Advertisement

ಸ್ನಾನ-ಮೇವು ಸಂಗ್ರಹಕ್ಕೆ ಶೌಚಾಲಯ ಬಳಕೆ!

12:28 PM Mar 14, 2020 | Naveen |

ಯಾದಗಿರಿ: ಜಿಲ್ಲಾ ಕೇಂದ್ರದ ಸಮೀಪವಿರುವ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸಾವಿರಾಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೂ ಬಳಕೆ ಮಾತ್ರ ಬೆರಳಣಿಕೆಯಷ್ಟಿದ್ದು, ಮಕ್ಕಳು ಸಹ ಚೆಂಬು ಹಿಡಿದು ಶೌಚಕ್ಕೆ ಬಯಲಿಗೆ ಹೋಗುವುದನ್ನು ಇಲ್ಲಿ ಕಾಣಬಹುದಾಗಿದೆ.

Advertisement

ತಾಲೂಕಿನ ಮುಂಡರಗಿ ಗ್ರಾ.ಪಂ ವ್ಯಾಪ್ತಿಯ ಮುಂಡರಗಿ, ಬೆಳಗೇರಿ, ಅಶೋಕನಗರ ತಾಂಡಾ, ಕುರಕುಂಬಳ ತಾಂಡಾ, ಶಕ್ರಾನಾಯಕ ತಾಂಡಾಗಳಲ್ಲಿ ಒಟ್ಟು 1700 ಕುಟುಂಬಗಳು ವಾಸವಾಗಿವೆ. 10 ಸಾವಿರದಷ್ಟು ಜನಸಂಖ್ಯೆಯಿದೆ. ಚೆಕ್‌ ಮೂಲಕ ಪಾವತಿ ಮತ್ತು ಫಲಾನುಭವಿಗಳಿಗೆ ನೇರ ಪಾವತಿ ಸೇರಿ ಒಟ್ಟು 1258 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿವೆ.

ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಬಹುತೇಕರು ಬಳಕೆ ಮಾಡದೇ ಶೌಚಕ್ಕೆ ಬಯಲಿಗೆ ತೆರಳುವುದನ್ನೇ ರೂಢಿ ಮಾಡಿಕೊಂಡಿದ್ದಾರೆ. ಅದೇಕೋ ಏನೋ ತಮ್ಮ ಗ್ರಾಮದ ಸ್ವಚ್ಛತೆಗಾಗಿ ಪ್ರಮುಖ ಪಾತ್ರ ವಹಿಸುವ ಶೌಚಾಲಯ ಬಳಕೆ ಕುರಿತು ಗ್ರಾಮಸ್ಥರಲ್ಲಿ ಅರಿವೇ ಜನರಲ್ಲಿ ಸಾಮಾನ್ಯ ಜ್ಞಾನವೇ ಇಲ್ಲ.

ಬಹುತೇಕ ಜನರು ಹಲವಾರು ನೆಪ ಹೇಳುತ್ತ ಶೌಚಾಲಯ ಬಳಕೆಯಿಂದ ದೂರ ಉಳಿಯುತ್ತಿದ್ದಾರೆ. ನೀರಿನ ಸಮಸ್ಯೆ, ಮನೆ ಮುಂದೆಯೇ ಶೌಚಾಲಯಕ್ಕೆ ತೆರಳುವುದರಿಂದ ದುರ್ವಾಸನೆ ಬೀರುತ್ತದೆ. ಹೀಗಾಗಿ ಬಳಸುತ್ತಿಲ್ಲ ಎನ್ನುವ ಮಾತನ್ನು ಕೆಲವರು ಹೇಳುತ್ತಾರೆ. ಇನ್ನು ಕೆಲವು ಕಡೆ ಅವೈಜ್ಞಾನಿಕವಾಗಿ ಶೌಚಾಲಯದ ಗುಂಡಿ ನಿರ್ಮಿಸಿದ್ದರಿಂದ ನೆರೆ ಹೊರೆಯವರು ಆಕ್ಷೇಪ ಮಾಡುತ್ತಿದ್ದಾರೆ. ಹೀಗಾಗಿ ಶೌಚಾಲಯಗಳು ಬಳಕೆಯಾಗುತ್ತಿಲ್ಲ.

ಕೆಲವರಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ದನಗಳ ಮೇವು ಸಂಗ್ರಹ, ಕೋಳಿ ಸಾಕುವುದು, ಸ್ನಾನಕ್ಕಾಗಿ ಈ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಸರ್ಕಾರ ಸ್ವಚ್ಛ ಭಾರತ ಅಭಿಯಾನದಡಿ ಬಯಲು ಮುಕ್ತ ದೇಶ ಮಾಡಲು ಹೊರಟಿದೆ. ಆದರೆ, ರಾಜ್ಯದ ಗ್ರಾಮೀಣ ಭಾಗದ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಸರ್ಕಾರ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಮೇಲಧಿಕಾರಿಗಳ ಒತ್ತಡದಿಂದ ಕೆಳ ಹಂತದ ಅಧಿಕಾರಿಗಳು ಶೌಚಾಲಯಗಳನ್ನು ನಿರ್ಮಿಸುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಬಳಸಬೇಕಿರುವ ಜನರು ಮಾತ್ರ ಮನಸ್ಸು ಮಾಡದಿರುವುದು ವಿಪರ್ಯಾಸವೇ ಸರಿ.

Advertisement

ಅಧಿಕಾರಿಗಳು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದು ಅಗತ್ಯವಾಗಿದೆ. ಬಯಲಿನಲ್ಲಿ ಶೌಚಕ್ಕೆ ಹೋಗುವುದರಿಂದ ಪರಿಸರ, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಸಿ, ಗ್ರಾಮೀಣ ಜನರು ಶೌಚಾಲಯ ಬಳಸುವಂತೆ ಅವರ ಮನಸ್ಥಿತಿ ಬದಲಾಯಿಸುವುದು ಮುಖ್ಯವಾಗಿದೆ.

ಶೌಚಾಲಯಗಳ ವಿವರ
2013-14ರಲ್ಲಿ 58, 14-15ರಲ್ಲಿ 03, 15-16ರಲ್ಲಿ 31, 16-17ರಲ್ಲಿ 291, 17-18ರಲ್ಲಿ 275 ಹಾಗೂ 18-19ರಲ್ಲಿ 487 ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿದೆ. ಅಲ್ಲದೇ 2018-19ರಲ್ಲಿ ಬಿಟ್ಟು ಹೋಗಿದ್ದ 113 ಕುಟುಂಬಗಳಿಗೆ ಸೌಕರ್ಯ ಒದಗಿಸಲಾಗಿದ್ದು, ಒಟ್ಟು 1258 ಶೌಚಾಲಯ ನಿರ್ಮಾಣವಾಗಿದೆ.

ಮಾದರಿ ಕುಟುಂಬ
ಗ್ರಾಮದಲ್ಲಿ ಬಸವರಾಜ ಮುಂಡರಗಿ ಅವರ ಕುಟುಂಬ ಸುಮಾರು ಏಳು ವರ್ಷಗಳ ಹಿಂದೆಯೇ ಗ್ರಾ.ಪಂ ಪ್ರೋತ್ಸಾಹಧನ ಪಡೆದು, ತಾವು ಒಂದಿಷ್ಟು ಹಣವನ್ನು ಖರ್ಚು ಮಾಡಿ ವ್ಯವಸ್ಥಿತ ಶೌಚಾಲಯ ನಿರ್ಮಿಸಿಕೊಂಡಿದ್ದು ಮಾದರಿಯಾಗಿದೆ.

2013-14ಕ್ಕೆ ಹೋಲಿಸಿದರೆ ಶೌಚಾಲಯ ಬಳಕೆಯಲ್ಲಿ ಬದಲಾವಣೆ ಆಗುತ್ತಿದೆ. ಜನರು ಯಾವ ರೀತಿ ಮೊಬೈಲ್‌ ಬಳಕೆ ರೂಢಿ ಮಾಡಿಕೊಂಡಿದ್ದಾರೋ ಹಾಗೆಯೇ ಶೌಚಾಲಯ ಬಳಕೆ ಮಾಡಬೇಕು. ಶೌಚಾಲಯ ಬಳಕೆಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜನರ ಮನೋಭಾವ ಬದಲಾಗಬೇಕು.
ಭೀಮರಾಯ, ಪಿಡಿಒ

ನಾವು ಶೌಚಾಲಯ ನಿರ್ಮಿಸಿಕೊಂಡು ಏಳು ವರ್ಷಗಳಾದವು. ಮನೆಯವರೆಲ್ಲ ಬಳಸುತ್ತಿದ್ದೇವೆ. ಇದೇ ರೀತಿ ಶೌಚಾಲಯ ನಿರ್ಮಿಸಿಕೊಂಡ ಪ್ರತಿಯೊಬ್ಬರು ಬಳಸಿದರೆ ಒಳ್ಳೆಯದು.
ಬಸವರಾಜ,
ಮುಂಡರಗಿ ಸಿವಾಸಿ

ಫಲಾನುಭವಿಗಳೊಂದಿಗೆ ಕರಾರು ಒಪ್ಪಂದ
ಶೌಚಾಲಯ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ನೇರವಾಗಿ ಹಂತ ಹಂತವಾಗಿ ಹಣ ಜಮಾ ಆಗುವುದರಿಂದ ಜನರು ಶೌಚಾಲಯ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆಯೇ ಜಿಲ್ಲೆಯಲ್ಲಿ ಫಲಾನುಭವಿ ಹಾಗೂ ಗುತ್ತಿಗೆದಾರರನ್ನು ಹುಡುಕಿ ಕರಾರು ಒಪ್ಪಂದ ಮಾಡಿ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದೆ .

„ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next