Advertisement

‘ಎತ್ತಿನಹೊಳೆ ನೀರು ಶೀಘ್ರವೇ ಲಭ್ಯ’

01:36 AM Jul 26, 2019 | Sriram |

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯಡಿ ಭೂಸ್ವಾಧೀನ ಕಾಯ್ದೆಗೆ ಮಾಡಲಾಗಿರುವ ತಿದ್ದುಪಡಿಗೆ ರಾಜ್ಯಪಾಲರ ಅಂಗೀಕಾರ ದೊರೆತ ನಂತರ ಇದೀಗ ರಾಷ್ಟ್ರಪತಿಗಳ ಅಂಕಿತವೂ ದೊರೆತಿದೆ. ಇದರಿಂದಾಗಿ ಈ ಎರಡೂ ಜಿಲ್ಲೆಯ ಸಾರ್ವಜನಿಕರಿಗೆ ಎತ್ತಿನಹೊಳೆಯ ನೀರು ಅತಿ ಶೀಘ್ರದಲ್ಲಿ ಲಭಿಸುವ ಅವಕಾಶ ಹೆಚ್ಚಾಗಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

Advertisement

ಎತ್ತಿನಹೊಳೆ ಯೋಜನೆಯು ಕುಡಿಯುವ ನೀರಿನ ಯೋಜನೆ ಆಗಿರುವ ಕಾರಣ ಭೂಸ್ವಾಧೀನ ಕಾಯ್ದೆ ಕಲಂ 23 ಮತ್ತು 24ನ್ನು ತಿದ್ದುಪಡಿ ಮಾಡಿ ಜಿಲ್ಲಾಧಿಕಾರಿಗಳು, ಭೂ ಒಡೆಯರು ಮತ್ತು ಸರ್ಕಾರದ ಮಧ್ಯೆ ನೇರ ಮಾತುಕತೆ ನಡೆಸಿ ಸಮಾಧಾನಕರವಾಗಿರುವ ಬೆಲೆಯನ್ನು ನಿಗದಿಪಡಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ರಾಜ್ಯ ವಿಧಾನಸಭೆ, ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ಮಸೂದೆಯನ್ನು ಅಂಗೀಕರಿಸಿತ್ತು.

ಇದು ರಾಜ್ಯಪಾಲರಿಂದ ಅಂಕಿತವಾಗಿ, ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲಾಗಿದ್ದು, ರಾಷ್ಟ್ರಪತಿಗಳಿಂದಲೂ ಅಂಗೀಕಾರ ಪಡೆದು, ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಇದರಿಂದಾಗಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವಿತರಿಸುವ ನೀರಿನ ಸಂಗ್ರಹಕ್ಕೆ ನಿರ್ಮಾಣವಾಗಿರುವ ಬೈಲಗೊಂಡ್ಲು ಜಲಾಶಯಕ್ಕೆ ಅಗತ್ಯವಿರುವ ಸುಮಾರು 2,500 ಎಕರೆ ಭೂಮಿಯ ಸ್ವಾಧೀನ ಯಾವುದೇ ವಿಳಂಬವಿಲ್ಲದೆ ತ್ವರಿತಗತಿಯಲ್ಲಿ ಸಾಗುತ್ತದೆ. ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ನೀಡುವ ಪರಿಹಾರ ಮೊತ್ತದಲ್ಲಿ ಇದ್ದ ವ್ಯತ್ಯಾಸದ ಮೌಲ್ಯವನ್ನೂ ಸರಿಪಡಿಸಿ, ಎಲ್ಲ ರೈತರಿಗೂ ಏಕರೀತಿಯ ಪರಿಹಾರ ಕೊಡಲು ನಿರ್ಧರಿಸಲಾಗಿದೆ. ಕೆ.ಸಿ.ವ್ಯಾಲಿ ಯೋಜನೆಯಡಿ ಇಲ್ಲಿಯವರೆಗೂ 240 ಎಂಎಲ್ಡಿ ಒಳಹರಿವು ಇದ್ದಿದ್ದು, ಈಗ ಕಳೆದ 10 ದಿನಗಳಿಂದ 280 ಎಂಎಲ್ಡಿ ಆಗಿ ಕಳೆದ 3 ದಿವಸದಿಂದ 290 ಎಂಎಲ್ಡಿ ನೀರಿನ ಒಳಹರಿವು ಬರುತ್ತಿದೆ. ಮಾಲೂರು-ಶಿವಾರಪಟ್ಟಣ ಮಾರ್ಗ, ಕೋಲಾರ-ಹೊಳಲಿ ಮಾರ್ಗ ಮತ್ತು ನರಸಾಪುರ, ಈ ಮೂರೂ ಮಾರ್ಗಗಳಲ್ಲಿ ಏಕಕಾಲದಲ್ಲಿ ನೀರು ಹರಿ ಬಿಡುತ್ತಿರುವುದರಿಂದ ರೈತರು ತಾಳ್ಮೆಯಿಂದ ಸಹಕರಿಸಬೇಕಾಗುತ್ತದೆ ಎಂದು ಮನವಿ ಮಾಡಿದರು. ಎಸ್‌.ಅಗ್ರಹಾರ ಕೆರೆಯ ನೀರಿನ ಸಂಗ್ರಹಾ ಸಾಮರ್ಥ್ಯ 390 ಎಂಸಿಎಫ್‌ಟಿ ಇರುತ್ತದೆ. ಈ ಹಿಂದೆ ಮರಳು ತೆಗೆಯುವುದು ಹಾಗೂ ಮಣ್ಣು ತೆಗೆಯುವ ಕಾರಣಗಳಿಂದ ಕೆರೆಯಲ್ಲಿ ಅನೇಕ ಕಡೆ ಬಹಳ ಆಳದ ಕುಣಿಗಳು ಬಿದ್ದಿದ್ದವು. ಈಗ ಕಳೆದ 20 ದಿನಗಳಿಂದ ಎಲ್ಲ ಹೀರಿಕೆ ಮುಗಿದು, ಸುಮಾರು 100 ಎಂಸಿಎಫ್‌ಟಿ ನೀರು ಈಗ ಅಗ್ರಹಾರ ಕೆರೆಯಲ್ಲಿ ಲಭ್ಯವಿದೆ ಎಂದರು.

ಇನ್ನೂ 200 ಎಂಸಿಎಫ್‌ಟಿ ನೀರು ಬರಬೇಕಿರುವ ಕಾರಣ ಸುಮಾರು ಒಂದೂವರೆ ತಿಂಗಳಿಗೂ ಮೇಲ್ಪಟ್ಟ ಸಮಯ ಬೇಕಾಗುತ್ತದೆ. ಕೆಳ ಭಾಗದ ಪ್ರದೇಶದ ರೈತರು ಅಂದರೆ ಮುದುವಾಡಿ, ಜನ್ನಘಟ್ಟ, ಚಿಲ್ಲಪ್ಪನಹಳ್ಳಿ ಮತ್ತು ಆಲವಟ್ಟ ಮಾರ್ಗದ ರೈತರು ತಾಳ್ಮೆಯಿಂದ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಯರಗೊಳ್‌ ಅಣೆಕಟ್ಟು ಯೋಜನೆ ಕಾಮಗಾರಿಗೆ 40 ಅಡಿ ಮೀ (130 ಅಡಿ ಎತ್ತರ 400 ಮೀ ಅಗಲ) ಅಂದಾಜು ಮಾಡಲಾಗಿದ್ದು, ಡಿಸೆಂಬರ್‌ 2019ರ ಅಂತ್ಯಕ್ಕೆ ನಿಯೋಜಿತ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next