Advertisement

ಹಿರಿಯ ಕಲಾವಿದೆಗೆ ರಾಜೋತ್ಸವ ಪ್ರಶಸ್ತಿ

03:09 PM Oct 31, 2019 | Naveen |

„ಮಲ್ಲಪ್ಪ ಮಾಟರಂಗಿ
ಯಲಬುರ್ಗಾ:
ರಂಗಭೂಮಿ ಕಲಾವಿದೆ ಪಟ್ಟಣದ ಶಾಂತಮ್ಮ ಪೂಜಾರ ಅವರಿಗೆ 2019-20ನೇ ಸಾಲಿನ ಜಿಲ್ಲಾ ಕರ್ನಾಟಕ ರಾಜೋತ್ಸವ ಪ್ರಶಸ್ತಿ ಒಲಿದಿದೆ.

Advertisement

ಶಾಂತಮ್ಮ ಪೂಜಾರ ಅವರು 1985 ರಿಂದ ರಂಗಭೂಮಿ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಶಾಂತಮ್ಮ ಅವರು ಕಣ್ಣು ನೋವಿನಿಂದ ಬಳಲುತ್ತಿದ್ದು, ಅಂಗವಿಕಲೆಯಾಗಿದ್ದಾರೆ. ಇವರು ಪ್ರಥಮ ಬಾರಿ ಪುತ್ಥಳಿ ಎಂಬ ನಾಟಕದಲ್ಲಿ ಅಭಿನಯಿಸಿದ್ದಾರೆ.

ಮೂವತ್ತು ವರ್ಷಗಳ ಹಿಂದೆಯೇ ಇವರು ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಂಡು, ರಂಗಭೂಮಿಯಲ್ಲೇ ಸಕ್ರಿಯರಾಗಿದ್ದರು.

ಶಾಂತಮ್ಮರ ಪತಿ ಕೆಇಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಸಂಜೆ ವೇಳೆ ಮನೆ ಇರುತ್ತಿರಲಿಲ್ಲವಂತೆ. ಒಂದು ದಿನ ಅವರ ಮನೆ ಎದುರು ಹಾವು ಬಂದಿತ್ತು. ಇದರಿಂದ ಭಯಗೊಂಡ ಶಾಂತಮ್ಮ ಅವರು ಪತಿಯೊಂದಿಗೆ ತಾವೂ ಕೆಲಸಕ್ಕೆ ಹೋಗುತ್ತಿದ್ದರು. ಆಗ ಪಟ್ಟಣಕ್ಕೆ ಗೋಕಾಕ್‌, ಬಾದಾಮಿ ಸೇರಿ ಇನ್ನಿತರ ನಾಟಕ ಕಂಪನಿಗಳು ಆಗಮಿಸುತ್ತಿದ್ದವು. ಆ ಸಂದರ್ಭದಲ್ಲಿ ಇವರು ನಿತ್ಯ ನಾಟಕ ನೋಡುವ ಹವ್ಯಾಸ ಬೆಳೆಸಿಕೊಂಡು ನಂತರ ರಂಗಭೂಮಿಯಲ್ಲೇ ತೊಡಗಿಸಿಕೊಂಡಿದ್ದಾಗಿ ಸ್ಮರಿಸಿದರು.

ಹಲವು ಪಾತ್ರ: ಕಡ್ಲಿಮಟ್ಟಿ ಕಾಶಿಬಾಯಿ ಸೇರಿದಂತೆ ಹಲವಾರು ನಾಟಕಗಳಲ್ಲಿ ತಾಯಿ, ಮಗಳು, ಸೊಸೆ, ಅತ್ತೆ ಸೇರಿದಂತೆ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗುಡಗೇರಿ, ಧುತ್ತರಗಿ, ಮಂಡಲಗಿರಿ ಸೇರಿದಂತೆ ರಾಜ್ಯದ 50ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ಅಭಿನಯಿಸಿದ್ದಾರೆ.

Advertisement

ಇವರಿಗೆ ದಿ. ಗೋಕಾಕ ಬಸವಣೆಪ್ಪ, ಕುಕನೂರಿನ ರಹೆಮಾನವ್ವ ಕಲ್ಮನಿ ರಂಗಭೂಮಿ ಗುರುಗಳು. ಬಾದಾಮಿ, ಸಾಹಿತ್ಯ ಸಮ್ಮೇಳನ ಸೇರಿ ರಾಜ್ಯದ ಇತರೆಡೆಗಳಲ್ಲೂ ಕಲೆ ಪ್ರದರ್ಶಿಸಿ, ಸೈ ಎನಿಸಿಕೊಂಡಿದ್ದಾರೆ.

ಹಲವು ಪ್ರಶಸ್ತಿ: ಇವರಿಗೆ ಈಗಾಗಲೇ ಬಳ್ಳಾರಿ ರಂಗಭೂಮಿ ಕಲಾ ಸಂಸ್ಥೆಯವರು ರಂಗಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಷ್ಟೇ ಅಲ್ಲದೇ ವಿವಿಧ ಸಂಘ ಸಂಸ್ಥೆಗಳು ಇವರ ಪ್ರತಿಭೆ ಗುರುತಿಸಿ ಸನ್ಮಾನಿಸಿವೆ. ನಾಟಕಗಳಲ್ಲಿ ಶಾಂತಮ್ಮ ಪಾತ್ರ ಇತ್ತೆಂದರೆ ರಂಗಮಂದಿರದ ತುಂಬಿರುತ್ತಿತ್ತು.

ಇಂದಿನ ಮಹಿಳಾ ಕಲಾವಿದರು ಇವರ ಬಳಿ ಬಂದು ಸಲಹೆ, ಮಾರ್ಗದರ್ಶನ ಪಡೆಯುತ್ತಾರೆ. ಶಾಂತಮ್ಮಗೆ ಓರ್ವ ಪುತ್ರಿ, ಇಬ್ಬರು ಪುತ್ರರಿದ್ದಾರೆ. ಜೀವನ ನಿರ್ವಹಣೆಗೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ರಾಜೋತ್ಸವ ಪ್ರಶಸ್ತಿಗೆ ಕೊನೆ ದಿನ 25ರಂದು ಅರ್ಜಿ ಹಾಕಿದ್ದೆ. ಆಯ್ಕೆಯಾಗುವ ಭರವಸೆ ಇರಲಿಲ್ಲ. ಆದರೂ ಪ್ರತಿಭೆ ಗುರುತಿಸಿ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂದರು.

ರಂಗಭೂಮಿಯಿಂದ ಬದುಕು ಉತ್ತಮವಾಗಿದೆ. ಜೀವನ ನಿರ್ವಹಣೆಗೆ ಯಾವುದೇ ತೊಂದರೆಯಾಗಲಿಲ್ಲ, ಆದರೇ ಇಂದಿನ ಪೀಳಿಗೆ ನಾಟಕಗಳಲ್ಲಿ ಅಭಿನಯ ಮಾಡುವವರು ಸಂಪೂರ್ಣ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪ್ರಸ್ತುತ ದಿನಮಾನಗಳಲ್ಲಿ ರಂಗಭೂಮಿ ಕಲೆ ಉಳಿಸಿ
ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಹಾಗೂ ಜನಪ್ರತಿನಿಧಿ ಗಳು ಗಮನಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ನ. 1ರಂದು ಕೊಪ್ಪಳದಲ್ಲಿ ನಡೆಯುವ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next