Advertisement

Yakshagana : ಚರ್ಚೆಯಾಗಬೇಕಾದವು ಸಾಕಷ್ಟಿವೆ

01:08 AM Sep 17, 2023 | Team Udayavani |

ಯಕ್ಷಗಾನ ಕುರಿತಾದ ಚರ್ಚೆಗಳು ಹಲವು ಕೋನಗಳಿಂದ, ಕಲೆಯ ವಿವಿಧ ಅಂಶಗಳ ಕುರಿತು ನಡೆಯುತ್ತಿರುವುದು ಒಳ್ಳೆಯ ವಿದ್ಯಮಾನ. ಕಲಾರಸಿಕತೆ ಜೀವಂತವಾಗಿರುವುದರ ಸಂಕೇತ. ಸಂಖ್ಯೆ ಮತ್ತು ಗಾತ್ರದಲ್ಲಿ ಕಳೆದ ಐದು ದಶಕಗಳಲ್ಲಿ ಯಕ್ಷಗಾನವು ದೊಡ್ಡ ಬೆಳವಣಿಗೆಗಳನ್ನು ಕಂಡಿದೆ, ಹಲವು ತಿರುವುಗಳನ್ನು ತೋರಿಸಿದೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಯಕ್ಷಗಾನದ ಬಗೆಗೆ ವಿಪುಲವಾದ ಚರ್ಚೆ ಆಗುತ್ತಿದೆ.

Advertisement

ಅಸಮತೋಲ: ಆದರೆ ಇಂತಹ ಚರ್ಚೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ ಯಕ್ಷಗಾನದ ಒಳಗೆ ಇರುವಂತಹ ಅಸಮತೋಲ. ಅಪಾರ ಸಮೃದ್ಧಿ ಮತ್ತು ತುಂಬ ಕಲಾ ವಿರೋಧಿ ಅಸಮತೋಲಗಳು ಚಾಲ್ತಿಯಲ್ಲಿವೆ. ಹಿಮ್ಮೇಳ- ಮುಮ್ಮೇಳ ಅಸಮತೋಲ, ವೇಷ-ವಿಧಾನ ಅಸಮ ತೋಲ, ವಿಭಾಗಗಳ ಅಸಮನ್ವಯ, ರಂಗ ವಿನ್ಯಾಸ ಅಸಮತೋಲ ಇದೆ. ಹಾಗೆಯೆ ವಿಮರ್ಶೆಯಲ್ಲಿ ಮುಖ್ಯ ವಾಗಿ ಜಾಲತಾಣಗಳ ಬರಹಗಳಲ್ಲಿ ಕೂಡ “ಇಂತಹ ಪದ್ಯಕ್ಕೆ ಹೀಗೆ ಹೇಳಬಹುದೆ?’, “ಈ ಮಾತು ಸರಿಯೇ?” ಮೊದಲಾದ ಮಾತಿನ ವಿಭಾಗವೇ ಹೆಚ್ಚು ವಿಮರ್ಶಿ ಸಲ್ಪಡುತ್ತದೆ. ವೇಷ, ಪ್ರಸಂಗದ ಪ್ರಸ್ತುತಿ, ಹಿಮ್ಮೇಳ, ನೃತ್ಯ- ವಾದನ-ಔಚಿತ್ಯಗಳ ಬಗೆಗೆ ವಿಮರ್ಶೆ ಆಗುವುದು ಕಡಿಮೆ.

ಒಂದು ಪ್ರಮಾಣದಲ್ಲಿ ಇದು ಸಹಜ. ಕಾರಣ ಹೆಚ್ಚು ಜನರಿಗೆ ತಲುಪುವ ಮತ್ತು ರಂಗ ವಿಧಾನ, ಶೈಲಿ ಮೊದಲಾದ ತಾಂತ್ರಿಕತೆ ಇಲ್ಲದ ಸಾರ್ವತ್ರಿಕವಾದ “ಮಾತು’ ಅರ್ಥಗಾರಿಕೆ -ಅದರ ಕುರಿತೇ ಮಾತು ಆಗು ವುದು ಹೆಚ್ಚು. ಆದರೆ ಸರ್ವಾಂಗ ವಿಮರ್ಶೆ ಅಪೇಕ್ಷಿತ.

ಸೂಪರ್‌, ಅದ್ಭುತ, ಏಕೈಕ, ಹಿಂದೆಂದೂ ಇಲ್ಲದ, ಮಹಾನ್‌ ಮೊದಲಾದ ಟ್ರೆಂಡಿ ಮಾಧ್ಯಮ ಪದಗಳ ನಡುವೆ ಕಲೆ ಕಳೆದು ಹೋಗುತ್ತಿರುವ ನಮ್ಮ ಕಲಾಕ್ಷೇತ್ರದಲ್ಲಿ ತುಂಬ ಪ್ರತಿಭೆ ಇದೆ. ಆದರೆ ಚೌಕಟ್ಟಿನ, ಸೀಮೆಗಳ, ಉನ್ನತಿಕೆಯ ಯತ್ನದ ಪ್ರಜ್ಞೆ ಕಡಿಮೆ ಇದೆ.

ಇವನ್ನೂ ನೋಡಿ: ರಂಗಸ್ಥಳಕ್ಕೆ ಆನೆ, ಕುದುರೆ, ಬೈಕ್‌, ನಿಜವಾಗಿ ನೀರಿನಲ್ಲಿ ಮುಳುಗಿ ಬರುವ ಕೌರವ (ಜಲಸ್ತಂಭ), ಕಂಬ ಹತ್ತುವ ವೇಷ, ಕರುಣ(ಶೋಕ), ಸಂದರ್ಭಕ್ಕೆ ಚಾಲೂ ಕುಣಿತ, ಆವರ್ತನ ಪದ, ಪಂಪು ನೀರಿನ ನದಿ, ಅದೇ ಅದೇ ಹೂ ಕೊಯ್ಯುವ ಎಲ್ಲೆಲ್ಲು ಸೊಬಗಿಲ್ಲದ ಶೃಂಗಾರ, ಬೆನ್ನು ಬಿಡುವ ಸ್ತ್ರೀ ಪಾತ್ರ, ಪ್ರದ ರ್ಶಕ ಪರಿಕರ, ನೃತ್ಯ(ಡ್ಯಾನ್ಸ್‌) ಕಾರ್ಯಕ್ರಮದ ಕಚ್ಚೆಗಳು, ಫ್ರೆಂಚ್‌ ಭುಜ ಪುಗ್ಗೆ(ಫ್ರಿಲ್ಸ್‌), ಐರೋಪ್ಯ ದೊರೆ ಬೆನ್ನು ಶಾಲು, ವಿಚಿತ್ರ ದ್ವಂದ್ವಗಳು ಮತ್ತು ಆನು ರೂಪ್ಯ(ಹಾರ್ಮೊನಿ) ಇಲ್ಲದ ಆಭರಣಗಳು, ಹೇಳಿದ್ದನ್ನೇ ಹೇಳುವ ಗಾನ ಉದ್ಭವ ವಿಕೃತಿ,(ಅಭಿನಯ ತತ್ತ್ವದ ಪ್ರಾಥ ಮಿಕ ಜ್ಞಾನ ಇಲ್ಲದ ಆವರ್ತ ಪದ!), ಭಯಾನಕ ಆಕಾರದ ರೌಡಿ ಮೀಸೆ, ಮೇಲ್ಭಾಗಕ್ಕೆ ಆಚ್ಛಾದನ ಇಲ್ಲದ ಪೂರ್ತಿ ಬಿಡುಮೈ ವೇಷ, ಒಂದಕ್ಕೊಂದು ಮೇಳನ (ಮ್ಯಾಚಿಂಗ್‌) ಇಲ್ಲದ ವೇಷ-ಆಭರಣ-ಒಡವೆ-ಬಣ್ಣ-ಇವೆಲ್ಲ ಆವಿ ಷ್ಕಾರ, ಕೊಡುಗೆ, ಕ್ರಿಯೇಶನ್ಸ್‌ ಎನಿಸುತ್ತಿದೆ.

Advertisement

ಇನ್ನೊಂದೆಡೆ ವಾದ ನದ ಪೆಟ್ಟುಗಳು, ಆಭರಣದ ಸೊಬಗು (ಉದಾ: ಮಾರು ಮಾಲೆ, ಕೈಸರ, ಕಾಲುಮುಳ್ಳು, ಜಂಗು), ರೇಖೆಗಳು, ಮುತ್ತೇರಿ, ಭಂಗಿ, ಝಾಪುಗಳು ಕಳಚಿ ಹೋಗಿ ಮಾಯವಾಗುತ್ತಿವೆ. ನಿಜವಾದ ಆವಿಷ್ಕಾರ ತಂದವರ ಕಲಾ ಯತ್ನ ಗುರುತಿಸಲ್ಪಡುವುದೇ ಇಲ್ಲ.

ನಮ್ಮಿಂದಾಗಲಿಲ್ಲ: 1950ರಿಂದ ಯಕ್ಷಗಾನ ಹರಕೆ ಆಟ, ಡೇರೆ ಆಟ, ಪ್ರಯೋಗ, ಶಿಕ್ಷಣ, ವಿಸ್ತಾರ ಪ್ರಸಾರ, ವಿಮರ್ಶೆಗಳ ಉಬ್ಬರ. ಈಗ ನಲವತ್ತು ಮೇಳ, ನೂರು ತಂಡ, ವಿವಿಧ ಹಂತಗಳಲ್ಲಿ ಆಟ ಕೂಟ. ವರ್ಷಕ್ಕೆ ಸುಮಾರು ಹದಿನೈದು ಸಾವಿರ ಪ್ರದರ್ಶನ. ಕೆಲವು ಮೇಳ ವರ್ಷಗಟ್ಟಲೆ ಮೀಸಲು ಬುಕಿಂಗ್‌. ಎಲ್ಲ ನಿಜ.

ಆದರೆ ನಮ್ಮ ಆ ಕಾಲದ ವಿನ್ಯಾಸದ ಹಳೆಯ ರಂಗಸ್ಥಳವನ್ನು ವಿಸ್ತರಿಸಿ ಹಿಮ್ಮೇಳ, ಚಲ ನೆಗಳಿಗೆ ಅನು ಕೂಲಿಸುವ ವೇಷ ನೃತ್ಯ ಎದ್ದು ಕಾಣಿಸುವ ಕಲಾ ರೂಪದ, ತುಸು ದೊಡ್ಡ, ರಂಗಸ್ಥಳ ರೂಪಿಸಲು ನಮ್ಮಿಂದ ಆಗಲಿಲ್ಲ (ಒಂದೆರಡು ತಂಡ ಬಿಟ್ಟರೆ). ಈಗ ಇರುವ ರಂಗಸ್ಥಳ ಮತ್ತು ದರ್ಬಾರ್‌ ಸಿಂಹಾ ಸನಗಳು- ಕಂಪೆನಿ ನಾಟಕ, ಮದುವೆ ಮಂಟಪ, ಜಾತ್ರೆ ಸಮಾರಂಭ, ವೇದಿಕೆಗಳ ಸಂಕರ.

ಚೌಕಿ, ರಂಗಸ್ಥಳಗಳಿಗೆ ಹದವಾದ, ಪ್ರತಿಫಲನ ಕೊಡುವ ಹಳದಿ ದೀಪ(ಎಲ್ಲೋ ಲೈಟ್ಸ್‌) ಮಾಡಲೂ ಆಗಲಿಲ್ಲ. ತಜ್ಞರ ಅಭಿಮತದಿಂದ ಕ್ಷೇತ್ರ ಗಳು ಕೈಗೊಳ್ಳಲೆಂದು ಹಾರೈಕೆ.

ಹಾಸ್ಯ ಸ್ತ್ರೀವೇಷ: ಯಕ್ಷಗಾನದ ಹಾಸ್ಯವು ಒಂದು ಅಸಾ ಮಾನ್ಯ ಸಂಪತ್ತು. ಸರ್ವಭಾವ ಅಂತರಂಗ. ಸಮಾಜ -ಮತ್ತು ರಂಗಸ್ಥಳ, ಭೂತ -ವರ್ತಮಾನ, ಪುರಾಣ ಸಹಜ, ಲೋಕ-ನಾಟ್ಯಗಳ ಸೇತುವೆ.

ಅದರ ಸೀಮೆ ತುಸು ವಿಶಾಲ, ಸ್ವಾತಂತ್ರ್ಯ ಹೆಚ್ಚು. ಆದರೆ ಅದು ರಂಗವನ್ನು ಆಳಬಾರದು. ಕತೆಗೆ, ಆಟಕ್ಕೆ ಸಂಬಂಧ ಇಲ್ಲದ ಸ್ವತಂತ್ರ ಪ್ರೋಗ್ರಾಂ ಕೂಡ ಆಗಬಾರದು. ಅದು ನಿರ್ದೇಶಕ ನಿಯಂತ್ರಣವೂ ಅಲ್ಲ.

ಯಕ್ಷಗಾನ ಸ್ತ್ರೀವೇಷ ವಿಶಿಷ್ಟ ಪಾತ್ರ ಪ್ರಪಂಚ. ಪೌರಾಣಿಕ ಸ್ತ್ರೀಯನ್ನು ಆಧುನಿಕ ಸಂವೇದನೆ ಸಹಿತ ಚಿತ್ರಿಸುವ ಅತೀ ಪಂಥಾಹ್ವಾನ, ನಿರೀಕ್ಷೆಗಳ ಪ್ರತ್ಯೇಕ ಸಾಮರ್ಥ್ಯಗಳ ವಿಭಾಗ. ಅದರಲ್ಲಿ ಅತ್ಯಂತ ಯಶಸ್ವಿಗಳೂ, ಕುಶಲರೂ ಇದ್ದರು, ಇದ್ದಾರೆ. ಆದರೆ ಅದೂ ಸ್ವತಂತ್ರವಲ್ಲ. ಚೆಂದ, ಆಕರ್ಷಕ, ವೈಭವೀಕೃತ ಆಗುವ ಭರದಲ್ಲಿ ಅದು “ನಟಿ’ ಆಗಲು ಹೊರಟಿದೆ. ಒಂದು ಕಾಲದಲ್ಲಿ ಸಾಮಾಜಿಕ ಸ್ತ್ರೀಯ ರೂಪವಾಗಿದ್ದ ಸ್ತ್ರೀವೇಷ ಆ ಬಳಿಕ ಉಳಿದ ವೇಷ ಗಳಿಗೆ ಅನುರೂಪವಾಗಿ ರಚಿತವಾಯಿತು. ಈಗ ಅದೊಂದು ಬೇರೆ ಪ್ರೋಗ್ರಾಂ ವೇಷದಂತೆ ಕೆಲವೊಮ್ಮೆ ಆಗುವುದು ಉಂಟು. ಅದರ ಶೃಂಗಾರದ ನೃತ್ಯ ಭಂಗಿಗಳು ಅಪ್ರ ಸಂಗಗಳಾಗಿ ಸಾಗುತ್ತಿರುವುದು ಒಳಿತಲ್ಲ.

ನಿರ್ದೇಶನ ಅನಿವಾರ್ಯ: ಯಾವುದೇ ರಂಗ ವ್ಯವಸ್ಥೆಗೆ ಒಂದು ಸೂಕ್ತ ಸಮಗ್ರ ನಿರ್ದೇಶನ ಅಗತ್ಯ. ಭಾಗವತನೇ ನಿರ್ದೇಶಕ ಎಂಬುದು ಸೀಮಿತ ಸತ್ಯ. ಅವನು ನಿರ್ವಾಹಕ. ಇಡಿಯ ಪ್ರದರ್ಶನದ ವಿನ್ಯಾಸ ಆತನದಲ್ಲ. ಯಜಮಾನನೇ ನಿರ್ದೇಶಕ ಒಂದು ಅರ್ಥ ದಲ್ಲಿ. ಈಗ ಭಾಗವತನೇ ಕಲಾವಿದನಿಂದ ನಿರ್ದೇಶಿತ ಆಗುವುದು ಕೂಡ ಉಂಟು. ಒಬ್ಬರು ಹೇಳಿದಂತೆ ಒಂದು ಕಾಲಕ್ಕೆ ಯಜಮಾನರೇ ಪರಮ, ಆ ಬಳಿಕ ಭಾಗವತರು. ಈಗ ತಾರಾ ಕಲಾವಿದರೇ ಕೆಲವೆಡೆ ನಿರ್ಣಾಯಕರು. ಇದಕ್ಕೆ ತಜ್ಞ, ಶೈಲಿನಿಷ್ಟ ನಿರ್ದೇಶನವೇ ಪರಿಹಾರ.

ಧ್ವನಿ ಬೆಳಕು: ಈಗ ನಾವು ಕಾಣುವ ಬಳಸುವ, ಢಾಳಾದ ಅತಿಯಾದ ಬೆಳಕು, ಆರ್ಭಟೆಯ ಧ್ವನಿ, ಎರಡೂ ಅನು ಚಿತ ಮಾತ್ರವಲ್ಲ ಭಯಾನಕ. ನಾವು ಶಬ್ದದಿಂದ ನಾದ ಸಂಸ್ಕೃತಿಯ ಕಡೆಗೆ ಹೋಗಬೇಕು. ನಾಯ್ಸ ಕಲ್ಚರ್‌ ಅಲ್ಲ ವಾಯ್ಸ ಕಲ್ಚರ್‌ ಬೇಕು. ರಂಗದ ಬೆಳಕು ಧ್ವನಿ ವ್ಯವಸ್ಥೆಯಲ್ಲಿ ತುಂಬ ಬೆಳವಣಿಗೆ ಲಭ್ಯವಿದೆ. ಯಕ್ಷಗಾನದ ರಂಗ ರೂಪ ಧ್ವನಿ ಬೆಳಕಿನಲ್ಲಿ ದೊಡ್ಡ ಸುಧಾರಣೆ ಅಗತ್ಯ. ದೃಶ್ಯ ಶ್ರಾವ್ಯತೆ ಬೆಳಗಬೇಕು, ಕಿರಿಕಿರಿ ಆಗಬಾರದು.

ಕ್ಷೇತ್ರಗಳಿಗೆ ಸಾಂಸ್ಕೃತಿಕ ನೀತಿ ಬೇಕು: ಯಕ್ಷಗಾನವೆಂಬ ಕಲೆಯು ಕಲಾವಿದ, ಪ್ರೇಕ್ಷಕ, ಕ್ಷೇತ್ರ ಯಜಮಾನ, ಪೋಷಕ, ವಿಮರ್ಶಕ, ಸಲಹೆಗಾರ, ರಂಗಕರ್ಮಿ, ಸರಕಾರ, ಮಾಧ್ಯಮ, ಶಿಲ್ಪ (ಸಾಮಗ್ರಿ ತಯಾರಕ) ಎಂಬ ದಶಸ್ತಂಭಗಳ ಮೇಲೆ ನಿಂತಿದೆ ಎನ್ನಬಹುದು. ಎಲ್ಲರ ಕೊಡುಗೆಯೂ ಮುಖ್ಯ. ಅದರಲ್ಲೂ ಮೇಳದ ಧಾರ್ಮಿಕ ಕ್ಷೇತ್ರ(ದೇಗುಲ ಇತ್ಯಾದಿ) ಕಲಾವಿದ-ಸಂಚಾಲಕ ಇವರು ಬಹುಮುಖ್ಯ.

ಶತಮಾನಗಳಿಂದ ಯಕ್ಷಗಾನ ಆಟದ ಮೇಳಗಳನ್ನು ನಡೆಸಿ ಬರುತ್ತಿರುವ ಧಾರ್ಮಿಕ ಕ್ಷೇತ್ರಗಳಿಗೆ ಕಲೆಯು ಪ್ರತಿಷ್ಠೆ ಮತ್ತು ಗಳಿಕೆಯ ಸಾಧನ ಮಾತ್ರ ಆದರೆ ಸಾಲದು. ಕ್ಷೇತ್ರಗಳು ಖಚಿತ ಸಾಂಸ್ಕೃತಿಕ ಕಲಾ ಧೋರಣೆ(ಪಾಲಿಸಿ) ಮತ್ತು ಗುಣಮಟ್ಟ ವ್ಯವಸ್ಥೆ(ಕ್ವಾಲಿಟಿ ಕಂಟ್ರೋಲ್‌ ಮ್ಯಾ ನೇಜಿಂಗ್‌) ಹೊಂದಿರಲೇಬೇಕು. ಪರಿಷ್ಕಾರವು ಸತತ ನಿಜ. ಆದರೆ ಅದರಲ್ಲಿ ಅರಿವು, ಉದ್ದೇಶ, ಕಲಾದೃಷ್ಟಿ ಬೇಕು. ವಿಮರ್ಶೆಗೂ ಮರು ವಿಮರ್ಶೆ ಅಗತ್ಯ. ತಾಳಮದ್ದಲೆ ಕ್ಷೇತ್ರದ ಉಜ್ವಲತೆ ಉತ್ಕರ್ಷಕ್ಕೂ ವಿವೇಚನೆ ಆಗಬೇಕು.

ಪ್ರಗತಿ ನಾವೀನ್ಯ: ಕಲೆಗೆ ಸುಧಾರಣೆ ಬೇಡವೇ? ಕಲೆ ನಿಂತ ನೀರಲ್ಲ , ನಾವೀನ್ಯವು ಕಲೆಯ ಜೀವಾಳ ಎಂದು ಆಗಾಗ ಕೇಳುತ್ತೇವೆ ನಿಜ. ಆದರೆ ಅದು ಒಂದು ಶೈಲಿ ಪ್ರಧಾನ, ಸ್ವರೂಪ ಪ್ರಧಾನ, ಸ್ವ-ರೂಪ ಇರು ವ(ಐಡೆಂಟಿಟಿ) ಕಲೆ ಎಂಬುದು ಅದರ ಆಧಾರ ವಿಷಯ. ಸಾಧ್ಯತೆಗಳು ಯಕ್ಷಗಾನವಾಗಿ ಸಾಧಿತ ಆಗಬೇಕು.

ಕಲೆ ನಿಂತ ನೀರಲ್ಲ ನಿಜ. ಅದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ಹುಚ್ಚುನೆರೆಯೂ ಆಗಬಾರದು. ಹಿಡಿತವಿಲ್ಲದ ಪುರೋಗತಿ ದುರ್ಗತಿ ಆಗಬಹುದು. ವಿಸ್ತರಿಸುತ್ತಿರುವ ತಂತ್ರಜ್ಞಾನ, ಸಂಪತ್ತು, ಬೆಳೆಯುತ್ತಿರುವ ಮಧ್ಯಮ ವರ್ಗ, ಅಪಾರ ಸಾಮಗ್ರಿ, ಕೌಶಲ, ಅನ್ಯಕಲೆಗಳ ಪ್ರಭಾವ ಈ ಕಲೆಗೆ ಪೋಷಕವಾಗಬೇಕು. ಇಲ್ಲವಾದರೆ ದೀರ್ಘ‌ ಕಾಲದಿಂದ ಹಿರಿಯರು ಕಡುಕಷ್ಟದಿಂದ ಬೆಳೆಸಿಕೊಟ್ಟ ಸಾವಿರದ ಸಂಪತ್ತಿನ ವಿರೂಪೀಕರಣ, ಅಂಗಭಂಗ -ವಿನಾ ಶಗಳಿಗೆ ನಾವು ಸಾಕ್ಷಿಗಳು ಮಾತ್ರವಲ್ಲ ಭಾಗಿಗಳೂ, ಕಾರಣರೂ ಆಗುತ್ತೇವೆ.

“ಯಾವುದನ್ನೇ ಆದರೂ ಏಕೆ ಮಾಡುತ್ತೀರಿ?, ಹೇಗೆ ಮಾಡುತ್ತೀರಿ? ನಿಮಗೇ ಕೇಳಿಕೊಳ್ಳಿ. ಸುಧಾರಣೆಯೋ ಸಂಸ್ಕೃತಿ ವಿನಾಶವೋ?”- ಡಾ| ಶಿವರಾಮ ಕಾರಂತ

ಡಾ| ಎಂ.ಪ್ರಭಾಕರ ಜೋಶಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next