Advertisement

ಪ್ರೇಮ ಕಾವ್ಯದ ಅಂತರಂಗ ತೆರೆದಿರಿಸಿದ ಕೃಷ್ಣಂ ವಂದೇ ಜಗದ್ಗುರುಂ

06:00 AM Sep 28, 2018 | |

ಯಕ್ಷಕಾವ್ಯದ ಅಂತರಂಗ ತೆರೆಸಿದ ಈ ಪ್ರಸಂಗದಲ್ಲಿ ಭಾಗವತರು ಹಳೆಯ ರಾಗಗಳನ್ನು ಮಾತ್ರ ಬಳಸದೆ ಆಧುನಿಕ ಪದ್ಯಕ್ಕೆ ಯಕ್ಷಗಾನದಲ್ಲಿ ಇತ್ತೀಚೆಗೆ ಬಳಕೆಯಾಗುವ ಕೆಲ ರಾಗಗಳನ್ನು ಮೂವರು ಭಾಗವತರು ಬಳಸಿಕೊಂಡು ಪ್ರೇಕ್ಷಕರ ಮನ ತಟ್ಟುವಲ್ಲಿ ಯಶಸ್ವಿಯಾದರು.

Advertisement

ಶ್ರೀ ಕೃಷ್ಣ  ಮತ್ತು ಗೋಪಿಕಾ ವನಿತೆ ರಾಧೆಯ ಪ್ರೇಮಕಾವ್ಯವನ್ನು ತೆರೆದಿಟ್ಟ   ಯಕ್ಷ-ಗಾನ- ನಾಟ್ಯ- ವೈಭವ  ಕಥಾ ಪ್ರಸಂಗವೊಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ  ಇತ್ತೀಚೆಗೆ ನಡೆಯಿತು. ಶ್ರೀ ಕುಕ್ಕೆ ಸುಬ್ರಹ್ಮಣ್ಯ ಭಕ್ತ  ವೃಂದದವರು  ಮಠದಲ್ಲಿ ಕೃಷ್ಣಂ ವಂದೇ ಜಗದ್ಗುರುಂ ಯಕ್ಷ-ಗಾನ- ನಾಟ್ಯ-ವೈಭವ  ಪ್ರದರ್ಶಿಸಿದರು.

ಯಕ್ಷಧ್ರುವ ಸತೀಶ್‌  ಶೆಟ್ಟಿ ಪಟ್ಲ, ಬಲಿಪ ಪ್ರಸಾದ್‌ ಭಟ್‌, ರಮೇಶ್‌ ಭಟ್‌ ಪುತ್ತೂರು ದ್ವಂದ್ಯ ಹಾಡುಗಾರಿಕೆಯ ಭಾಗವತಿಕೆಯಲ್ಲಿ  ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಚೆಂಡೆ, ಗುರುಪ್ರಸಾದ್‌ ಬೊಳಿಂಜಡ್ಕ ಮದ್ಧಳೆಯಲ್ಲಿ  ಸುಶ್ರಾಶ್ಯ ಹಿಮ್ಮೇಳ. ಅಷ್ಟೆ ಚೆಂದದ ಪ್ರಸ್ತುತಿ ಯಕ್ಷ-ಗಾನ¬ನಾಟ್ಯ -ವೈಭವದಲ್ಲಿ ಶ್ರೀ ಕೃಷ್ಣನ  ಪಾತ್ರದಲ್ಲಿ ಕು| ದಿಶಾ ಶೆಟ್ಟಿ ಕಟ್ಲ ಮತ್ತು ಡಾ| ವರ್ಷಾ ಶೆಟ್ಟಿ ರಾಧೆಯ ಪಾತ್ರ ನಿರ್ವಹಿಸಿದ್ದರು. ಇಂಪಾದ ಹಾಡಿಗೆ ವೈವಿದ್ಯಮಯ ನಾಟ್ಯ ಮುದ ನೀಡಿತು. ಕಾಲ ಮಿತಿಯೊಳಗೆ  ಪ್ರಸ್ತುತಿ ಅಂತಿಮಗೊಂಡಿದ್ದು ಪ್ರಸಂಗದ ವಿಶೇಷತೆಯಾಗಿತ್ತು. 

ನಾಟ್ಯ ವೈಭವದ ಅಂತರಂಗದ ಕೃಷ್ಣ ವಂದೇ ಜಗದ್ಗುರುಂ ಕಾವ್ಯ ಪ್ರಸಂಗದಲ್ಲಿ  ಬರುವ ಪ್ರಮುಖ ಪಾತ್ರಗಳು ಎರಡು  ಶ್ರೀ ಕೃಷ್ಣ ಮತ್ತು ರಾಧೆ. ಇದು ರಸಿಕರ ವಲಯಕ್ಕೆ ಪರ್ಯಾಪ್ತವಾದ ಸಂಗತಿ. ವಸ್ತುತಃ ಈ ಕಾವ್ಯವು ಚಿತ್ರಿಸುವ ಉತ್ಕಟ ಪ್ರಣಯ ಮತ್ತದರ ಅಡಿಪಾಯದ ಸಂಗತಿಗಳ ನಡುವೆ ಸಂಗಾತಿಗಳ ಪರಸ್ಪರ ಅರ್ಪಣೆಯೇ ಆಗಿದೆ.  

ನಿಜವಾದ ಆಧ್ಯಾತ್ಮ  ಅಂತರಂಗವೂ ಅಲ್ಲಿ ಪ್ರಸ್ತುತಗೊಂಡಿತು.  ಸಹಜವಾದ   ರತಿ ಮತ್ತು ರಾಗಗಳು ಸುಖ ಮತ್ತು ಸುಖೇಚ್ಚೆ  ಪ್ರಣಯಿಗಳ ವಿಸ್ಮತಿಯಲ್ಲಿ  ಶ್ರಗಾರ ಹಾಗೂ ಅನುರಾಗಗಳು ಕಾಣಿಸಿಕೊಂಡವು. ರಸಾನುಭವಕ್ಕೂ ಅದು ನೀಡುವ ಸೌಖ್ಯ ಸಂಸ್ಕಾರಕ್ಕೂ  ಈ ಪ್ರಸ್ತುತಿ ಅಡಿಪಾಯ ಹಾಕಿತ್ತು. ಪಂಥದ ತಾತ್ವಿಕ ನಿಲುವು, ಲೌಕಿಕತೆ  ಮತ್ತು ಆಧ್ಯಾತ್ಮಿಕತೆಗಳ ನಡುವೆ ಕಾವ್ಯ  ಸೇತುವೆಯನ್ನು  ಬೆಸೆಯುವ  ಕೃಷ್ಣ ರಾಧೆಯರ ನಾಟ್ಯ ಗುಚ್ಚ ಶ್ರೀ ಕೃಷ್ಣ-ರಾಧೆಯರ ಪ್ರಣಯ ಸಂಗತಿಗಳನ್ನು ತೆರೆದಿಟ್ಟು ಕಲಾಸಕ್ತರ ಮನಸೂರೆಗೊಳಿಸಿತು. ಸಾಹಿತ್ಯ ಲೋಕದಲ್ಲಿ ಈ ಪರಿಯ ಸ್ಪೂರ್ತಿಯನ್ನು ನೀಡಿದ ಈ ಕೃಷ್ಣ ರಾಧೆಯರ ಪ್ರೇಮ ಕಥನವೂ  ಗೀತ -ನೃತ್ಯ. ಚಿತ್ರಾದಿ ಕಲೆಗಳ ಜಗತ್ತಿಗೆ ಪ್ರೇರಣೆಯನ್ನು  ನೀಡಿದೆ. 

Advertisement

ನಾಯಕ ನಾಯಕಿಯರ ತತ್ವ  ಸ್ವಾರಸ್ಯವನ್ನು ವರ್ಣಿಸುತ್ತ ಹೋದಂತೆ  ಇನ್ನು ಇವರಿಬ್ಬರ ನಡುವಣ ಅನುಸಂಧಾನದ ತಂತುವೆನಿಸಿದ  ಸಖೀಯು ಜೀವ- ಬ್ರಹ್ಮಗಳ  ಸಾಮರಸ್ಯವನ್ನು ಕಲ್ಪಿಸುವ ವೇದಾಂತರ್ಯವಾಗಿ ರೂಪುಗೊಂಡಿತು. ಶ್ರೀ ಕೃಷ್ಣನು  ಪ್ರೀತಿ ಪ್ರಣಯಗಳ ಸುಳಿಗೆ ಸಿಲುಕಿದಾಗ ಸಾಮಾನ್ಯ ಪುರುಷನಾಗುತ್ತಾನೆ. ಹೀಗಾಗಿಯೆ ಈ ಪ್ರಸಂಗದಲ್ಲೂ ಕೂಡ ರಾಧೆಯ ಮುಂದೆ ದಿಟವಾದ ಮಹಾಪುರುಷ ಎಂದೆನಿಸಿಕೊಳ್ಳುವ  ಕೃಷ್ಣ ಪಾತ್ರಧಾರಿ ಕು| ದಿಶಾ ಶೆಟ್ಟಿ ಅವರ ನಟನೆ-ಹಾವ-ಭಾವ ಅತ್ಯದ್ಭುತವಾಗಿ ಕಂಡುಬಂತು. ರಾಧೆಯೂ ಅಸೂಯೆ -ಸಂದೇಹಗಳಿಗೆ ತುತ್ತಾಗುತ್ತಾಳೆ. ರಾಧೆ ಪಾತ್ರದಾರಿ ಅದನ್ನು ನಿರ್ವಹಿಸಿದ್ದು  ಸುಂದರ ಅವತರಣಿಕೆಯಲ್ಲಿ  ಅರ್ಥಪೂರ್ಣವಾಗಿತ್ತು. 

ಹೀಗೆ ಅಲೌಕಿಕವಾದ ಶ್ರಂಗಾರ ರಸವು  ನಮಗೆ ಈ ಪ್ರಸಂಗದಲ್ಲಿ ಸಿದ್ಧಿಸುತ್ತದೆ. ಇಂತಹ ರಾಧೆಯ ಪಾತ್ರವನ್ನು ಅಚ್ಚುಕಟ್ಟು ಮತ್ತು ಮನಮೋಹಕ ರೀತಿಯಲ್ಲಿ ನಿರ್ವಹಿಸಿದ ವೃತ್ತಿಯಲ್ಲಿ ವೈದ್ಯೆ ಆಗಿರುವ ಡಾ| ವರ್ಷಾ ಶೆಟ್ಟಿ ಅವರ ಅಭಿನಯ  ಕಲಾಸಕ್ತರಿಗೆ ಮುದ ನೀಡಿತು. ಕೃಷ್ಣ ರಾಧೆಯರಿಬ್ಬರ ನಾಟ್ಯ-ಅಭಿನಯ- ಮನಮೋಹಕ ನೃತ್ಯಂಜಲಿಗಳು ಕಲಾರಸಿಕರಿಗೆ ಸವಿಯನ್ನು ಉಣಿಸಿತು.

ಅನೇಕ ವ್ಯಾಖ್ಯಾನಗಳಿಗೆ ಪ್ರೀತಿಯ ಸವಿಯನ್ನು ಅನುಭವಿಸಿದ ಜೀವಿಯ ಸಂವೇದನೆಯ ಈ  ಯಕ್ಷ-ಗಾನ- ನಾಟ್ಯ-ವೈಭವವು ಮತ್ತೆ ಮತ್ತೆ ನಮ್ಮೊಳಗೆ ಅನುರಣಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಯಕ್ಷಕಾವ್ಯದ ಅಂತರಂಗ ತೆರೆಸಿದ ಈ ಪ್ರಸಂಗದಲ್ಲಿ ಭಾಗವತರು ಹಳೆಯ ರಾಗಗಳನ್ನು ಮಾತ್ರ ಬಳಸದೆ ಆಧುನಿಕ ಪದ್ಯಕ್ಕೆ ಯಕ್ಷಗಾನದಲ್ಲಿ ಇತ್ತೀಚೆಗೆ ಬಳಕೆಯಾಗುವ ಕೆಲ ರಾಗಗಳನ್ನು ಮೂವರು ಭಾಗವತರು ಬಳಸಿಕೊಂಡು ಪ್ರೇಕ್ಷಕರ ಮನ ತಟ್ಟುವಲ್ಲಿ ಯಶಸ್ವಿಯಾದರು. 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next