Advertisement

ಮಕಳಿಗೆ ನೈಜ ಅನುಭವ ಆಧಾರಿತ ಶಿಕಣ

05:36 PM Nov 21, 2019 | Naveen |

ಫೈರೋಜ್‌ ಖಾನ್‌
ಯಳಂದೂರು:
ಶ್ವಾಸನಾಳಗಳ ಒಳಗೆ ಮಕ್ಕಳು ಇಣುಕಿದರೆ ಹೇಗಿರುತ್ತದೆ? ನಮ್ಮ ಹೃದಯ ಬಡಿತವನ್ನು ಸ್ವತಃ ಕಣ್ಣುಗಳಿಂದಲೇ ನೋಡುವುದಾದರೆ, ಗಾಳಿ ಚೀಲಗಳು ಹೇಗಿರುತ್ತವೆ? ರಕ್ತ ಹೇಗೆ ಪರಿಚಲನೆಯಾಗುತ್ತದೆ? ಇದನ್ನು ಕಣ್ತುಂಬಿಕೊಂಡರೆ, ಎತ್ತರದ ಹಿಮಾಲಯ, ಜಲಪಾತದ ತುದಿಯಲ್ಲಿ ನಿಂತು ಕೆಳಗಿನ ಪ್ರಪಾತವನ್ನು ನೋಡಿ ನಾನು ಇಲ್ಲಿದ್ದೇನೆ ಎಂಬುದನ್ನು ಕಣ್ಣಿಗೆ ಹಾಕುವ ವಿಶಿಷ್ಟ ಸಾಧನ ಬಳಸಿಕೊಂಡು ಸುತ್ತಲೂ ತಿರುಗಿ ಅನುಭವಿಸಿ ನೋಡುವುದಾದರೆ ಹೇಗೆ? ಇಂತಹ ವಿಶಿಷ್ಟ ವಿಭಿನ್ನ ಪ್ರಯೋಗವನ್ನು ರಾಜ್ಯದಲ್ಲೇ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅತ್ಯಂತ ರಿಯಾಯಿತಿ ದರದಲ್ಲಿ ತೋರಿಸುವ ಕೆಲಸ ನಡೆಯುತ್ತಿದೆ. ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಚಾಮರಾಜನಗರದ ವಿಆರ್‌ ಟೆಕ್ನಾಲಜಿಸ್‌ ಕಂಪೆನಿ ಮಕ್ಕಳಿಗೆ ನೈಜ ಅನುಭವ ಆಧಾರಿತ ಶಿಕ್ಷಣ (ವರ್ಚುವಲ್‌ ರಿಯಾಲಿಟಿ ಎಜುಕೇಷನ್‌) ನೀಡಲಾಗುತ್ತಿದೆ.

Advertisement

ಅನುಭವದ ಶಿಕ್ಷಣ: ಇದು ಮಕ್ಕಳಿಗೆ ವಿಭಿನ್ನ ಅನುಭವ ಒದಗಿಸುವ ಶಿಕ್ಷಣ ಕ್ರಮವಾಗಿದೆ. ಇದನ್ನು ಮೊಬೈಲ್‌ ಅಥವಾ ಐಪಾಡ್‌ನ‌ ಸಹಾಯದೊಂದಿಗೆ ಕಣ್ಣಿಗೆ ಹಾಕುವ ವಿಆರ್‌ ಸಾಧನ ಬಳಸಿ 360 ಡಿಗ್ರಿ ಆಯಾಮದಲ್ಲಿ ಶಾಲೆ ಪಠ್ಯದಲ್ಲಿರುವ ಎನ್‌ಸಿಆರ್‌ಟಿ ಆಧಾರಿತ ಶಿಕ್ಷಣದಲ್ಲಿರುವ ಪಠ್ಯ ವಿಷಯಗಳಲ್ಲಿ ಬರುವ ವಿಷಯ ವಸ್ತುಗಳನ್ನು ದೃಶ್ಯ ರೂಪದಲ್ಲಿ ತೋರಿಸುವ ಶಿಕ್ಷಣವಾಗಿದೆ. ಇದರಿಂದ ಲಾಭವೇನು: ಈ ಕ್ರಮದಿಂದ ಮಕ್ಕಳಿಗೆ ಬೋಧಿಸಿದರೆ ಮಕ್ಕಳು ಪಠ್ಯದಲ್ಲಿನ ವಸ್ತು ವಿಷಯ ಅನುಭವಿಸುವುದರಿಂದ ಮಕ್ಕಳಿಗೆ ವಿಷಯವನ್ನು ಸುಲಭವಾಗಿ ಅರ್ಥೈಸುವಿಕೆಯಾಗುತ್ತದೆ. ಓದಿ ನೆನಪಿನಲ್ಲಿಟ್ಟು ಕೊಳ್ಳುವುದಕ್ಕಿಂತ ದೃಶ್ಯಗಳ ರೂಪದಲ್ಲಿ, ಕಂಡು ಅನುಭವಿಸಿ ಬರೆಯುವುದು ಸುಲಭವಾಗಲಿದೆ.

ಪ್ರತಿ ಮಗುವಿಗೆ ವರ್ಷಕ್ಕೆ 50 ರೂ. ಚಾರ್ಜ್‌: ಇಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯನ್ನು ಪ್ರಥಮವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳನ್ನೇ ಮುಖ್ಯವಾಗಿ ಇಟ್ಟುಕೊಳ್ಳಲಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಥಮವಾಗಿ ಈ ಪ್ರಯೋಗ ನಡೆದಿತ್ತು. ಈಗ ಯಳಂದೂರು ತಾಲೂಕಿನ ಗುಂಬಳ್ಳಿ ಪ್ರೌಢಶಾಲೆಯಲ್ಲಿ ಪ್ರಯೋಗ ಮಾಡಲಾಗಿದೆ. ಸಂಸ್ಥೆ ಪ್ರತಿ ಮಗುವಿಗೆ ವರ್ಷಕ್ಕೆ 50 ರೂ. ಚಾರ್ಜ್‌
ಮಾಡಲಾಗುತ್ತದೆ. ಈಗಾಗಲೇ ಗುಂಡ್ಲುಪೇಟೆ ಶಾಸಕ ನಿರಂಜನ್‌ ಹಾಗೂ ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಜೊತೆ ಸಂಸ್ಥೆ ಮಾತುಕತೆ ನಡೆಸಿದೆ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಈ ವೆಚ್ಚ ಭರಿಸಲು ಅವರು ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಸ್ಥಳಗಳಿಗೂ, ವಿಸ್ತರಿಸಲಾಗುತ್ತದೆ ಎಂದು ಸಂಸ್ಥೆ ಸಂಯೋಜಕ ಮಂಜು, ಮಹೇಶ, ರಮೇಶ್‌ ಮಾಹಿತಿ ನೀಡಿದರು.

ಮಕ್ಕಳಿಗೆ ಕಲಿಸುವುದು ಸುಲಭ
ಶಿಕ್ಷಣ ಪದ್ಧತಿಯಲ್ಲಿ 8ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಸಮಾಜ, ವಿಜ್ಞಾನ ಹಾಗೂ ಐತಿಹಾಸಿಕ ವಿಷಯಗಳ ಬಗ್ಗೆ ಪಠ್ಯದಲ್ಲಿರುವ ವಿಷಯಗಳನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವುದರಿಂದ ಬೋಧನೆಗಿಂತ ವಿಷಯ ಕಲಿಕೆ ಸುಲಭವಾಗಲಿದೆ. ವಿದ್ಯಾರ್ಥಿಗಳ ತಂಡವನ್ನು ಮಾಡಿಕೊಂಡು ಈ ತರಗತಿ ನಡೆಸಲಾಗುತ್ತದೆ. ಇದರಿಂದ ಶಾಲಾ ಫ‌ಲಿತಾಂಶದಲ್ಲಿ ಗಣನೀಯ ಬದಲಾವಣೆಯಾಗುವ ನಿರೀಕ್ಷೆಯಿದೆ. ನಮ್ಮ ಶಾಲೆಯಲ್ಲಿ ಈ ಪ್ರಯೋಗ ನಡೆದಿರುವುದು ಖುಷಿ ತಂದಿದೆ ಎಂದು ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಎಂ.ಸಿ. ಮಹಾದೇವ ಸ್ವಾಮಿ, ಶಿಕ್ಷಕ ಎಂ.ವೀರಭದ್ರಸ್ವಾಮಿ, ಮಧುಕರ್‌, ಜಗದೀಶ್‌, ಬಿ.ವಿ.ನಾಗರತ್ನ ಹಾಗೂ ವೈ.ಸಿ.ಕುಮಾರಸ್ವಾಮಿ ಸಂತಸ ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next