Advertisement

Yakshagana;ನೈಜ ಕಲಾವಿದರಿಗೆ ಮಹತ್ವ ಸಿಕ್ಕಾಗ ಉಳಿವು ಸಾಧ್ಯ: ಉಜಿರೆ ಕೆ.ನಾರಾಯಣ

04:16 PM Sep 29, 2024 | Team Udayavani |

ಹಾಸ್ಯ ವಿಶಾರದ, ಸವ್ಯಸಾಚಿ, ಸ್ತ್ರೀವೇಷ,ಪುಂಡುವೇಷ, ಕಿರೀಟ ವೇಷಗಳಲ್ಲಿ ಪಳಗಿ ಮಿಂಚಿದ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲ ಕೊಳಪ್ಪಲ ದಿ| ಅಣ್ಣು ಪೂಜಾರಿ, ದಿ|ಧರ್ಣಮ್ಮ ಅವರ ಪುತ್ರರಾಗಿ 1957ರ ಜೂನ್‌ 11ರಂದು ಜನಿಸಿದ ಕೆ.ನಾರಾಯಣ ಪೂಜಾರಿ (67) ಅವರು 7ನೇ ತರಗತಿಯಲ್ಲೇ ಕರಾವಳಿಯ ಗಂಡು ಕಲೆ ಯಕ್ಷಗಾನದತ್ತ ಆಕರ್ಷಿತರಾದವರು.

Advertisement

1971-72 ರಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡು ಯಕ್ಷಗಾನದ ದಿಗ್ಗಜ ಪಡ್ರೆ ಚಂದು ಅವರ ಗರಡಿಯಲ್ಲಿ ಪಳಗಿ, ಪ್ರಥಮವಾಗಿ ದೇಲಂಪುರಿ ಮಹಾಗಣಪತಿ ಮೇಳದಲ್ಲಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿದರು. ಅಂದಿನಿಂದ ಸುಮಾರು 53 ವರ್ಷಗಳ ಕಾಲ ಬೇರೆ ಬೇರೆ ಮೇಳಗಳಲ್ಲಿ ತಿರುಗಾಟ ನಡೆಸಿ ಯಕ್ಷಗಾನ ಕ್ಷೇತ್ರದಲ್ಲಿ ಉಂಟಾದ ಅನಿರೀಕ್ಷಿತ ಘಟನೆಯಿಂದಾಗಿ ಕಳೆದ ಮೂರು ವರ್ಷಗಳಿಂದ ತೆರೆಮರೆಗೆ ಸರಿದಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಾಸ್ಯ ವಿಶಾರದೆ ಸಹಿತ ಹತ್ತಾರು ಪ್ರಶಸ್ತಿ, ಪುರಸ್ಕಾರ, ಸಮ್ಮಾನಗಳು ಇವರಿಗೆ ಸಂದಿವೆ. ಪ್ರಸಕ್ತ ಪತ್ನಿ ಕಮಲಾ, ಪುತ್ರಿ ಸ್ಮಿತಾ, ಪುತ್ರ ಜಗದೀಶ ಅವರೊಂದಿಗೆ ಸುಖೀ ಜೀವನ ನಡೆಸುತ್ತಿರುವರು. ಇದೀಗ ಮತ್ತೆ ಅವಕಾಶ ಅವರನ್ನು ಅರಸಿ ಬಂದಿದ್ದು, ಯಕ್ಷಗಾನ ರಂಗಕ್ಕೆ ಈ ಇಳಿ ವಯಸ್ಸಿನಲ್ಲೂ ಮಗದೊಮ್ಮೆ ರಂಗಪ್ರವೇಶಕ್ಕೆ ಸನ್ನದ್ಧರಾಗಿರುವುದು ಕೆ.ನಾರಾಯಣ ಪೂಜಾರಿ ಅವರ ಕಲೆಯ ಬಗೆಗಿನ ಪ್ರೀತಿ, ಗೌರವಗಳಿಗೆ ಸಾಕ್ಷಿಯಾಗಿದೆ.

ಯಕ್ಷರಂಗದಲ್ಲಿ ನೀವು ಸವ್ಯಸಾಚಿ ಯಾಗಿ ಗುರುತಿಸಿಕೊಳ್ಳಲು ಕಾರಣ?
ನಾನು ಆರಂಭದಲ್ಲಿ ಸ್ತ್ರೀ ವೇಷ, ಪುಂಡುವೇಷ ಮಾಡುತ್ತಿದ್ದೆ. ಅವಾಗಿನಿಂದಲೇ ಹಾಸ್ಯ ಮಾಡುತ್ತಿದ್ದೆ. ಅಂದು ಅರ್ಥಗಾರಿಕೆಯಲ್ಲಿ ಎಂ.ಭೀಮ್‌ ಭಟ್‌, ಸುಂಕದಕಟ್ಟೆ ಮೇಳದ ಸುಂದರ ಶೆಟ್ಟಿ, ಭಾಗವತರಾದ ಪುತ್ತಿಗೆ ತಿಮ್ಮಪ್ಪ ರೈ, ಹಾಸ್ಯದಲ್ಲಿ ಬಜಾಲ್‌ ಜನಾರ್ದನ್‌, ವೇಣೂರು ಸುಂದರ ಆಚಾರ್‌ ಇವರಂತಹ ಅನೇಕರ ಮಾರ್ಗದರ್ಶನವೇ ನನ್ನನ್ನು ಇಷ್ಟು ವರ್ಷ ಕಲೆಯಲ್ಲಿ ಉಳಿಯುವಂತೆ ಮಾಡಿದೆ. ಅಭಿಮನ್ಯು, ಪರಶುರಾಮ, ಲವ-ಕುಶ, ಲಕ್ಷ್ಮಣ, ದ್ರೌಪದಿ ವಸ್ತ್ರಾಪಹರಣ, ಮಾಯಾಪೂತನಿ, ಮಾಯಾ ಶೂರ್ಪನಖೀ, ಕೋಟಿ ಚೆನ್ನಯ ಸೇರಿ ಎಲ್ಲ ವೇಷಗಳನ್ನು ಮಾಡಿದ್ದೇನೆ. ಪ್ರತಿಯೊಂದು ಪಾತ್ರವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದು ಸಂತೋಷ ತಂದಿದೆ.

ಐದು ದಶಕಗಳ ಕಾಲ ನಿಮ್ಮ ಮತ್ತು ಮೇಳಗಳ ನಡುವಣ ಒಡನಾಟ ಹೇಗಿತ್ತು?
ನಾನು ದೇಲಂಪುರಿ ಮಹಾಗಣಪತಿ ಮೇಳದಲ್ಲಿ ಮೊದಲ ಗೆಜ್ಜೆ ಗಟ್ಟಿ ಮೊದಲ್ಗೊಂಡ ನನ್ನ ಯಕ್ಷಗಾನದ ಬಗೆಗಿನ ಪ್ರೇಮ ಈವರೆಗೂ ಕಿಂಚಿತ್ತೂ ಕಡಿಮೆಯಾಗಿಲ್ಲ. ಸುಂಕದಕಟ್ಟೆ ಮೇಳದಲ್ಲಿ 8 ವರ್ಷ, ಮಂಗಳಾದೇವಿ, ಕದ್ರಿ, ಬಪ್ಪನಾಡು, ಹಿರಿಯಡ್ಕ ಮೇಳಗಳಲ್ಲಿ ತಲಾ 1 ವರ್ಷ, ಉಳಿದಂತೆ ಪುತ್ತೂರು ಮೇಳ 4, ಕುಂಬ್ಳೆ 4, ಸುರತ್ಕಲ್‌ 10, ಕಟೀಲು 11, ಕರ್ನಾಟಕ 2, ಭಗವತಿ 5, ಪಾವಂಜೆ ಮೇಳಗಳಲ್ಲಿ 3 ವರ್ಷ ಸೇವೆ ಸಲ್ಲಿಸಿ ಸರಿಸುಮಾರು 50 ವರ್ಷಗಳ ಕಾಲ ಕಲೆಯನ್ನು ಆರಾಧಿಸಲು ಅವಕಾಶ ಕೊಟ್ಟ ಎಲ್ಲ ಮೇಳಗಳ ಯಜಮಾನರಿಗೆ ನಾನು ಚಿರಋಣಿಯಾಗಿದ್ದೇನೆ.

ಸುವರ್ಣ ಮಹೋತ್ಸವದ ಅಂಚಿನಲ್ಲಿ ನೀವು ರಂಗಸ್ಥಳದಿಂದ ವಿರಮಿಸಿದ್ದೇಕೆ?
ಅದೊಂದು ಬಲುದೊಡ್ಡ ಬೇಸರದ ವಿಚಾರ, ಅದನ್ನು ನಾನು ಹಂಚಿಕೊಳ್ಳಲಾರೆ. ಅನಿರೀಕ್ಷಿತ ಮತ್ತು ಅನಿವಾರ್ಯ ಕಾರಣಗಳಿಂದ ವಿರಮಿಸಿದ್ದೇನೆ. ಅಪವಾದಗಳಿಂದ ಬೇಸರಗೊಂಡು ಮತ್ತೂಬ್ಬರ ಕೈಕಾಲು ಹಿಡಿದು ಕಲೆಯನ್ನು ಉಳಿಸಿ ಎಂದು ಬೇಡುವಷ್ಟು ದೊಡ್ಡವ ನಾನಲ್ಲ. ಹಾಗಾಗಿ ಯಾವುದೂ ಬೇಡವೆಂದು ಮೌನವಾಗಿದ್ದೇನೆ. ನನಗೆ ಈವರೆಗೆ ಒಂದು ಮನೆ ಕಟ್ಟಲು ಆಗಿಲ್ಲ ಎಂಬ ಬೇಸರವಿದೆ. ಸುವರ್ಣ ವರ್ಷಾಚರಣೆ ಮಾಡಬೇಕೆಂಬ ಆಸೆಯಿತ್ತು. ಅದು ನನ್ನಿಂದ ಸಾಧ್ಯವಾಗಿಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿರುವುದು ನಿಜ.

Advertisement

ಇಂದಿನ ಯಕ್ಷಗಾನದಲ್ಲಿ ಹಾಸ್ಯ ಸ್ವರೂಪ ಬದಲಾಗಿದೆಯಲ್ಲವೇ?
ಯಕ್ಷಗಾನ ಕಲೆಯಲ್ಲಿ ನಾನು ಮುಂದುವರಿಯದೇ ಇದ್ದಿದ್ದರೆ ಉಜಿರೆ ಕೆ.ನಾರಾಯಣ ಪೂಜಾರಿ ಯಾರೆಂದು ಯಾರಿಗೂ ತಿಳಿಯುತ್ತಿರಲಿಲ್ಲ. ಯಕ್ಷಗಾನ ಕಲೆ ನನ್ನ ಕೈಹಿಡಿದಿದ್ದರಿಂದ ಇಂದು ಉತ್ತರ ಕನ್ನಡ, ದಕ್ಷಿಣಕನ್ನಡ, ಚಿಕ್ಕಮಗಳೂರು, ಮುಂಬಯಿ, ಕುವೈಟ್‌ ಸಹಿತ ವಿದೇಶಗಳಲ್ಲೂ ನಾನು ಯಾರೆಂದು ತಿಳಿದಿದೆ. ಇದು ಯಕ್ಷಕಲಾಮಾತೆ ನನಗೆ ನೀಡಿದ ಭಿಕ್ಷೆಯಾಗಿದೆ. ರಂಗಸ್ಥಳದಲ್ಲಿ ನನಗೆ ಬೆಲೆ ಕಡಿಮೆಯಾಗಿದೆ ಎಂಬ ನೋವಿಂದ ನಾನು ಯಾರಿಗೂ ಯಕ್ಷಗಾನ ಕಲಿಸುವ ತಂಟೆಗೆ ಹೋಗಿಲ್ಲ. ವರ್ತಮಾನದಲ್ಲಿ ಅಂಥಾ ಕಲಾವಿದರು ಸಿಗುತ್ತಾರೋ ಇಲ್ಲವೋ ನನಗೆ ತಿಳಿದಿಲ್ಲ. ಇಂದು ಸೊಳ್ಳೆ, ಕಪ್ಪೆ ಎಂಬೆಲ್ಲ ಹಾಸ್ಯ ಬರುತ್ತದೆ. ಆದರೆ ಲೋಕೋಭಿನ್ನರುಚಿ, ಅದನ್ನು ನಾನು ಅಕ್ಷೇಪಿಸಲು ಸಾಧ್ಯವಿಲ್ಲ.

ಕಲಾವಿದರಲ್ಲಿ ಶ್ರದ್ಧೆಯ ಕೊರತೆ ಇದೆ ಎಂಬ ಮಾತು ನಿಜವೇ?
ಅಂದು ಕಲೆ ಜೀವನಕ್ಕೆ ದಾರಿಯಾಗಿದ್ದರೆ, ಇಂದು ಕಲೆ ಹವ್ಯಾಸ ವಾಗಿದೆ. ಇಂದಿನ ಯುವ ಪೀಳಿಗೆಗೆ ಅಭಿಮಾನಿಗಳು ಇದ್ದಾರೆ,ಅಭಿಮಾನಿಗಳನ್ನು ಸೃಷ್ಟಿಸುವಂಥ ಅವಕಾಶವಿದೆ. ಇಂದು ಕಲೆ ರಾಜಕೀಯದಂತಾಗಿದೆ. ನಮ್ಮಿಂದ ಅದು ಆಗದ ವಿಚಾರ. ನಾನು ಮಾಡದ ಪಾತ್ರವಿಲ್ಲ. ಹಿಂದೆ ರಾತ್ರಿ ಗಂಟೆ 8.30 ರಿಂದ ಬೆಳಗ್ಗೆ 6 ಗಂಟೆಯವರೆಗೂ ಬಣ್ಣ ತೆಗೆಯುತ್ತಿರಲಿಲ್ಲ. ಒಬ್ಬೊಬ್ಬ ಕಲಾವಿದರಿಗೆ ಎರಡರಿಂದ ಮೂರು ಪಾತ್ರ ಮಾಡುವ
ಸಾಮರ್ಥ್ಯವಿತ್ತು. ಆದರೆ ಇಂದು ಒಂದು ಪಾತ್ರ ಮಾಡಿ ತೆರಳುತ್ತಾರೆ. ತಮ್ಮ ಸಾಮರ್ಥ್ಯವನ್ನು ತಾವೇ ವ್ಯರ್ಥ ಪಡಿಸಿಕೊಳ್ಳು ತ್ತಿದ್ದಾರೆ ಇಲ್ಲವೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಯಕ್ಷಗಾನವನ್ನು ಆಸ್ವಾದಿಸುವವರ ಕೊರತೆ ಕಾಡುತ್ತಿದೆಯೇ?
ಹೌದು, ಕಲೆಯನ್ನು ಆಸ್ವಾದಿಸುವವರ ಕೊರತೆ ಯಕ್ಷಗಾನ ಕ್ಷೇತ್ರ ವನ್ನು ಬಹಳಷ್ಟು ಕಾಡುತ್ತಿದೆ. ಕಲಾವಿದರಿಗೆ ಕಲಾಭಿಮಾನಿಗಳೇ ಆಸ್ತಿ. ನಾವು ಇಂದು ಹುಟ್ಟುವ ಮಕ್ಕಳಿಗೆ ಯಕ್ಷಗಾನದ ಅಭಿರುಚಿ ಮೂಡಿಸದೇ ಹೋದಲ್ಲಿ ಯಕ್ಷಗಾನದ ಬಗ್ಗೆ ಅಭಿಮಾನ ಹುಟ್ಟಲು ಹೇಗೆ ಸಾಧ್ಯ?. ಒಂದು ತಲೆಮಾರು ದಾಟಿದ ಬಳಿಕ ಮುಂದೆ ಯಕ್ಷಗಾನವನ್ನು ಪೋಷಿಸುವವರಾರು ಎಂಬ ಜಿಜ್ಞಾಸೆಯೂ ಇದೆ. ಕಾರಣ ಇಂದಿನ ಮಕ್ಕಳಲ್ಲಿ ಬೆರಳೆಣಿಕೆಯಷ್ಟು ಮಂದಿ ಯಕ್ಷಗಾನ ಕಲೆಯತ್ತ ಆಸಕ್ತಿ ತೋರಿ ದರೆ ಉಳಿದವರು ಕಾಟೂìನ್‌, ಮೊಬೈಲ್‌ ಗೇಮಿಂಗ್‌ ಇನ್ನಿತರ ಮನೋರಂಜನೆಯತ್ತ ಮುಖ ಮಾಡಿದ್ದಾರೆ. ಯಕ್ಷಗಾನ ದಂತಹ ಕಲಾ ಪ್ರಕಾರಗಳನ್ನು ಉಳಿಸಬೇಕಾದರೆ ಹೆತ್ತವರು ಮಕ್ಕಳಲ್ಲಿ ಈ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕು.

ನಿಮ್ಮ ಸಮಕಾಲೀನರ ಒಡನಾಟ ಹಾಗೂ ನೀವು ಮೆಚ್ಚುವ ಕಲಾವಿದರ ಬಗ್ಗೆ?
ಯಕ್ಷಗಾನ ಪುಂಡುವೇಷದಲ್ಲಿ ಶ್ರೀಧರ ಭಂಡಾರಿ, ಕನ್ಯಾನ ಶಶಿಧರ ಕುಲಾಲ್‌, ಸ್ತ್ರೀ ವೇಷದಲ್ಲಿ ಕೋಳ್ಯೂರು ರಾಮಚಂದ್ರರು, ಎಂ.ಕೆ. ರಮೇಶ್‌ ಆಚಾರ್‌. ಹಾಸ್ಯದಲ್ಲಿ ವೇಣೂರು ಸುಂದರ ಆಚಾರ್‌, ಬಜಾಲ್‌ ಜನಾರ್ದನ ಕುಲಾಲ್‌, ಪ್ರಸಕ್ತ ಭಾಗವತಿಕೆಯಲ್ಲಿ ಕನ್ನಡಿಕಟ್ಟೆ ಅವರು ಯಕ್ಷಗಾನದ ನೈಜ ಸ್ವರೂಪವನ್ನು ಎತ್ತಿ ಹಿಡಿಯುತ್ತಿರುವ ನನ್ನ ನೆಚ್ಚಿನ ಕಲಾವಿದರೆನ್ನಬಹುದು.

ಹವ್ಯಾಸಿ ಕಲಾವಿದರ ಬಗ್ಗೆ ನಿಮ್ಮ ಅನಿಸಿಕೆ?
ಇಂದು ಹವ್ಯಾಸಿ ಕಲಾವಿದರಲ್ಲಿ ಕೆಲವರು ವೃತ್ತಿಪರರಂತೆ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ನಮಗಿಂತಲೂ ಉತ್ತಮವಾಗಿ ಅಭಿನಯಿಸುವವರಿದ್ದಾರೆ. ಆದರೆ ಕೆಲವರು ಪಾತ್ರಗಳ ನಿರ್ವಹಣೆಯಲ್ಲಿ ಆಲಸ್ಯ ತೋರುತ್ತಿರುವರಾದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಅಂಥವರನ್ನು ತಿದ್ದುವ ಕಾರ್ಯವಾಗಬೇಕೇ ವಿನಾ ಅವರನ್ನು ಕೀಳಂದಾಜಿಸುವುದು ಸರಿಯಲ್ಲ. ಇನ್ನು ನಮ್ಮಂಥ ಹಿರಿಯ ಕಲಾವಿದರು ಇಂದಿನ ಯುವಪೀಳಿಗೆಗೆ ಬೇಕಾದ ಹಾಗೆ ಅಭಿವ್ಯಕ್ತಪಡಿಸಲು ವಿಫ‌ಲರಾಗುತ್ತಿರುವುದರಿಂದ ನಮಗೆ ಬೇಡಿಕೆ ಕಡಿಮೆ ಆಗಿದೆಯೋ ತಿಳಿದಿಲ್ಲ.

ನೀವು ಮತ್ತೆ ರಂಗಸ್ಥಳದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯೇ?
ನನಗೆ ಪ್ರಸಕ್ತ ಒಂದು ಮೇಳದಿಂದ ಬೇಡಿಕೆ ಬಂದಿದೆ. ಸುಂಕದಕಟ್ಟೆ ಮೇಳದಲ್ಲಿ ಮುಂದುವರಿಯುವ ಇರಾದೆಯಿದೆ. ಕಲಾಮಾತೆಯ ಆಶೀರ್ವಾದವಿದ್ದಲ್ಲಿ ಮತ್ತೆ ರಂಗಸ್ಥಳದಲ್ಲಿ ಕಾಣಿಸಿಕೊಂಡು ತನ್ನ ಕೈಲಾದಷ್ಟು ಕಲಾಸೇವೆಯನ್ನು ಮಾಡಬೇಕೆಂಬ ಅಪೇಕ್ಷೆ ಇದೆ.

ಹಾಲಿ ಯಕ್ಷಗಾನ ಕಲೆ ಸಾಗುತ್ತಿರುವ ಹಾದಿಯ ಬಗ್ಗೆ ನಿಮ್ಮ ಅಭಿಪ್ರಾಯ?
ಕೋಳ್ಯೂರು ರಾಮಚಂದ್ರರು ಒಂದು ಮಾತು ಹೇಳಿದ್ದರು, ಮೊದಲೆಲ್ಲ ಬಂಗಾರವನ್ನು ಆಭರಣಂಗಡಿಗೆ ತೆರಳಿ ನಿಗದಿತ ಬೆಲೆ ನೀಡಿ ಖರೀದಿಸಬೇಕಿತ್ತು. ಅದು ಶುದ್ಧ ಬಂಗಾರ. ಈಗ ರಸ್ತೆಯಲ್ಲೂ ಒಂದು ಬಂಗಾರ ಸಿಗುತ್ತದೆ ಅದು ರೋಲ್ಡ್‌ ಗೋಲ್ಡ್‌. ಹಾಗಾಗಿ ಹಿಂದಿನ ಯಕ್ಷಗಾನ, ಅಂಗಡಿಯಲ್ಲಿನ ಬಂಗಾರದಂತ ಶುದ್ಧ ಯಕ್ಷಗಾನ ಎಂದಿದ್ದರು. ಇದು ನೈಜ ಉಪಮೆಯಾಗಿದೆ. ಪ್ರಸಕ್ತ ಕೃಷಿ ಕೆಲಸಕ್ಕೆ ಜನ ಸಿಗುತ್ತಿಲ್ಲ, ಯಕ್ಷಗಾನ ಹಾಗಾಗುವ ಮುನ್ನ ಕಲೆಗೆ ಪೋಷಣೆ ಸಿಗಬೇಕು. ನೈಜ ಕಲಾವಿದರಿಗೆ ಮಹತ್ವ ಸಿಗಬೇಕು. ಯಕ್ಷಗಾನ ಉಳಿಯಬೇಕು.

 ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next