Advertisement

371 (ಜೆ) ಕೊಡುಗೆ ಬಗ್ಗೆ ಯುವಕರಿಗೆ ಅರಿವಿಲ್ಲ

05:11 PM Apr 08, 2018 | Team Udayavani |

ರಾಯಚೂರು: ಈ ಭಾಗದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿದ 371 (ಜೆ) ವಿಶೇಷ ಸ್ಥಾನಮಾನದ ಕೊಡುಗೆ ಬಗ್ಗೆ ಸಾಕಷ್ಟು ಯುವಕರಿಗೆ ಸೂಕ್ತ ಮಾಹಿತಿಯೇ ಇಲ್ಲ. ಅದೊಂದು ಅವಕಾಶವಾಗಿದ್ದು, ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಲಬುರಗಿ ವಿವಿ ಉಪಕುಲಪತಿ ಎಸ್‌.ಆರ್‌.ನಿರಂಜನ ಹೇಳಿದರು.

Advertisement

ಥಾಮಸ್‌ ಪದವಿ ಕಾಲೇಜಿನಿಂದ ಶನಿವಾರ ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜಿಸಿದ್ದ ಹೈದರಾಬಾದ್‌ ಕರ್ನಾಟಕ ಭಾಗದ ಸಂವಿಧಾನದ 371(ಜೆ) ಕಾಯ್ದೆಯ ಅವಕಾಶಗಳು ಹಾಗೂ ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ವಿಶೇಷ ಸ್ಥಾನಮಾನ ನಿಮಗೆ ಸಿಕ್ಕ ಸೌಲಭ್ಯವಲ್ಲ; ಅದು ನಿಮ್ಮ ಹಕ್ಕು. ಅವಕಾಶಗಳು ಹುಡುಕಿಕೊಂಡು ಬರುವ ಕಾಲ ಇದಲ್ಲ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವವನೇ ಬುದ್ಧಿವಂತ. ಈ ಸೌಲಭ್ಯದ ಬಗ್ಗೆ ಮೊದಲು ಅರಿತುಕೊಳ್ಳಬೇಕು. ಹೈ-ಕ ಭಾಗದ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಮೀಸಲಿದ್ದರೂ ಪಡೆಯುತ್ತಿಲ್ಲ. ಪಕ್ಕದ ಜಿಲ್ಲೆಗಳಲ್ಲೇ ಶಿಕ್ಷಣ ಪಡೆಯದವರು ವಿದೇಶಕ್ಕೆ ಹೋಗಿ ಓದುವುದು ಯಾವಾಗ ಎಂದು ಪ್ರಶ್ನಿಸಿದರು.

ಜಾಗತಿಕ ಮಟ್ಟದ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಕೆಎಎಸ್‌, ಐಎಎಸ್‌ನಂಥ ಹುದ್ದೆ ಅಲಂಕರಿಸಬೇಕಾದರೆ ಸತತ ಅಧ್ಯಯನ ಬೇಕು. ದಿನಕ್ಕೆ 18 ತಾಸು ಅಧ್ಯಯನ ಮಾಡಿದರೂ ಕಡಿಮೆಯೇ. ಮೊದಲು ಗುಣಮಟ್ಟದ ಶಿಕ್ಷಣ ಪಡೆಯಿರಿ. ಆಗ 371(ಜೆ) ಸೌಲಭ್ಯ ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಾಗಲಿದೆ ಎಂದರು.

ಸಂವಿಧಾನ 371(ಜೆ) ಕಾಯ್ದೆಯ ಅವಕಾಶಗಳು ಹಾಗೂ ಸವಾಲುಗಳು ಎಂಬ ವಿಷಯ ಕುರಿತು ಪ್ರೊ| ಸಂಗೀತಾ ಕಟ್ಟಿಮನಿ ಮಾತನಾಡಿ, ಮುಂಚೆ ಹೈ-ಕ ಭಾಗದವರಿಗೆ ಅವಕಾಶಗಳೇ ಇಲ್ಲ ಎನ್ನುತ್ತಿದ್ದರು. ಈಗ ಹೈ-ಕ ಭಾಗದಲ್ಲೇ ಅವಕಾಶಗಳಿವೆ ಎಂಬುದು ಸತ್ಯ. ಹೈ-ಕ ಭಾಗದಲ್ಲಿ ಸಂಪನ್ಮೂಲಗಳು ಇದ್ದರೂ ಈ ಭಾಗ ಹಿಂದುಳಿದಿದೆ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಸಾಕಷ್ಟು ವಿಳಂಬವಾಗಿದೆ. ಆದರೆ, ಅಂದು ಸಿದ್ಧಪಡಿಸಿದ ವರದಿ ಪ್ರಕಾರ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಪುನರ್‌ ಪರಿಶೀಲನೆಗಾಗಿ ವರದಿಯಲ್ಲಿ ಅಧ್ಯಯನ ಮಾಡಬೇಕಿದೆ ಎಂದರು.

Advertisement

ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೋಲಿಸಿದರೆ ಹೈ-ಕ ಭಾಗದ ಜಿಲ್ಲೆಗಳು ಹಿಂದುಳಿದಿವೆ. ಜಿಲ್ಲೆಗಳಿಗೆ ಹೋಲಿಸಿದರೆ
ತಾಲೂಕು, ಗ್ರಾಮೀಣ ಭಾಗದಲ್ಲಿ ಸಾಕ್ಷರತೆ ಪ್ರಮಾಣ ಸಾಕಷ್ಟು ಹಿಂದುಳಿದಿದೆ. ಈ ಭಾಗದ ಜನರಿಗೆ ಅನುಕೂಲವಾಗುವ ಸಂವಿಧಾನ 371(ಜೆ) ಪ್ರಮಾಣಪತ್ರ ಪಡೆಯಬೇಕು. ಯಾವ ಸಂದರ್ಭದಲ್ಲಾದರೂ ಬಳಕೆ ಆಗಬಹುದು ಎಂದು ತಿಳಿಸಿದರು.

ರಾಯಚೂರು ವಿವಿ ವಿಶೇಷಾಧಿಕಾರಿ ಪ್ರೊ| ಮುಜಾಫರ್‌ ಅಸಾದಿ, ಗುಲ್ಬರ್ಗ ವಿವಿ ಸಿಂಡಿಕೇಟ್‌ ಸದಸ್ಯ ವಿಜಯ ಭಾಸ್ಕರ್‌ ಮಾತನಾಡಿದರು. ಕಾಲೇಜಿನ ನಿರ್ದೇಶಕ ಥಾಮಸ್‌ ಬೆಂಜಮಿನ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ರಜಾಕ್‌ ಉಸ್ತಾದ್‌, ಮಾಜಿ ಸಿಂಡಿಕೇಟ್‌ ಸದಸ್ಯೆ ಅಕ್ಕಮಹಾದೇವಿ, ವಿಚಾರ ಸಂಕಿರಣದ ನಿರ್ದೇಶಕ ಡಾ| ತಿಪ್ಪಣ್ಣ ಕಲಮನಿ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next