Advertisement

ಪಟ್ಲ ಭಾಗವತಿಕೆ; ಮನರಂಜಿಸಿದ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ

04:34 PM May 04, 2017 | Team Udayavani |

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಸಾರಥ್ಯದಲ್ಲಿ ಹಾಗೂ ಪದಾಧಿಕಾರಿಗಳ ಪ್ರೋತ್ಸಾಹ, ಕಾರ್ಯಕಾರಿ ಸಮಿತಿಯ ಸದಸ್ಯರ ಉತ್ಸುಕತೆಯಿಂದ ರವೀಂದ್ರನಾಥ್‌ ಭಂಡಾರಿ ಅವರ ನೇತೃತ್ವದಲ್ಲಿ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರ ಸಂಚಾಲಕತ್ವದಲ್ಲಿ ಇತ್ತೀಚೆಗೆ ಸಂಘದ ಸಭಾಗೃಹದಲ್ಲಿ ನಡೆದ ಬಿಸುಪರ್ಬ ಸಂದರ್ಭದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡು ಸಂಘದ ಇತಿಹಾಸದಲ್ಲಿ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಯಿತು.

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ಯುವ ಪೀಳಿಗೆಯ ಹೃದಯ ಸಾಮ್ರಾಜ್ಯದಲ್ಲಿ ಗಟ್ಟಿಯಾಗಿ ತಳವೂರಿದ, ಯುವಕರಿಗೆ ಯಕ್ಷಗಾನದ ಆಸಕ್ತಿಯನ್ನು ಹುಟ್ಟಿಸಿದ ಯಕ್ಷ ಚಕ್ರೇಶ್ವರ ಬಿರುದಾಂಕಿತ ಪಟ್ಲ ಸತೀಶ್‌ ಶೆಟ್ಟಿ ಅವರು ಯಕ್ಷಗಾನಾಮೃತದ ಸವಿಯನ್ನು ಉಣಬಡಿಸಿದರು. ದೇವಿಯ ಕಾರುಣ್ಯ ನಮ್ಮೊಳಗೆ, ಎಲೆಲೆ ನಾರಿ, ಅತ್ತಿತ್ತ ನೋಡುತ್ತ, ಪಾಹಿ ಜಗನ್ಮಾತೆ ಎಂಬಿತ್ಯಾದಿ ಪದಗಳ ಸಾಲುಗಳನ್ನು ವಿವಿಧ ರಾಗಗಳಿಂದ ಹಾಡಿ ನಿರಂತರ ನಾಲ್ಕು ಗಂಟೆಗಳ ಪ್ರದರ್ಶನದಿಂದ ಸಾವಿರಕ್ಕೂ ಅಧಿಕ ಸಂಖ್ಯೆಯ ಕಲಾರಸಿಕರನ್ನು ತನ್ನತ್ತ ಸೆಳೆದೊಯ್ದು ರಾಗಮಾಲಿಕೆಯ ಹಾರಗಳಿಂದ ಬಂಧಿಸಿದ ಹಿರಿಮೆಯ ಹಾಡುಗಾರಿಕೆ ಅವರದ್ದಾಗಿತ್ತು. ಚೆಂಡೆ-ಮದ್ದಳೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು, ಇನ್ನ ಆನಂದ ಶೆಟ್ಟಿ ಹಾಗೂ ಚಕ್ರತಾಳದಲ್ಲಿ ಶ್ಯಾಮ ಶೆಟ್ಟಿ ಅವರು ಸಹಕರಿಸಿದರು.

ಮುಮ್ಮೇಳದಲ್ಲಿ ಈಶ್ವರನಾಗಿ ಪ್ರಭಾಕರ ಎಲ್‌. ಶೆಟ್ಟಿ ಮತ್ತು ಭೈರವಿಯಾಗಿ ಲತಾ ಪಿ. ಶೆಟ್ಟಿ ಅವರು ಅಭಿನಯಿಸಿದ್ದರು. ಈ ಸತಿಪತಿಯ ಕಲಾಸಕ್ತಿಗೆ ತಲೆಬಾಗಬೇಕು. ದೇವೇಂದ್ರನಾಗಿ ಅಶೋಕ್‌ ಪಕ್ಕಳ ಅವರ ಶ್ರುತಿಬದ್ಧ ಕಾವ್ಯಮಯ ಮಾತುಗಳು, ಇದಿರು ಪಾತ್ರಧಾರಿಗಳಿಗಿತ್ತ ಪ್ರೋತ್ಸಾಹ, ಸಮಯ ಸಂದರ್ಭಕ್ಕೆ ಅನುಗುಣವಾಗಿ ಪಾತ್ರಧಾರಿಗಳ ನಿಜ ಹೆಸರನ್ನಿತ್ತು ಹಾಸ್ಯಮಯಕ್ಕೆ ಒತ್ತನ್ನಿತ್ತು ಪ್ರಾಸಬದ್ಧ ವಾಕ್ಯಗಳಿಂದ ವೃತ್ತಿಪರ ಕಲಾವಿದರಂತೆ ಮೆರೆದರು. ಕುಬೇರ ಮತ್ತು ವರುಣನಾಗಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಮತ್ತು ಸಿಎ ಐ. ಆರ್‌. ಶೆಟ್ಟಿ ಅವರು ತಾಳಬದ್ಧವಾಗಿ ಕುಣಿಯುವ ಪ್ರಯತ್ನ ಸಾಹಸಮಯವಾಗಿತ್ತು. ಅಗ್ನಿ ಮತ್ತು ವಾಯು ಆಗಿ ಅನುಷಾ ಬಿ. ಶೆಟ್ಟಿ, ಕೃತಿಕಾ ಎಂ. ಶೆಟ್ಟಿ ಅವರ ಪ್ರವೇಶದ ಕುಣಿತದ ಗತಿ, ಮಾತಿನ ರೀತಿ ಸಂದಭೋìಚಿತವಾಗಿತ್ತು. ಬೃಹಸ್ಪತಿಯಾಗಿ ಸಿಎ ಸದಾಶಿವ ಶೆಟ್ಟಿ ಅವರ ಮಿತವಾದ ಕುಣಿತಕ್ಕೆ ಮಾತಿನ ಹಿಡಿತವೂ ಭರವಸೆ ಮೂಡಿಸುವಂತಿತ್ತು.

ಕೋಲಮುನಿಯಾಗಿ ಕಾಪು ಅಶೋಕ್‌ ಶೆಟ್ಟಿ ಅವರು ಶ್ರುತಿಬದ್ಧವಾದ ಶುದ್ಧಮಾತಿನ ಮೌಲ್ಯಯುತ ಶಬ್ದಗಳ ಸರಮಾಲೆಯೊಂದಿಗೆ ದೇವೇಂದ್ರನ ಜತೆಗಿನ ಸಂಭಾಷಣೆ ಮೇರು ಕಲಾವಿದರನ್ನು ನೆನಪಿಸುವಂತಿತ್ತು. ಹುಂಡ-ಪುಂಡರಾಗಿ ಯುವ ಕಲಾವಿದರಾದ ದರ್ಶನ್‌ ಶೆಟ್ಟಿ ಮತ್ತು ಅವಕಾಶ್‌ ಶೆಟ್ಟಿ ಅವರ ರಭಸದ ಪ್ರವೇಶ, ಜೋಡಿ-ಕುಣಿತ, ಮಾತಿನ ವೈಖರಿ ಪುಂಡು ವೇಷದ ಮೆರುಗನ್ನು ಹೆಚ್ಚಿಸಿತ್ತು. ಪ್ರಥಮ ಕಂಹಾಸುರನಾಗಿ ಮುಂಡ್ಕೂರು ರತ್ನಾಕರ ಶೆಟ್ಟಿ ಅವರ ಪ್ರವೇಶದ ಗತಿ ಪಾತ್ರ ರಾಕ್ಷಸನ ಆಗಿದ್ದರೂ ರಾಜವೇಷಕ್ಕೆ ಒತ್ತು ನೀಡಿದ್ದು, ಸಮಯೋಚಿತ ಮಾತುಗಳಿಂದ ಸಭಿಕರನ್ನು ರಂಜಿಸಿದ ಚಂಡೆಯ ಬಡಿತಕ್ಕೆ ಅನುಗುಣವಾದ ಕುಣಿತ ಗಮನಾರ್ಹ.

ಎರಡನೆಯ ಶಂಕಾಸುರನಾಗಿ ಕರ್ನೂರು ಮೋಹನ್‌ ರೈ ಅವರ ಪ್ರವೇಶ ಸಂಪೂರ್ಣ ಪ್ರದರ್ಶನದ ತಿರುವಿಗೆ ಕಾರಣವಾಯಿತು. ರಕ್ತಗತವಾಗಿ ಬಂದ ಕಲೆಯನ್ನು ರಂಗಸ್ಥಳ ವಿಶಾಲವಾಗಿದ್ದರೂ ರಂಗನಡೆಗೆ ಗೌರವವಿತ್ತು, ಇತಿಮಿತಿಯ ಜಾಗದಲ್ಲೇ ಕುಣಿತಕ್ಕೆ ವಿಶೇಷ ಒತ್ತುಕೊಟ್ಟು ವಾಚಕ, ಆಂಗಿಕವಾಗಿಯೂ  ಸ್ಥಿತಪ್ರಜ್ಞೆಯುಳ್ಳವರಾಗಿ ದಣಿವರಿಯದೆ ವ್ಯಕ್ತಪಡಿಸಿದ ಕೋಪೋದ್ರಿತ ಭಾವನೆಯುಕ್ತ, ಭಕ್ತಿ ರಸಯುಕ್ತ, ಗೊಂದಲಮಯಯುಕ್ತ ಮಾತುಗಳಿಂದ ನವ ರಸನಾಯಕನಾಗಿ ಮಿಂಚಿ ಕಲಾರಸಿಕರ ನಿರೀಕ್ಷೆಗೂ ಮೀರಿ ಕೊಟ್ಟ ಅವರ ಅಭಿನಯವಂತೂ ಯಕ್ಷಗಾನದ ಸರ್ವತೋಮುಖ ಕಲಾವಿದನೆಂದು ಪ್ರತಿಪಾದಿಸಿತು. ಶುಕ್ರಾಚಾರ್ಯನಾಗಿ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಪಟ್ಟಿದ್ದಾರೆ. 

Advertisement

ವ್ಯಾಳಾಸುರನಾಗಿ ದಿವಾಕರ ಶೆಟ್ಟಿ ಕುರ್ಲಾ ಅವರು ತನ್ನ ಪ್ರವೇಶದಿಂದ ಹಿಡಿದು ಇತಿಮಿತಿಯ ಗಮನಾರ್ಹ ಮಾತುಗಳಿಂದ ಕುಣಿಕೆಯಿಂದ ಪ್ರೇಕ್ಷಕರ ಗಮನ ಸೆಳೆದರು. ಮಹಿಷಾಖ್ಯನಾಗಿ ರಮೇಶ್‌ ಶೆಟ್ಟಿ ಕಡಂದಲೆ ಬಣ್ಣದ ವೇಷದ ಯಕ್ಷಗಾನದ ಪರಂಪರೆಯ ಕೆಲವು ಕಲಾವಿದರನ್ನು ನೆನಪಿಸುವಂತೆ ಮಾಡಿದರು. ಮಾತಿನ ಗತ್ತುಗಾರಿಕೆಯಿಂದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನಾರದನಾಗಿ ಸಿಎ ರಮೇಶ್‌ ಶೆಟ್ಟಿ, ಷಣ್ಮುಖನಾಗಿ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ಶಚಿದೇವಿಯಾಗಿ ಸೌಮ್ಯಾ ಶೆಟ್ಟಿ ಅವರು ತಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದರು.

ಶ್ರೀ ದೇವಿ ಮೂಕಾಂಬಿಕೆಯಾಗಿ  ಭರವಸೆಯ ಕಲಾವಿದೆ, ಪತ್ತನಾಜೆ ತುಳುಚಿತ್ರದ ನಾಯಕಿ ರೇಷ್ಮಾ ಶೆಟ್ಟಿ ಅವರು ಪ್ರಸಂಗದ ನಾಯಕಿಯಾಗಿಯೂ ಪ್ರಸಂಗದುದ್ದಕ್ಕೂ ಕೋಶಾವೇಷದ ರೋಶದ ಕುಣಿಕೆಯಿಂದ, ಮೋಹಕ ಅಭಿನಯದಿಂದ, ಸ್ಪಷ್ಟ ಮಾತುಗಳಿಂದ ಅಚ್ಚುಕಟ್ಟಾಗಿ ತಮ್ಮ ಪ್ರದರ್ಶನದಿಂದ ಕಲಾರಸಿಕರ ಮನಗೆದ್ದರು. ಕಾಳಿಯಾಗಿ ಸಮಹಿತ ಶೆಟ್ಟಿ, ಮಂತ್ರವಾದಿಯಾಗಿ ಪ್ರಕಾಶ್‌ ಶೆಟ್ಟಿ ನಲ್ಯಗುತ್ತು, ದೇವೇಂದ್ರನ ದೂತನಾಗಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಪುರುಹಿತ ಮುನಿ, ಡೊಂಬರಾಟದವರಾಗಿ ಪ್ರಕಾಶ್‌ ಕುಂಠಿನಿ, ಮಹೇಶ್‌ ಶೆಟ್ಟಿ, ಕಿಶೋರ್‌ ಕುಮಾರ್‌ ಕುತ್ಯಾರ್‌ ಅವರು ಗಮನ ಸೆಳೆದರು. ಪ್ರೇತ ಹಿಡಿದ ಮಹಿಳೆಯಾಗಿ ನವೀನ್‌ ಶೆಟ್ಟಿ ಇನ್ನಬಾಳಿಕೆ, ಪತಿಯಾಗಿ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರು ಪ್ರಸಂಗದಲ್ಲಿ ಬಂದ ವಿಶೇಷ ಪಾತ್ರಗಳಲ್ಲಿ ರಂಜಿಸಿದರು.
ನಿರಂತರ ನಾಲ್ಕು ವರ್ಷಗಳಿಂದ ನಾಲ್ಕು ಪ್ರಸಂಗಗಳನ್ನು ಆಡಿತೋರಿಸಿದ ಸಂಘದ ಪ್ರಯತ್ನ ಶ್ಲಾಘನೀಯ. ಆದರೂ ಯಕ್ಷಗಾನದ ಪರಂಪರೆಗೆ ನೀಡಬೇಕಾದ ಗೌರವ ಸಲ್ಲಲೇ ಬೇಕು. ಅದಕ್ಕಾಗಿ ಕಲಾವಿದರು ವೃತ್ತಿಪರ ಅಥವಾ ಹವ್ಯಾಸಿಯೇ ಆಗಿರಲಿ. ರಂಗ ನಡೆ, ರಂಗ ಮಾಹಿತಿ, ಭಾಷೆಯ ಪ್ರಜ್ಞೆಗೆ ಗಮನ ಕೊಟ್ಟು ವ್ಯವಹರಿಸಿದರೆ ಪ್ರದರ್ಶನ ಉತ್ತಮ ಗುಣಮಟ್ಟದಲ್ಲಿ ಸಾಗಲು ಸಾಧ್ಯ. ಮುಂಬಯಿಯಲ್ಲಿ ಬಂಟ ಸಮಾಜದಲ್ಲಿ ವಿಶೇಷ ಪ್ರತಿಭೆಗಳಿದ್ದು ಅವರಿಗೂ ಇಂತಹ ಸಂದರ್ಭದಲ್ಲಿ  ವೇದಿಕೆಯನ್ನು ಕಲ್ಪಿಸಿಕೊಡಬೇಕು. ಕೇವಲ ಒಂದೇ ಪ್ರದರ್ಶನವಿರಲಿ ಪಾತ್ರವಹಿಸಿದರೂ ತಮ್ಮ ಪಾತ್ರ ಚಿಕ್ಕದಿರಲಿ, ದೊಡ್ಡದಿರಲಿ ಅದಕ್ಕೆ ನ್ಯಾಯ ನೀಡುವ ಕೆಲಸ ನಮ್ಮಿಂದಾಗಬೇಕು. ಯಕ್ಷಗಾನದ ಪರಂಪರೆ ಉಳಿಸಿ-ಬೆಳೆಸುವಲ್ಲಿ ನಾವು ಟೊಂಕಕಟ್ಟಿ ನಿಂತರೆ ಅದೇ ನಾವು ಕಲಾಮಾತೆಗೆ ಸಲ್ಲಿಸುವ ಗೌರವ, ಪೂಜೆಯಾಗುತ್ತದೆ.

 ದಯಾಮಣಿ ಶೆಟ್ಟಿ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next