ಮುಂಬಯಿ: ಅದಾ ಶರ್ಮಾ ಅಭಿನಯದ ʼಬಸ್ತಾರ್ʼ ಸಿನಿಮಾ ರಿಲೀಸ್ ಆಗಿದೆ. ʼದಿ ಕೇರಳ ಸ್ಟೋರಿʼ ನಿರ್ದೇಶಕ ಸುದೀಪ್ತೋ ಸೇನ್ ಹಾಗೂ ಆ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದ ಅದಾ ಶರ್ಮಾ ʼಬಸ್ತಾರ್ʼ ನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿನಿಮಾದ ಮೇಲೆ ನಿರೀಕ್ಷೆಯಿತ್ತು.
ʼಬಸ್ತಾರ್ʼ ಛತ್ತೀಸ್ಗಢ ರಾಜ್ಯದ ಒಂದು ಜಿಲ್ಲೆ ಆಗಿದೆ. ಬುಡಕಟ್ಟು ಜನಸಂಖ್ಯೆಗೆ ಈ ಜಿಲ್ಲೆ ಹೆಸರುವಾಸಿಯಾಗಿದೆ. ಇಲ್ಲಿನ ಬುಡಕಟ್ಟು ಜನ ಈಗಲೂ ಕೂಡ ಹೊರಗಿನವರ ಬಳಿ ಅಷ್ಟಾಗಿ ಸಂಪರ್ಕ ಸಾಧಿಸದೆ ದಟ್ಟ ಕಾಡಿನಲ್ಲೇ ವಾಸಿಸುತ್ತಿದ್ದಾರೆ. ಇಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿ ಕಂಡು ಬರುತ್ತದೆ. ಇದೇ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.
ನಟಿ ಅದಾ ಶರ್ಮಾ ಐಪಿಎಸ್ ಅಧಿಕಾರಿ ನೀರ್ಜಾ ಮಾಧ್ವನ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಪವರ್ ಫುಲ್ ಡೈಲಾಗ್ಸ್ ಹಾಗೂ ವಾಸ್ತವ ಅಂಶಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಕೇರಳ ಸ್ಟೋರಿ ಮೊದಲ ದಿನ 8 ಕೋಟಿ ಗಳಿಕೆ ಕಂಡಿತ್ತು. ಭಾರತದಲ್ಲಿ 242 ಕೋಟಿ ರೂ. ಗಳಿಕೆ ಕಂಡಿತ್ತು. ಆದರೆ ಅದೇ ತಂಡದ ʼಬಸ್ತಾರ್ʼ ಸಿನಿಮಾ ಮೊದಲ ದಿನ ಕೇವಲ 50 ಲಕ್ಷ ರೂ. ಗಳಿಕೆ ಕಂಡಿದೆ. ಆ ಮೂಲಕ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ.
ʼಬಸ್ತಾರ್ʼ ಸಿದ್ಧಾರ್ಥ್ ಮಲ್ಹೋತ್ರಾ ಅವರ ʼಯೋಧʼ ಸಿನಿಮಾದ ಜೊತೆ ರಿಲೀಸ್ ಆಗಿದೆ. ಯೋಧ ಸಿನಿಮಾ ಬಹು ನಿರೀಕ್ಷೆಯನ್ನು ಹುಟ್ಟಿಸಿದ ಸಿನಿಮಾಗಳಲ್ಲೊಂದಾಗಿತ್ತು. ಮೊದಲ ದಿನ 4.26 ಕೋಟಿ ʼಯೋಧʼ ಸಿನಿಮಾ ಗಳಿಕೆ ಕಂಡಿದೆ. ಈ ಸಿನಿಮಾ ಹೈಜಾಕ್ ಆಕ್ಷನ್ ಥ್ರಿಲ್ಲರ್ ಕಥೆಯನ್ನೊಳಗೊಂಡಿದೆ. ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಮುಂತಾದರು ಕಾಣಿಸಿಕೊಂಡಿದ್ದಾರೆ.
ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಈ ಸಿನಿಮಾಕ್ಕೆ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ, ಅವರ ನಿರ್ದೇಶನವಿದೆ.