Advertisement

ಲಾಕ್‌ಡೌನ್‌ನಲ್ಲಿ ಅರಳಿದ ಡಾರ್ಬಿ ಯುಕೆ ಕನ್ನಡ ಪ್ರತಿಭೆಗಳು

01:07 PM Apr 14, 2021 | Team Udayavani |

ಕೋವಿಡ್ ಮಹಾಮಾರಿಯು ಮನುಕುಲವನ್ನು ಆವರಿಸಿಕೊಂಡು ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡು ದೈನಂದಿನ ಬದುಕಿನ ಮೇಲೆ ಬಹಳಷ್ಟು ಬದಲಾವಣೆಗಳನ್ನು ಹೇರಿ ಮನುಕುಲವನ್ನು ಕಟ್ಟಿಹಾಕಿದೆ. ಇತ್ತೀಚಿಗೆ ಲಸಿಕೆಗಳು ಹೊರಬಂದಿವೆ ಎನ್ನುವುದು ಸಮಾಧಾನಕರ ಸಂಗತಿಯಾದರೂ ಆತಂಕ ಇನ್ನೂ ದೂರವಾಗಿಲ್ಲ.

Advertisement

ಯು.ಕೆ.ಯಲ್ಲಿ ನೆಲೆಸಿರುವ ಕನ್ನಡಿಗರ ಮಟ್ಟಿಗೆ ಹೇಳುವುದಾದರೆ ಈ ಕೋವಿಡ್ ಸಂಕಷ್ಟದ ನಡುವೆ, ಸರಕಾರದ ಲಾಕ್‌ಡೌನ್‌, ಟಿಯರ್‌ ವ್ಯವಸ್ಥೆಯ ನಿಬಂಧನೆಗಳಿಂದಾಗಿ ಎಲ್ಲರಂತೆ ಕಷ್ಟಗಳನ್ನು ಎದುರಿಸಬೇಕಾಯಿತು.

ಕಳೆದ ವರ್ಷದಲ್ಲಿ  ಅನೇಕ ಹಬ್ಬಗಳು, ಸಾಮಾಜಿಕ ಸಮಾರಂಭಗಳು, ಸಮುದಾಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಮೇಳಗಳು.. ಹೀಗೆ ಎಲ್ಲವನ್ನೂ ತಡೆಹಿಡಿದು ಮನೆಯ ನಾಲ್ಕು ಗೋಡೆಗಳ ಮಧ್ಯೆ ಪಂಜರದ ಗಿಳಿಗಳಂತೆ ಬಂಧಿಗಳಾಗಿ ಹೊರ ಜಗತ್ತಿನ ವ್ಯವಹಾರ ಗಣನೀಯವಾಗಿ ಕಡಿಮೆಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ನಡುವೆ ಮಕ್ಕಳ ಮೇಲೆ ಆಗಿರುವ ಮಾನಸಿಕ ಪರಿಣಾಮಗಳನ್ನು ನಾವು ಕಡೆಗಣಿಸುವ ಹಾಗಿಲ್ಲ.

ಈ ಎಲ್ಲ ನಕಾರಾತ್ಮಕ ಬೆಳವಣಿಗೆಗಳ ಮಧ್ಯೆಯೂ ಸಕಾರಾತ್ಮಕ ಚಿಂತನೆಯನ್ನು ಮಾಡುವುದು ಮತ್ತು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವುದು ಪ್ರಶಂಸನೀಯ ವಿಷಯ.

ಇದಕ್ಕೆ ಹಿಡಿದ ಕನ್ನಡಿಯಂತೆ ಯುಕೆಯ ಡಾರ್ಬಿ ಕನ್ನಡಿಗರು ಮತ್ತು “ಎಚ್‌ಎನ್‌ಬಿಸಿ ಕನ್ನಡ’ ಅಂತರ್ಜಾಲ ವಾಹಿನಿಯ ಸಹಯೋಗದೊಂದಿಗೆ 2021ರಲ್ಲಿ ಮೂಡಿ ಬಂದ “ಚಿಣ್ಣರ ಅರಳು ಪ್ರತಿಭೆ’ ಕಾರ್ಯಕ್ರಮ ಬಹಳಷ್ಟು ಜನರ ಪ್ರೀತಿಗೆ ಪಾತ್ರವಾಗಿ ಯಶಸ್ವಿಯಾಯಿತು.

Advertisement

ಎಲ್ಲ  ಮಕ್ಕಳಲ್ಲೂ ಒಂದಲ್ಲ  ಒಂದು ಪ್ರತಿಭೆ ಸುಪ್ತವಾಗಿ ಅಡಗಿರುತ್ತದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಿ ಬೆಳೆಸಬೇಕಾದದ್ದು ಪೋಷಕರ ಮತ್ತು ಸಮುದಾಯದ ಕರ್ತವ್ಯವಾಗಿರುತ್ತದೆ.

ಪರಿಸ್ಥಿತಿ ಏನೇ ಇರಲಿ, ಲಾಕ್‌ಡೌನ್‌ ಅಂತಹ ಸಂದರ್ಭಗಳೇ ಎದುರಾದರೂ ಬೆಳೆಯುವ ಮಕ್ಕಳಿಗೆ ಅವರ ಪ್ರತಿಭೆಗಳನ್ನು ಅರಳಿಸಲು, ಜನರ ಮುಂದೆ ಅನಾವರಣಗೊಳಿಸಲು ತಮ್ಮ ಮನೆಯಲ್ಲೇ ಒಂದು ಪುಟ್ಟ ವೇದಿಕೆಯನ್ನು ಕೊಟ್ಟು ಅವರ ಪಠ್ಯೇತರ ಚಟುವಟಿಕೆಗಳನ್ನು ಬೆಳೆಸಬೇಕಾದದ್ದು ಎಲ್ಲ ತಂದೆ ತಾಯಿಯರ ಜವಾಬ್ದಾರಿ.

ಇದಕ್ಕೊಂದು ನಿದರ್ಶನ ವೆಂಬಂತೆ “ಚಿಣ್ಣರ ಅರಳು ಪ್ರತಿಭೆ’ ಕಾರ್ಯಕ್ರಮ ಮೂಡಿಬಂದು ಬಹಳಷ್ಟು ವೀಕ್ಷಕರ ಗಮನ ಸೆಳೆಯಿತು. ಈ ಕಾರ್ಯಕ್ರಮದಲ್ಲಿ ಮೂರು ವರ್ಷಗಳಿಂದ ಹನ್ನೆರಡು ವರ್ಷಗಳ ಮಕ್ಕಳು ಭಾಗವಹಿಸಿ ಗಾಯನ, ನೃತ್ಯ, ಅಭಿನಯ, ವಾದ್ಯ ವಾದನ ಹೀಗೆ ಅನೇಕ ಕಲೆಗಳನ್ನು ಪ್ರದರ್ಶಿಸಿ ವೀಕ್ಷಕರ ಪ್ರಶಂಸೆಗೆ ಪಾತ್ರರಾದರು.

ನಮ್ಮ ಭಾರತೀಯ ಸಂಸ್ಕೃತಿಯ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಹೀಗೆ ಅನೇಕ ಕಾರ್ಯಕ್ರಮಗಳ ಮೂಲಕ ವೇದಿಕೆ ಕಂಗೊಳಿಸಿತ್ತು. ಈ ಪುಟ್ಟ ಮಕ್ಕಳ ಅಜ್ಜ ಅಜ್ಜಿಯಂದಿರು ಹಾಗೂ ಸಂಬಂಧಿಕರು ದೂರದ ಭಾರತದಿಂದಲೇ ನೋಡಿ ಅನಂದಿಸಿ ಆಶ್ಚರ್ಯ ಚಕಿತರಾಗಿದ್ದೂ ಹೌದು.

ಈ ಕಾರ್ಯಕ್ರಮದ ವಿಶೇಷವೆಂಬಂತೆ ಮಕ್ಕಳು ಸಂಸ್ಕೃತ ದ ಶ್ಲೋಕಗಳನ್ನು ಪಠಣ ಮಾಡಿ ಅದರ ಅರ್ಥಗಳನ್ನು ವಿವರಿಸಿದ್ದು ಬಹಳಷ್ಟು ಪ್ರಶಂಸೆಗೆ ಒಳಗಾಗಿತ್ತು.

ಒಟ್ಟಿನಲ್ಲಿ ಈ ಕಾರ್ಯಕ್ರಮ ವೀಕ್ಷಕರಿಗೆ ಮನರಂಜನೆಯನ್ನು ನೀಡಿದ್ದಲ್ಲದೇ ಮಕ್ಕಳ ಪ್ರತಿಭೆಯನ್ನು ಅರಳಿಸಲು ಪೋಷಕರಿಗೆ ಪ್ರೇರಣೆಯನ್ನು ನೀಡಿ ಗಮನಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next