ಮೀಯಪದವು: ಬೆಜ್ಜ ಶ್ರೀ ಧೂಮಾವತೀ ಬಂಟ ದೈವಸ್ಥಾನದ ಜಾತ್ರೋತ್ಸವ ಸಂದರ್ಭ ಕಳೆದ 25 ವರ್ಷಗಳಿಂದ ಬೆಜ್ಜ ಗುತ್ತು ನಾರಾಯಣ ಹೆಗ್ಡೆ ಮನೆಯವರು ವೃತ್ತಿ ಮೇಳಗಳ ಯಕ್ಷಗಾನ ಬಯಲಾಟ ಆಯೋಜಿಸುತ್ತಾ ಬಂದಿರುವ ಯಕ್ಷೊàತ್ಸವದ “ಬೆಳ್ಳಿಹಬ್ಬ’ ಸಮಾರಂಭ ಸಡಗರದಿಂದ “ಬೆಜ್ಜ ರಾಮಚಂದ್ರ ಹೆಗ್ಡೆ ವೇದಿಕೆ’ ಯಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ನೆನಪಿಗಾಗಿ ರಾಮಚಂದ್ರ ಹೆಗ್ಡೆ ವೇದಿಕೆಯವರು ಯೋಗೀಶ ರಾವ್ ಚಿಗುರುಪಾದೆ ಯವರ ಸಂಪಾದಕತ್ವದಲ್ಲಿ ರಚಿಸಿರುವ “ಬೆಳ್ಳಿ ಗೆಜ್ಜೆ’ ಸ್ಮೃತಿ ಸಂಚಿಕೆ ಲೋಕಾರ್ಪಣೆ ಗೊಳಿಸಲಾಯಿತು.
ಕೇರಳ ಸರಕಾರ ಪಾರ್ತಿಸುಬ್ಬ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ರೈ ಮಾಸ್ತರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ “ಬೆಳ್ಳಿ ಗೆಜ್ಜೆ’ ಕೃತಿ ಲೋಕಾರ್ಪಣೆ ಗೊಳಿಸಿ ಶುಭ ಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ ದಕ್ಷಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಯರಾಮ ಮಂಜತ್ತಾಯ, ಮುಂಬಯಿ ಉದ್ಯಮಿ ಸುರೇಶ ಶೆಟ್ಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಡಗುತಿಟ್ಟಿನ ಖ್ಯಾತ ಭಾಗವತ ಸುರೇಶ ಶೆಟ್ಟಿ ಶಂಕರ ನಾರಾಯಣ ಅವರಿಗೆ ಬೆಳ್ಳಿ ಹಬ್ಬ ವಿಶೇಷ ಸಮ್ಮಾನ, ತೆಂಕುತಿಟ್ಟಿನ ಖ್ಯಾತ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ಅವರಿಗೆ ವಾರ್ಷಿಕ ಸಮ್ಮಾನ ನಡೆಸ ಲಾಯಿತು. “ಬೆಳ್ಳಿ ಗೆಜ್ಜೆ’ ಸಂಪಾದಕ ಯೋಗೀಶ ರಾವ್ ಚಿಗುರುಪಾದೆ ಅವರನ್ನು ಗೌರವಿಸಲಾಯಿತು. ರಾಜಾರಾಮ ರಾವ್ ಚಿಗುರುಪಾದೆ ಸಮ್ಮಾನಿತರ ಬಗೆಗೆ ಅಭಿನಂದನಾ ಭಾಷಣಗೈದರು. ಕಾರ್ಯಕ್ರಮ ಆಯೋಜಕರಾದ ರಾಮಚಂದ್ರ ಹೆಗ್ಡೆ ವೇದಿಕೆ ಅಧ್ಯಕ್ಷ ಮೋಹನ ಹೆಗ್ಡೆ ಬೆಜ್ಜ, ಗೋವಿಂದ ಹೆಗ್ಡೆ ಬೆಜ್ಜ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ವೇದಿಕೆ ಸದಸ್ಯ ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದ ಬಳಿಕ ಸಾಲಿಗ್ರಾಮ ಮೇಳದವರಿಂದ “ಸತ್ಯ ಹರಿಶ್ಚಂದ್ರ – ಲವಕುಶ’ ಯಕ್ಷಗಾನ ಬಯಲಾಟ ಜರಗಿತು.