Advertisement

ತಬ್ಬಲಿ ನೀನಾದೆ ಮಗುವೇ..

06:10 PM Mar 14, 2018 | |

ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಗಳಿಸಿಕೊಳ್ಳುವ ಹುಕಿಯಲ್ಲಿ, ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಉತ್ಸಾಹದಲ್ಲಿ, ನಾವ್ಯಾಕೆ ಇನ್ನೊಬ್ಬರಿಗೆ ತಲೆಬಾಗಬೇಕು ಎಂಬ ಅಹಂನಲ್ಲಿರುವ ಇಂದಿನ ಕಾಲದ ಯುವ ದಂಪತಿ ವಿಚ್ಛೇದನದ ಮೊರೆ ಹೋಗುತ್ತಾರೆ. ಇಬ್ಬರು ಮಕ್ಕಳಿದ್ದರೆ, ಅವರನ್ನು ವಸ್ತುಗಳಂತೆ ತಲಾ ಒಂದರಂತೆ ಹಂಚಿಕೊಳ್ಳುತ್ತಾರೆ! ಅಂಥದ್ದೊಂದು ಪರಿಸ್ಥಿತಿಯ ಅನಾವರಣ ಇಲ್ಲಿದೆ…
“ನಾನಲ್ಲಿ ಹೋಗಲ್ಲಮ್ಮ. ಅಲ್ಲಿ ಊಟಾನೂ ಚೆನ್ನಾಗಿರಲ್ಲ, ತಿಂಡಿನೂ ಚೆನ್ನಾಗಿರಲ್ಲ. ಯಾರ್ಯಾರೋ ಬರ್ತಾ ಇರ್ತಾರೆ ಮನೆಗೆ. ಅಪ್ಪ ಅವರ ಜೊತೆ ಸೇರಿ ಅದೇನೋ ಕುಡೀತಾ ಇರ್ತಾರೆ. ಸ್ವಲ್ಪನೂ ಕ್ಲೀನ್‌ ಇಲ್ಲ. ಮನೆಯೆಲ್ಲಾ ಗಲೀಜಾಗಿರುತ್ತೆ. ರಾತ್ರಿ ಒಬ್ಬನೇ ಮಲಗುವುದಕ್ಕೆ ಭಯ ಆಗುತ್ತೆ’ ದೀಪು ಅಳುಮುಖ ಮಾಡಿ ಹೇಳುತ್ತಿದ್ದರೆ ವಿನುತಾಳಿಗೆ ಅಸಹಾಯಕತೆಯಿಂದ ಕಣ್ಣಲ್ಲಿ ನೀರಾಡಿತು.

Advertisement

ಅವಳಿಗೂ ಗೊತ್ತು: ಒಂದು ಕ್ರಮಬದ್ಧವಾದ ಜೀವನ ನಡೆಸುವ ತನಗೂ ಯಾವುದೇ ಶಿಸ್ತಿಲ್ಲದೆ ಬದುಕನ್ನು ಬೇಕಾಬಿಟ್ಟಿ ಕಳೆಯುವ
ನಿತಿನ್‌ಗೂ ಇರುವ ವ್ಯತ್ಯಾಸ. 8 ವರ್ಷದ ದೀಪಕನಿಗೂ ಅದರ ಅರಿವಿತ್ತು. ಆದರೆ, ಏನು ಮಾಡುವುದು? ಶಾಲೆಗೆ ರಜೆ ಬಂದಾಗ
ರಜೆಯ ಅರ್ಧ ಅವಧಿ ಅಪ್ಪನ ಜೊತೆ ಕಳೆಯಬೇಕೆಂದು ಕೋರ್ಟ್‌ ಹೇಳಿದೆಯಲ್ಲ, ರಜೆಗೆ ದೀಪು ಅಪ್ಪನ ಬಳಿ ಹೋಗುವುದರಿಂದ
ಅವಳಿಗೇನೂ ಬೇಜಾರಿಲ್ಲ, ಆದರೆ, ನಿತಿನ್‌ನ ಅಸಂಬದ್ಧ ಜೀವನಶೈಲಿಗೆ ಹೊಂದಿಕೊಳ್ಳಲಾರದೆ ದೀಪು ಕಾಯಿಲೆ ಬಿದ್ದು ವಾಪಸು ಬಂದರೆ ಅದನ್ನೂ ಇವಳೇ ಸುಧಾರಿಸಬೇಕಲ್ಲಾ? ಜೀವನಕ್ಕೆ ಅಂಜದೆ ವಿಚ್ಛೇದನ ತೆಗೆದುಕೊಂಡ ಮೇಲೂ ಇಂಥವನ್ನು ಎದುರಿಸಲು ಕಲಿಯಬೇಕು ಎಂದುಕೊಂಡಳು. ದೀಪು ಅಪ್ಪನ ಬಳಿ ಹೋಗಲು ಮಗನನ್ನು ಮಾನಸಿಕವಾಗಿ ಸಿದ್ಧಪಡಿಸತೊಡಗಿದಳು.

ತಾಯಿ ಮನೆಯಲ್ಲಿ ಮಗಳು ಅನಾಥೆ!
ಶ್ರೇಯಾ ಖುಷಿಯಿಂದ ರಜೆಗೆ ಅಮ್ಮನ ಬಳಿ ಹೋಗುವ ತಯಾರಿ ನಡೆಸತೊಡಗಿದಳು. “ರಜೆ ಪೂರ್ತಿ ಅಲ್ಲೇ ಇರಿ¤àಯಾ ಪುಟ್ಟಿ? ನಮಗೆ ಬೇಜಾರಾಗಲ್ವಾ? ಒಂದೇ ವಾರ ಇದ್ದು ಬಂದುಬಿಡಮ್ಮ’ ಎಂದು ಅವಳ ಅಜ್ಜಿ ಕಣ್ಣಲ್ಲಿ ನೀರ್ತುಂಬಿ ಹೇಳಿದಾಗ “ಇಲ್ಲಾ ಅಜ್ಜಿ, ಅಪರೂಪಕ್ಕೆ ಹೋಗ್ತಾ ಇದೀನಿ, ರಜೆ ಪೂರ್ತಿ ಇದ್ದೇ ಬರಿ¤àನಿ. ಆಮೇಲೆ ಇಲ್ಲೇ ಇರಿ¤àನಿ’ ಎಂದಳು ಹದಿನೈದರ ಬಾಲೆ. ಅಜ್ಜಿ ಕಣ್ಣೊತ್ತಿಕೊಳ್ಳುತ್ತಾ ಎದ್ದು ಹೊರಟರು. ಅಳಿಯ- ಮಗಳು ಹೊಂದಾಣಿಕೆಯಿಲ್ಲದೆ ಬೇರೆಯಾದಾಗ ಮೊಮ್ಮಗಳು ಶ್ರೇಯಾಳಿಗೆ 2 ವರ್ಷ.
ಅವಳಿಗೆ ನಾಲ್ಕು ವರ್ಷವಾದಾಗ, ಮಗಳು ತನ್ನ ಜೊತೆ ಕೆಲಸ ಮಾಡುತ್ತಿದ್ದ ಹುಡುಗನನ್ನೇ ಎರಡನೇ ಮದುವೆಯಾಗಿದ್ದಳು.
ಇಬ್ಬರೂ ಶ್ರೇಯಾಳನ್ನು ಅಜ್ಜಿಯ ಬಳಿಯೇ ಬಿಟ್ಟು ಬೇರೆ ಊರಿನಲ್ಲಿ ನೆಲೆಸಿದ್ದರು.

ಯಾರೂ ಇಲ್ಲದ ಅಜ್ಜಿಗೆ ಶ್ರೇಯಾಳೇ ಆಶಾಕಿರಣ. ಶ್ರೇಯಾಳಿಗೂ ಅಜ್ಜಿಯೇ ಆಸರೆ. ಆಗಾಗ್ಗೆ ಮಗಳೇ ಇಲ್ಲಿಗೆ ಬಂದು ಶ್ರೇಯಾಳನ್ನು ನೋಡಿ ಹೋಗುತ್ತಿದ್ದಳು. ಕ್ರಮೇಣ ಅವಳಿಗೂ ಎರಡು ಮಕ್ಕಳಾಗಿದ್ದವು. ಆ ಮಕ್ಕಳ ಲಾಲನೆ ಪಾಲನೆ ಸಂಭ್ರಮದಲ್ಲಿ ಮೊದಲ ಮಗಳ ಮೇಲಿನ ಮಮಕಾರ ಕಡಿಮೆಯಾಗಿತ್ತು. ಎಷ್ಟಾ ದರೂ ಹಳೆಯ ನೆನಪುಗಳನ್ನು ಕೆದಕುವ ಮಗಳಲ್ಲವೇ? ಹೊಸ ತಂದೆಗೆ ಶ್ರೇಯಾಳ ಮೇಲೆ ದ್ವೇಷವಿಲ್ಲದಿದ್ದರೂ ಪ್ರೀತಿ ಇರಲಿಲ್ಲ. ಕುಣಿಯುತ್ತಾ ರಜೆ ಕಳೆಯಲು ಅಮ್ಮನ ಮನೆಗೆ ಬಂದ ಶ್ರೇಯಾಳಿಗೆ ಮೂರೇ ದಿನಕ್ಕೆ ತಾನು ಪರಕೀಯಳು ಎನಿಸಹತ್ತಿತ್ತು. ಅಮ್ಮ ಒಬ್ಬಳು ಪ್ರೀತಿಯಿಂದ ಮಾತಾಡಿಸುತ್ತಾಳೆ. ತನ್ನ ಪಕ್ಕವೇ ಮಲಗುತ್ತಾಳೆ. ತನಗೇನು
ಬೇಕೆಂದು ಕೇಳಿ ಮಾಡಿಕೊಡುತ್ತಾಳೆ. ಆದರೂ ಆ ಪ್ರೀತಿಯಲ್ಲಿ ಮುಕ್ತತೆಯಿಲ್ಲ. ಹಿಡಿದು ಹಿಡಿದು ಕೊಟ್ಟಂಥ ಪ್ರೀತಿ. ಇನ್ನು ಅವಳ ಹೊಸ ತಂಗಿ- ತಮ್ಮ ಇವಳ ಬಳಿ ಅಸಡ್ಡೆಯಿಂದ ಮಾತಾಡುತ್ತಾರೆ. ರಾತ್ರಿ ತಂದೆಯ ಬಳಿಯೇ ಮಲಗುತ್ತಾರೆ. ತಂದೆಯ ಬಳಿ ಅವರಿಬ್ಬರ ಮಾತು, ನಗು ಕೇಳಿ ಶ್ರೇಯಾಳಿಗೂ ಅವರ ಜೊತೆ ಸೇರಬೇಕೆನಿಸುತ್ತದೆ. ಆದರೆ, ಏನೋ ಸಂಕೋಚ. ರಾತ್ರಿ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತಾಗ ಬೇಕಾದ್ದನ್ನು ಕೇಳಿ ಹಾಕಿಸಿಕೊಳ್ಳಲೂ ಮನಸ್ಸು ಹಿಂಜರಿಯುತ್ತದೆ.

ಅವಳ ಚಿಕ್ಕ ತಮ್ಮ ಊಟ ಮಾಡಲು ಹಠ ಮಾಡಿದಾಗ ಅಮ್ಮ ಅವನಿಗೆ ತುತ್ತು ಕಲೆಸಿ ಬಾಯಲ್ಲಿಡುವುದನ್ನು ಆಸೆಯಿಂದ ನೋಡುತ್ತಾಳೆ. ತನ್ನಮ್ಮ ತನಗೂ ಹೀಗೆ ತಿನಿಸುತ್ತಿದ್ದಳಾ? ಎಂದು ನೆನಪನ್ನು ಕೆದಕುತ್ತಾಳೆ. ಘಮ್ಮೆನುವ ಊಟ ಅವಳ ಪಾಲಿಗೆ ಸಪ್ಪೆ ಎನಿಸುತ್ತದೆ. ಒಂದು ದಿನವಂತೂ ಅವಳ ಹೊಸ ಅಪ್ಪ ತನ್ನಿಬ್ಬರು ಮಕ್ಕಳನ್ನು ಐಸ್‌ಕ್ರೀಂ ಕೊಡಿಸಲು ಕರೆದುಕೊಂಡು ಹೋಗುವಾಗ ಇವಳನ್ನು ಕರೆಯಲೇ ಇಲ್ಲ. ಶ್ರೇಯಾಳಿಗೆ ಅಳುವೇ ಬಂದಿತ್ತು. ಇನ್ನು ಅಲ್ಲಿ ತಾನು ಇರಬಾರದು ಎನಿಸಿತ್ತು. “ಅಜ್ಜಿ ಒಬ್ಬರೇ ಇರ್ತಾರೆ ಪಾಪ’ ಎಂಬ ನೆಪ ಹೇಳಿ ಮಾರನೇ ದಿನವೇ ಬಂದುಬಿಟ್ಟಿದ್ದಳು. ಅಜ್ಜಿಯ ಮಡಿಲಲ್ಲಿ ಮಲಗಿದಾಗಲೇ ನೆಮ್ಮದಿ ಅವಳಿಗೆ. 

Advertisement

ಮಗುವಿನ ಮನಸ್ಸು ಅಪಾಯದಲ್ಲಿ…
ಇದು ಒಬ್ಬ ದೀಪಕ್‌ ಅಥವಾ ಒಬ್ಬ ಶ್ರೇಯಾ ಕಥೆಯಲ್ಲ. ಒಮ್ಮೆ ಅಮ್ಮನ ಬಳಿ ಒಮ್ಮೆ ಅಪ್ಪನ ಬಳಿ ಹೀಗೆ ಮಗು ಹಂಚಿಹೋಗುತ್ತಿದ್ದರೆ ಅದರ ಮಾನಸಿಕ ಬೆಳವಣಿಗೆಗೆ ಅವಕಾಶವೆಲ್ಲಿ? ಬೆಳೆಯುವ ಮಕ್ಕಳಿಗೆ ಈ ರೀತಿ ಮಾನಸಿಕ ಆಘಾತಗಳಾಗುತ್ತಿದ್ದರೆ ಕುಗ್ಗಿ ಹೋಗುತ್ತಾರೆ. ಹಾಗೆಂದು ದಂಪತಿ ವಿಚ್ಛೇದನ ತೆಗೆದುಕೊಳ್ಳುವುದು ತಪ್ಪೆಂದೂ ಹೇಳಲಾಗದು. ಅದು ಅವರ ವೈಯಕ್ತಿಕ
ಸ್ವಾತಂತ್ರ್ಯ. ಹಾಗೆಯೇ ಮಗುವಿನ ಪರಿಸ್ಥಿತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾದ್ದು ನ್ಯಾಯ. ಮಕ್ಕಳಿಗೆ ಹಿಂಸೆಯಾದರೂ, ತಮ್ಮ ವೈಯಕ್ತಿಕ ಸ್ವಾತಂತ್ರ್ಯಕ್ಕೇ ಪ್ರಾಶಸ್ತ್ಯ ನೀಡಿ ಎಂದು ಅಪ್ಪ ಅಮ್ಮಂದಿರಿಗೆ ಯಾರೂ ಹೇಳುವುದಿಲ್ಲ. ಹೀಗಾಗಿ ತಂದೆ ತಾಯಿಯಾದವರು ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಮಕ್ಕಳನ್ನೂ ಗಮನದಲ್ಲಿರಿಸಿಕೊಂಡರೆ ಇಂಥ ತೊಂದರೆಗಳು ತಪ್ಪುತ್ತವೆ.

ವೀಣಾ ರಾವ್

Advertisement

Udayavani is now on Telegram. Click here to join our channel and stay updated with the latest news.

Next