Advertisement

ಜಲಾಶಯ ಇದ್ದರೂ ಶಾಶ್ವತ ನೀರಿಲ್ಲ

08:22 PM Apr 20, 2021 | Team Udayavani |

ಬೇಲೂರು: ತಾಲೂಕಿನಲ್ಲಿ ಎರಡು ಜಲಾಶಯಗಳಿದ್ದರೂ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವಲ್ಲಿ ಜನಪ್ರತಿನಿಧಿಗಳು ವಿಫ‌ಲವಾಗಿದ್ದು ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ.

Advertisement

ಮಳೆ ಕೊರತೆಯಿದೆ: ಇತ್ತೀಚಿನ ವರ್ಷಗಳಲ್ಲಿ ಬಯಲು ಸೀಮೆಯಂತೆ ಮಲೆನಾಡು ಪ್ರದೇಶ ಗಳಲ್ಲೂ ಹಳ್ಳ, ಝರಿಗಳು ಭತ್ತಿಹೋಗಿದ್ದು ಅಲ್ಲಿಯೂ ಕುಡಿವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ನಾಶದಿಂದಾಗಿ ಪರಿಸರದಲ್ಲಿ ಏರುಪೇರಾಗಿ ಮಳೆ ಕೊರತೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಯೋಜನೆ ಬಗ್ಗೆ ಸಿಗದ ಮಾಹಿತಿ: ಸರ್ಕಾರ ಗ್ರಾಮೀಣ ಪ್ರದೇಶಕ್ಕೆ ನದಿ ಮೂಲಗಳಿಂದಕುಡಿಯುವ ನೀರಿನ ಪೂರೈಕೆ ಮಾಡಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆರೂಪಿಸುವುದಾಗಿ ಹೇಳಿದೆ. ಅದರಂತೆ ಶಾಸಕ ಕೆ.ಎಸ್‌. ಲಿಂಗೇಶ್‌ ಈ ಯೋಜನೆಗೆ ಗೆಂಡೆಹಳ್ಳಿ, ಅರೇಹಳ್ಳಿ, ಮಾದಿಹಳ್ಳಿ ಹೋಬಳಿ ಸೇರ್ಪಡೆ ಮಾಡಿದ್ದೇನೆ ಎಂದುಕೇವಲ ಹೇಳಿಕೆ ನೀಡುತ್ತಲೇ ಬಂದಿದ್ದು ಈ ಯೋಜನೆ ಯಾವ ಹಂತದಲ್ಲಿದೆ ಎಂಬುದನ್ನು ಮಾತ್ರ ತಿಳಿಸುತ್ತಿಲ್ಲ. ಸರ್ಕಾರ ಕುಡಿಯುವ ನೀರಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳ ಕೆರೆ, ಕಟ್ಟೆ ಹಾಗೂ ಜಲ ಮೂಲ ಉಳಿಸಿ ದುರಸ್ಥಿಗೊಳಿಸಿ ಮಳೆಗಾಲದಲ್ಲಿ ನೀರು ಸಂಗ್ರಹ ವ್ಯವಸ್ಥೆಗೆ ಮುಂದಾದಾಗ ಮಾತ್ರ ಮುಂದಿನ ದಿನಗಳಲ್ಲಿ ನೀರಿನ ಕೊರತೆ ನೀಗಿಸಲು ಸಹಕಾರಿಯಾಗಲಿದೆ.

ಚಿಂತನೆ ನಡೆಸಿ: ಗ್ರಾಮೀಣ ಕೆರೆ, ಕಟ್ಟೆಗಳು ನೀರು ಇಲ್ಲದೆ ಒಣಗಿ ನಿಂತಿವೆ. ಜಾನುವಾರು, ಪ್ರಾಣಿ ಪಕ್ಷಿ ಗಳಿಗೂ ನೀರು ಇಲ್ಲದಾಗಿ ಕಾಡು ಪ್ರಾಣಿಗಳು ಈಗಾಗಲೇ ಪಟ್ಟಣ, ಗ್ರಾಮಗಳಿಗೆ ನುಗ್ಗಿ ಆಹಾರ, ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರಗಳು ಈ ಬಗ್ಗೆ ಚಿಂತನೆ ನಡೆಸುವುದು ಬಹು ಮುಖ್ಯವಾಗಿದೆ.

ಪ್ರವಾಸಿ ಕೆಂದ್ರವಾದ ಬೇಲೂರು ಪಟ್ಟಣಕ್ಕೆ ಯಗಚಿ ಜಲಾಶಯದಿಂದ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ 24×7 ಕುಡಿಯುವ ನೀರಿನ ಯೋಜನೆಗೆಚಾಲನೆ ನೀಡಲಾಗಿತ್ತು. ಹೀಗಿದ್ದರೂ 4 ವರ್ಷಕಳೆದರೂ ಯೋಜನೆ ಅನುಷ್ಠಾನಗೊಳ್ಳದೆ ನೆನಗುದಿಗೆ ಬಿದ್ದಿದೆ. ಈ ಬಗ್ಗೆ ಯಾವ ಜನ ಪ್ರತಿನಿಧಿಗಳೂಕಾಮಗಾರಿ ಪೂರ್ಣಗೊಳಿಸುವಲ್ಲಿ ಚಿಂತನೆ ನಡೆಸದೆ ಇರುವುದು ಎದ್ದು ಕಾಣುತ್ತಿದೆ.

Advertisement

ಖಾಸಗಿ ಕೊಳವೆ ಬಾವಿ ನೀರು ಪೂರೈಕೆ :  ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ನಿಗಾವಹಿಸಲಾಗಿದೆ. 37 ಗ್ರಾಪಂಗಳಲ್ಲಿ ಪ್ರಸ್ತುತ ಎಲ್ಲೂ ತೀವ್ರತರವಾದ ನೀರಿನ ಸಮಸ್ಯೆ ಎದುರಾಗಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಆಗಲಿರುವ ಹಳ್ಳಿಗಳನ್ನು ಗುರುತಿಸಲಾಗಿದ್ದು ಸಮಸ್ಯೆ ಎದುರಾಗದಂತೆ ಕ್ರಮವಹಿಸಲಾಗಿದೆ ಎಂದು ಜಿಪಂ ಸಹಾಯಕಕಾರ್ಯಪಾಲಕ ಎಂಜಿನಿಯರ್‌ ರಂಜಿತಾ ತಿಳಿಸಿದರು.

ಜಿಲ್ಲಾಧಿಕಾರಿಗಳು ಕುಡಿವ ನೀರಿಗೆ ಸಮಸ್ಯೆಯಾಗಂತೆ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿದ್ದಾರೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.ತಾಲೂಕಿನ ಯಾವುದೇ ಹಳ್ಳಿಗಳಲ್ಲಿ ತೀವ್ರತರವಾದ ಕುಡಿವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತೆಯಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನ ಅರೇಹಳ್ಳಿಯ ಕೆಲ ಭಾಗಗಳಲ್ಲಿ ಸಮಸ್ಯೆ ಎದುರಾಗಲಿದ್ದು ನೀರಿನ ತೊಂದರೆ ಆಗದಂತೆ ಖಾಸಗಿಯವರ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಎಲ್ಲಾ ತಯಾರಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ನೀರಿನ ಯೋಜನೆ ಸಾಧ್ಯವಾಗಿಲ್ಲ  :

ಬೇಲೂರು ತಾಲೂಕು ಮಲೆನಾಡು ಅರೆಮಲೆನಾಡು ಬಯಲು ಸೀಮೆ ಪ್ರದೇಶಗಳನ್ನು ಹೊಂದಿದ್ದು ತಾಲೂಕಿನಲ್ಲಿ ಯಗಚಿ ಮತ್ತುವಾಟೇಹೊಳೆ ಜಲಾಶಯಗಳಿವೆ. ಹೀಗಿದ್ದರೂ ತಾಲೂಕಿಗೆ ಸಂಪೂರ್ಣ ಕುಡಿವ ನೀರು ಕಲ್ಪಿಸಲು ಅಧಿಕಾರ ಅನುಭವಿಸಿದ ಶಾಸಕರು, ರಾಜಕೀಯ ಪಕ್ಷಗಳ ಮುಖಂಡರ ಇಚ್ಚಾಶಕ್ತಿ ಕೊರತೆ, ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅಲ್ಲದೇ ಯಗಚಿ ಜಲಾಶಯದಿಂದ ಚಿಕ್ಕಮಗಳೂರು, ಅರಸಿಕೆರೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ತಾಲೂಕಿ ನಲ್ಲೇ ಇರುವ ಜಲಾಶಯಗಳಿಂದತಾಲೂಕಿಗೆ ಕುಡಿಯುವ ನೀರಿನ ಯೋಜನೆ ಕಲ್ಪಿಸಲು ಮಾತ್ರ ಇದುವರೆಗೂ ಸಾಧ್ಯವಾಗಿಲ್ಲ.

 

– ಡಿ.ಬಿ.ಮೋಹನ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next