Advertisement

ಕನಸಾಗಿಯೇ ಉಳಿದ ಪಲ್ಲಿಗಳ ಕನ್ನಡೀಕರಣ

12:14 PM Jan 08, 2020 | Naveen |

ಯಾದಗಿರಿ: ಜಿಲ್ಲೆಯಲ್ಲಿ ಸಮರ್ಪಕ ಕನ್ನಡ ಅನುಷ್ಠಾನಗೊಳಿಸಬೇಕಿದ್ದ ಕನ್ನಡ ಜಾಗೃತಿ ಸಮಿತಿ ಕಳೆದ 14 ತಿಂಗಳಿನಿಂದ ಸಭೆ ನಡೆಯದಿರುವುದು ಜಿಲ್ಲಾಡಳಿತ ಕನ್ನಡ ಜಾಗೃತಿಯನ್ನೇ ಮರೆಯಿತೇ ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ.

Advertisement

ಜಿಲ್ಲೆಯ ಗಡಿ ಭಾಗದಲ್ಲಿರುವ ಗ್ರಾಮಗಳಿಗೆ ಪಲ್ಲಿ ಎಂದಿರುವ ಹೆಸರನ್ನು ಹಳ್ಳಿ ಎಂದು ಕನ್ನಡೀಕರಣಗೊಳಿಸುವುದು ಇಲ್ಲವೇ ಮರು ನಾಮಕರಣ ಮಾಡುವಂತೆ ಸಾಕಷ್ಟು ಬಾರಿ ಒತ್ತಾಯಿಸಿದರೂ ಸ್ಪಂದನೆ ಸಿಕ್ಕಿಲ್ಲ ಎನ್ನುವುದು ಕನ್ನಡ ಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಗಡಿ ಭಾಗದಲ್ಲಿ ಮಡೇಪಲ್ಲಿ, ಪರಮೇಶಪಲ್ಲಿ, ಎಡೇಪಲ್ಲಿ, ಮುಸ್ಲೇಪಲ್ಲಿ ಹೀಗೆ ಗ್ರಾಮಗಳ ಹೆಸರು ಪಲ್ಲಿಗಳು ಎಂದಿವೆ. ಇವುಗಳನ್ನು ಕನ್ನಡೀಕರಣ ಮಾಡುವುದಕ್ಕೆ ಜಿಲ್ಲಾಡಳಿತಕ್ಕೆ ಕಳೆದ 2 ವರ್ಷದಿಂದ ಮನವಿ ಸಲ್ಲಿಸುತ್ತಿದ್ದರೂ ಸರ್ಕಾರದ ಗಮನಕ್ಕೆ ತರಲಾಗಿದೆಯೋ ಇಲ್ಲವೋ ಎನ್ನುವುದೇ ಗೊತ್ತಾಗಿಲ್ಲ ಎನ್ನುತ್ತಾರೆ ಕನ್ನಡ ಪರ ಸಂಘಟನೆ ಪ್ರಮುಖರು.

ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆ 2018ರ ಅಕ್ಟೋಬರ್‌ 5ರಂದು ನಡೆದಿತ್ತು. 14 ತಿಂಗಳು ಗತಿಸಿದರೂ ಮತ್ತೆ ಸಭೆ ನಡೆದಿಲ್ಲ. ಇದರಿಂದ ಸಮಿತಿ ಸದಸ್ಯರು ಬೇಸರವ್ಯಕ್ತಪಡಿಸಿದ್ದು, ಆಗ ನಡೆದ ಸಭೆಯಲ್ಲಿ ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ಸಾಕಷ್ಟು ಹಳ್ಳಿಗಳಿಗೆ ಕೊನೆಯಲ್ಲಿ ಪಲ್ಲಿ ಎಂಬ ಹೆಸರಿನಲ್ಲಿಯೇ ತೆಲುಗು ಪ್ರಭಾವವಿದೆ.

ಶೀಘ್ರವೇ ಪಲ್ಲಿಗಳನ್ನು ಹಳ್ಳಿಗಳಾಗಿ ಪರಿರ್ವತಿಸಿ ಕನ್ನಡೀಕರಣಗೊಳಿಸಬೇಕು ಎಂದು ಕನ್ನಡ ಜಾಗೃತಿ ಸಮಿತಿ ಸದಸ್ಯ ಡಾ| ಶರಣು ಗದ್ದುಗೆ ಒತ್ತಾಯಿಸಿದ್ದರು.

Advertisement

ಗಡಿ ಭಾಗದ ಶಾಲೆಗಳಿಗೆ ಮೊದಲು ಕನ್ನಡ ಪುಸ್ತಕಗಳನ್ನು ಸರಬರಾಜು ಮಾಡಲು ಆದ್ಯತೆ ನೀಡಬೇಕು. ಸಿಬಿಎಸ್‌ಸಿ ಮತ್ತು ಐಸಿಎಸ್‌ ಪಠ್ಯಕ್ರಮದಲ್ಲಿ ಪ್ರಥಮ ಭಾಷೆಯಾಗಿ ಕನ್ನಡ ಅಳವಡಿಸಬೇಕು. ಡಾ| ಸರೋಜಿನಿ ಮಹಿಷಿ ವರದಿ ಅನ್ವಯ ಎಲ್ಲ ಸರ್ಕಾರಿ-ಖಾಸಗಿ ಸಂಸ್ಥೆಗಳ ಕಾರ್ಖಾನೆ, ಉದ್ದಿಮೆಗಳಲ್ಲಿ ಸಿ ಮತ್ತು ಡಿ ವೃಂದದ ನೌಕರರನ್ನು ನೇಮಕಾತಿ ಮಾಡಿಕೊಳ್ಳುವಾಗ ಕನ್ನಡಿಗರಿಗೆ ಕಡ್ಡಾಯವಾಗಿ ಮೀಸಲಾತಿ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬಳಕೆ ಸಮರ್ಪಕ ಅನುಷ್ಠಾನ ಆಗುತ್ತಿರುವ ಮತ್ತು ಆಗದಿರುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಮಿತಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಕನ್ನಡ ಭಾಷೆ, ನೆಲ ಕುರಿತು ಪ್ರತಿ ಮಾಹೆ ಒಂದು ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕನ್ನಡ ಜಾಗೃತಿ ಸಮಾವೇಶ ಹಾಗೂ ಇನ್ನಿತರ ಕನ್ನಡಪರ ಕಾರ್ಯಕ್ರಮಗಳನ್ನು ಕಾಲೇಜು ಮತ್ತು ಸಾಹಿತ್ಯ ಪರಿಷತ್‌ ಸಹಯೋಗದೊಂದಿಗೆ ಏರ್ಪಡಿಸುವ ಕುರಿತು ಚರ್ಚೆಯಾಗಿತ್ತು.  ಆ ಚರ್ಚೆ ಕಾಗದದಲ್ಲಿಯೇ ಉಳಿದಿದೆ ಹೊರತು ಅನುಷ್ಠಾನವಾಗಿಲ್ಲ ಎನ್ನುವ ಅಸಮಾಧಾನ ಕೇಳಿ ಬಂದಿದೆ.

ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next