Advertisement

ಸಂಶೋಧನಾತ್ಮಕ ಅಧ್ಯಯನಕ್ಕೆ ಯಕ್ಷಗಾನ ಕ್ಷೇತ್ರದಲ್ಲಿ ಹೆಚ್ಚು ಅವಕಾಶ: ಜಿಎಸ್‌ಬಿ

04:03 PM May 15, 2022 | Team Udayavani |

ಸಾಗರ: ಯಕ್ಷಗಾನ ಕ್ಷೇತ್ರದಲ್ಲಿ ಸಂಶೋಧನಾತ್ಮಕ ಅಧ್ಯಯನಕ್ಕೆ ಸಾಕಷ್ಟು ಅವಕಾಶಗಳಿವೆ. ಸಂಶೋಧನೆಯ ನೆಲೆಯಲ್ಲಿ ಅಧ್ಯಯನ ಆಗದಿರುವ ಅಂಶಗಳು ಯಕ್ಷಗಾನದಲ್ಲಿ ಬಹಳಷ್ಟಿವೆ ಎಂದು ಯಕ್ಷಗಾನ ವಿದ್ವಾಂಸ ಡಾ. ಜಿ.ಎಸ್.ಭಟ್ಟ ಹೇಳಿದರು.

Advertisement

ಬೆಂಗಳೂರಿನ ಯಕ್ಷವಾಹಿನಿ ಆನ್‌ಲೈನ್ ಮೂಲಕ ಶನಿವಾರ ಏರ್ಪಡಿಸಿದ್ದ ಯಕ್ಷಶೋಧಸಾರ ಸರಣಿ ಕಾರ‍್ಯಕ್ರಮದ 9 ನೇ ಮಾಲಿಕೆಯಲ್ಲಿ ‘ನಟ ಕೇಂದ್ರಿತ ಅಧ್ಯಯನದ ಇತಿಮಿತಿ’ ವಿಷಯದ ಕುರಿತು ಮಾತನಾಡಿದರು.

ಯಕ್ಷಗಾನದ ನಟ ಕೇಂದ್ರಿತ ಶೈಕ್ಷಣಿಕ ಅಧ್ಯಯನದಲ್ಲಿ ಸೂತ್ರ ಮತ್ತು ಸಿದ್ಧಾಂತದ ಪಾತ್ರ ಬಹಳ ಮುಖ್ಯವಾಗುತ್ತದೆ. ಅಧ್ಯಯನ, ಸಂಶೋಧನೆ ಸಹಜ ಕ್ರಿಯೆ ಆಗಬೇಕು. ಅಸಹಜ ಪ್ರಯತ್ನ ಆಗಬಾರದು. ಪ್ರಸಂಗಗಳ ಸಾಹಿತ್ಯ ಅಧ್ಯಯನ, ಯಕ್ಷಗಾನೀಕರಣ ಪ್ರಕ್ರಿಯೆ, ದೇವಾಲಯಗಳ ಮೇಳಗಳ ಕುರಿತು ಮುಂತಾದ ವಿಷಯಗಳನ್ನು ಸಂಶೋಧನೆಯ ನೆಲೆಯಲ್ಲಿ ಅಧ್ಯಯನ ಮಾಡಲು ವ್ಯಾಪಕ ಅವಕಾಶಗಳಿವೆ ಎಂದರು.

ಯಕ್ಷಗಾನದ ಸಂಶೋಧನಾತ್ಮಕ ಅಧ್ಯಯನದ ಸಂದರ್ಭದಲ್ಲಿ ಪಾರಿಭಾಷಿಕ ಪದಗಳನ್ನು ಸೃಷ್ಟಿಮಾಡಿಕೊಳ್ಳುವ ಅನಿವಾರ‍್ಯತೆ ದೊಡ್ಡ ಸವಾಲು. ದೃಶ್ಯಮಾಧ್ಯಮದಲ್ಲಿರುವ ಅಭಿನಯವನ್ನು ಅಕ್ಷರ ರೂಪದಲ್ಲಿ ದಾಖಲಿಸುವಾಗ ಹೊಸ ಶಬ್ದಗಳನ್ನು ಸೃಷ್ಟಿ ಮಾಡಿಕೊಳ್ಳಬೇಕು. ನಟ ಕೇಂದ್ರಿತ ಸಂಶೋಧನಾ ಅಧ್ಯಯನ ಆರಾಧನೆ ಆಗದಂತೆ ಎಚ್ಚರವಹಿಸಬೇಕು ಎಂದರು.

ಇದನ್ನೂ ಓದಿ :ಎರಡು ವರ್ಷದ ಬಳಿಕ ಕೆಳದಿಯ ಕೆರೆಯಲ್ಲಿ ಮೀನು ಶಿಕಾರಿ : ಗಮನ ಸೆಳೆದ ಕಾಟ್ಲ ಮೀನು

Advertisement

ಕಾರ‍್ಯಕ್ರಮದ ಸಮನ್ವಯಕಾರ ಡಾ. ಆನಂದರಾಮ ಉಪಾಧ್ಯ ಮಾತನಾಡಿ, ಯಕ್ಷವಾಹಿನಿಯ ಮೂಲಕ 270 ಯಕ್ಷಗಾನ ಪ್ರಸಂಗಗಳ ಡಿಜಟಲೀಕರಣ ಮಾಡಲಾಗಿದೆ. ಯಕ್ಷಗಾನ ಕೃತಿ ಸಂಗ್ರಹ ಕೋಶ ಎಂಬ ಆಪ್ ಮೂಲಕ 1750 ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ಅಳವಡಿಸಲಾಗಿದೆ. ಮಟ್ಟು ಕೋಶದ ಮೂಲಕ 150 ಕ್ಕೂ ಹೆಚ್ಚು ಯಕ್ಷಗಾನ ಮಟ್ಟುಗಳ ದಾಖಲೀಕರಣ ಮಾಡಲಾಗಿದೆ ಎಂದರು.

ನಟರಾಜ ಉಪಾಧ್ಯ ಸ್ವಾಗತಿಸಿದರು. ರವಿ ಮಡೋಡಿ, ಡಿ.ಎಸ್. ಶ್ರೀಧರ್, ಮೃತ್ಯುಂಜಯ, ಪ್ರಕಾಶ್ ಹೆಗಡೆ ಮುಂತಾದವರು ಸಂವಾದದಲ್ಲಿ ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next