Advertisement

ಗಡಿನಾಡಿಗೆ ಶೂನ್ಯ ಭಾಗ್ಯ

03:17 PM Feb 17, 2018 | Team Udayavani |

ಬೀದರ: ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವುರಿಂದ ಗಡಿ ಜಿಲ್ಲೆ ಬೀದರಗೆ ಬಜೆಟ್‌ನಲ್ಲಿ ಬಂಪರ್‌ ಕೊಡುಗೆಗಳು ಸಿಗಬಹುದೆಂಬ ನಿರೀಕ್ಷೆಯನ್ನು ಸಿಎಂ ಸಿದ್ಧರಾಮಯ್ಯ ಹುಸಿಗೊಳಿಸಿದ್ದಾರೆ. ವಿಶೇಷವಾಗಿ ವಿಶ್ವದ ಪ್ರಥಮ ಸಂಸತ್‌ ಎಂದೆನಿಸಿಕೊಂಡಿರುವ ಬಸವಕಲ್ಯಾಣದ ಅನುಭವ ಮಂಟಪದ ನೂತನ ಕಟ್ಟಡಕ್ಕೆ ವಿಶೇಷ ಅನುದಾನ ಸಿಗಬಹುದೆಂದು ಕಾಯುತ್ತಿದ್ದ ಬಸವ ಅನುಯಾಯಿಗಳಿಗೆ ಭಾರಿ ನಿರಾಶೆಯಾಗಿದೆ.

Advertisement

ಕಳೆದೆರಡು ಹಿಂದಿನ ಬಜೆಟ್‌ನಲ್ಲಿ ಬಂಪರ್‌ ಯೋಜನೆಗಳನ್ನು ದಕ್ಕಿಸಿಕೊಂಡಿದ್ದ ಬೀದರಗೆ ಪ್ರಸ್ತುತ ಕಾಂಗ್ರೆಸ್‌ ಸರ್ಕಾರದ ಕೊನೆ ಬಜೆಟ್‌ನಲ್ಲಿ ಹೊಸ ಯೋಜನೆಗಳು ಸಿಗಬಹುದೆಂಬುದು ಜನರ ಆಶಯವಾಗಿತ್ತು. ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಸರ್ಕಾರದ ಕೊನೆಯ ಬಜೆಟ್‌ ಹಿನ್ನೆಲೆಯಲ್ಲಿ ಹೊಸ ಭರವಸೆ, ನಿರೀಕ್ಷೆಗಳು ಗದಿಗೆದರಿದ್ದವು. ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ ಪೂರಕ ಯೋಜನೆಗಳು ಸಿಗಬಹುದೆಂಬ ಆಶಾಭಾವ ಇತ್ತು. ಆದರೆ, ಯಾವುದೇ ಹೇಳಿಕೊಳ್ಳುವಂಥ ಯೋಜನೆಗಳನ್ನು ಪ್ರಕಟಿಸದಿರುವುದು ಜಿಲ್ಲೆಯ ಪಾಲಿಗೆ ಕಹಿ ಅನುಭವ ಕೊಟ್ಟಂತಾಗಿದೆ. 

ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಸ್ಪಂದಿಸಿ ಹಿರಿಯ ವಿದ್ವಾಂಸ ಗೋ.ರು. ಚನ್ನಬಸಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ವರದಿ ಸ್ವೀಕರಿಸಿದ್ದ ಸರ್ಕಾರ ಸಮಿತಿಯ ಸಲಹೆಯಂತೆ 600 ಕೋಟಿ ರೂ.ಗಳ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡಲಾಗುವುದು ಮತ್ತು ಅದಕ್ಕೆ ಅಗತ್ಯ ಅನುದಾನವನ್ನು ಬಜೆಟ್‌ನಲ್ಲಿ ಘೋಷಿಸುವುದಾಗಿ ಖುದ್ದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದಾದ ಬಳಿಕ ಉಸ್ತುವಾರಿ ಸಚಿವರು, ಶಾಸಕರು ಸಮಾರಂಭಗಳಲ್ಲಿ ಪದೇ ಪದೇ ಈ ವಿಷಯವನ್ನು ಪ್ರಸ್ತಾಪಿಸಿ ಭರವಸೆಯ ಮಾತುಗಳನ್ನಾಡಿದ್ದರು. ಅಷ್ಟೇ ಅಲ್ಲ ಇತ್ತೀಚೆಗೆ
ಎಐಸಿಸಿ ರಾಹುಲ್‌ ಗಾಂಧಿ ಅವರು ಅನುಭವ ಮಂಟಪಕ್ಕೆ ಭೇಟಿಯಿಂದ ಈ ಯೋಜನೆಗೆ ಹೆಚ್ಚಿನ ಒತ್ತು ಸಿಗಬಹುದೆಂದು ಅಂದಾಜಿಸಲಾಗಿತ್ತು. ಆದರೆ, ಬಜೆಟ್‌ ಎಲ್ಲವನ್ನು ತಲೆಕೆಳಗಾಗಿಸಿದೆ.

ಬಸವಕಲ್ಯಾಣದ ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್‌ ಗಾಂಧಿ “ನುಡಿದಂತೆ ನಡೆ’ ವಚನ ಹೇಳಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಆದರೆ, ಈಗ ಕಲ್ಯಾಣದ ನೆಲೆದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಯೋಜನೆ ಬಗ್ಗೆ ಘೋಷಣೆ ಮಾಡಿ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೇ ಕಡೆಗಣೆಸಿರುವುದು ಬಸವ ಭಕ್ತರನ್ನು ಕೆಂಗಣ್ಣು ಬೀರುವಂತೆ ಮಾಡಿದೆ.

ಜಿಲ್ಲೆಯ ರೈತರ ಜೀವನಾಡಿ ಕಾರಂಜಾ ಜಲಾಶಯದ ಕಾಲುವೆಗಳ ಆಧುನೀಕರಣಕ್ಕೆ 482 ಕೋಟಿ ರೂ. ಮೀಸಲಿಡಲಾಗಿದೆ ಹಾಗೂ ಬೀದರ- ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತಲಾ 15 ಕೋಟಿ ರೂ. ವೆಚ್ಚದಲ್ಲಿ “ಕ್ಯಾಥ್‌ಲ್ಯಾಬ್‌’ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕಗಳ ಸ್ಥಾಪನೆ ಕುರಿತು ಘೋಷಿಸಲಾಗಿದೆ. ಇದಕ್ಕೆ ಹೊರತುಪಡಿಸಿ ಜಿಲ್ಲೆಗೆ ಯಾವುದೇ ಹೊಸ ಯೋಜನೆ,
ಕಾರ್ಯಕ್ರಮಗಳು ಇಲ್ಲವಾಗಿದೆ. 

Advertisement

ಸರ್ಕಾರಿ ಕೃಷಿ, ಕಾನೂನು ಮತ್ತು ಯೂನಾನಿ ಕಾಲೇಜು ಆರಂಭಿಸುವುದು, ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಗೋದಾವರಿ ನೀರು ಬಳಕೆಗೆ ಜಲಮಂಡಳಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳು ಜಿಲ್ಲೆಯ ಜನರದ್ದಾಗಿತ್ತು. ಆದರೆ, ಅದರಲ್ಲಿ ಒಂದೂ ಸಹ ಈಡೇರದಿರುವುದು ನಿರಾಶೆ ಮೂಡಿಸಿದೆ. 

ಬೀದರ ಜಿಲ್ಲೆ ಹೆಚ್ಚಿನ ಜನರು ಆರೋಗ್ಯ ಚಿಕಿತ್ಸೆಗಾಗಿ ಬೆಂಗಳೂರು, ಹೈದ್ರಾಬಾದ್‌ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಹಾಗಾಗಿ ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಕ್ಯಾಥ್‌ಲ್ಯಾಬ್‌ ಸೌಲಭ್ಯವುಳ್ಳ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪನೆಯಿಂದ ಹೆಚ್ಚು ಉಪಯುಕ್ತತೆ ಕಡಿಮೆ ಎನ್ನಬಹುದು.

ಬಸವ ಭಕ್ತರಿಗೆ ನಿರಾಶದಾಯಕ ಈ ಹಿಂದೆ ಹಲವಾರು ರಾಜಕೀಯ ನಾಯಕರು ಬಸವಕಲ್ಯಾಣದ ಶರಣರ ಅನುಭವ ಮಂಟಪ ನಿರ್ಮಾಣಕ್ಕಾಗಿ ಸಾಕಷ್ಟು ಅನುದಾನ ಕೊಡುವ ಬಗ್ಗೆ ಮಾತನಾಡಿದರು. ಅನುಭವ ಮಂಟಪ ನಿರ್ಮಾಣಕ್ಕಾಗಿ ಸಾಹಿತಿ ಗೋ.ರು. ಚನ್ನಬಸಪ್ಪನವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನೂ ನೇಮಿಸಿ, 6500 ಕೋಟಿ ರೂ. ಯೋಜನೆ ಸಿದ್ಧತೆ ಪಡಿಸಿ, ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದು, ಎಲ್ಲರಿಗೂ ಸಂತಸವಾಗಿತ್ತು. ಆದರೆ ಬಜೆಟ್‌ನಲ್ಲಿ ಅನುಭವ ಮಂಟಪಕ್ಕೆ ಯಾವುದೇ ಅನುದಾನ ಒದಗಿಸಿರುವ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಇಂದು ಮುಖ್ಯಮಂತ್ರಿಗಳು ಘೋಷಿಸಿರುವ ಬಜೆಟ್‌ ಬಸವ ಭಕ್ತರಿಗೆ ನಿರಾಶದಾಯಕವಾಗಿದೆ.
ಡಾ| ಬಸವಲಿಂಗ ಪಟ್ಟದ್ದೇವರು, ಬಸವಕಲ್ಯಾಣ

ಕಣ್ತಪ್ಪಿನಿಂದ ಸೇರ್ಪಡೆಯಾಗಿಲ್ಲ ಬಸವಕಲ್ಯಾಣದಲ್ಲಿ ಐತಿಹಾಸಿಕ ಅನುಭವ ಮಂಟಪ ನಿರ್ಮಿಸುವ ಸಂಬಂಧ ತಜ್ಞರ ಸಲಹಾ ಸಮಿತಿ ಸಿಎಂಗೆ ವರದಿ ಸಲ್ಲಿಸಿದ್ದು,

600 ಕೋಟಿ ರೂ. ಗಳ ಅಂದಾಜು ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಿಫಾರಸ್ಸು ಮಾಡಿದೆ. ಬಸವಕಲ್ಯಾಣಕ್ಕೆ ಸಿಎಂ ಭೇಟಿ ವೇಳೆ ಅನುಭವ ಮಂಟಪ ನಿರ್ಮಾಣದ ಬಗ್ಗೆ ಘೋಷಣೆ ಮಾಡಿದ್ದರಲ್ಲದೇ ಪ್ರಸಕ್ತ ಬಜೆಟ್‌ನಲ್ಲಿ ಸೇರಿಸಲು ಸಮ್ಮಿತಿಸಿದ್ದರು. 

ಆದರೆ, ಮುಂಗಡ ಪತ್ರದಲ್ಲಿ ಕಣ್ತಪ್ಪಿನಿಂದ ಸೇರ್ಪಡೆಯಾಗಿಲ್ಲ. ಈ ಕುರಿತು ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ಪ್ರಕಟಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಇದಕ್ಕೆ ಸಿಎಂಗೆ ಅಭಿನಂದಿಸುತ್ತೇನೆ.
ಈಶ್ವರ ಖಂಡ್ರೆ, ಉಸ್ತುವಾರಿ ಸಚಿವರು 

ಬಜೆಟ್‌ ಬಗ್ಗೆ ಇವರೇನಂತಾರೆ? ಕಾಂಗ್ರೆಸ್‌ ಮುಕ್ತ ರಾಜ್ಯಕ್ಕೆ ಮುನ್ನುಡಿ ರಾಜ್ಯ ಸರ್ಕಾರದ ಕೊನೆ ಬಜೆಟ್‌ನ್ನು ಮುಖ್ಯಮಂತ್ರಿಗಳು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ್ದಾರೆ. ಜನಸಾಮಾನ್ಯರನ್ನು ಮರಳು ಮಾಡುವುದೇ ಆಗಿದೆ. ಸಿದ್ದರಾಮಯ್ಯನವರಿಗೆ ರೈತರ ಮೇಲೆ ಎಂದೂ ಇರದ ಪ್ರೀತಿ ಇಂದು ಎದ್ದು ಕಾಣುತ್ತಿದೆ. ರೈತರ ಸಾಲ ಮನ್ನಾ 50 ಸಾವಿರದಿಂದ 1 ಲಕ್ಷಕ್ಕೆ ಘೋಷಿಸಿ ರೈತರಿಗೆ ಮತ್ತೆ ದೋಖಾ ಮಾಡಲು ಹೊರಟಿದ್ದಾರೆ. ಜಿಲ್ಲೆಯ ಬಿಎಸ್‌ ಎಸ್‌ಕೆ ಕಾರ್ಖಾನೆಯ ಪುನಶ್ಚೇತನಕ್ಕೆ 50 ಕೋಟಿ ರೂ. ಒದಗಿಸುವುದಾಗಿ ಸಿಎಂ, ಉಸ್ತುವಾರಿ ಸಚಿವರು ಮತ್ತು ಶಾಸಕರು ರೈತರಿಗೆ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸದೇ ರೈತರಿಗೆ ಅನ್ಯಾಯ ಮಾಡಲಾಗಿದೆ.

ಇದೊಂದು ಆರ್ಥಿಕ ದಿಕ್ಸೂಚಿ ಇಲ್ಲದ ಬಜೆಟ್‌. ಸರ್ಕಾರದ ಇಂದಿನ ನಿರಾಶಾದಾಯಕ ಬಜೆಟ್‌, ದುರಾಡಳಿತಕ್ಕೆ ಬರುವ
ಚುನಾವಣೆಯಲ್ಲಿ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್‌ ಮುಕ್ತ ಕರ್ನಾಟಕ್ಕೆ ಮುನ್ನುಡಿಯಾಗಲಿದೆ. 
 ಭಗವಂತ ಖೂಬಾ, ಸಂಸದ

ಹೈ.ಕ. ಭಾಗ ಕಡೆಗಣನೆ
ಪ್ರಸಕ್ತ ಸಾಲಿನ ಬಜೆಟ್‌ ಕೇವಲ ಬೆಂಗಳೂರು, ಮೈಸೂರು ಹಾಗೂ ಸುತ್ತಮುತ್ತಲಿನ ಭಾಗಕ್ಕೆ ಮಾತ್ರ ಸೀಮಿತವಾಗಿದ್ದು,
ಹೈದ್ರಾಬಾದ ಕರ್ನಾಟಕ ಭಾಗಕ್ಕೆ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಪಶು ಸಂಗೋಪನೆ, ಕೃಷಿ ಅಭಿವೃದ್ಧಿ, ಸಣ್ಣ ನಿರಾವರಿ, ಸಹಕಾರ ಇಲಾಖೆ, ಸಣ್ಣ ನೀರಾವರಿ, ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟು ರೈತರ ಕಬ್ಬು ಕಟಾವು ಯಂತ್ರಗಳಿಗೆ 20 ಕೋಟಿ ಅನುದಾನ, ರೈತರ ನೇರ ಆದಾಯ ಹೆಚ್ಚಿಸಲು ವಿವಿಧ ಯೋಜನೆಗಳು, ಶೇ. 3ರಂತೆ ಬಡ್ಡಿಗೆ 10 ಲಕ್ಷದ ವರೆಗೆ ರೈತರಿಗೆ ಸಾಲ ವಿತರಣೆ ಯೋಜನೆ ಜಾರಿಗೊಳಿಸಲಾಗಿದೆ. ಹಾವು ಕಚ್ಚಿ ಸಾವನ್ನಪ್ಪುವ ರೈತರಿಗೆ 2 ಲಕ್ಷದ ವರೆಗೆ ಪರಿಹಾರ, ಪಿಯುಸಿ, ಪದವಿ, ಸ್ನಾತ್ತಕೋತ್ತರ ವಿದ್ಯಾರ್ಥಿನಿಯರಿಗೆ ಪೂರ್ಣಶುಲ್ಕ ವಿನಾಯಿತಿ ಹೀಗೆ ಹತ್ತು ಹಲವಾರು ಯೋಜನೆಗಳು ಜಾರಿಗೆ ತಂದಿದ್ದು ಸ್ವಾಗತಾರ್ಹ. ಬೀದರ ಜಿಲ್ಲೆಗೆ 15 ಕೋಟಿ ವೆಚ್ಚದಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರ ಸ್ಥಾಪನೆ ಮಾತ್ರ ಘೋಷಣೆಯಾಗಿದ್ದು, ಬಿಎಸ್‌ ಎಸ್‌ಕೆ, ಬಿಕೆಡಿಬಿ ಮತ್ತು ಕೈಗಾರಿಕೊದ್ಯಮಿಗಳ ಅಭಿವೃದ್ಧಿಗೆ ಯಾವುದೇ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿರುವುದಿಲ್ಲ. ಹಾಗಾಗಿ ಇದು ರೈತರ ಪರವಾಗಿದ್ದು, ಉಳಿದ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ.
 ಬಿ.ಜಿ ಶೆಟಕಾರ, ಅಧ್ಯಕ್ಷರು, ವಾಣಿಜ್ಯೋದ್ಯಮ ಸಂಸ್ಥೆ

ಚುನಾವಣೆಯ ಪೂರ್ವ ತಯಾರಿ 
ಔರಾದ: ಮುಖ್ಯಮಂತ್ರಿ ಸಿದ್ದರಾಮಯ್ಯಮಂಡಿಸಿದ ಕೊನೆಯ ಬಜೆಟ್‌ ಮುಂಬರುವ ವಿಧಾನಸಭೆ ಚುನಾವಣೆಯ ಪೂರ್ವ
ತಯಾರಿಯಾಗಿದೆ. ರೈತರ ಸಾಲಮನ್ನಾ ಸೇರಿದಂತೆ ಯಾವವೊಂದೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಜನರ ನಿರಿಕ್ಷೆಯಂತೆ ಸಿಎಂ ಬಜೆಟ್‌ ಮಂಡಿಸಿಲ್ಲ. ಇದೊಂದು ನಾಮಕೆ ವಾಸ್ತೆ ಬಜೆಟ್‌ ಆಗಿದೆ. 
ಪ್ರಭು ಚವ್ಹಾಣ, ಶಾಸಕ

ಚುನಾವಣಾ ಗಿಮಿಕ್‌
ಭಾಲ್ಕಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್‌ ಚುನಾವಣಾ ಗಿಮಿಕ್‌ ಆಗಿದೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿ ಕಾರಕ್ಕೆ ಬರುವುದಿಲ್ಲ ಎಂಬುದನ್ನು ಅರಿತ ಸಿದ್ದರಾಮಯ್ಯನವರು, ರಾಜ್ಯದ ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಇಂಥಹ ಬಜೆಟ್‌ ಮಂಡನೆ ಮಾಡಿದ್ದಾರೆ. ಇದರಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿಪರ ಅಂಶ ಇಲ್ಲದೇ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ. 
ಪ್ರಕಾಶ ಖಂಡ್ರೆ, ಮಾಜಿ ಶಾಸಕರು ಭಾಲ್ಕಿ 

ಸರ್ಕಾರಿ ನೌಕರರಿಗೆ ಅಸಮಾಧಾನ
ಭಾಲ್ಕಿ:
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಲ್ಲಿ ಏಪ್ರಿಲ್‌ 30ರ ವರೆಗೆ ನೌಕರರನ್ನು ಕಾಯಲು ತಿಳಿಸಿ, ಅಡ್ಡಗೋಡೆ ಎಳೆದ ಬಜೆಟ್‌ ಇದಾಗಿದ್ದು, ಈ ಬಜೆಟ್‌ ಮಂಡನೆಯಿಂದ ರಾಜ್ಯ ಸರ್ಕಾರಿ ನೌಕರರು ತೀರಾ ಅಸಮಾಧಾನದಲ್ಲಿದ್ದಾರೆ. 
ಗಣಪತಿ ಬೋಚರೆ, ಮಾಧ್ಯಮಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರು 

ರೈತರಿಗೆ ನಿರಾಶಾದಾಯಕ ಬಜೆಟ್‌ನಿಂದ ರೈತರಿಗೆ ಯಾವುದೇ ಭಾಗ್ಯ ಸಿಕ್ಕಿಲ್ಲ. ಬಹು ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಶಾದಾಯಕ ಬಜೆಟ್‌ ಆಗಿದ್ದು, ಸಹಕಾರಿ ಬ್ಯಾಂಕ್‌ಗಳ ಎಲ್ಲಾ ರೈತರ ಸಾಲ ಮನ್ನಾ ಮಾಡದೇ ಇರುವುದು ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ರೈತರು ಬೆಳೆದ ಬೆಳೆ ಹಾನಿ ಕುರಿತು ವೈಜ್ಞಾನಿಕ ಅನುದಾನದ ವಿಶೇಷ ಪ್ಯಾಕೇಜ್‌ ನೀಡುವ ಭರವಸೆ ಹುಸಿಯಾಗಿದೆ. ಇದು ರೈತ ವಿರೋಧಿ  ಬಜೆಟ್‌ ಎಂದರೂ ತಪ್ಪಿಲ್ಲ. 
ಮಲ್ಲಿಕಾರ್ಜುನ ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ

ಕಷ್ಟದಲ್ಲಿರುವ ರೈತರ ಸಾಲಮನ್ನಾ ರಾಜ್ಯ ಬಜೆಟ್‌ ಉತ್ತಮವಾಗಿದ್ದು, ಕಷ್ಟದಲ್ಲಿರುವ ರೈತರ ಸಾಲಮನ್ನಾ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚು ಆದ್ಯತೆ ನೀಡಿರುವುದು ಉತ್ತಮವಾಗಿದೆ. ವೇದಿಕೆಯಲ್ಲಿ ರೈತರ ಬಗ್ಗೆ ಮಾತನಾಡುವ ಕೇಂದ್ರ ಬಿಜೆಪಿ ಸರ್ಕಾರ ರೈತರ ಬಗ್ಗೆ ಕಾಳಜಿ ಇದ್ದರೆ ಮೊದಲು ರಾಷ್ಟ್ರೀಕೃತ ಬ್ಯಾಂಕ್‌ಗಳ ರೈತರ ಸಾಲಮನ್ನಾ ಮಾಡಲಿ.
ವಿಜಯಸಿಂಗ್‌ ವಿಧಾನಪರಿಷತ ಸದಸ್ಯ, ಬೀದರ

ಕಾರ್ಯರೂಪಕ್ಕೆ ಬರಲಿ 
ಎರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಮುಖ್ಯಮಂತ್ರಿಗಳು ಮಂಡಿಸಿದ 13ನೇ ಬಜೆಟ್‌ನ ಯೋಜನೆಗಳು ಸರ್ಕಾರಿ ಕಚೇರಿಯಲ್ಲಿನ ಕಡತಗಳಿಗೆ ಸಿಮೀತವಾಗಿ ಉಳಿಯದೇ ತಕ್ಷಣದಿಂದ ಅವುಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಬೇಕು.
ಸಂತೋಷ ಚಾಂಡೇಶ್ವರೆ, ವ್ಯಾಪಾರಿ ಪ್ರಮುಖ

ಸರ್ವಾಂಗೀಣ ಅಭಿವೃದ್ಧಿ ದೃಷ್ಟಿ ಎಲ್ಲಾ ವರ್ಗದ ಜನರ ಹಾಗೂ ರೈತಸ್ನೇಹಿ ಬಜೆಟ್‌ ಮಂಡಿಸಿ ಸಿದ್ದರಾಮಯ್ಯ ಸರಕಾರ ಮಾದರಿ ಬಜೆಟ್‌ ಮಂಡಿಸಿದೆ. ಇದು ಅಭಿವೃದ್ಧಿಪರ ಜನ ಕಲ್ಯಾಣ ಬಜೆಟ್‌ ಎಂದು ಹೇಳಬಹುದು.
ಗೋವಿಂದರಾವ್‌ ಪಾಟೀಲ, ಅಧ್ಯಕ್ಷರು ಎಪಿಎಂಸಿ ಭಾಲ್ಕಿ

ರಾಜ್ಯದ ಎಲ್ಲರಿಗೂ ಉಪಯುಕ
ರಾಜ್ಯ ಬಜೆಟ್‌ ರಾಜ್ಯದ ಎಲ್ಲಾ ಜನರಿಗೆ ಉಪಯುಕ್ತವಾದದ್ದಾಗಿದ್ದು, ರೈತರು, ಸರಕಾರಿ ಕರ್ಮಚಾರಿಗಳು, ವಿಶೇಷವಾಗಿ ಬಡ ವರ್ಗದವರೂ ಸೇರಿದಂತೆ ಎಲ್ಲರಿಗೂ ಸಿದ್ದರಾಮಯ್ಯ ಅವರು ಬಂಪರ್‌ ಕೊಡುಗೆ ನೀಡಿದ್ದಾರೆ. 
ಶೀತಲ್‌ ಹಣಮಂತರಾವ್‌ ಚವ್ಹಾಣ, ಸ್ಥಾಯಿ ಸಮಿತಿ ಅಧ್ಯಕ್ಷರು

ಅನುಭವ ಮಂಟಪ ನಿರ್ಲಕ್ಷ್ಯ
ನೋವು ತಂದಿದೆ: ಖೂಬಾ ಬಸವಕಲ್ಯಾಣ: ಸಾಮಾಜಿಕ ಸಮಾನತೆಗಾಗಿ ಕ್ರಾಂತಿ ನಡೆಸಿದ ಶರಣರ ಕಾಯಕ ಭೂಮಿ
ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ರಾಜ್ಯ ಬಜೆಟ್‌ನಲ್ಲಿ ಅನುದಾನ ಕಲ್ಪಿಸದಿರುವುದು ಮನಸಿಗೆ ನೋವು ತಂದಿದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ತಿಳಿಸಿದ್ದಾರೆ.
 
12ನೇ ಶತಮಾನದಲ್ಲಿ ಶರಣರು ಸ್ಥಾಪಿಸಿದ ಅನುಭವ ಮಂಟಪ ಮರುನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ರಚಿಸಿದ
ತಜ್ಞರ ಸಮಿತಿಯಿಂದ ಅಧ್ಯಾಯನ ನಡೆಸಿ ಸರ್ಕಾರಕ್ಕೆ ಈಗಾಗಲೆ ವರದಿ ಸಲ್ಲಿಸಲಾಗಿದೆ. ಸುಮಾರು 600 ಕೋಟಿ
ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಯೋಜನೆ ಸಿದ್ಧಗೊಂಡಿದ್ದು, ಇದಕ್ಕೆ ಬರುವ ಬಜೆಟ್‌ನಲ್ಲಿ 150
ಕೋಟಿ ಅನುದಾನ ಕಲ್ಪಿಸಲಾಗುವುದು ಎಂದು ಈ ಹಿಂದೆ ಬಸವಕಲ್ಯಾಣಕ್ಕೆ ಬಂದಾಗ ಭರವಸೆ ನೀಡಿದ್ದಿರಿ. ಆದರೆ ಬಜೆಟ್‌ ನಲ್ಲಿ ಘೋಷಣೆ ಮಾಡದಿರುವುದು ಬಸವ ಭಕ್ತರ ಮನಸಿಗೆ ನೋವು ತರಿಸಿದೆ ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಖೂಬಾ ತಿಳಿಸಿದ್ದಾರೆ. ಬಜೆಟ್‌ ಮಂಡನೆ ನಂತರ ನಡೆಯುವ ಅಧಿವೇಶನದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಅನುದಾನ ಘೋಷಣೆ ಮಾಡಿ ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next