Advertisement

ಉತ್ತರ ಧ್ರುವದಿಂ…ದಕ್ಷಿಣ ಧ್ರುವಕು…

02:35 AM Dec 12, 2018 | Karthik A |

ಉಡುಪಿ: ಇಲ್ಲಿ ಬಂದು ಮೂರು ದಿನಗಳಾಗಿವೆಯಷ್ಟೆ. ಇಲ್ಲಿನ ಊರು ಚೆಂದ, ಇಲ್ಲಿನ ತಿನಿಸು, ಸಂಸ್ಕೃತಿ, ಜನರೂ ಚೆಂದ ಅನಿಸುತ್ತಿದೆ. ಎಲ್ಲವನ್ನೂ ಖುಷಿಯಿಂದ ಅನುಭವಿಸುತ್ತಿದ್ದೇವೆ. ಇದು ಉಡುಪಿಯಲ್ಲಿ ಯುವ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಉತ್ತರಾಖಂಡದ ಯುವಕ-ಯುವತಿಯರ ಉತ್ಸಾಹ, ಪ್ರೀತಿಯ ಮಾತು.

Advertisement

ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಸಂಘಟನೆ ವತಿಯಿಂದ ಏಕ್‌ ಭಾರತ್‌ ಶ್ರೇಷ್ಠ್ ಭಾರತ್‌ ಪರಿಕಲ್ಪನೆಯ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಡಿ. 7ರಿಂದ 21ರ ವರೆಗೆ ಮೊದಲ ಬಾರಿಗೆ ಅಂತರ್‌ ರಾಜ್ಯ ಯುವ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿದ್ದು ಉತ್ತರಾಖಂಡ್‌ ಮತ್ತು ಕರ್ನಾಟಕದ ತಲಾ 50 ಮಂದಿ ಯುವಕ ಯುವತಿಯರು ಇದರಲ್ಲಿ ಪಾಲ್ಗೊಂಡಿದ್ದಾರೆ. ಬ್ರಹ್ಮಗಿರಿಯಲ್ಲಿರುವ ಪ್ರಗತಿ ಸೌಧದಲ್ಲಿ ಈ ಯುವಜನತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿನ ಸಂಸ್ಕೃತಿ, ಭಾಷೆ, ಆಚಾರ ವಿಚಾರವನ್ನು ಅರಿತು ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.


ಕನ್ನಡ ಕಲಿಯುತ್ತಿರುವ ದೀಪಕ್‌

ಉತ್ತರಾಖಂಡ್‌ ಪಿತೊರಾಗಾರ್‌ ಜಿಲ್ಲೆಯ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿ ದೀಪಕ್‌ ಕಾರ್ಕಿ ಮೂರು ದಿನಗಳಲ್ಲಿ ಕನ್ನಡ ಕಲಿಯುವ ಪ್ರಯತ್ನ ನಡೆಸಿದ್ದಾರೆ. ತನ್ನ ಗೆಳೆಯ ಧಾರವಾಡದ ಪ್ರಮೋದ್‌ ಕೆಂಗೇರಿ ಸಹಾಯದಿಂದ ತನ್ನ ಹೆಸರನ್ನು ವಾಕ್ಯ ರೂಪದಲ್ಲಿ ಹೇಳುವುದು, ತಾನು ಎಲ್ಲಿಯವನು ಎಂಬುದನ್ನು ವ್ಯಾಕರಣ ಬದ್ಧವಾಗಿ ಹೇಳುವುದು ಮೊದಲಾದ ವಾಕ್ಯಗಳನ್ನು ಕಲಿತಿದ್ದಾರೆ.

ಸೆಕೆಯೇ ಸಮಸ್ಯೆ
ಡೆಹ್ರಾಡೂನ್‌ನ ಶೀತಲ್‌ ಚೌಹಾಣ್‌ ಮತ್ತು ಆಕೆಯ ಕೆಲವು ಮಂದಿ ಗೆಳೆಯ, ಗೆಳತಿಯರಿಗೆ ಉಡುಪಿಯ ಬಿಸಿ ವಾತಾವರಣ ಕಷ್ಟವಾಗುತ್ತಿದೆ ಯಂತೆ. ‘ಇಲ್ಲಿನ ಇಡ್ಲಿ ಸಾಂಬಾರ್‌ ಮೊದಲ ಬಾರಿಗೆ ತಿನ್ನುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಕರ್ನಾಟಕದ ಸಿಂಧು, ಸುಪ್ರೀತಾ, ಪುನೀತ್‌ರಾಜ್‌, ಪುಷ್ಪರಾಣಿ ಮೊದಲಾದ ಉತ್ತಮ ಗೆಳೆಯ, ಗೆಳತಿಯರು ಸಿಕ್ಕಿದ್ದಾರೆ. ಇಲ್ಲಿನ ಜಾನಪದ ನೃತ್ಯ, ಹಾಡು ಕೂಡ ಇಷ್ಟ. ಜನರೂ ಪ್ರೀತಿ ತೋರಿಸು ತ್ತಾರೆ. ಆದರೆ ಸೆಕೆಯನ್ನು ಸಹಿಸುವುದು ಸ್ವಲ್ಪ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಶೀತಲ್‌. ಈಕೆ ಸಮಾಜಶಾಸ್ತ್ರ ಎಂಎ ಪ್ರಥಮ ವರ್ಷದ ವಿದ್ಯಾರ್ಥಿನಿ. 


ಶಿಕ್ಷಣ ಕಡಿಮೆ, ಬಡತನ ಹೆಚ್ಚು

ನೆಹರೂ ಯುವಕೇಂದ್ರದ ಕಾರ್ಯಕರ್ತನಾಗಿರುವ ಉತ್ತರಾಖಂಡ್‌ನ‌ ತೆಹ್ರಿಗರ್‌ವಾಲ್‌ನ ಸಿದ್ಧಾರ್ಥ್ ಕರ್ನಾಟಕದ ಶಿಕ್ಷಣ ಪ್ರಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಾನು ಇರುವುದು ಒಂದು ಹಳ್ಳಿಯಲ್ಲಿ. ಅಲ್ಲಿ ಇತ್ತೀಚೆಗೆ ರಸ್ತೆ, ನೀರು ಮೊದಲಾದ ಸೌಲಭ್ಯಗಳಾಗಿವೆ. ಆದರೆ ಬಡತನದ ಕಾರಣ ಶಿಕ್ಷಣದ ಪ್ರಮಾಣ ಕಡಿಮೆಯಾಗಿದೆ. ಕೂಲಿಯೂ ಕಡಿಮೆ. ನಾನು ಪ್ರಧಾನಮಂತ್ರಿ ಕೌಶಲಾಭಿವೃದ್ಧಿ ಯೋಜನೆಯಡಿ ಬಿಪಿಒ ಕಾಲ್‌ಸೆಂಟರ್‌ನ್ನು ನಡೆಸುತ್ತಿದ್ದೇನೆ. ಇಂತಹ ಚಟುವಟಿಕೆ, ಶಿಬಿರಗಳೆಂದರೆ ನನಗಿಷ್ಟ ಎಂದು ಸಿದ್ಧಾರ್ಥ್ ಹೇಳುತ್ತಾರೆ.

Advertisement

ಭಾಷೆ ಗೋಡೆಯಲ್ಲ
ನಾವು ಪರಸ್ಪರ ಬೆಸೆಯಲು ನಮಗೆ ಭಾಷೆ ಗೋಡೆಯಾಗುವುದಿಲ್ಲ. ಈಗ ಹಿಂದಿ-ಇಂಗ್ಲಿಷ್‌ನಲ್ಲಿ ಸಂವಹನ ನಡೆಸುತ್ತಿದ್ದೇವೆ. ಕನ್ನಡ ಭಾಷೆ ಕಲಿಯುವ ಆಸಕ್ತಿ ನಮಗಿದೆ. ಕರ್ನಾಟಕದ ಗೆಳೆಯರು ಹೇಳಿಕೊಡುತ್ತಿದ್ದಾರೆ. ಇಲ್ಲಿನ ಜನ, ಸಂಸ್ಕೃತಿ ಎಲ್ಲವನ್ನೂ ತಿಳಿದು ನಮ್ಮೂರಿಗೆ ಹೋಗುವ ಆಸೆ ನಮ್ಮದು. 
– ಸಿದ್ಧಾರ್ಥ್, ಉತ್ತರಾಖಂಡ

ಆಸಕ್ತಿಯಿಂದ ಕೇಳುತ್ತಾರೆ
ಕೆಲವು ವಾಕ್ಯಗಳನ್ನು ಕಲಿತಿದ್ದಾರೆ. ನಮಗೂ ಅವರ ಭಾಷೆ ಕಲಿಯುವ, ಅಲ್ಲಿನ ಜಾನಪದ ಸಂಸ್ಕೃತಿ ತಿಳಿಯುವ ಅವಕಾಶವಾಗಿದೆ. ಮುಂದೆ ಉತ್ತರಾಖಂಡ್‌ಗೆ ತೆರಳುವ ಅವಕಾಶ ದೊರೆತರೆ ಅಲ್ಲಿ ಖುದ್ದಾಗಿ ನೋಡಿ ತಿಳಿಯಬಹುದು. ಈಗ ಉತ್ತರಾಖಂಡ್‌ನ‌ ಯುವಕ-ಯುವತಿಯರು ಇಲ್ಲಿನ ಪ್ರತಿಯೊಂದು ಆಹಾರ ವಸ್ತು, ಇತರ ವಸ್ತು, ಕ್ರಮಗಳ ಬಗ್ಗೆ ಆಸಕ್ತಿಯಿಂದ ಕೇಳುತ್ತಾರೆ. 
– ಪ್ರಮೋದ್‌ ಕೆಂಗೇರಿ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next