Advertisement

ಸದಭಿರುಚಿಯ ಸೌಭರಿ ಚರಿತ್ರೆ

12:30 AM Jan 11, 2019 | |

ವಿಷ್ಣು ಭಾಗವತದ 6ನೇ ಅಧ್ಯಾಯದಲ್ಲಿ ಅಂತರ್ಗತವಾದ ಕಥೆಯನ್ನು ಆಧಾರವಾಗಿರಿಸಿದ ಪ್ರಸಂಗ  

Advertisement

ವೃತ್ತಿಯಿಂದ ಉಪನ್ಯಾಸಕರಾಗಿರುವ ವಿದ್ಯಾಧರ ಹೆಗಡೆ ಸಿದ್ಧಾಪುರ ರಚಿಸಿದ ಹೊಸ ಪ್ರಸಂಗ  “ಸೌಭರಿ ಚರಿತ್ರೆ’.  ಈ ವರೆಗೆ 6 ಯಕ್ಷಗಾನ ಪ್ರಸಂಗಗಳನ್ನು, 2 ನಾಟಕಗಳನ್ನು, ಯಕ್ಷಗಾನ ಛಂದಸ್ಸಿನಲ್ಲಿ 4 ಭಾವಗೀತೆಗಳ ಪುಸ್ತಕಗಳನ್ನು  ರಚಿಸಿದ್ದಾರೆ . ಅದಕ್ಕೊಂದು ಹೊಸ ಸೇರ್ಪಡೆ  ಇತ್ತೀಚೆಗೆ ಮೂಡಬಿದಿರೆಯಲ್ಲಿ ಪ್ರದರ್ಶನಗೊಂಡ “ಸೌಭರಿ ಚರಿತ್ರೆ’.  

ಡಾ| ಗಾಳಿಮನೆ ವಿನಾಯಕ ಭಟ್‌ರವರ ಸಂಯೋಜನೆಯಲ್ಲಿ  ಈ ಪ್ರಸಂಗ ಪ್ರಸ್ತುತಿಗೊಂಡಿತು .ವಿಷ್ಣು ಭಾಗವತದ 6ನೇ ಅಧ್ಯಾಯದಲ್ಲಿ  ಅಂತರ್ಗತವಾದ ಕಥೆಯನ್ನು ಆಧಾರವಾಗಿರಿಸಿದ ಈ ಪ್ರಸಂಗ  ಸಮಸ್ತ  ಜೀವಿಗಳು ವಾಯುವನ್ನು ಆಶ್ರಯಿಸುವಂತೆ , ಚತುರಾಶ್ರಮಗಳು ಗೃಹಸ್ಥಾಶ್ರಮವನ್ನು ಆಶ್ರಯಿಸುತ್ತವೆ   ಎಂಬ  ಮನುಸ್ಮತಿಯ ಆಶಯವನ್ನು ಬಿಂಬಿಸುವಲ್ಲಿ  ಯಶಸ್ವಿಯಾಗಿದೆ . ಮಹರ್ಷಿ ಕಣ್ವರ ಪುತ್ರನಾದ ಸೌಭರಿಯು  ಬಾಲ್ಯದಲ್ಲೇ ಬ್ರಹ್ಮಜ್ಞಾನವನ್ನು ಪಡೆದು  ಚಕ್ರವರ್ತಿ ಮಾಂಧಾತನ ಅಯೋಧ್ಯೆಯಲ್ಲಿ  ಭೀಕರ ಬರಗಾಲ ಬಂದಾಗ ಯಜ್ಞ ಮಾಡಿ ಸುಭಿಕ್ಷೆ ತರುತ್ತಾರೆ . ಮಾಂಧಾತನು ಯಜ್ಞ ದಕ್ಷಿಣೆಯನ್ನು ನೀಡುವಾಗ  ಸೌಭರಿಯು ಅದನ್ನು ಮಾಂಧಾತನಲ್ಲೇ ನ್ಯಾಸವಾಗಿರಿಸಿ  ಜಲಸ್ಥಂಭನ ವಿದ್ಯೆಯಿಂದ ಯಮುನಾ ನದಿಯೊಳಗೆ ತಪೋನಿರತನಾಗುತ್ತಾರೆ .

ಪ್ರಜಾ ಸಂತತಿಯ ಅಭಿವೃದ್ಧಿಗಾಗಿ ಸೌಭರಿಯು ಸಂಸಾರಿಯಾಗಬೇಕು ಎಂದು ಶ್ರೀಮನ್ನಾರಾಯಣನು ಸಂಕಲ್ಪಿಸಿ , ಮೀನಿನ ರೂಪ ತಾಳಿ  ನದಿಯೊಳಗೆ ತಪೋನಿರತರಾಗಿದ್ದ  ಸೌಭರಿಯಲ್ಲಿ ಸಂಸಾರದ ವಾಂಛೆ ಮೂಡುವಂತೆ ಮಾಡುತ್ತಾನೆ . ಸೌಭರಿಯು ಮಾಂಧಾತನಲ್ಲಿ ಆತನ ಮಗಳನ್ನು  ಕನ್ಯಾದಾನ  ನೀಡುವುದರ ಮೂಲಕ ತನ್ನ ಯಜ್ಞದಕ್ಷಿಣೆ ಪೂರೈಸಲು ಹೇಳುತ್ತಾನೆ . ವೃದ್ಧ ಸೌಭರಿಗೆ ತನ್ನ ಮಗಳನ್ನು ವಿವಾಹ ಮಾಡಲು ಒಲ್ಲದ ಮಾಂಧಾತನು  ನೀವೇ ಅವಳ ಮನ ಒಲಿಸಿ  ಎಂದಾಗ ಸೌಭರಿಯು ತನ್ನ ತಪಶಕ್ತಿಯಿಂದ ಸುಂದರ ತರುಣನಾಗಿ ರಾಜಕುವರಿಯ ಮುಂದೆ ಕಾಣಿಸಿಕೊಳ್ಳುತ್ತಾನೆ.ಸೌಭರಿಯ ಸೌಂದರ್ಯಕ್ಕೆ ಮೆಚ್ಚಿದ ಮಾಂಧಾತನ 50 ಮಂದಿ ಕುವರಿಯರೂ ಸೌಭರಿಯನ್ನು ವರಿಸಿ ಪ್ರಜಾ ಸಂತತಿ ಬೆಳೆಯಲು ಸಹಕಾರಿಯಾಗುತ್ತಾರೆ.ಇಷ್ಟು ಕಥಾನಕ ಹೊಂದಿರುವ   ಸೌಭರಿ ಚರಿತ್ರೆ  ಸುಮಾರು 350 ಪದ್ಯಗಳನ್ನೊಳಗೊಂಡು ವೀರ , ಶೃಂಗಾರ ,ಶಾಂತ ರಸಗಳೊಂದಿಗೆ ಪ್ರದರ್ಶನಕ್ಕೆ ಸೂಕ್ತವಾಗಿದೆ .   

ಯಕ್ಷರಂಗದಲ್ಲಿ ಇತ್ತೀಚೆಗೆ ಬಳಸಲ್ಪಡದ  ಹಲವಾರು ರಾಗ , ಮಟ್ಟುಗಳು ,  ಛಂದೋಬಂಧದ ಕೆಲವೊಂದು ಕ್ಲಿಷ್ಟ ರಚನೆಗಳನ್ನೂ ಪ್ರಸಂಗದಲ್ಲಿ ಬಳಸಿದ್ದಾರೆ . ಮಾಂಧಾತನ ಯಾಗದ ವರ್ಣನೆಯಲ್ಲಿ ಆಗಮ ಯಾಗದಲಿ ಮುನಿಜನ ಯಜ್ಞವನು |  ಎಂಬ ಸಾಹಿತ್ಯದಲ್ಲಿ     ಉದ್ದಂಡ ಷಟ³ದಿಯಂಥ ಅಪೂರ್ವವಾದ ರಚನೆ , ಪರಿವರ್ಧಿನಿ ಷಟ³ದಿ ಮುಂತಾದವುಗಳು  ಪ್ರಸಂಗದ ಮೌಲ್ಯ ಹೆಚ್ಚಿಸಿವೆ.ಯಕ್ಷಗಾನದ  ಅಪರೂಪದ ರಾಗ , ಮಟ್ಟುಗಳಾದ ಕಟಾವು(ಏಕ ),ಕುರಂಜಿ (ಏಕ ,ಅಷ್ಟ ),ದೊರೆಯಕ್ಕರ  ಶಹಾನಗಳನ್ನು  ಪ್ರಸಂಗದಲ್ಲಿ ಅಳವಡಿಸಿ ಪರಂಪರೆಯ ಸ್ಪರ್ಶ ನೀಡಿದ್ದಾರೆ .ಈ ಪ್ರಸಂಗದಲ್ಲಿ ಗಮನಿಸಬೇಕಾದ ವಿಶಿಷ್ಟ ಅಂಶವೆಂದರೆ  ಮಹಾನಾರಾಯಣ ಉಪನಿಷತ್ತಿನ 3 ಸಂಸ್ಕೃತ  ವೇದ ಮಂತ್ರಗಳನ್ನು   ಕನ್ನಡದ ತಾತ್ಪರ್ಯದಲ್ಲಿ ಯಥಾವತ್ತಾಗಿ ಬಳಸಿರುವುದು . ಮಾಂಧಾತನು ಸೌಭರಿ ಮಹರ್ಷಿಗಳನ್ನು ಸ್ವಾಗತಿಸುವ ಸನ್ನಿವೇಶದಲ್ಲಿ   
 ನ ಕರ್ಮಣಾ ನಃ ಪ್ರಜಯಾ  ಮಂತ್ರವನ್ನು  
ಸಾಂಗತ್ಯ ರೂಪಕ ತಾಳದಲ್ಲಿ  ಕರ್ಮ ಸಂಪದ ಸಂಸಾರವಿರದೆ ತ್ಯಾಗದಿ |   ಪದ್ಯವನ್ನು  ಕನ್ನಡದಲ್ಲಿ  ಅನುವಾದಿಸಲಾಗಿದೆ . ಹಾಗೆಯೇ ಯಾಗದ ಪೂರ್ಣಾಹುತಿಯ ವೇದಮಂತ್ರವನ್ನು ವಾರ್ಧಿಕ ಷಟ³ದಿಯಲ್ಲಿ  
ಉತ್ತಮನು ಹೋಮಿಪನು ಪೂರ್ಣಾಹುತಿಗಳನು |   ಕನ್ನಡ ಅನುವಾದವು ಪ್ರಸಂಗದ ಉತ್ತಮ ಸಾಹಿತ್ಯಕ್ಕೆ ಉದಾಹರಣೆಯಾಗಿದೆ .ಸೌಭರಿಗೆ ಮಧುಪರ್ಕ ನೀಡುವ ಸಂದರ್ಭದಲ್ಲಿ ಯಾಗದ ದಕ್ಷಿಣೆ ನೀಡುವ ಸಂಸ್ಕೃತದ ಮೂಲಪಾಠವನ್ನು  ಯಥಾವತ್ತಾಗಿ ಕನ್ನಡದಲ್ಲಿ ರಚಿಸಿದ್ದಾರೆ ಪ್ರಥಮ ಪ್ರದರ್ಶನದಲ್ಲಿ ಪೂರ್ವಾರ್ಧದ ಸೌಭರಿಯಾಗಿ ಶ್ರೀಧರ್‌ ಡಿ.ಎಸ್‌.ಮಿಂಚಿದರು. ಉತ್ತರಾರ್ಧದಲ್ಲಿ ವಾಸುದೇವ ರಂಗಾಭಟ್‌ ಪ್ರಸಂಗದ ಜೀವಾಳವಾದ  ಗೃಹಸ್ಥಾಶ್ರಮ , ತಪೋಧರ್ಮದ ಕುರಿತು ಚೆನ್ನಾಗಿ ನಿರೂಪಣೆ ಮಾಡಿದರು . 

Advertisement

ಮಾಂಧಾತನಾಗಿ ಗಾಳಿಮನೆ ವಿನಾಯಕ ಭಟ್‌ , ಕಣ್ವರಾಗಿ ವಿದ್ಯಾಧರ , ನಾರದರಾಗಿ ದಾಮೋದರ ಸಫ‌ಲಿಗ , ವಿಷ್ಣುವಾಗಿ ಕೆರೆಗದ್ದೆ , ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ , ಮಾಧವಾಚಾರ್ಯ , ಪುರುಷೋತ್ತಮ ತುಳುಪುಳೆಯವರ ನಿರ್ವಹಣೆ ಉತ್ತಮವಾಗಿತ್ತು . ಪ್ರಥಮ ಪ್ರದರ್ಶನದಲ್ಲೇ ಗಮನ ಸೆಳೆದ ಸೌಭರಿ ಚರಿತ್ರೆ  ಯಕ್ಷಗಾನ ಲೋಕಕ್ಕೊಂದು ಉತ್ತಮ ಕೊಡುಗೆ .
      
ಎಂ.ಶಾಂತರಾಮ ಕುಡ್ವ 
 

Advertisement

Udayavani is now on Telegram. Click here to join our channel and stay updated with the latest news.

Next