ಹೊಸದಿಲ್ಲಿ: ಧಾರವಾಡದಲ್ಲಿ ರವಿವಾರ ನಡೆದಿದ್ದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಇದೀಗ ತಿರುಗೇಟು ನೀಡಿದೆ. ಪ್ರಜಾಪ್ರಭುತ್ವವು ‘ಕ್ರೂರ ದಾಳಿ’ಗೆ ಒಳಗಾಗುತ್ತಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯು ಭಾರತದ ಸಂಪ್ರದಾಯ ಮತ್ತು ಅದರ ನಾಗರಿಕರಿಗೆ ಮಾಡಿದ ಅವಮಾನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಪ್ರಧಾನಿಯವರ ನೀತಿಗಳ ಟೀಕೆ ಯಾವಾಗಿನಿಂದ ದೇಶದ ಟೀಕೆಯಾಗುತ್ತಿದೆ ಎಂದು ಕೇಳಿದೆ.
“ನಿಮ್ಮ ನೀತಿಗಳ ಬಗೆಗಿನ ಟೀಕೆ ದೇಶದ ಟೀಕೆಯಾಗಿ ಮಾರ್ಪಟ್ಟಿದ್ದು ಯಾವಾಗ? ನೀವು ಕೇವಲ ಪ್ರಧಾನಿ, ನೀವು ದೇಶವೂ ಅಲ್ಲ, ದೇವರೂ ಅಲ್ಲ, ಸೃಷ್ಟಿಕರ್ತನೂ ಅಲ್ಲ” ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಭಾನುವಾರ ಹೇಳಿದ್ದಾರೆ.
ಇದನ್ನೂ ಓದಿ:ಇತಿಹಾಸ ಬರೆದ ಆರ್ ಆರ್ ಆರ್; ಆಸ್ಕರ್ ಪ್ರಶಸ್ತಿ ಗೆದ್ದ ‘ನಾಟು ನಾಟು’
ಬಸವೇಶ್ವರರ ಪ್ರತಿಮೆ ಲಂಡನ್ ನಲ್ಲಿದೆ, ಆದರೆ ಅದೇ ಲಂಡನ್ ನಲ್ಲಿ ಭಾರತದ ಪ್ರಜಾಪ್ರಭುತ್ವದ ಮೇಲೆ ಪ್ರಶ್ನೆಗಳು ಎದ್ದಿರುವುದು ದುರದೃಷ್ಟಕರ, ನಮ್ಮ ಶತಮಾನಗಳ ಇತಿಹಾಸದಿಂದ ಭಾರತದ ಪ್ರಜಾಪ್ರಭುತ್ವದ ಬೇರುಗಳನ್ನು ಪೋಷಿಸಲಾಗಿದೆ, ಈ ಜಗತ್ತಿನಲ್ಲಿ ಯಾವುದೇ ಶಕ್ತಿಯು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಧಕ್ಕೆ ತರಲು ಸಾಧ್ಯವಿಲ್ಲ. ಇದರ ಹೊರತಾಗಿಯೂ ಕೆಲವರು ಅದನ್ನು ಕಟೆಕಟೆಯಲ್ಲಿ ನಿಲ್ಲುವಂತೆ ಮಾಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಧಾರವಾಡದಲ್ಲಿ ಹೇಳಿದ್ದರು.
Related Articles
ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, “ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುವವರು ಪ್ರಧಾನಿ” ಎಂದು ಆರೋಪಿಸಿದೆ. ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾತನಾಡಿ, “ಈ ದೇಶದ ಹಿರಿಯರು ಮತ್ತು ಪೂರ್ವಜರನ್ನು ನಿಂದಿಸುವಲ್ಲಿ ಪ್ರಧಾನಿ ಒಂಬತ್ತು ವರ್ಷಗಳನ್ನು ವ್ಯರ್ಥ ಮಾಡಿದ್ದಾರೆ” ಎಂದಿದ್ದಾರೆ.