Advertisement

ಯಾದಗಿರಿ: 61 ಮಂದಿಗೆ ಸೋಂಕು

12:15 PM Jun 10, 2020 | Naveen |

ಯಾದಗಿರಿ: ಮಂಗಳವಾರವೂ ಯಾದಗಿರಿಯಲ್ಲಿ ಕೋವಿಡ್ ಅಟ್ಟಹಾಸ ಮೆರೆದಿದ್ದು, ಮಹಾರಾಷ್ಟ್ರದ ಜತೆಗೆ ಇದೀಗ ಗುಜರಾತ್‌ ನಂಟೂ ಅಂಟಿದೆ. ಅಲ್ಲದೇ ಗುರುಮಠಕಲ್‌ ತಾಲೂಕಿನ ಕೇಶ್ವಾರ ಗ್ರಾಮದ 4 ವರ್ಷದ ಬಾಲಕಿ (ಪಿ-5864) ಸೇರಿದಂತೆ ಅದೇ ಗ್ರಾಮದ 20 ಜನರಲ್ಲಿ ಮಹಾಮಾರಿ ಕೋವಿಡ್ ವಕ್ಕರಿಸಿದ್ದು ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ.

Advertisement

ಸೋಮವಾರವಷ್ಟೇ ಹಸುಗೂಸನ್ನು ಲೆಕ್ಕಿಸದೆ ಬರೋಬ್ಬರಿ 66 ಜನರಲ್ಲಿ ವಕ್ಕರಿಸಿ, 581 ಇದ್ದ ಸೋಂಕಿತರ ಸಂಖ್ಯೆ ಮಂಗಳವಾರ 61 ಜನ ಸೇರಿ 642 ಜನರಿಗೆ ಸೋಂಕು ದೃಢವಾಗಿದೆ. ಚಿಕ್ಕ ಮಕ್ಕಳು ಸೇರಿದಂತೆ 35 ಪುರುಷರು, 26 ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಗುರುಮಠಕಲ್‌ ತಾಲೂಕಿನ ಚಿಂತನಳ್ಳಿ ಗ್ರಾಮದ 2 ವರ್ಷದ ಹೆಣ್ಣುಮಗು (ಪಿ-5854), 4 ವರ್ಷದ ಹೆಣ್ಣುಮಗು (ಪಿ-5853) ಹಾಗೂ 8 ವರ್ಷದ ಬಾಲಕಿ (ಪಿ-5855) ಸೇರಿ 6 ಜನರಲ್ಲಿ ಸೋಂಕು ಕಾಣಿಸಿದೆ.

ಅಜಲಾಪುರ ಗ್ರಾಮದ 4 ವರ್ಷದ ಬಾಲಕ (ಪಿ- 5892), ಜೈಗ್ರಾಮ್‌, ಮಾಧ್ವಾರ, ಮಗದಂಪುರ ತಾಂಡಾ, ಯಲ್ಹೇರಿ, ಚಿನ್ನಾಕಾರ್‌, ಚಪೆಟ್ಲಾದಲ್ಲಿಯೂ ಸೋಂಕು ಪತ್ತೆಯಾಗಿದ್ದು ಎಲ್ಲರೂ ಮಹಾರಾಷ್ಟ್ರದ ನಂಟು ಹೊಂದಿದ್ದಾರೆ. ಅಲ್ಲದೇ ಗುಜರಾತನ ಅಹಮದಾಬಾದ್‌ನಿಂದ ಆಗಮಿಸಿರುವ ಸುರಪುರ ಮೂಲದ 28 ಮತ್ತು 52 ವರ್ಷದ ಪುರುಷ (ಪಿ-5840, ಪಿ-5842) ಹಾಗೂ 20 ವರ್ಷದ ಮಹಿಳೆ (ಪಿ-5841)ಗೆ ಸೋಂಕು ದೃಢಪಟ್ಟಿದೆ.

431 ಮಾದರಿ ಸಂಗ್ರಹ: ಕೊರೊನಾ ವೈರಸ್‌ ಪರೀಕ್ಷೆಗಾಗಿ ಮಂಗಳವಾರ ಜಿಲ್ಲೆಯಲ್ಲಿ 431 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ಇಂದು 661 ನೆಗೆಟಿವ್‌ ವರದಿ ಸೇರಿ ಈವರೆಗೆ 16,977 ಜನರ ವರದಿ ನೆಗೆಟಿವ್‌ ಬಂದಿವೆ. ಇನ್ನೂ 1,437 ಮಾದರಿಗಳ ವರದಿ ಬರಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್‌ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌19 ಖಚಿತಪಟ್ಟ 642 ವ್ಯಕ್ತಿಗಳ ಪೈಕಿ 113 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,059 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 2,426 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

ಜಿಲ್ಲೆಯಲ್ಲಿ 29 ಕಂಟೇನ್‌ಮೆಂಟ್‌ ಝೋನ್‌ಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 123 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 71 ಜನರನ್ನು, ಸುರಪುರ ಕೊರೊನಾ ಕೇರ್‌ ಸೆಂಟರ್‌ನಲ್ಲಿ 80 ಮತ್ತು ಏಕಲವ್ಯ ಕೊರೊನಾ ಕೇರ್‌ ಸೆಂಟರ್‌ನಲ್ಲಿ 179 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ. ಜಿಲ್ಲೆಯ 31 ಸಾಂಸ್ಥಿಕ ಕ್ವಾರಂಟೈನ್‌ ಸೆಂಟರ್‌ಗಳಲ್ಲಿ ಒಟ್ಟು 1,350 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next