Advertisement
ಆದಿಮಾಯೆ ಮತ್ತು ತ್ರಿಮೂರ್ತಿಗಳ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನ ಸಮರ್ಥ ಹಿಮ್ಮೆಳ ಮತ್ತು ಮುಮ್ಮೇಳಗಳ ಪ್ರಸ್ತುತಿಯೊಂದಿಗೆ ಪ್ರಸಂಗದ ಅಂತ್ಯದವರೆಗೆ ಯಕ್ಷಪ್ರಿಯರ ಮನಸ್ಸನ್ನು ಸೆಳೆದಿಡುವಲ್ಲಿ ಯಶಸ್ವಿಯಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಶ್ರೀ ಸತೀಶ್ ಶೆಟ್ಟಿಯವರ ಕಂಚಿನ ಕಂಠಸಿರಿ ಪ್ರಸಂಗಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿತು. ಮದ್ದಳೆಯಲ್ಲಿ ಜಯರಾಮ ಭಟ್ ಹಾಗೂ ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯರು ಸಮರ್ಥ ಹಿಮ್ಮೇಳ ಸಾಥ್ ಗೆ ಕಾರಣರಾದರು. ಚಕ್ರತಾಳದಲ್ಲಿ ಸ್ಥಳೀಯ ಕಲಾವಿದ ಅನಿರುದ್ಧ ರಾವ್ ಸಹಕರಿಸಿದರು.
Related Articles
ಯಕ್ಷಗಾನ ಕಾರ್ಯಕ್ರಮದ ದಿನದಂದು ಇದೇ ತಂಡದ ಕಲಾವಿದರಿಂದ ‘ಭೀಷ್ಮ ಪರ್ವ’ ಎಂಬ ಪೌರಾಣಿಕ ತಾಳಮದ್ದಳೆ ಪ್ರಸಂಗ ಇಲ್ಲಿನ ನೋವೈಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಿತು. ಭೀಷ್ಮಾಚಾರ್ಯರಾಗಿ ಹಿರಿಯ ಕಲಾವಿದ ಎಂ. ಎಲ್. ಸಾಮಗರು ತಮ್ಮ ವಿದ್ವತ್ ಪೂರ್ಣ ಮಾತಿನಿಂದ ಕೇಳುಗರ ಗಮನ ಸೆಳೆದರು. ಪ್ರಸ್ತುತ ಅಮೇರಿಕಾ ಪ್ರವಾಸದಲ್ಲಿರುವ ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಕಾರಂತರು ಶ್ರೀ ಕೃಷ್ಣನ ಪಾತ್ರ ವಹಿಸಿ ಭೀಷ್ಮನ ಮಾರ್ಮಿಕ ಪ್ರಶ್ನೆಗಳಿಗೆ ಸಮಯೋಚಿತ ಪ್ರತಿಕ್ರಿಯೆ ನೀಡುವ ಮೂಲಕ ಗಮನ ಸೆಳೆದರು.
Advertisement
ದುರ್ಯೋಧನನಾಗಿ ಶ್ರೀ ಮೋಹನ ಬೆಳ್ಳಿಪಾಡಿ, ಅರ್ಜುನನಾಗಿ ಶ್ರೀ ಚಂದ್ರಶೇಖರ ಪೂಜಾರಿಯವರು ತಮ್ಮ ಪಾತ್ರನಿರ್ವಹಣೆಯ ಮೂಲಕ ಸಭಿಕರ ಗಮನಸೆಳೆದರು. ಹಿಮ್ಮೆಳದಲ್ಲಿ ದೇವಿ ಮಹಾತ್ಮೆ ಪ್ರಸಂಗದ ಕಲಾವಿದರೇ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಪ್ರಸಂಗಕ್ಕೊಂದು ವಿಶೇಷ ಮೆರುಗನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸ್ಥಳೀಯ ಕಲಾವಿದ ಅನಿರುದ್ಧ ರಾವ್ ತಬಲಾವನ್ನು ಹಿಮ್ಮೇಳದೊಂದಿಗೆ ನುಡಿಸಿ ನವೀನಾನುಭವ ನೀಡಿದರು.
– ಅರುಣ್ ರಾವ್ ಆರೂರು, ಮಿಷಿಗನ್, ಯು.ಎಸ್.ಎ.