Advertisement

ಲೋಕಸಭೆ ಚುನಾವಣೆಗೆ ಯುವಶಕ್ತಿ ಸಕ್ರಿಯರಾಗಿ

09:37 AM Jan 26, 2019 | |

ಮಂಡ್ಯ: ದೇಶದ ಯುವ ಮತದಾರರಿಂದ ಮಾತ್ರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನ್ಸೂರ್‌ ಅಹಮದ್‌ ಜಮಾನ್‌ ತಿಳಿಸಿದರು.

Advertisement

ಶುಕ್ರವಾರ ನಗರದ ಅಂಬೇಡ್ಕರ್‌ ಭವನದಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 814.15 ಮಿಲಿಯನ್‌ ಮತದಾರರಿದ್ದಾರೆ.

25ರಿಂದ 35 ವರ್ಷ ವಯಸ್ಸಿನವರು ಶೇ.60ರಷ್ಟು ಮಂದಿ ಇದ್ದಾರೆ. ಅವರು ಮನಸ್ಸು ಮಾಡಿದರೆ ಹೊಸ ಪರಿವರ್ತನೆ ಸೃಷ್ಟಿಸಲು ಸಾಧ್ಯವಿದೆ. ಪ್ರತಿಯೊಬ್ಬ ಮತದಾರ ಮಾಡುವ ಮತಕ್ಕೆ ಮೌಲ್ಯವಿದೆ. ಯಾರೂ ಮತದಾನ ಪ್ರಕ್ರಿಯೆಯಿಂದ ವಿಮುಖ ರಾಗಬಾರದು. ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ದೃಷ್ಟಿಯಿಂದ ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.

ಸಮಗ್ರ ಬೆಳವಣಿಗೆ: ಮತದಾನ ಮಾಡುವ ಸಮಯದಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕು. ದೇಶದ ಅಭಿವೃದ್ಧಿ ದೃಷ್ಟಿಯಿಂದ ದೂರದೃಷ್ಟಿಯುಳ್ಳ ನಾಯಕರನ್ನು ಆಯ್ಕೆ ಮಾಡಬೇಕು. ಶಿಕ್ಷಣ, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಗ್ರ ಬೆಳವಣಿಗೆಯ ಆಲೋಚನೆ ಇರುವವರನ್ನು ಆಯ್ಕೆ ಮಾಡಿದಾಗ ದೇಶ ಪ್ರಗತಿ ಪಥದಲ್ಲಿ ಸಾಗುತ್ತದೆ. ಇದರಲ್ಲಿ ಯುವ ಮತದಾರರ ಪಾತ್ರ ಮಹತ್ವಪೂರ್ಣವಾದುದು ಎಂದು ತಿಳಿಸಿದರು.

ಹೆಸರು ದಾಖಲಿಸಿ: ಚುನಾವಣೆಗೆ ಸ್ಪರ್ಧಿಸುವವರು ಹಣ, ಹೆಂಡ, ಉಡುಗೊರೆಗಳ ಆಮಿಷ ತೋರಿಸ ಬಹುದು. ಅದಕ್ಕೆ ಮರುಳಾಗಬಾರದು. ಅದರಿಂದ ದೇಶದ ಮತ್ತು ನಾಡಿನ ಗೌರವ ಕಳೆಯಬಾರದು. ಜಾತಿ, ಮತ, ಧರ್ಮವನ್ನು ಮೀರಿ ಉತ್ತಮರನ್ನು ಆಯ್ಕೆ ಮಾಡುವುದಕ್ಕೆ ಪ್ರಾಮುಖ್ಯತೆ ನೀಡಬೇಕು. ಇದರಿಂದ ಮತದಾನಕ್ಕೆ ಹೆಚ್ಚಿನ ಮಹತ್ವ ಬರುತ್ತದೆ. ಹದಿನೆಂಟು ವರ್ಷ ತುಂಬಿದ ಯುವಕ-ಯುವತಿಯರು ಚುನಾವಣಾ ಅಧಿಕಾರಿ ಗಳನ್ನು ಸಂಪರ್ಕಿಸಿ ಮತ ಪಟ್ಟಿಯಲ್ಲಿ ಹೆಸರು ದಾಖಲಿಸಿಕೊಳ್ಳಬೇಕು. ಮತಪಟ್ಟಿಯಲ್ಲಿ ಹೆಸರು ದಾಖಲಿಸದೆ ನಿರ್ಲಕ್ಷ್ಯ ವಹಿಸಬಾರದು ಎಂದು ತಿಳಿಸಿದರು.

Advertisement

ಮತದಾನ ಹೆಚ್ಚಾಗಲಿ: ಮಂಡ್ಯ ಜಿಲ್ಲೆಯ ಮತದಾರರು ಅತ್ಯುತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವುದು ಕಳೆದ ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳ ಫ‌ಲಿತಾಂಶದಿಂದ ಗೊತ್ತಾಗಿದೆ. ಅದು ಇನ್ನೂ ಹೆಚ್ಚಾಗಬೇಕು. ಪರಿಪೂರ್ಣ ಮತದಾನ ನಡೆಸಿದಾಗ ಪ್ರಜಾಪ್ರಭುತ್ವ ಹೆಚ್ಚು ಬಲಯುತಗೊಳ್ಳುತ್ತದೆ. ಮತಪಟ್ಟಿಗೆ ಅರ್ಜಿ ನೋಂದಾಯಿಸಲು, ವಿಳಾಸ ಬದಲಾವಣೆ, ಮತಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗಿದ್ದಲ್ಲಿ ಅದನ್ನು ಮತ್ತೆ ಸೇರ್ಪಡೆ ಮಾಡುವುದಕ್ಕೆ ಎಲ್ಲ ರೀತಿಯ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಅದನ್ನು ಮತದಾರರು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸೆಕ್ಟರ್‌ ಅಧಿಕಾರಿಗಳನ್ನು ಗೌರವಿಸಲಾಯಿತು. ರಾಗರಂಜಿನಿ ಕಲಾತಂಡದವರು ಗಾಯನ, ಕಿರು ನಾಟಕದ ಮೂಲಕ ಮತದಾನದ ಮಹತ್ವ ಸಾರಿದರು. ಜಿಲ್ಲಾಧಿಕಾರಿ ಮಂಜುಶ್ರೀ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಯಾಲಕ್ಕೀಗೌಡ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌, ಜಿಲ್ಲಾ ಪಂಚಾಯಿತಿ ಯೋಜನಾಧಿ ಕಾರಿ ಗಣಪತಿ ಸಿ.ನಾಯಕ್‌, ಉಪ ವಿಭಾಗಾಧಿಕಾರಿ ಬಿ.ರಾಜೇಶ್‌, ತಹಶೀಲ್ದಾರ್‌ ಡಿ.ನಾಗೇಶ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next