ಮುಂಬಯಿ: ಯಕ್ಷಾಭ್ಯುದಯ ಬಳಗ ಥಾಣೆ ಇದರ 6ನೇ ವಾರ್ಷಿಕೋತ್ಸವದ ನಿಮಿತ್ತ ಯಕ್ಷ ಸಂಘಟಕ ರಮೇಶ್ ಶೆಟ್ಟಿ ಸಿವಿಲ್ ಅವರ ಸಂಚಾಲಕತ್ವದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ ಮಾರಣಕಟ್ಟೆ ಇದರ ಮುಂಬಯಿ ತಿರುಗಾಟಯ ಯಕ್ಷನವಮಿ ಸಮಾ ರಂಭದ ಅಂಗವಾಗಿ ಮಂಡಳಿಯ ಕಲಾವಿದರಿಂದ ಶ್ರೀ ಕೃಷ್ಣ ಪಾರಿಜಾತ -ಮೈಂದ ದ್ವಿವಿದ ಕಾಳಗ-ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನವು ಇತ್ತೀಚೆಗೆ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಸಭಾಂಗಣದಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ತುಂಬಿದ ಪ್ರೇಕ್ಷಕ ವರ್ಗವನ್ನು ಕಂಡಾಗ ಸಂತೋಷವಾಗುತ್ತಿದೆ. ಯಾವುದೇ ಪದಾಧಿಕಾರಿಗಳಿಲ್ಲದ ಈ ಯಕ್ಷಾಭ್ಯುದಯ ಬಳಗದ ಸದಸ್ಯರು ಒಳ್ಳೆಯ ಸಮಾಜಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪ್ರತೀ ವರ್ಷ ಯಕ್ಷಗಾನ ಬಯಲಾಟವನ್ನು ಆಯೋಜಿಸಿ ಕಲಾವಿದರಿಗೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಇವರ ಕಾರ್ಯ ಅಭಿನಂದನೀಯವಾಗಿದೆ. ಈ ದೇವಾಲಯವನ್ನು ನಾನಾಗಲಿ, ಇತರ ಪದಾಧಿಕಾರಿಗಳಾಗಲಿ ಮಾಡಿದಲ್ಲ. ನಿಮ್ಮಂತಹ ಭಕ್ತಾದಿಗಳು ಮಾಡಿದ್ದಾರೆ. ಇಲ್ಲಿ ನಿರಂತರವಾಗಿ ಯಕ್ಷಗಾನ ಸೇವೆಗಳು ನಡೆಯುತ್ತಿದ್ದು, ಈ ವರ್ಷ 10-20 ಯಕ್ಷಗಾನ ಸೇವೆಗಳು ಬುಕ್ಕಿಂಗ್ ಆಗಿವೆ ಎನ್ನಲು ಸಂತೋಷವಾಗುತ್ತಿದೆ ಎಂದರು.
ಅತಿಥಿಗಳಾಗಿ ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಮಾಜಿವಾಡಾ ಶ್ರೀ ಆದಿಶಕ್ತಿ ಕನ್ನಡ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾದಿರಾಜ ಶೆಟ್ಟಿ, ವಿದ್ಯಾದಾಯಿನಿ ಸಭಾ ಮುಂಬಯಿ ಇದರ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್, ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ ಇದರ ಮಾಜಿ ಉಪಾಧ್ಯಕ್ಷ ಎಸ್. ಕೆ. ಪೂಜಾರಿ, ಉದ್ಯಮಿ ದಯಾನಂದ ಶೆಟ್ಟಿ, ದೇವಾಲಯದ ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.
ಬಳಗದ ಸದಸ್ಯರಾದ ಬ್ರಹ್ಮಾಂಡ ಶಂಕರ್ ಪೂಜಾರಿ ಸ್ವಾಗತಿಸಿದರು. ಬಳಗದ ಸದಸ್ಯರು ಅತಿಥಿಗಳನ್ನು ಗೌರವಿಸಿದರು. ಸಮಾರಂಭದಲ್ಲಿ ಉದ್ಯಮಿ ಅನುಪ್ ರಾಮಕೃಷ್ಣ ಸುರ್ವೆ ದಂಪತಿ ಹಾಗೂ ಅವರ ಮಾತಾಪಿತರನ್ನು, ಪತ್ರಕರ್ತ ರಮೇಶ್ ಭಿರ್ತಿ ಮತ್ತು ಸಮಾಜ ಸೇವಕ ಪ್ರೇಮಾನಂದ ಕುಕ್ಯಾನ್ ಅವರನ್ನು ಬಳಗದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ರಾಘವೇಂದ್ರ ಮೊಗವೀರ ಮತ್ತು ಉಮೇಶ್ ಮೊಗವೀರ ಅವರನ್ನು ಗೌರವಿಸಲಾಯಿತು. ಯಕ್ಷಗಾನ ಮಂಡಳಿಯ ಪ್ರಸಿದ್ಧ ಭಾಗವತ ಆನಂದ ಅಂಕೋಲ, ಪ್ರಸಿದ್ಧ ಹಾಸ್ಯಗಾರ ಶೇಖರ ಶೆಟ್ಟಿ ಎಳಬೇರು ಅವರಿಗೆ ಆರ್ಥಿಕ ಸಹಾಯವನ್ನಿತ್ತು ಗೌರವಿಸಲಾಯಿತು. ದೇವಾಲಯದ ವತಿಯಿಂದ ಮಂಡಳಿಯ ಭಾಗವತ ಸುಧಾಕರ ಕೊಠಾರಿ ಅವರನ್ನು ಗೌರವಿಸಲಾಯಿತು. ಮೇಳದ ಸಂಚಾಲಕ ಬೆಳ್ಳಾಲ ರಮೇಶ್ ಶೆಟ್ಟಿ ಸಿವಿಲ್ ಅವರ ವತಿಯಿಂದ ಬಳಗದ ಸದಸ್ಯ ಜೋನ್ ಅಂದ್ರಾದೆ ಅವರನ್ನು ಗೌರವಿಸಲಾಯಿತು.
ಸಮ್ಮಾನಿತರು ಸಂದಭೋì ಚಿತವಾಗಿ ಮಾತನಾಡಿದರು. ಶ್ರದ್ಧಾ ಶಂಕರ್ ಪೂಜಾರಿ ಸಮ್ಮಾನ ಪತ್ರ ವಾಚಿಸಿದರು. ಬ್ರಹ್ಮಾಂಡ ಶಂಕರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶಂಕರ್ ಆರ್. ಪೂಜಾರಿ, ಸಂತೋಷ್ ಆರ್. ಶೆಟ್ಟಿ, ರಾಘವೇಂದ್ರ ಮೊಗವೀರ, ಮೋಹನ್ ದೇವಾಡಿಗ, ಉದಯ ಆಚಾರ್ಯ ಮೊದಲಾದವರು ಸಹಕರಿಸಿದರು. ಕೊನೆಯಲ್ಲಿ ಅನ್ನ ಪ್ರಸಾದ ನಡೆಯಿತು. ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.