Advertisement

Yakshagana ವಾಚಿಕ ಆಶು- ಆದರೆ ಮಿತಿ ಇಲ್ಲವೇ!

04:58 PM Jan 28, 2024 | Team Udayavani |

ಯಕ್ಷಗಾನ ಒಂದು ದೃಶ್ಯಮಾಧ್ಯಮ. ನಾಟಕವೂ ಒಂದು ದೃಶ್ಯ ಮಾಧ್ಯಮ. ಎರಡರಲ್ಲೂ ವಾಚಿಕವಿದೆ. ಆದರೆ ಒಂದೇ ತೆರನಾಗಿಲ್ಲ. ತೀರಾ ಭಿನ್ನ. ನಾಟಕದಲ್ಲಿ ಕೃತಿಕಾರ ನೀಡುವ ನಿರ್ವಚನದಷ್ಟಕ್ಕೆ ವಾಚಿಕ ಸೀಮಿತ. ಅಷ್ಟರಲ್ಲಿಯೇ ಪಾತ್ರಧಾರಿ ಭಾವಾಭಿನಯದೊಂದಿಗೆ ಉದ್ದೇಶವನ್ನು ವ್ಯಕ್ತಪಡಿಸಬೇಕು. ಪಾತ್ರಾಪಾತ್ರಗಳ ನಡುವಿನ ಸಂಭಾಷಣೆಯ ನಿರಂತರತೆಗೆ ಸಂವಾದಿ ಪಾತ್ರಗಳ ಮಾತಿನ ಕೊನೆಯೇ ಸೂಚನೆ. ಇದಕ್ಕೆ ನಾಟಕದಲ್ಲಿ ಕ್ಯಾಚಿಂಗ್‌ ವರ್ಡ್ಸ್‌ ಎಂದು ಕರೆಯುತ್ತಾರೆ. ಈ ಕ್ರಮದಲ್ಲಿ ಕೃತಿಕಾರ ಉದ್ದೇಶಿಸಿದ ಭಾವ ಸಂದೇಶಗಳು ಮತ್ತು ಆರಂಭ, ಮುಕ್ತಾಯಗಳು ಸಂಭವಿಸುತ್ತದೆ.

Advertisement

ಆದರೆ ಯಕ್ಷಗಾನದ ವಾಚಿಕ ಪಾತ್ರಧಾರಿಯ ಆಶು ವಚನವಾಗಿದೆ. ವೇಷಧಾರಿ ಪದದ ಸ್ಥಾಯಿಭಾವವನ್ನು ತನ್ನದೇ ಶಬ್ದಗಳಲ್ಲಿ ಅಭಿನಯದ್ವಾರ ಪ್ರಕಟಪಡಿಸುವುದು ವಾಡಿಕೆ. ಪರಂತು ತನ್ನದೇ ಶಬ್ದಗಳಲ್ಲಾದರೂ ಅದಕ್ಕೊಂದು ಮಿತಿ, ಆವರಣ ಅಥವಾ ಕಟ್ಟುಪಾಡು ಇರಬೇಕಷ್ಟೇ! ಇಲ್ಲವಾದರೆ ಭಾಷೆ ಬಲ್ಲವ ತನಗೆ ಗೊತ್ತಿರುವುದನ್ನೆಲ್ಲ ಹೇಳುತ್ತಾ ಹೋದರೆ ಅದೊಂದು ಪ್ರವಚನವಾದೀತಲ್ಲವೇ? ಅದು ರಂಗಕ್ರಿಯೆ ಆಗಲಾರದು. ಮುಖ್ಯವಾಗಿ ಪ್ರಸಂಗಕರ್ತನ ಆಶಯಕ್ಕೆ ವ್ಯತಿರಿಕ್ತವಾಗದ ಹಾಗೆ ಅರ್ಥಾತ್‌ ಪೂರಕವಾಗಿ ವಾಚಿಕ ನಿರೂಪಿಸಲ್ಪಡಬೇಕು. ಅಲ್ಲದೆ ದೃಶ್ಯಮಾಧ್ಯಮದ ಔಚಿತ್ಯಕ್ಕನುಗುಣವಾಗಿರತಕ್ಕದ್ದು. ಪ್ರೇಕ್ಷಕರಲ್ಲಿ ಕಥಾ ವಸ್ತುವಿನ ಕುರಿತಾದ ಸದಭಿರುಚಿಯನ್ನು ಪ್ರೇರೇಪಿಸುವುದೇ ದೃಶ್ಯಮಾಧ್ಯಮದ ಉದ್ದೇಶ. ಪ್ರೇಕ್ಷಕರ ಲಕ್ಷ್ಯ ಸದಾ ಸ್ಥಿರವಾ ಗಿರುವಂತೆ ನಿರ್ವಹಣೆಯೂ ಇರತಕ್ಕದ್ದು. ಪ್ರದರ್ಶನದಲ್ಲಿ ಒಳಗೊಂಡ ಸನ್ನಿವೇಶಗಳು, ಸಂಭಾಷಣೆಗಳು ಅಗತ್ಯಕ್ಕೆ ತಕ್ಕಂತೆ ಸಂಯೋಜನೆಗೊಂಡಾಗ ಪ್ರೇಕ್ಷಕರ ಲಕ್ಷ್ಯ ಸ್ಥಿರವಾಗಿರುತ್ತದೆ.

ಯಕ್ಷಗಾನದಲ್ಲಿನ ನಿರ್ವಹಣೆಯ ಭಾಗವಾದ ವಾಚಿಕ ಆಶುವಾಗಿದ್ದು, ಅದು ನಿಯಂತ್ರಣಕ್ಕೊಳಪಡದಿದ್ದರೆ ಪ್ರೇಕ್ಷಕರ ಲಕ್ಷ್ಯ ಸ್ಥಿರವಾಗಿ ನಿಲ್ಲದೆ ಪಲ್ಲಟಗೊಳ್ಳುವ ಸಾಧ್ಯತೆ ಹೆಚ್ಚು. ಪರಿಣಾಮವಾಗಿ ಮಾಧ್ಯಮ ತನ್ನ ಉದ್ದೇಶ ಸಾದರಪಡಿಸುವಲ್ಲಿ ವಿಫ‌ಲವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಕ್ಷಗಾನದ ಕಥಾವಸ್ತು ಅದರ ಪ್ರಸಂಗ ಸಾಹಿತ್ಯದಲ್ಲಿ ಅಡಕವಾಗಿದೆ. ಪ್ರಸಂಗ ಸಾಹಿತ್ಯವನ್ನು ಗೀತ, ವಾದನ ಹಾಗೂ ನರ್ತನಗಳ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಹಾಗಾಗಿ ವಾಚಿಕದ ಹರವು ಶ್ರುತಿಗೆ ಹೊಂದಿಕೊಂಡಿರಬೇಕೆಂದೇ ಹೇಳಬಹುದು. ಭಾಗವತರು ಹಾಡುವ ಪದದ ರಾಗ ಯಾ ಸಂಗೀತಕ್ಕನುಗುಣವಾಗಿ ಹೊರಹೊಮ್ಮುವ ಮದ್ದಳೆಯ ನುಡಿಕಾರಗಳಿಂದ ಉಂಟಾಗುವ ನಾದ ಲಹರಿಯ ಅನುರಣೀಯತೆ ಅಥವಾ ವಾಡಿಕೆಯಲ್ಲಿ ಹೇಳುವ ಗುಂಗು ರಂಗಸ್ಥಳದ ನಾಲ್ಕು ಕಂಬಗಳ ನಡುವೆ ಅಡಗುವ ಮುನ್ನ ವೇಷಧಾರಿ ಮುಂದಿನ ಪದಕ್ಕೆ ಒಂದು ಸೇತುವೆಯನ್ನು ಬಲಿದು ತನ್ನ ವಾಚಿಕ ಮುಗಿಸತಕ್ಕದ್ದು. (ಖ್ಯಾತ ಭಾಗವತ ದಿ| ಕುಂಜಾಲು ಶೇಷಗಿರಿ ಕಿಣಿಯವರು ಹೇಳುತ್ತಿದ್ದರು ಎಂಬುದಾಗಿ ಖ್ಯಾತ ವೇಷಧಾರಿ ದಿ| ಹಾರಾಡಿ ಮಹಾಬಲ ಗಾಣಿಗರು ಹೇಳಿದಂತೆ). ಹೀಗೆ ಪದ ಮತ್ತು ವಾಚಿಕ ನಿಯತವೇಗದಲ್ಲಿ ಕ್ರಮಿಸುತ್ತಿರುವುದು ಪ್ರದರ್ಶನಕ್ಕೆ ತಡೆರಹಿತ, ಅವಿಚ್ಛಿನ್‌ ಪರಿಣಾಮ (Rendering effect) ಬೀರಬಲ್ಲುದು. ಇದು ಪ್ರೇಕ್ಷಕರಲ್ಲಿ ಪ್ರದರ್ಶನ ಮನೋಜ್ಞವಾಗಿ ಮೂಡಿ ಬರಲು ಸಹಕಾರಿ.ಈ ನಿರಂತರತೆಗೆ ಕಲಾವಿದ ತನ್ನ ಪಾತ್ರಕ್ಕೆ ಸೀಮಿತವಾದ ಪದಗಳ ಮನನ ಮಾಡಿಕೊಂಡರೆ ಸಾಲದು. ಪ್ರಸಂಗ ಸಾಹಿತ್ಯದ ಸಮಗ್ರ ಮಾಹಿತಿ ಎಲ್ಲ ಕಲಾವಿದರಲ್ಲಿಯೂ ಇರಬೇಕು.

ಯಾಕೆಂದರೆ ವಾಚಿಕದಲ್ಲಿ ಕಥೆ ಮುಂದುವರಿಯುವಿಕೆಯ ಸೂಚನೆ ಅಡಕ ವಾಗಿರತಕ್ಕದ್ದು. ಈ ಬಗ್ಗೆ ಸಂವಾದಿ ಪಾತ್ರಗಳಿಗೂ ಕಥೆ ಅಥವಾ ಪ್ರಸಂಗ ಸಾಹಿತ್ಯದ ಸಂಪೂರ್ಣ ತಿಳಿವಳಿಕೆಬೇಕು. ಈ ಮಿತಿಯೊಳಗೆ ವೇಷಧಾರಿ ತನ್ನ ಅಭಿನಯ ಸಾಮರ್ಥ್ಯ, ಭಾಷಾ ಪ್ರೌಢಿಮೆ ಮತ್ತು ಕಥಾವಸ್ತುವಿನ ಮಾಹಿತಿ ಪ್ರಕಟಪಡಿಸುವ ಅವಕಾಶವೇ ಯಕ್ಷಗಾನದ ವಾಚಿಕದ ವೈಶಿಷ್ಟé. ಈ ಧೋರಣೆ ಯಲ್ಲಿದ್ದ ಯಕ್ಷಗಾನ ಪ್ರದರ್ಶನ ಕಾಲದ ವಾಚಿಕ ತನ್ನ ಸಹಜತೆಯನ್ನು ಈಗ ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿ. ಕೆಲವರು ಪ್ರವಚನ ಮಾಡುತ್ತಾರೆ, ಕೆಲವರು ವಾಕ್‌ ಯುದ್ಧ ಮಾಡುತ್ತಾರೆ. ಇನ್ನು ಕೆಲವರು ಪಾತ್ರದ ಪ್ರತಿಷ್ಠೆಗೆ ಚ್ಯುತಿಯಾಗುವ ಹಾಗೆ ಅಭಿನಯ ಮಾಡುತ್ತಾರೆ. ಇದನ್ನೆಲ್ಲ ನೋಡಿಯೇ ಈ ಅನಿಸಿಕೆ. ಆಟವಲ್ಲದೆ, ವಿದ್ಯುನ್ಮಾನ ಮಾಧ್ಯಮದಿಂದಾಗಿ ನೋಡುವ ಅವಕಾಶ ಈಗ ವಿಪುಲ. ಆದಾಗ್ಯೂ ಇಲ್ಲಿ ಹೇಳಲೇಬೇಕಾದ ವಿಚಾರವೆಂದರೆ, ಈಗಲೂ ಕೆಲವು ಪ್ರಜ್ಞಾವಂತ, ಪರಂಪರೆ ಬಲ್ಲ ಕಲಾವಿ ದರು ನಮ್ಮ ನಡುವೆ ಇದ್ದು ವಾಚಿಕದ ವೈಶಿಷ್ಟ್ಯ ವನ್ನು ಕಾಪಾಡುತ್ತಿದ್ದಾರೆಂಬುದು ಸಂತೋಷ. ಅವರಿಗೆ ಶರಣು, ಶರಣು. ಉಳಿದವರೂ ಇದನ್ನು ಅನುಸರಿಸಲಿ ಎಂಬ ಹಾರೈಕೆ.

-ಬೇಳೂರು ರಾಘವ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next