Advertisement
ನಗರದ ಪಿಇಎಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಸಂಸ್ಥೆಯ ಆವರಣದಲ್ಲಿರುವ ಪ್ರೇರಣಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಉತ್ತಮ ಆರೋಗ್ಯ ನಿರ್ವಹಣೆಗೆ ಹಾಗೂ ಕ್ರಿಯಾತ್ಮಕ ಜೀವನ ಶೈಲಿಗೆ ಯೋಗ ಸಿದ್ದೌಷದವಾಗಿದೆ ಎಂದರು.
ನಮ್ಮಲ್ಲಿ ಸುಪ್ತವಾಗಿ ಅಡಗಿರುವ ಚೈತನ್ಯ ಭರಿತವಾದ ಶಕ್ತಿಯನ್ನು ಪರಿಪಕ್ವಗೊಳಿಸುವಲ್ಲಿ ನಿರಂತರ ಯೋಗ –
ಧ್ಯಾನಗಳಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಶಾಲಾ ಹಂತದಿಂದಲೇ ಯೋಗಾಭ್ಯಾಸವನ್ನು ಪಠ್ಯಕ್ರಮದಲ್ಲಿ ಕಡ್ಡಾಯಗೊಳಿಸುವುದರ ಮೂಲಕ ಉತ್ತಮ ಆರೋಗ್ಯಯುತ ಸಮಾಜ ರೂಪಿಸಬೇಕು. ಈ ನಿಟ್ಟಿನಲ್ಲಿ ಪಿಇಎಸ್ ಶಿಕ್ಷಣ ಸಂಸ್ಥೆ ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗದೆ ಯೋಗ ಧ್ಯಾನದಂತಹ ಕಾರ್ಯಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ.
Related Articles
ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಸ್.ವೈ. ಅರುಣಾದೇವಿ ಮಾತನಾಡಿ, ಇಂದಿನ ಒತ್ತಡ
ಭರಿತ ಜೀವನದಲ್ಲಿ ಯೋಗ ಅತ್ಯಂತ ಅವಶ್ಯಕ.
Advertisement
ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಉಲ್ಲಾಸ ನೀಡುವಲ್ಲಿ ಹಾಗೂ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಇಂತಹ ಯೋಗದ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟ ಭಾರತ ಇಂದು ಆರೋಗ್ಯಯುತ ವಿಶ್ವ ನಿರ್ಮಾಣ ಮಾಡುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
ಮೈಸೂರಿನ ಹಿಂದೂಸ್ಥಾನ್ ಸಂಸ್ಥೆ ಪ್ರಾಂಶುಪಾಲೆ ಡಾ| ಕೆ. ಸಾಯಿಲತಾ ಮಾತನಾಡಿದರು. ಪಿಇಎಸ್ ಸಮೂಹ ಸಂಸ್ಥೆಯ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಸೆಂಥಿಲ್, ದೈಹಿಕ ಶಿಕ್ಷಕರಾದ ಸಂಜಯ್ ಮತ್ತು ನಾಗರಾಜ ಮಾರ್ಗದರ್ಶನದಲ್ಲಿ ಸಾಮೂಹಿಕವಾಗಿ ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶನ ಮಾಡಿದರು.
ಇದೇ ವೇಳೆ ಮಾಲಿನ್ಯ ನಿಯಂತ್ರಣಾ ಮಂಡಳಿ ಹಾಗೂ ಪರಿಸರ ಅಧ್ಯಯನ ಕೇಂದ್ರ ವತಿಯಿಂದ ಈಚೆಗೆಹಮ್ಮಿಕೊಂಡಿದ್ದ ಸಮೂಹ ಗೀತೆಗಾಯನ, ಚಿತ್ರಕಲಾ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಪಿಇಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಉಪಪ್ರಾಂಶುಪಾಲ ಪ್ರಕಾಶ್ ಜೋಗಿ ಸ್ವಾಗತಿಸಿದರು. ಶಿಕ್ಷಕಿ ಮಂಜುಳಾ ವಂದಿಸಿದರು. ಕಾರ್ಯಕ್ರಮದಲ್ಲಿ ಪಿಇಎಸ್ ಸಮೂಹ ಸಂಸ್ಥೆಯ ಪ್ರಾಂಶುಪಾಲರು, ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.