Advertisement

12.98 ಲಕ್ಷ ಜನರಿಗೆ ಮಾತ್ರೆ ನುಂಗಿಸುವ ಗುರಿ: ಡಿಸಿ

03:33 PM Oct 16, 2019 | Naveen |

ಯಾದಗಿರಿ: ಆನೆಕಾಲು ರೋಗ ನಿವಾರಣೆಗಾಗಿ ಜಿಲ್ಲಾದ್ಯಂತ ನ. 4ರಿಂದ 22ರವರೆಗೆ ಹಮ್ಮಿಕೊಂಡಿರುವ ಸಾಮೂಹಿಕವಾಗಿ ಅಲ್ಬೆಂಡ್‌ಜೋಲ್‌ ಹಾಗೂ ಐವರಮೆಕ್ಟೀನ್‌ ಮಾತ್ರೆ ನುಂಗಿಸುವ ಕಾರ್ಯಕ್ರಮ ಯಶಸ್ವಿಕೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆನೆಕಾಲು ರೋಗ ನಿಯಂತ್ರಣ ಸಲುವಾಗಿ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ಇದೇ ಮೊದಲ ಬಾರಿಗೆ 3 ವಿಧದ ಮಾತ್ರೆ ನುಂಗಿಸುವ ಕಾರ್ಯಕ್ರಮ ನಡೆಯುತ್ತಿದೆ. ನವೆಂಬರ್‌ 4ರಿಂದ 8ರ ವರೆಗೆ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲಾ-ಕಾಲೇಜು, ವಸತಿ ನಿಲಯಗಳು, ಕಚೇರಿಗಳು, ಅಂಗನವಾಡಿ ಕೇಂದ್ರಗಳು, ಬೃಹತ್‌ ಕಟ್ಟಡ ನಿರ್ಮಾಣ ಸ್ಥಳಗಳು, ಕೈಗಾರಿಕೋದ್ಯಮ ಸ್ಥಳಗಳು, ವಲಸೆ ಜನರು ಬೀಡು ಬಿಟ್ಟ ಸ್ಥಳಗಳಿಗೆ ಭೇಟಿ ನೀಡಿ, ತಪ್ಪದೇ ಈ ಮಾತ್ರೆಗಳನ್ನು ನುಂಗಿಸಬೇಕು. ನ. 13ರಿಂದ 15ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಮಾತ್ರೆಗಳನ್ನು ನುಂಗಿಸಬೇಕು. ನ. 16ರಿಂದ 22ರ ವರೆಗೆ ಪುನರ್‌ ಭೇಟಿ ಅನುಸರಣ ಕಾರ್ಯಕ್ರಮದ ಅಂಗವಾಗಿ ಭೇಟಿ ನೀಡಿ, ಮಾತ್ರೆ ನುಂಗಿರುವ ಬಗ್ಗೆ ತಿಳಿದುಕೊಳ್ಳುವಂತೆ ನಿರ್ದೇಶಿಸಿದರು.

14,10,986 ಜಿಲ್ಲೆಯ ಜನಸಂಖ್ಯೆ ಇದ್ದು, ಇವರಲ್ಲಿ 12,98,107 ಐವರಮೆಕ್ಟೀನ್‌, ಡಿಇಸಿ ಮಾತ್ರೆಗಳ ಸೇವನೆಗೆ ಅರ್ಹರಿದ್ದಾರೆ. ಮಾತ್ರೆಗಳನ್ನು ನುಂಗಿಸಲು ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಒಟ್ಟು 2,440 ಜನರನ್ನು ನಿಯೋಜಿಸಲಾಗಿದೆ. ಮಾತ್ರೆ ನುಂಗಿಸುವವರ ಮೇಲ್ವಿಚಾರಣೆಗೆ 122 ಜನ ಅಧಿಕಾರಿಗಳನ್ನು ನೇಮಿಸಲಾಗಿದೆ.

ಪ್ರತಿಯೊಬ್ಬರೂ ಮಾತ್ರೆ ನುಂಗುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕೂಡ ಮಾತ್ರೆಗಳನ್ನು ನುಂಗಿ ತಮ್ಮ ಅಧೀನ ಸಿಬ್ಬಂದಿಗಳಿಗೆ ನುಂಗುವಂತೆ
ಸ್ಫೂರ್ತಿ ತುಂಬಬೇಕು. ಗ್ರಾಮಗಳಲ್ಲಿ ಡಂಗೂರ ಸಾರಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಮೂಲಕ ಪ್ರತಿಶತ ಸಾಧನೆ ಮಾಡಬೇಕೆಂದು ಸೂಚಿಸಿದರು.

Advertisement

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ಮಾತನಾಡಿ, ಎರಡು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಅತೀ ವೃದ್ಧಾಪ್ಯದಿಂದಿರುವವರು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಂಬಂಧಿ ದೀರ್ಘಾವಧಿ ಕಾಯಿಲೆಗಳಿಂದ ನರಳುತ್ತಿರುವವರು ಐವರ್‌ವೆುಕ್ಟೀನ್‌, ಡಿ.ಇ.ಸಿ ಹಾಗೂ ಅಲ್ಬೆಂಡಜೋಲ್‌ ಮಾತ್ರೆಗಳನ್ನು ಸೇವಿಸುವಂತಿಲ್ಲ. ಖಾಲಿ ಹೊಟ್ಟೆಯಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿದರು.

ಐವರ್‌ವೆುಕ್ಟೀನ್‌ ಮತ್ತು ಡಿಇಸಿ ಮಾತ್ರೆಗಳನ್ನು ಸೋಂಕು ಹೊಂದಿದ ಮತ್ತು ಆರೋಗ್ಯವಂತರಾಗಿ ಕಾಣುವ ವ್ಯಕ್ತಿಗಳು ಸೇವಿಸಿದಾಗ ಮಾತ್ರ ಅವರ ರಕ್ತದಲ್ಲಿರುವ ಜಂತುಗಳು ನಾಶ ಹೊಂದುವುದರಿಂದ ಕೆಲವೊಮ್ಮೆ ಜ್ವರ, ತಲೆನೋವು, ಮೈ-ಕೈ ನೋವು, ವಾಂತಿ, ತಲೆ ಸುತ್ತುವಿಕೆ ಕಂಡು ಬರುತ್ತವೆ.

ಇವು ತಾತ್ಕಾಲಿಕವಾಗಿದ್ದು, ಒಂದು ದಿನದಲ್ಲಿ ಯಾವುದೇ ಚಿಕಿತ್ಸೆಯಿಲ್ಲದೆ ಉಪಶಮನವಾಗುತ್ತವೆ. ಮಾತ್ರೆಗಳ ಸೇವನೆಯಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಡಿಇಸಿ ಮತ್ತು ಚೀಪಬಹುದಾದ ಅಲ್ಬೆಂಡ್‌ಜೋಲ್‌ ಮಾತ್ರೆಗಳನ್ನು ವಯಸ್ಸಿಗನುಗುಣವಾಗಿ ನೀಡಲಾಗುವುದು.

ಐವರ್‌ವೆುಕ್ಟಿನ್‌ ಮಾತ್ರೆಗಳನ್ನು ವ್ಯಕ್ತಿಗಳ ಎತ್ತರಕ್ಕನುಗುಣವಾಗಿ ನೀಡಲಾಗುವುದು ಎಂದು ವಿವರಿಸಿದರು. ಯಾದಗಿರಿ ಡಿವೈಎಸ್‌ಪಿ ಯು. ಶರಣಪ್ಪ, ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಭಗವಂತ ಅನವಾರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ನಾರಾಯಣಪ್ಪ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿ ಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next