Advertisement

ವರ್ಷಾಂತ್ಯದೊಳಗೆ ಅನುದಾನ ಬಳಕೆ ಮಾಡಿ

07:36 PM Nov 18, 2020 | Suhan S |

ಹಾವೇರಿ: ಪ್ರಸಕ್ತ ಸಾಲಿನ ಆರ್ಥಿಕ ವರ್ಷಾಂತ್ಯದೊಳಗೆ ಇಲಾಖಾವಾರು ಬಿಡುಗಡೆಯಾಗಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿ ನಿಗದಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಒಂದೊಮ್ಮೆ ಅಧಿಕಾರಿಗಳನಿರ್ಲಕ್ಷ್ಯ, ಇತರೇ ಕಾರಣಗಳಿಗಾಗಿ ಬಿಡುಗಡೆಗೊಂಡ ಅನುದಾನ ಲ್ಯಾಪ್ಸ್‌ ಆದರೆ ಆಯಾ ಇಲಾಖಾ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ ಎಚ್ಚರಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.ವಿವಿಧ ರಸ್ತೆ ಕಾಮಗಾರಿ, ಅಂಗನವಾಡಿ, ಶಾಲೆ ಒಳಗೊಂಡಂತೆ ವಿವಿಧ ಕಟ್ಟಡಗಳು, ನೀರಾವರಿ ಯೋಜನೆಗಳು, ಕೆರೆ ನಿರ್ಮಾಣ, ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ನಿವೇಶನದ ಕೊರತೆ, ಯೋಜನೆಗಳ ಬದಲಾವಣೆ ಸೇರಿದಂತೆ ಯಾವುದೇ ತೊಡಕುಗಳು ಕಂಡು ಬಂದರೆ ಆಯಾ ಭಾಗದ ಜಿಪಂ ಸದಸ್ಯರು, ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸ್ಥಳೀಯವಾಗಿ ಸಮಸ್ಯೆಗಳನ್ನು ನಿವಾರಿಸಲಾಗುವುದು. ಆದರೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕಾಮಗಾರಿಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್‌ (ಪಿಎಂಜಿಎಸ್‌ವೈ) ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳು ಐದು ವರ್ಷದವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು. ಆದರೆ ಈ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ನಿರ್ವಹಣೆ ಸಹ ಮಾಡಿಲ್ಲ. ಲೋಪ ಎಸಗಿದ ಗುತ್ತಿಗೆದಾರರ ಮೇಲೆ ಕ್ರಮ ವಹಿಸಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಜಿಪಂ ಸಿಇಒ ರಮೇಶ ದೇಸಾಯಿ ಅವರು ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧೆಡೆ ಮಂಜೂರಾಗಿರುವ ಸಮುದಾಯ ಭವನಗಳನ್ನು ನಿಗದಿತ ಸ್ಥಳದಲ್ಲಿ ನಿರ್ಮಾಣ ಮಾಡಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು 2021 ಫೆಬ್ರವರಿ ಒಳಗಾಗಿ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದಯೋಜನಾ ನಿರ್ದೇಶಕರಿಗೆ ಸೂಚನೆ ನೀಡಿದರು.ಲೋಕೋಪಯೋಗಿ ಇಲಾಖೆಯಿಂದಕೈಗೊಂಡಿರುವ 64 ಅಂಗನವಾಡಿ ಕಟ್ಟಡ, 172ಶಾಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಕಟ್ಟಡಗಳಿಗೆ ನಿವೇಶನಇತರ ಸಮಸ್ಯೆಗಳ ಕುರಿತಂತೆ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಅನುದಾನ ಬಳಕೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಲಾಯಿತು.

ತುಂಗಾ ಮೇಲ್ದಂಡೆ ಯೋಜನೆಯಡಿ ಕೈಗೊಂಡಿರುವ ದೇವರಗುಡ್ಡ ಏತ ನೀರಾವರಿ ಯೋಜನೆ ಕಾಮಗಾರಿ ಕಳಪೆ ಎಂದು ದೂರುಗಳು ಬಂದಿವೆ. ಈ ಕುರಿತಂತೆ ಜಿಪಂ ಅಧ್ಯಕ್ಷರು, ಸಿಇಒ, ತುಂಗಾ ಮೇಲ್ದಂಡೆ ಯೋಜನೆ ಅಭಿಯಂತರರು ಪರಿಶೀಲನೆ ನಡೆಸಿ ಕಾಮಗಾರಿಗಳಲ್ಲಿ ನ್ಯೂನತೆಕಂಡು ಬಂದರೆ ಅದನ್ನು ಸರಿಪಡಿಸಿದ ನಂತರ ಹಂಸ್ತಾಂತರಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

Advertisement

ತುಂಗಾ ಮೇಲ್ದಂಡೆ ಯೋಜನೆಯಡಿ ಭೂ ಸ್ವಾಧೀನ ಪಡಿಸಿಕೊಂಡ ರೈತರಿಗೆ ಇದೇ ಆರ್ಥಿಕ ವರ್ಷಾಂತ್ಯದಲ್ಲಿ ಪರಿಹಾರ ಹಣ ಪಾವತಿಸಲು ಕ್ರಮ ವಹಿಸಬೇಕು. ಕಾಗಿನೆಲೆ ಸೌಂದರ್ಯಿಕರಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಅಭಿಯಂತರರಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಸ್ಥಾಯಿ ಸಮಿತಿ ಸದಸ್ಯರಾದ ಶಿವಾನಂದ ಕನ್ನಪ್ಪಳವರ,ಟಾಕನಗೌಡ ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ತುಂಗಾ ಮೇಲ್ದಂಡೆ ಯೋಜನೆಯಡಿ ಕೈಗೊಂಡಿರುವ ನೀರಾವರಿ ಕಾಮಗಾರಿಗಳು, ಸಣ್ಣ ನೀರಾವರಿ ಇಲಾಖೆಯಡಿ ಕೈಗೊಂಡಿರುವ ಚೆಕ್‌ಡ್ಯಾಂಗಳ ಪ್ರಗತಿಯನ್ನು ಪರಿಶೀಲಿಸಿ ಸಣ್ಣ ನೀರಾವರಿ ಯೋಜನೆಯ ಚೆಕ್‌ಡ್ಯಾಂಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ. ಸಣ್ಣ ನೀರಾವರಿ ಕೆರೆಗಳು ಮಳೆಯಿಂದ ಭರ್ತಿಯಾಗದಿದ್ದರೆ ಕಾಲುವೆ ಮೂಲಕ ನೀರು ತುಂಬಲು ಕ್ರಮ ಕೈಗೊಳ್ಳಿ.  –ಏಕನಾಥ ಬಾನುವಳ್ಳಿ, ಜಿಪಂ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next