Advertisement

ದೇಶಿ ಕ್ರೀಡೆಗಳಿಗೆ ಸರ್ಕಾರದಿಂದ ಹೆಚ್ಚಿನ ಆದ್ಯತೆ: ಚಿಂಚನಸೂರ

06:31 PM Dec 09, 2019 | Naveen |

ಯಾದಗಿರಿ: ಪ್ರಸಕ್ತ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶಿ ಕ್ರೀಡೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿರುವ ಪರಿಣಾಮ ಕ್ರೀಡಾ ಪಟುಗಳು ವಿಶ್ವ ಮಟ್ಟದಲ್ಲಿ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ ಸ್ವರ್ಣ ಹಾಗೂ ಬೆಳ್ಳಿ ಪದಕಗಳಿಸಿ ದೇಶದ ಗೌರವ ಹೆಚ್ಚಿಸಿದ್ದಾರೆ ಎಂದು ಮಾಜಿ ಸಚಿವ, ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ ಹೇಳಿದರು.

Advertisement

ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮುಕ್ತ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ಹಳ್ಳಿಗಳಿಂದ ಕೂಡಿರುವ ದೇಶವಾಗಿದೆ. ಇಲ್ಲಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕೈಕುಸ್ತಿ, ಭಾರ ಎತ್ತುವ ಕ್ರೀಡೆಗಳನ್ನು ಜಾತ್ರೆ, ಇನ್ನಿತರ ಕಾರ್ಯಕ್ರಮಗಳಲ್ಲಿ ಕಾಣುತ್ತೇವೆ ಆ ಕ್ರೀಡೆಗಳಿಗೆ ನಾವೆಲ್ಲರೂ ಪ್ರೋತ್ಸಾಹಿಸಿದಲ್ಲಿ ಮಾತ್ರ ಉಳಿಯುತ್ತವೆ ಎಂದು ಹೇಳಿದರು.

ಯುವಕರು ಬದುಕಿನಲ್ಲಿ ಒಳ್ಳೆಯ ಕ್ರೀಡಾ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಅವರ ದೈಹಿಕ, ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಸಾಮರಸ್ಯ ಮೂಡುತ್ತದೆ. ಗ್ರಾಮದ ಮುಖಂಡ ಮಲ್ಲಣಗೌಡ ಪಾಟೀಲ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸುವ ಜತೆಗೆ ಯುವಕರ ಸಕರಾತ್ಮಕ ಹಾಗೂ ಸಮಾಜಮುಖೀ ಚಟುವಟಿಕೆಗಳಿಗೆ ಬೆಂಬಲಿಸಿ ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಗ್ರಾಮೀಣ ಠಾಣೆ ಪಿಎಸ್‌ಐ ವೀರಣ್ಣ ಮಗಿ ಮಾತನಾಡಿ, ಕ್ರೀಡಾ ಪಟುಗಳು ಮೊದಲು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಪಂದ್ಯಾವಳಿಯಲ್ಲಿ ಸೋಲು-ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಲ್ಲಣಗೌಡ ಮಾಲಿಪಾಟೀಲ ಮಾತನಾಡಿ, ಗ್ರಾಮದಲ್ಲಿ ಯುವಕರು ಪ್ರಗತಿಪರ ಚಿಂತನೆ ಮೈಗೂಡಿಸಿಕೊಂಡು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಗ್ರಾಮದ ಎಲ್ಲ ಜನರು ಸಹಕಾರ ನೀಡುತ್ತಾರೆ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ. ಅವರ ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸಿದಾಗ ಮಾತ್ರ ಅವರಿಗೆ ಸೂಕ್ತ ಅವಕಾಶ ಸಿಗುತ್ತವೆ ಎಂದು ಅಭಿಪ್ರಾಯ ಪಟ್ಟರು. ಕಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದವು. ಮುಖಂಡರಾದ ಶರಣಪ್ಪ ಸಾಹುಕಾರ, ಬಸವರಾಜಪ್ಪ ನಾಯಕ, ಮಲ್ಲಿಕಾರ್ಜುನ ಗೌಡಗೇರಾ, ಚಂದ್ರಕಾಂತ ಕವಲ್ದಾರ, ಹಣಮಂತ ಪೂಜಾರಿ, ಭೀಮರಾಯ ಇದ್ಲಿ, ನರಸಪ್ಪ ಭೀಮನಳ್ಳಿ, ತಿಮ್ಮಣ್ಣ, ಸಾಬಣ್ಣ ಗೂರ, ರಾಯಗುಂಡ, ಸೋಮು, ಸಾಬಣ್ಣ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next