Advertisement

ಉಳುಮೆಗೆ ನೇಗಿಲ ಯೋಗಿ ಸಿದ್ಧ

05:57 PM May 24, 2018 | |

ವಿಜಯಪುರ: ಸತತ ಬರಗಾಲವನ್ನೇ ಒಗ್ಗಿಸಿಕೊಂಡಿರುವ ವಿಜಯಪುರ ಜಿಲ್ಲೆಯ ನೇಗಿಲಯೋಗಿ ಮತ್ತೂಮ್ಮೆ ಪ್ರಕೃತಿಯೊಂದಿಗೆ ಸತ್ವ ಪರೀಕ್ಷೆಗೆ ಮುನ್ನುಡಿ ಬರೆಯುತ್ತಿದ್ದಾನೆ. ಮಳೆಯಾದರೂ ಸಮಸ್ಯೆ, ಬೆಳೆದರೂ ಸಮಸ್ಯೆ ಎಂಬ ದುಸ್ಥಿತಿಯಲ್ಲಿರುವ ಬಸವಭೂಮಿಯ ಅನ್ನದಾತ ಎದೆಸೆಟೆಸಿ ಎದ್ದು ನಿಂತಿದ್ದಾನೆ.

Advertisement

1.30 ಸಾವಿರ ನೀರಾವರಿ ಸೇರಿ 4.30 ಲಕ್ಷ ಹೆಕ್ಟೇರ್‌ ಪ್ರದೇಶ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಸಿದ್ಧವಾಗುತ್ತಿದ್ದು, ಅಂದುಕೊಂಡಂತೆ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಸುರಿದರೆ ಜೂನ್‌ ಮೊದಲ ವಾರದಲ್ಲೇ ಹೆಸರು, ಉದ್ದು ಸುಮಾರು 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧಗೊಳ್ಳುತ್ತಿದೆ. ಉಳಿದಂತೆ ಬೆಲೆ ಕುಸಿತದ
ಸಂಕಷ್ಟದ ಮಧ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತೊಗರಿ ಬೆಳೆ ಪ್ರದೇಶ ಈ ಬಾರಿಯೂ 3 ಲಕ್ಷ ಹೆಕ್ಟೇರ್‌ ಬಿತ್ತನೆಯ ಆಗುತ್ತದೆ ಎಂದು ಕೃಷಿ ಇಲಾಖೆ ನಿರೀಕ್ಷಿಸುತ್ತಿದೆ. 60 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ, 40 ಸಾವಿರ ಹೆಕ್ಟೇರ್‌ ಸಜ್ಜೆ ಬಿತ್ತನೆಯ ನಿರೀಕ್ಷೆ ಇದೆ.

ವಿಜಯಪುರ ಜಿಲ್ಲೆಗೆ ಮುಂಗಾರು ಹಂಗಾಮಿನಲ್ಲಿ ಅಗತ್ಯ ಇರುವ 69 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ಸಂಗ್ರಹ ಇದ್ದು, ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿಯಲ್ಲೂ ಸುಮಾರು 32 ಸಾವಿರ ಮೆಟ್ರಿಕ್‌ಟನ್‌ ರಸಗೊಬ್ಬರ ದಾಸ್ತಾನಿದೆ. ಬಿತ್ತನೆ ಬೀಜಕ್ಕಾಗಿ 21 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜದ ಸಂಗ್ರಹದ ಅಗತ್ಯವಿದ್ದು, ಬರುವ ಶನಿವಾರ ಮೇ 26ರೊಳಗೆ ಬೀಜದ ಸಂಗ್ರಹವೂ ಬಹುತೇಕ ಆರಂಭಗೊಳ್ಳಲಿದೆ.

ರಾಷ್ಟ್ರೀಯ ಬೀಜ ನಿಗಮ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮ ವಿಜಯಪುರ ಜಿಲ್ಲೆಗೆ ಬೀಜ ಅಗತ್ಯ ಇರುವ ಮುಂಗಾರು ಬಿತ್ತನೆ ಬೀಜ ಪೂರೈಕೆ ಹೊಣೆ ಹೊತ್ತಿದೆ.
 
ಇದಲ್ಲದೇ ಆರ್ಥಿಕ ಸಬಲೀಕರಣದೊಂದಿಗೆ ರಸಾಯನಿಕ-ವಿಷ ಮುಕ್ತ ಆಹಾರ ಉತ್ಪಾದನೆಗೆ ಆದ್ಯತೆ ನೀಡುವ ಉದ್ದೇಶದಿಂದ ರೈತರನ್ನು ಸಾವಯವದತ್ತ ಪ್ರಚೋದಿಸುವ ಕೆಲಸವೂ ಭರದಿಂದ ಸಾಗಿದೆ. ರೈತರು ಈಗಷ್ಟೇ ಇದಕ್ಕೆ ಒಗ್ಗಿಕೊಳ್ಳುತ್ತಿದ್ದರೂ ಜಿಲ್ಲೆಯಲ್ಲಿ ಸಾವಯವ ಕೃಷಿಕರ ಪ್ರಮಾಣ ಶೇ. 3ರಷ್ಟನ್ನು ಮೀರಿಲ್ಲ. ಹೀಗಾಗಿ ಈ ಪ್ರಮಾಣ ಹೆಚ್ಚಿಸಲು ಜಿಲ್ಲೆಯ 5 ತಾಲೂಕುಗಳಲ್ಲಿ ಪ್ರತಿ ತಾಲೂಕಿನ ತಲಾ 3 ಗ್ರಾಮಗಳಂತೆ 15 ಸಾವಯವ ಕೃಷಿಕರ ಕ್ಲಸ್ಟರ್‌ ಗುಂಪು ರಚಿಸಲಾಗಿದೆ. ಪ್ರತಿ ಕ್ಲಸ್ಟರ್‌ನಲ್ಲಿರುವ ರೈತರೆಲ್ಲ ತಲಾ ಕನಿಷ್ಠ 100 ಹೆಕ್ಟೇರ್‌ ಸಾವಯ ಕೃಷಿ ಉತ್ಪಾದನೆಗೆ ಮುಂದಾಗಿದ್ದಾರೆ.
 
ಸಾವಯವ ಹಾಗೂ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ರೈತರಿಗೆ ಸಾವಯವ ಕೃಷಿಯತ್ತ ರೈತರನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗುವಂತೆ ಮಾಡಲು ತರಬೇತಿ, ಭೂಮಿ ಆರೋಗ್ಯ ಸಂರಕ್ಷಣೆ, ಸತ್ವ ಹೆಚ್ಚಳಕ್ಕಾಗಿ ಮಣ್ಣು
ಪರೀಕ್ಷೆ, ಬೆಳೆ ಆಯ್ಕೆ, ಬೀಜೋಪಚಾರ, ಜೈವಿಕ ಪೀಡೆ ನಾಶಕ, ಕೀಟಗಳ ನೈಸರ್ಗಿಕ ನಿರ್ವಹಣೆ ಹೀಗೆ ಹಲವು ಬಗೆಯ ಮಾರ್ಗದರ್ಶನವೂ ಕೃಷಿ ಅಧಿಕಾರಿಗಳಿಂದ ನಡೆಯುತ್ತಿದೆ. 

„ಜಿ.ಎಸ್‌. ಕಮತರ

Advertisement
Advertisement

Udayavani is now on Telegram. Click here to join our channel and stay updated with the latest news.

Next