Advertisement

ಯಳಂದೂರಿನಲ್ಲೂ ‘ಪಂಚಲಿಂಗ ದರ್ಶನ’: ಐತಿಹ್ಯ ಸಾರುವ 450 ವರ್ಷಗಳ ‘ಬಳೇಮಂಟಪ’

04:32 PM Dec 14, 2020 | Mithun PG |

ಯಳಂದೂರು (ಚಾಮರಾಜನಗರ): ರಾಜ್ಯದಲ್ಲೇ ಜಿಲ್ಲೆಯ ಅತ್ಯಂತ ಚಿಕ್ಕ ತಾಲೂಕು ಹಾಗೂ ಪಟ್ಟಣವಾಗಿ ಗುರುತಿಸಿಕೊಂಡಿರುವ ಯಳಂದೂರು ಪಟ್ಟಣದ ಸಾಹಿತಿಕವಾಗಿ ಹಾಗೂ ಐತಿಹಾಸಿಕವಾಗಿ ಅತ್ಯಂತ ಮಹತ್ವ ಪಡೆದುಕೊಂಡಿದೆ.

Advertisement

ಇಲ್ಲಿನ ಬಳೇಮಂಟಪ ಇಡೀ ದೇಶದಲ್ಲೇ ಒಂದೇ ಕಲ್ಲಿನಲ್ಲಿ ಕೆತ್ತಿರುವ ವಿಶಿಷ್ಟ ಕಲ್ಲಿನ ಬಳೆಗಳಿಂದ ವಿಖ್ಯಾತವಾಗಿದೆ. ಗೌರೇಶ್ವರ ಹಾಗೂ ಪಾರ್ವತಾಂಬೆ ದೇಗುಲಗಳಿಗೆ ಇದು ದ್ವಾರ ಮಂಟಪವಾಗಿದೆ. ಇದಕ್ಕೆ 450 ಕ್ಕೂ ಹೆಚ್ಚು ವರ್ಷಗಳ ಐತಿಹ್ಯವಿದೆ. ಇದರ ಹಿಂಭಾಗದಲ್ಲೇ ಪಂಚಲಿಂಗಗಳೂ ಇವೆ. ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಸಮಯದಲ್ಲಿ ಇಲ್ಲೂ ಪಂಚಲಿಂಗಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಪಂಚಲಿಂಗ ದರ್ಶನ ನಡೆಸಲು ಸಿದ್ಧತೆಗಳು ಆರಂಭಗೊಂಡಿವೆ. ಇಲ್ಲಿರುವ ಮಲ್ಲಿಕಾರ್ಜುನೇಶ್ವರ, ಜಂಬುನಾಥೇಶ್ವರ, ಅರುಣಾಚಲೇಶ್ವರ, ತಾರಕೇಶ್ವರ, ಚಿದಂಬರೇಶ್ವರ ಎಂಬ 5 ಲಿಂಗಗಳು ಭಾನುವಾರ ರಾತ್ರಿಯಿಂದಲೇ ವಿಶೇಷ ಪೂಜೆಗಳು ನೆರವೇರಲಿವೆ. ಪ್ರತಿ ಲಿಂಗಕ್ಕೂ ಕೊಳಗಧಾರಣೆ ಮಾಡಿ, ವಿಶೇಷ ಅಲಂಕಾರ ಮಾಡಿ, ಗಣಪತಿ ಹೋಮ, ರುದ್ರಭಿಷೇಕ ನಡೆಯಲಿದ್ದು ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಗೌರೇಶ್ವರ ಹಾಗೂ ಪಾರ್ವತಾಂಬೆಗೂ ವಿಶೇಷ ಪೂಜೆಗಳು ನಡೆಯಲಿವೆ. ಅಮವಾಸ್ಯೆ ದಿನವಾಗಿರು ಸೋಮವಾರ ಬೆಳಿಗ್ಗೆ ವಿಶೇಷ ಪೂಜೆಗಳು ನೆರವೇರಲಿದ್ದು ಪ್ರಸಾದ ವಿನಿಯೋಗಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸರಳ ಆಚರಣೆಗೆ ಕ್ರಮ:

Advertisement

ಐದು ಶ್ರಾವಣ ಹಾಗೂ ಐದು ಕಾರ್ತಿಕ ವಾರಗಳು ಬರುವ ವರ್ಷದಲ್ಲಿ ಪಂಚಲಿಂಗ ದರ್ಶನ ನಡೆಯುತ್ತದೆ. ತಲಕಾಡಿನಲ್ಲಿ ನಡೆಯುವ ಪಂಚಲಿಂಗ ದರ್ಶನ ಸಮಯದಲ್ಲೇ ಯಳಂದೂರು ಪಟ್ಟಣದಲ್ಲಿರುವ ದೇಗುಲದಲ್ಲೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಾರಿ ಕೋವಿಡ್ ಇರುವುದರಿಂದ ಸರಳವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಸೂಚನೆನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು, ಸ್ಯಾನಿಟೈಜರ್ ಬಳಕೆ, ಕಡ್ಡಾಯ ಮಾಸ್ಕ್ ಬಳಕೆಗೆ ಈಗಾಗಲೇ ಪ್ರಚಾರ ಮಾಡಲಾಗಿದೆ. ಈ ದೇಗುಲ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬಂದರೂ ಇದಕ್ಕಾಗಿ ವಿಶೇಷ ಅನುದಾನ ಬರುವುದಿಲ್ಲ. ಹಾಗಾಗಿ ಭಕ್ತರೇ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದು ಸರಳವಾಗಿ ಅರ್ಥಪೂರ್ಣವಾಗಿ ಉತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇಗುಲದ ಅರ್ಚಕ ಮಹೇಶ್ ಚಂದ್ರಮೌಳಿ ದೀಕ್ಷಿತ್ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next