Advertisement

ದಾಸಿಮಯ್ಯನವರ ವಚನ ಪಾಲಿಸಿ

04:18 PM Apr 11, 2019 | Naveen |

ಯಾದಗಿರಿ: ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ ಫೋನ್‌ಗಳ ಬಳಕೆಯಿಂದಾಗಿ ಬಹಳಷ್ಟು ಜನರು ವಚನಕಾರರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಕಡಿಮೆಯಾಗುತ್ತಿದೆ. ದೇವರ ದಾಸಿಮಯ್ಯನವರ ವಚನಗಳಲ್ಲಿ
ಮನುಷ್ಯನ ಜೀವನ ನಿರ್ವಹಣೆ ತತ್ವಗಳು ಅಡಕವಾಗಿವೆ. ಅವುಗಳನ್ನು ಅರಿತು ಎಲ್ಲರನ್ನು ಒಂದಾಗಿ ನೋಡುವ ಭಾವನೆ ಬೆಳೆಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಕರೆ ನೀಡಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ನವರ ಜಯಂತ್ಯೋತ್ಸವ ಸಮಿತಿ
ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದ್ಯ
ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

11ನೇ ಶತಮಾನದ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ತಾರತಮ್ಯವನ್ನು ತಮ್ಮ ವಚನಗಳ ಮೂಲಕ ತಿದ್ದುವ ಕೆಲಸ ಮಾಡಿರುವ ವಚನಕಾರರಲ್ಲಿ ದೇವರ
ದಾಸಿಮಯ್ಯನವರು ಮೊದಲಿಗರು. 11-12ನೇ ಶತಮಾನದಲ್ಲಿ ವಚನಕಾರರು ಕಾಯಕದಿಂದ ಬಂದ ಸಂಪಾದನೆಯಲ್ಲಿ ಆಹಾರ ಸೇವಿಸಬೇಕು ಎಂದು ತಿಳಿಸಿಕೊಟ್ಟಿದ್ದಾರೆ. ಅವರ ಜಯಂತಿಗಳ ಆಚರಣೆ ಮೂಲಕ ಜೀವನದ ತತ್ವಾದರ್ಶ ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇವರ ದಾಸಿಮಯ್ಯನವರ ಪ್ರಕಾರ ಜೀವನ ಒಂದು ಹುಡುಗಾಟವಲ್ಲ. ಅದು
ಹುಡುಕಾಟವಾಗಿದೆ. ಕಳೆದು ಹೋದ ಸಮಯ ಮತ್ತೆ ಸಿಗುವುದಿಲ್ಲ. ಪ್ರತಿಯೊಬ್ಬರು ಸಮಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು
ಹೇಳಿದರು.

ರಾಯಚೂರು ಜಿಲ್ಲೆಯ ಕಲ್ಮಠ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಮೇಶ ಬಾಬು ಯಾಳಗಿ ಮಾತನಾಡಿ, ಜಾತಿಪದ್ಧತಿ ಹೋಗಲಾಡಿಸಿ ಉನ್ನತ ಆದರ್ಶ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ತಿಳಿಸಿದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಕುರಿತು ಚಿಂತನ- ಮಂಥನ
ಮಾಡಿ ಅವರ ತತ್ವಾದರ್ಶ ಅಳವಡಿಸಿಕೊಳುವುದು ಅವಶ್ಯವಿದೆ. ದಾಸಿಮಯ್ಯನವರು ಮನುಕುಲದ ದಾರಿದೀಪ. ಸಾರ್ವಜನಿಕ ವ್ಯಕ್ತಿಗಳನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಿ ನೋಡುವ ಭಾವನೆ ಬದಲಾಗಬೇಕು. ಇದು ಎಲ್ಲ ಮಹಾತ್ಮರ ಜಯಂತಿಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದರು.

ವಚನಗಳು ಮನುಷ್ಯನನ್ನು ಸರಿ ದಾರಿಗೆ ತರುವ ಕೆಲಸ ಮಾಡುತ್ತವೆ. ಸಂಸ್ಕಾರ ರಹಿತ ಮನುಷ್ಯರಿಂದ ಸಮಾಜದಲ್ಲಿ ಭಯಾನಕ ವಾತಾವರಣ
ನಿರ್ಮಾಣವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಕುಟುಂಬದಿಂದಲೇ ಸಂಸ್ಕಾರ ಸಹಿತ ಜೀವನ ನಡೆಸುವ ಬಗ್ಗೆ ತಿಳಿವಳಿಕೆ ನೀಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಯಾದಗಿರಿ ಜಿಲ್ಲೆ ಮುದನೂರು ದೇವರ ದಾಸಿಮಯ್ಯನವರ ಜನ್ಮಸ್ಥಳವಾಗಿದೆ. ಅವರ ಕಾಲಮಾನದ ಕುರಿತು ಹಲವು ಇತಿಹಾಸಕಾರರು ಹಲವು ರೀತಿಯ ಕಾಲಮಾನ ಗುರುತಿಸಿದ್ದಾರೆ. ದಾಸಿಮಯ್ಯನವರು ಆತ್ಮ ಸಾಕ್ಷಾತ್ಕಾರಕ್ಕಾಗಿ ನೇಕಾರಿಕೆ ಕಾಯಕ ಮಾಡುತ್ತಿದ್ದರು.

Advertisement

ರಾಮನಾಥ ಎಂಬ ನಾಮಾಂಕಿತದಿಂದ 178 ವಚನ ರಚಿಸಿದ್ದಾರೆ. ತಮ್ಮ ವಚನಗಳಲ್ಲಿ ಎಲ್ಲೂ ಬಸವಣ್ಣನವರ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ,
ಬಸವಣ್ಣನವರು ತಮ್ಮ 18 ವಚನಗಳಲ್ಲಿ ದೇವರ ದಾಸಿಯ್ಯನವರ ಕುರಿತು ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಅವರನ್ನು ಬಸವ ಪೂರ್ವದ ವಚನಕಾರ
ಹಾಗೂ ವಚನ ಚಳವಳಿ ಬೆಳ್ಳಿ ಚುಕ್ಕಿ, ಕಾಯಕ ಪ್ರಜ್ಞೆ ಬಿತ್ತಿದ ಮೊದಲ ವಚನಕಾರ. ವಚನ ಬ್ರಹ್ಮ ಎಂದು ಕರೆಯಲಾಗುತ್ತದೆ. ದೇವರಿಗೆ ಪ್ರಶ್ನೆ ಹಾಕಿದ ಮೊದಲ ವಚನಕಾರ ಎಂದು ಅವರು ವಿವರಿಸಿದರು.

ಜಿಪಂ ಉಪ ಕಾರ್ಯದರ್ಶಿ ವಸಂತ ವಿ. ಕುಲಕರ್ಣಿ, ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಭಂಡಾರಿ, ನಗರಸಭೆ ಪೌರಾಯುಕ್ತ
ರಮೇಶ ಸುಣಗಾರ, ದೇವರ ದಾಸಿಮಯ್ಯನವರ ಜಯಂತ್ಯುತ್ಸವ ಸಮಿತಿ ಬಸವರಾಜ ಹುನಗುಂದ ಇದ್ದರು. ಸಮಾಜದ ಮುಖಂಡರು, ಅಧಿಕಾರಿಗಳು
ಭಾಗವಹಿಸಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ಕಲಾ ತಂಡದವರು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು. ಶುಭಂ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಗುರುಪ್ರಸಾದ ವೈದ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next