ಇವರಿಗೆ ಹೆಲ್ಪ್ ಮಾಡಿದರೆ ವಿದ್ಯಾಭ್ಯಾಸಕ್ಕೆ ಅನುಕೂಲ ಆಗುತ್ತೆ ಎಂದು ಖಾತ್ರಿ ಆದ ನಂತರ ಕಲಿಕಾ ಸಾಮಗ್ರಿ ತರಿಸುತ್ತೇವೆ..’ ಎನ್ನುತ್ತಾರೆ ಮೃನ್ಮೆ„ ಪಶುಪಾಲಕ್‌. ಸಂಡೂರು ತಾಲ್ಲೂಕಿನ ತಾಳೂರು, ಚಿಕ್ಕಾಂತಪುರ, ನಿಡಗುರ್ತಿ.. ಹೀಗೆ, ವಿವಿಧ ಹಳ್ಳಿಯ ಶಾಲಾ ಮಕ್ಕಳ ಕಲಿಕೆಗೆ ಈಗಾಗಲೇ ಆಸರೆ ಆಗಿದ್ದಾರೆ. ” ಕೇವಲ ಮಕ್ಕಳಿಗೆ ಕಲಿಕಾ ಸಾಮಾಗ್ರಿ ತರಿಸಿ ಬರಲ್ಲ. ಸ್ಪರ್ಧಾತ್ಮಕ ಮನೋಭಾವ ಬೆಳೆಯಲಿ ಎಂದು ಪರೀಕ್ಷೆಯಲ್ಲಿ ಮೊದಲು ಬಂದವರಿಗೆ ಬಹುಮಾನ ನೀಡುವುದಾಗಿ ಘೋಷಿಸುವುದು ಉಂಟಂತೆ.

ಇನ್ನು ಅದೆಷ್ಟೋ ಬಡವರ ವೈದ್ಯಕೀಯ ವೆಚ್ಚ ಬರಿಸಿದ್ದಾರೆ. ತಂಡದ ಎಲ್ಲಾ ಸದಸ್ಯರು ರಕ್ತದಾನವನ್ನೂ ಸಹ ಮಾಡುತ್ತಾರೆ!. ಯಾರಿಗಾದರೂ ರಕ್ತದ ಅವಶ್ಯಕತೆ ಇದೆ ಎಂದು ತಿಳಿದ ತಕ್ಷಣವೇ ಬಂದರೆ ಸಾಕು ನಮ್ಮಲ್ಲಿ ಯಾರದ್ದು ಆ ರಕ್ತದ ಗುಂಪಿಗೆ ಹೊಂದಿಕೆ ಆಗುತ್ತೆ ಎಂದು ಪರಿಶೀಲಿಸಿ, ಆ ರೋಗಿಗಳಿಗೆ ಹತ್ತಿರ ಇರುವ ಸದಸ್ಯರು ಹೋಗಿ ರಕ್ತ ಕೊಡುತ್ತಾರೆ.

ಹೀಗೆ, ಯುವ ಸೇವೆಯೇ ಆಜನ್ಮ ಸಿದ್ಧ ಹಕ್ಕಾಗಿದೆ.
ಮಾಹಿತಿಗೆ- 9482340985

ಸ್ವರೂಪಾನಂದ ಎಂ. ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next