Advertisement

ಪಾರಂಪರಿಕ ಪಟ್ಟದಕಲ್ಲಗೆ ಯೋಗಾಯೋಗ!

02:35 PM Jun 21, 2022 | Team Udayavani |

ಬಾಗಲಕೋಟೆ: ಕಳೆದ ಹಲವು ವರ್ಷಗಳಿಂದ ವಿಶ್ವಕ್ಕೆ ಯೋಗ ದಿನದ ಪ್ರಾಮುಖ್ಯತೆ ಹೇಳಿಕೊಟ್ಟ ಭಾರತ, ಈ ಬಾರಿ ವಿಶ್ವ ಯೋಗ ದಿನವನ್ನು ವಿನೂತನವಾಗಿ ಆಚರಿಸಲು ನಿರ್ಧರಿಸಿದೆ. ಅದಕ್ಕಾಗಿ ದೇಶದ 75 ಪ್ರಮುಖ ತಾಣ-ಸ್ಥಳಗಳನ್ನು ಗುರುತಿಸಿದ್ದು, ಯುನೆಸ್ಕೋ ಪಟ್ಟಿಯಲ್ಲಿ ಪಾರಂಪರಿಕ ತಾಣ ಪಟ್ಟದಕಲ್ಲ ಸ್ಥಾನ ಪಡೆದಿರುವುದು ಜಿಲ್ಲೆಗೆ ಹೆಮ್ಮೆಯೇ ಸರಿ.

Advertisement

ಹೌದು, ಈ ಬಾರಿಯ ವಿಶ್ವ ಯೋಗ ದಿನ, ಕೇಂದ್ರ ಸರ್ಕಾರದ ಆಯುಷ್‌ ಇಲಾಖೆ, ಆಯುಷ್‌ ಟಿವಿ ನೇತೃತ್ವದಲ್ಲಿ ಜಿಲ್ಲೆಯ ಬಾದಾಮಿ ತಾಲೂಕಿನ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲನಲ್ಲಿ ವಿಶಿಷ್ಟವಾಗಿ ಏರ್ಪಡಿಸಲಾಗಿದೆ.

ಇದಕ್ಕಾಗಿ ಹಲವು ದಿನಗಳಿಂದ ಪೂರ್ವ ಸಿದ್ಧತೆ ನಡೆಸಿದ್ದು, ಪಟ್ಟದಕಲ್ಲ ಕೂಡ ಈಗ ಸಂಪೂರ್ಣ ಸ್ವಚ್ಛ ಪ್ರವಾಸಿ ತಾಣವಾಗಿ ಬದಲಾಗಿದೆ. ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯದ್ದೇ ದೊಡ್ಡ ಸಮಸ್ಯೆ. ತಾಣಗಳ ಸುತ್ತಲೂ ಬ್ಲಾಕ್‌ ಆಗಿ ತುಂಬಿ ತುಳುಕುವ ಚರಂಡಿಗಳು, ಎಲ್ಲೆಂದರಲ್ಲಿ ಎಸೆದ ಕಸ, ಪ್ರವಾಸಿ ತಾಣಗಳ ಆವರಣದ ಕಂಪೌಂಡ್‌ ಗೋಡೆಗೆ ಹೊಂದಿಕೊಂಡ ಗೂಡಂಗಡಿಗಳು ಹೀಗೆ ಹಲವು ರೀತಿಯ ಸೌಂದರ್ಯಕ್ಕೆ ತೊಂದರೆ ಕೊಡುವ ಸಂಗತಿಗಳು ಇಲ್ಲಿವೆ.

ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು (ಬಾದಾಮಿ ಹೊರತುಪಡಿಸಿ) ಗ್ರಾಪಂ. ವ್ಯಾಪ್ತಿಯಲ್ಲಿವೆ. ಗ್ರಾಪಂನಿಂದ ಎಷ್ಟೇ ಸ್ವಚ್ಛತಾ ಕಾರ್ಯ ಕೈಗೊಂಡರೂ ನಿತ್ಯ ಸಾವಿರಾರು ಜನ ಭೇಟಿ ನೀಡಿ, ಎಲ್ಲೆಂದರಲ್ಲ ಕಸ ಎಸೆದಾಗ, ಅದು ಮಳೆ ನೀರಿನಿಂದ ಹರಿದು ಚರಂಡಿ ಸೇರಿ ಬ್ಲಾಕ್‌ ಆಗಿ ತುಂಬಿಕೊಂಡು ನಿಲ್ಲುವುದು ನಡೆಯುತ್ತಲೇ ಇದೆ. ಹೀಗಾಗಿ ನಿತ್ಯ ಸ್ವಚ್ಛತೆ ಕೈಗೊಳ್ಳುವ ಬದಲು, ಆಗೊಮ್ಮೆ ಹೀಗೊಮ್ಮೆ ಸ್ವಚ್ಛತೆ ಮಾಡಿ, ಗ್ರಾ.ಪಂ. ಕೂಡ ಸುಮ್ಮನಿರುತ್ತಿತ್ತು.

ಯೋಗಾಯೋಗ!: ಈ ಬಾರಿ ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ ಪಟ್ಟದಕಲ್ಲನಲ್ಲಿ ಜಿಲ್ಲಾಡಳಿತ ನೇತೃತ್ವದಲ್ಲಿ ಬಾದಾಮಿ, ಐಹೊಳೆಯಲ್ಲಿ ವಿಶ್ವ ಯೋಗ ದಿನ ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ಪಟ್ಟದಕಲ್ಲಗೆ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಆಗಮಿಸುತ್ತಿದ್ದು, ಇಡೀ ದೇಶದ 75 ತಾಣಗಳಲ್ಲಿ ಏಕಕಾಲಕ್ಕೆ ನಡೆಯುವ ಯೋಗ ದಿನದ ನೇರ ಪ್ರಸಾರ ಕೂಡ ನಡೆಯಲಿದೆ. ಇದನ್ನು ಇಡೀ ದೇಶದ ಜನ ಆಯುಷ್‌ ಟಿವಿ ಮೂಲಕ ವೀಕ್ಷಿಸಲಿದ್ದಾರೆ. ಹೀಗಾಗಿ ದೇಶದ ಜನರೆದುರು ಪಟ್ಟದಕಲ್ಲ, ಅಸ್ವತ್ಛತೆಯಿಂದ ಕಾಣದಿರಲಿ, ಇಡೀ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆಯಲೆಂಬ ಕಾರಣಕ್ಕೆ ಸಂಪೂರ್ಣ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ನಮ್ಮ ಪಟ್ಟದಕಲ್ಲಗೆ ಯೋಗದ ದಿನ ಅಂಗವಾಗಿ ಯೋಗಾಯೋಗ ಬಂತಲ್ಲ ಎಂಬ ಖುಷಿಯ ಮಾತು ಗ್ರಾಮಸ್ಥರಿಂದ ಬರುತ್ತಿದೆ.

Advertisement

3 ಸಾವಿರ ಮಕ್ಕಳು ಭಾಗಿ: ಪಟ್ಟದಕಲ್ಲನಲ್ಲಿ ನಡೆಯಲಿರುವ ವಿಶ್ವ ಯೋಗ ದಿನದ ಅಂಗವಾಗಿ ಜಿಲ್ಲೆಯ ವಿವಿಧ ಶಾಲಾ-ಕಾಲೇಜಿನ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಏಕಕಾಲಕ್ಕೆ ಯೋಗ ಮಾಡಲಿದ್ದಾರೆ. ಇವರಿಗಾಗಿ ಯೋಗ ತರಬೇತಿ ನೀಡಲು ನುರಿತ ಯೋಗ ಶಿಕ್ಷಕರೂ ಆಗಮಿಸಲಿದ್ದಾರೆ.

ಮುಖ್ಯವಾಗಿ ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, 500ಕ್ಕೂ ಹೆಚ್ಚು ಅಧಿಕಾರಿ-ಸಿಬ್ಬಂದಿ ಭಾಗಿಯಾಗಲಿದ್ದಾರೆ. ಜತೆಗೆ ಈ ಯೋಗ ದಿನದಲ್ಲಿ ಭಾಗವಹಿಸಲು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುವ ಮಕ್ಕಳಿಗಾಗಿ ಸುಮಾರು 42ಕ್ಕೂ ಹೆಚ್ಚು ಬಸ್‌ ಗಳ ವ್ಯವಸ್ಥೆ ಮಾಡಲಾಗಿದೆ. ಇಡೀ ಯೋಗ ದಿನ ಅಂದವಾಗಿ ಕಾಣಲು, ಎಲ್ಲಾ ಮಕ್ಕಳಿಗೂ, ಅಧಿಕಾರಿ-ಸಿಬ್ಬಂದಿ, ಸಚಿವರಿಗೂ ಒಂದೇ ರೀತಿಯ ಸಮವಸ್ತ್ರವನ್ನು ಜಿಲ್ಲಾಡಳಿತವೇ ಒದಗಿಸುತ್ತಿದೆ. ಪಟ್ಟದಕಲ್ಲನ ಆವರಣದಲ್ಲಿ ಯೋಗ ದಿನ ಯಶಸ್ವಿಗೊಳಿಸಲು ಗ್ರಾ.ಪಂ. ಸಿಬ್ಬಂದಿ, ಬಾದಾಮಿ ತಾಲೂಕು ಆಡಳಿತ, ಬಾಗಲಕೋಟೆ ಜಿಲ್ಲಾಡಳಿತ ವಿಶೇಷವಾಗಿ ಸಿದ್ಧತೆ ಮಾಡಿಕೊಂಡಿದೆ.

ಪಟ್ಟದಕಲ್ಲನಲ್ಲಿ ಈ ಬಾರಿ ವಿಶ್ವ ಯೋಗ ದಿನ, ಆಯುಷ್‌ ಟಿವಿ ನೇತೃತ್ವದಲ್ಲಿ ನಡೆಯಲಿದೆ. ಕೇಂದ್ರ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿ-ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಜಿಲ್ಲಾಡಳಿತದಿಂದ ಐಹೊಳೆ, ಬಾದಾಮಿ ಹಾಗೂ ಜಮಖಂಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಜೂ.21ರಂದು ನಡೆಯಲಿರುವ ವಿಶ್ವ ಯೋಗ ದಿನವನ್ನು ಅರ್ಥಪೂರ್ಣ ಹಾಗೂ ವಿಶಿಷ್ಟವಾಗಿ ನಡೆಸಲಾಗುವುದು. ಜಿಲ್ಲೆಯ ಜನರು ಇದಕ್ಕೆ ಸಹಕಾರ ನೀಡಬೇಕು.  –ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ

„ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next