Advertisement

ಗಣತಿಯಲ್ಲಿ ನಿಖರ ಅಂಕಿ-ಅಂಶ ಸಂಗ್ರಹಿಸಿ

01:13 PM Jun 28, 2019 | Naveen |

ಯಾದಗಿರಿ: ಜಿಲ್ಲೆಯಲ್ಲಿ ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ಕೈಗೊಳ್ಳುತ್ತಿರುವ 7ನೇ ಆರ್ಥಿಕ ಗಣತಿಯಲ್ಲಿ ಪ್ರತಿ ಮನೆ, ಉದ್ಯಮ/ಘಟಕಗಳಿಗೆ ಭೇಟಿ ನೀಡಿ, ನಿಖರ ಅಂಕಿ-ಅಂಶ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 7ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಏಳನೆಯ ಆರ್ಥಿಕ ಗಣತಿಯು ಕಾಮನ್‌ ಸರ್ವೀಸ್‌ ಸೆಂಟರ್‌, ಇ-ಗವರ್ನನ್ಸ್‌ ಸರ್ವೀಸ್‌ ಇಂಡಿಯಾ ಲಿಮಿಟೆಡ್‌ ಹಾಗೂ ನ್ಯಾಷನಲ್ ಸ್ಯಾಂಪಲ್ ಸರ್ವೇ ಆರ್ಗನೈಸೇಷನ್‌ ಅವರ ಜವಾಬ್ದಾರಿ ಹಾಗೂ ನೇತೃತ್ವದಲ್ಲಿ ನಡೆಯಲಿದೆ. ಈ ಬಾರಿ ಮೊಬೈಲ್ ಆ್ಯಪ್‌ ಮೂಲಕ ಗಣತಿ ನಡೆಸಲಾಗುತ್ತಿದೆ. ಕಳೆದ ಬಾರಿಯ ಗಣತಿಗೆ ಒಂದು ತಿಂಗಳು ಮಾತ್ರ ಅವಧಿ ನಿಗದಿಪಡಿಸಲಾಗಿತ್ತು. ಈ ಬಾರಿ ಮೂರು ತಿಂಗಳು ಕಾಲಾವಕಾಶ ಇದೆ. ಈ ಅವಧಿಯಲ್ಲಿ ವಿವಿಧ ಇಲಾಖೆಗಳ ಪರಸ್ಪರ ಸಹಕಾರದೊಂದಿಗೆ ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಆರನೆಯ ಆರ್ಥಿಕ ಗಣತಿ 2012-13ರಲ್ಲಿ ನಡೆದಿದ್ದು, ಜಿಲ್ಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ಒಟ್ಟು 2,114 ಬ್ಲಾಕ್‌ (ಅಂದಾಜು 150 ಮನೆಗಳಿಗೆ ಒಂದು ಬ್ಲಾಕ್‌) ಗಳನ್ನು ರಚನೆ ಮಾಡಲಾಗಿತ್ತು. 585 ಗಣತಿದಾರರಿಂದ 2.61 ಲಕ್ಷ ಕಟ್ಟಡಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿತ್ತು. ಇದರ ಆಧಾರದ ಮೇಲೆ ನಗರ ಪ್ರದೇಶದಲ್ಲಿ ನಗರಸಭೆ ಪೌರಾಯುಕ್ತರು, ಗ್ರಾಮೀಣ ಪ್ರದೇಶದಲ್ಲಿ ತಹಶೀಲ್ದಾರ್‌ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಹಯೋಗದಲ್ಲಿ ಬ್ಲಾಕ್‌ಗಳನ್ನು ಗುರುತಿಸಬೇಕು ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುನೀಲ್ ಬಿಸ್ವಾಸ್‌ ಅವರಿಗೆ ಸೂಚಿಸಿದರು.

ಈ ಬಾರಿ ಶೇ. 10ರಷ್ಟು ಬ್ಲಾಕ್‌ಗಳು ಹೆಚ್ಚಾಗಬಹುದು. ಪ್ರಸಕ್ತ ಗಣತಿಯ ಅವಧಿ ಹೆಚ್ಚು ಇರುವ ಹಿನ್ನೆಲೆಯಲ್ಲಿ 500 ಗಣತಿದಾರರನ್ನು ಜೂನ್‌ 30ರೊಳಗೆ ನೇಮಕ ಮಾಡಬೇಕು. ಇದರಲ್ಲಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲಿ ಒಬ್ಬ ಗಣತಿದಾರ ಇರುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಗ್ರಾಮೀಣದಲ್ಲಿ 10 ಗಣತಿದಾರರಿಗೆ ಒಬ್ಬರಂತೆ, ನಗರ ಪ್ರದೇಶದಲ್ಲಿ 20 ಗಣತಿದಾರರಿಗೆ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತದನಂತರ ತಾಲೂಕುವಾರು ತರಬೇತಿ ನೀಡಿ, ಶೀಘ್ರ ಗಣತಿ ಆರಂಭಿಸುವಂತೆ ನಿರ್ದೇಶಿಸಿದರು.

ಏನಿದು ಆರ್ಥಿಕ ಗಣತಿ?:ಆರ್ಥಿಕ ಗಣತಿಯು ದೇಶದ ಭೌಗೋಳಿಕ ಗಡಿಯೊಳಗೆ ನೆಲೆಗೊಂಡು ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ, ಮಾರಾಟ ಅಥವಾ ಸೇವೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮ/ಘಟಕಗಳ ಪೂರ್ಣ ಎಣಿಕೆಯಾಗಿರುತ್ತದೆ. ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲ ಉದ್ಯಮಗಳ ಗಣತಿ ಮಾಡಲಾಗುತ್ತದೆ. ಸರಕುಗಳ ಉತ್ಪಾದನೆ, ಅವುಗಳ ವಿತರಣೆ, ಮಾರಾಟ ಅಥವಾ ಸೇವಾ ಚಟುವಟಿಕೆಯಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಮೌಲ್ಯವನ್ನು ತಂದು ಕೊಡುತ್ತದೆಯೋ ಅಂತಹವುಗಳನ್ನು ಆರ್ಥಿಕ ಚಟುವಟಿಕೆ ಎಂದು ಪರಿಗಣಿಸಲಾಗುವುದು. ಆರ್ಥಿಕ ಗಣತಿಯು ದೇಶದ ಪ್ರಗತಿಯಲ್ಲಿ ರಾಷ್ಟ್ರೀಯ ತಲಾದಾಯ ಮತ್ತು ಜಿಡಿಪಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮಾಹಿತಿ ನೀಡಿದರು.

Advertisement

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ನಗರಸಭೆಯ ಪೌರಾಯುಕ್ತ ರಮೇಶ ಸುಣಗಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಬಿರಾದಾರ, ಸಹಕಾರ ಸಂಘಗಳ ಉಪ ನಿಬಂಧಕ ವಿಶ್ವನಾಥ ಮಲಕೂಡ, ಜಿಲ್ಲಾ ಸಂಖ್ಯಾ ಸಂಗ್ರಹಣ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ನಾಗೂರ, ಕಾಮನ್‌ ಸರ್ವೀಸ್‌ ಸೆಂಟರ್‌ ಜಿಲ್ಲಾ ವ್ಯವಸ್ಥಾಪಕ ವೈಜನಾಥರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next