Advertisement

ಕೊಠಡಿಯಲ್ಲಿ ಯುವತಿಯನ್ನು ಕೂಡಿಹಾಕಿ ಹಲ್ಲೆ, ಕಿರುಕುಳ

10:01 AM Dec 06, 2019 | sudhir |

ಬೆಂಗಳೂರು:ಗೆಳತಿಯನ್ನು ಮಾತನಾಡುವ ನೆಪದಲ್ಲಿ ಹೋಟೆಲ್‌ಗೆ ಕರೆದೊಯ್ದು ರಾತ್ರಿಯಿಡೀ ಕೂಡಿ ಹಾಕಿ ಲೈಂಗಿಕ ಕಿರುಕುಳ,ಹಲ್ಲೆ ನಡೆಸಿದ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.

Advertisement

ಕಿರಣ್‌ ಬಿಶ್ವಾಕರ್ಮ (31) ಬಂಧಿತ.ಡಿ.2ರಂದು ಖಾಸಗಿ ಕಂಪೆನಿ ಉದ್ಯೋಗಿ 29 ವರ್ಷದ ಸಂತ್ರಸ್ತ ಯುವತಿ ನೀಡಿರುವ ದೂರಿನ ಅನ್ವಯ ಆರೋಪಿ ಕಿರಣ್‌ ಬಿಶ್ವಾಕರ್ಮನನ್ನು ಬಂಧಿಸಿ ನ್ಯಾಯಾಂ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ಯುವತಿ ಹಾಗೂ ಕಿರಣ್‌ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು ಒಟ್ಟಿಗೆಯೂ ವಾಸಿಸುತ್ತಿದ್ದರು. ಆತನ ವರ್ತನೆ ಸರಿಯಿಲ್ಲದ ಕಾರಣ ಸಂತ್ರಸ್ತೆ ಆರು ತಿಂಗಳ ಹಿಂದೆ ಆತನಿಂದ ದೂರವಾಗಿದ್ದು ಪಿಜಿಯೊಂದರಲ್ಲಿ ವಾಸವಿದ್ದರು. ಹೀಗಿದ್ದರೂ, ಕಿರಣ್‌ ಆಕೆಯ ಹಿಂದೆ ಬಿದ್ದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಿಕ್ಕಾಗ ಹಲ್ಲೆ ನಡೆಸುತ್ತಿದ್ದ.

ನ.26ರಂದು ರಂದು ಮಧ್ಯಾಹ್ನ ಆಕೆ ವಾಸವಿದ್ದ ಪಿಜಿ ಬಳಿ ತೆರಳಿ ಗಲಾಟೆ ಮಾಡಿದ್ದಾನೆ. ಆಕೆ ಹೊರಗಡೆ ಬರುತ್ತಿದ್ದಂತೆ ರಸ್ತೆಯಲ್ಲಿಯೇ ಹಲ್ಲೆ ನಡೆಸಿದ್ದಾನೆ. ಈತನ ಪುಂಡಾಟಿಕೆಗೆ ಹೆದರಿ ಆಕೆ ಪಿಜಿಯೊಳಗೆ ಓಡಿಹೋಗಿದ್ದಾರೆ.

ಈ ಘಟನೆ ನಡೆದ ಮೇಲೆ ಕಿರಣ್‌ ಆಕೆಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಆಕೆ ಸ್ವೀಕರಿಸಿಲ್ಲ. ರಾತ್ರಿ ಕರೆ ಸ್ವೀಕರಿಸಿದಾಗ, ಇನ್ನು ಮುಂದೆ ಕಿರುಕುಳ ನೀಡುವುದಿಲ್ಲ ಕಡೆಯದಾಗಿ ಭೇಟಿಯಾಗಬೇಕು ಎಂದಿದ್ದ. ಇದಕ್ಕೆ ಒಪ್ಪಿ ಹೊರಗೆ ಬಂದ ಆಕೆಯನ್ನು ಮಡಿವಾಳದ ಹೋಟೆಲ್‌ವೊಂದಕ್ಕೆ ಕರೆದೊಯ್ದು ಕೊಠಡಿಯಲ್ಲಿ ಕೂಡಿಹಾಕಿದ್ದಾನೆ.

Advertisement

ರಾತ್ರಿ ಇಡೀ ದೈಹಿಕ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ, ಸಹಾಯಕ್ಕೆ ಕಿರುಚಿಕೊಳ್ಳಲು ಯತ್ನಿಸಿದಾಗ ಬಾಯಿಮುಚ್ಚಿ ಹೆದರಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರಣ್‌ ಹಿಂಸೆಯಿಂದ ಆತಂಕಕ್ಕೊಳಗಾಗಿ ಆತ ನಿದ್ರೆಗೆ ಜಾರಿದ ಬಳಿಕ ಮುಂಜಾನೆ ಕೊಠಡಿಯಿಂದ ತಪ್ಪಿಸಿಕೊಂಡು ಬಂದು ಹೈದ್ರಾಬಾದ್‌ನಲ್ಲಿರುವ ಸಹೋದರಿ ಮನೆಗೆ ಹೋಗಿದ್ದೆ. ಬಳಿಕ ಆಕೆಯ ಜತೆ ಚರ್ಚೆ ಮಾಡಿ ದೂರು ನೀಡುತ್ತಿರುವುದಾಗಿ ಸಂತ್ರಸ್ತೆ ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next