Advertisement

ಬಿಕೆಐಟಿಯಲ್ಲಿ ಯುವಮೇಳ ಆಯೋಜನೆ

01:50 PM Oct 14, 2018 | Team Udayavani |

ಭಾಲ್ಕಿ: ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಬಿಕೆಐಟಿ ಕಾಲೇಜಿನಲ್ಲಿ ವಿಟಿಯು ಯುವಮೇಳ ಜನನಿ-2018, ನ.2ರಿಂದ ನ.4ರ ವರೆಗೆ ನಡೆಯಲಿದೆ ಎಂದು ಪ್ರಾಂಶುಪಾಲ ಡಾ| ನಾಗಶೆಟ್ಟಿ ಬಿರಾದಾರ ಹೇಳಿದರು.

Advertisement

ಪಟ್ಟಣದ ಭೀಮಣ್ಣಾ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಜನನಿ-2018 ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಮಟ್ಟದ ಬೃಹತ್‌ ಮೇಳ ಇದಾಗಿದ್ದು, ಹೈದ್ರಾಬಾದ ಕರ್ನಾಟಕ ಭಾಗದಲ್ಲಿಯೇ ಪ್ರಥಮ ಯುವ ಮೇಳವಾಗಿದೆ ಎಂದರು.

ಬಿಕೆಐಟಿ ಕಾಲೇಜಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಿಂದ ವಿಟಿಯು ಯುವ ಮೇಳವನ್ನು ನವೆಂಬರ್‌ ಪ್ರಥಮ ವಾರದಲ್ಲಿ ಆಯೋಜಿಸಲಾಗಿದೆ. ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಮೊದಲ ಸಲ ಇಂತಹ ಬೃಹತ್‌ ಮೇಳ ಆಯೋಜಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬಿಕೆಐಟಿ ಮಹಾವಿದ್ಯಾಲವನ್ನು ಆಯ್ಕೆ ಮಾಡಿದ್ದು ಹೆಮ್ಮೆಯ ವಿಷಯ. ಈ ಭಾಗದ ವಿದ್ಯಾರ್ಥಿಗಳು ಹಿಂದುಳಿದವರು ಎನ್ನುವ ಭಾವನೆ ಕಳಚಿ ತಮ್ಮ ಪ್ರತಿಭೆ ಅನಾವರಣಗೊಳಿಸಲು ಇದೊಂದು ಸುವರ್ಣ ಅವಕಾಶವಾಗಿದೆ ಎಂದರು. 

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕುಲಪತಿ ಡಾ| ಕರಿಸಿದ್ದಪ್ಪ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕುಲಸಚಿವರಾದ ಡಾ| ಎಚ್‌. ಎನ್‌. ಜಗನ್ನಾಥರೆಡ್ಡಿ, ಡಾ|ಸತೀಶ ಅಣ್ಣಿಗೇರಿ, ವಿಟಿಯು ಕಲಬುರಗಿ ಪ್ರಾದೇಶಿಕ ಅಧಿಕಾರಿಗಳಾದ ಡಾ| ಬಸವರಾಜ ಗಾದಗೆ ಹಾಗೂ ವಿಶ್ವವಿದ್ಯಾಲಯದ ಹಲವು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಈ ಮೇಳದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿ ಬರುವ ರಾಜ್ಯದ ಸುಮಾರು 200 ತಾಂತ್ರಿಕ ಮಹಾವಿದ್ಯಾಲಯಗಳಿಂದ 3000 ವಿದ್ಯಾರ್ಥಿಗಳು ಹಾಗೂ ಸುಮಾರು 500 ಸಿಬ್ಬಂದಿ, ನಮ್ಮ ಮಹಾವಿದ್ಯಾಲದ 3000 ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 6000ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಲ್ಲ ವಿದ್ಯಾರ್ಥಿಗಳಿಗೆ, ಸಿಬ್ಬಂದಿ ವರ್ಗದವರಿಗೆ ಹಾಗೂ ಅತಿಥಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಪೂರೈಸಲು ಈಗಿನಂದಲೇ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

ವಿಟಿಯು ಕಲಬುರಗಿಯ ಪ್ರಾದೇಶಿಕ ನಿರ್ದೇಶಕ ಡಾ| ಬಸವರಾಜ ಗಾದಗೆ ಮಾತನಾಡಿ, ಮೂರು ದಿನಗಳ ಈ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಚಿವರಾದ ಪಿಯಾಂಕ್‌ ಖರ್ಗೆ, ದಿನೇಶ ಗುಂಡೂರಾವ್‌, ಜಯಮಾಲಾ, ಹಾಗೂ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಅವರು ಆಗಮಿಸಲಿದ್ದಾರೆ ಎಂದು ಹೇಳಿದರು.

ಉಪ ಪ್ರಾಂಶುಪಾಲ ಪ್ರೊ| ಪಿ.ಎನ್‌.ದಿವಾಕರ ಮಾತನಾಡಿ, ಜನನಿ-2018 ಯುವಮೇಳದಲ್ಲಿ ಸುಮಾರು 25 ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು. ಇದರ ಜೊತೆಗೆ ಮೂರು ದಿನಗಳ ಕಾಲ ಸಾಯಂಕಾಲ ವಿವಿಧ ಕಲಾ ಸಂಘಗಳಾದ ನಾಟ್ಯಾಂಜಲಿ ಕಲಾ ಸಂಘ ಬೆಂಗಳೂರು, ಬೆಳಗು ಬೀದರ, ಚಲನ ಚಿತ್ರ ಸಂಗೀತ ನಿರ್ದೇಶಕರಾದ ಶ್ರೀಸಾಯಿ ಸಮರ್ಥ ಅವರ ತಂಡದಿಂದ ಸಂಗೀತ ಕಾರ್ಯಕ್ರಮ, ಪ್ರಹ್ಲಾದ ಆಚಾರ್ಯ ಅವರಿಂದ ಜಾದೂ ಪ್ರರ್ದಶನ ಹಾಗೂ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದೇವೇಳೆ ಮಹಾವಿದ್ಯಾಲಯದಲ್ಕಿ ಐಎಸ್‌ ಟಿಇ ದೆಹಲಿ ಮತ್ತು ಕರ್ನಾಟಕ ಹಾಗೂ ಬಿಕೆಐಟಿ ಕಾಲೇಜಿನ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಐಎಸ್‌ಟಿಇ ಬೋಧಕರ ಸಮಾವೇಶ ಆಯೋಜಿಸಲಾಗಿದ್ದು. ಈ ಕಾರ್ಯಕ್ರಮದಲ್ಲಿಯೂ ಕೂಡ ದೇಶದ ವಿವಿಧ ಭಾಗಗಳಿಂದ ಐಎಸ್‌ಟಿಇ ಸದಸ್ಯರು ಆಗಮಿಸಿ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು. ಯುವ ಮೇಳದ ಸಂಯೋಜಕ ಡಾ| ಸಂಜಯ ಗೌರೆ, ಡಾ|ಬಿ. ಸೂರ್ಯಕಾಂತ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next