Advertisement

ಯೋಗಿ ಈಗ “ಕಿರಿಕ್‌ ಶಂಕರ’

10:08 AM Dec 25, 2019 | Lakshmi GovindaRaj |

ಸದ್ದಿಲ್ಲದೆಯೇ ಯೋಗಿ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರವನ್ನು ಅನಂತ್‌ರಾಜು ನಿರ್ದೇಶನ ಮಾಡುತ್ತಿದ್ದು ಹಾಗು ಎನ್‌.ಕುಮಾರ್‌ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಬಗ್ಗೆ ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಆ ಚಿತ್ರಕ್ಕೆ ಆಗ ನಾಮಕರಣ ಆಗಿರಲಿಲ್ಲ. ಈಗ ಚಿತ್ರಕ್ಕೆ “ಕಿರಿಕ್‌ ಶಂಕರ್‌’ ಎಂದು ಹೆಸರಿಡಲಾಗಿದೆ. ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ.

Advertisement

ಚಿತ್ರದ ಬಗ್ಗೆ ಹೇಳುವ ನಿರ್ದೇಶಕ ಅನಂತ್‌ರಾಜು ಹೇಳುವಂತೆ, “ಇದೊಂದು ಪಕ್ಕಾ ದೇಸಿ ಕಥೆ. ಅದರಲ್ಲೂ ಈಗಿನ ಮಾಡರ್ನ್ ಹುಡುಗರ ಲವ್‌ಸ್ಟೋರಿ ಇಲ್ಲಿರಲಿದೆ. ನಾಲ್ವರು ಹುಡುಗರು ಹುಡುಗಿಯೊಬ್ಬಳ ಹಿಂದೆ ಹೋದಾಗ, ಏನೆಲ್ಲಾ ಆಗುತ್ತೆ ಅನ್ನೋದು ಒನ್‌ಲೈನ್‌. ಆ ಹುಡುಗರ ಬದುಕಲ್ಲಿ ಹುಡುಗಿ ಎಂಟ್ರಿ ಕೊಟ್ಟಾಗ, ಹೇಗೆಲ್ಲಾ ಬದಲಾಗುತ್ತಾರೆ ಎಂಬುದನ್ನು, ಒಂದಷ್ಟು ಹಾಸ್ಯದ ರೂಪದಲ್ಲಿ ಹೇಳಲಾಗಿದೆ.

ಇಲ್ಲಿ ಮಾಸ್‌ ಅಂಶಗಳು ಹೈಲೈಟ್‌ ಎನ್ನುವ ಅವರು, ಯೋಗೀಶ್‌ ಹುಣಸೂರು ಕಥೆ ಬರೆದಿದ್ದು, ಆ ಕಥೆಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಚಿತ್ರಕ್ಕೆ ವೀರ್‌ಸಮರ್ಥ್ ಸಂಗೀತವಿದೆ. ಜೆ.ಜೆ.ಕೃಷ್ಣ ಅವರ ಛಾಯಾಗ್ರಹಣವಿದೆ. ಚಿತ್ರದ ಶೀರ್ಷಿಕೆ ಹೇಳುವಂತೆ, ಇಲ್ಲಿ ಮಜವಾದ ಅಂಶಗಳಿವೆ. ಇಡೀ ಚಿತ್ರ ಮನರಂಜನಾತ್ಮಕವಾಗಿಯೇ ಮೂಡಿಬರಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ಕವಿರಾಜ್‌, ನಾಗೇಂದ್ರಪ್ರಸಾದ್‌ ಗೀತೆ ರಚಿಸಲಿದ್ದಾರೆ.

ಮಾತಿನ ಭಾಗ ಮುಗಿಸಿರುವ ಚಿತ್ರತಂಡ, ಜನವರಿ 6 ರಿಂದ ಹಾಡುಗಳ ಚಿತ್ರೀಕರಣಕ್ಕೆ ಹೋಗುವ ತಯಾರಿ ಮಾಡಿಕೊಂಡಿದೆ. ಈಗಾಗಲೇ ಮೂರು ಭರ್ಜರಿ ಫೈಟ್ಸ್‌ ಕೂಡ ಚಿತ್ರೀಕರಣಗೊಂಡಿದ್ದು, ಚಿತ್ರಕ್ಕೆ ಹೊಸ ನಾಯಕಿ ಇರಲಿದ್ದಾರೆ. ಆ ನಾಯಕಿ ಯಾರೆಂಬುದು ಸದ್ಯಕ್ಕೆ ಸಸ್ಪೆನ್ಸ್‌ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಯೋಗಿ ಸದ್ಯಕ್ಕೆ ಈಗ “ಕಿರಿಕ್‌ ಶಂಕರ್‌’ ಜೊತೆಯಲ್ಲಿ “ಲಂಕೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಅದಾದ ಬಳಿಕ ಅವರು ತಮ್ಮ “ಎಂವೈ ಫಿಲ್ಮ್ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರ ಮಾಡಲಿದ್ದಾರೆ. ಚಿತ್ರಕ್ಕೆ ರಂಜಿತ್‌ಕುಮಾರ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಅವರದೇ. ಅದೊಂದು ಪಕ್ಕಾ ಮಾಸ್‌ ಸಬ್ಜೆಕ್ಟ್ ಆಗಿದ್ದು, ಅಜನೀಶ್‌ ಲೋಕನಾಥ್‌ ಅವರು ಸಂಗೀತ ನೀಡುತ್ತಿದ್ದಾರೆ. ರಾಮ್‌-ಲಕ್ಷ್ಮಣ್‌ ಅವರ ಸಾಹಸ ನಿರ್ದೇಶನ ಇರಲಿದೆ. ಬಿಗ್‌ ಬಜೆಟ್‌ ಸಿನಿಮಾ ಆಗಿರುವುದರಿಂದ ಈಗಾಗಲೇ ಸಾಕಷ್ಟು ತಯಾರಿ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next